Home / ಕವನ / ಕವಿತೆ / ಪ್ರತಿಬಿಂಬ

ಪ್ರತಿಬಿಂಬ

ಕನ್ನಡಿಯೊಳಗೇ ಅವಿತು
ಕುಳಿತು
ಬಿಂಬಕ್ಕೆ ಪಾದರಸದ ಪರದೆಯೆಳೆದು
ಪಾರದರ್ಶಕದ ಪ್ರತಿಬಿಂಬವಾಗಿ
ಕನ್ನಡಿಯಾಚೆಯ ಮೂರ್ತಬಿಂಬದ
ಅಮೂರ್ತ ಪಡಿಯಚ್ಚು
ಭೂಮಿ ಮೇಲೆಷ್ಟೋ
ಒಳಗೂ ಅಷ್ಟೇ!
ಕನ್ನಡಿಗೆ ಮುಖಾಮುಖಿಯಾದ
ಪ್ರತಿಯೊಂದು ಬಿಂಬಕ್ಕೆ
ತಕ್ಕ ಪ್ರತಿರೂಪ
ಪಾತ್ರೆಯಾಕಾರಕ್ಕೆ ತಕ್ಕ ಪಾತ್ರ
ಬದಲಿಸುವ ದ್ರವರೂಪ!

ತನ್ನತನವಿರದ ಕೈಗೊಂಬೆಗೆ
ಎಲ್ಲಿದೆ ಸ್ಥಿರ ಅಸ್ತಿತ್ವ?
ಎಲ್ಲಿದೆ ಚಿರ ವ್ಯಕ್ತಿತ್ವ?

ಕನ್ನಡಿಯೊಳಗೇ ಎಡಬಲಗಳು
ಅದಲು ಬದಲಾಗಿ
ತಕ್ಕ ಪರಿಮಾಣದ ಪಾತ್ರೆಯಿಲ್ಲದೆಯೂ
ತನ್ನ ಪಾತ್ರವರಿತ ದ್ರವ
ನಿಂತಲ್ಲೇ ಘನವಾಗುವಾಗ
ಎರವಲು ಪ್ರಕಾಶಪಡೆದ
ಶಶಿಯಂತೆ ಪೊಳ್ಳು ಪ್ರತಿಬಿಂಬವಾದರೆ ಸಾಕೆ?
ಸ್ವಯಂಪ್ರಕಾಶದಿಂದ ಬೆಳಗುವ
ಸೂರ್ಯನೆಂಬ
ಮೂರ್ತ ಬಿಂಬವಾಗಬೇಕೆ?

ಬಿಂಬಕ್ಕೆ ನೂರು ಆಯಾಮಗಳಿರಬಹುದು
ಆದರೆಲ್ಲವೂ ಹಳತೇ!
ಅವರಿವರು ನಡೆದು ಸವೆಸಿ
ಟೊಳ್ಳಾದ ದಾರಿಗೆ
ತಳಿರು ತೋರಣ ಕಟ್ಟಿ
ಅಲಂಕರಿಸಿದರೆ ಹೊಸತೆನಿಸೀತೆ?

ಬಿಂಬಕ್ಕೆ ಅಂತಸ್ಥ
ಭಾವಗಳೆನಿತೋ?
ಆದರೆ,
ಪ್ರತಿಬಿಂಬಕ್ಕೆ ಒಳಗುಗಳಿಲ್ಲದ
ತಟಸ್ಥ ಮುಖವೊಂದೇ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...