Home / ಕವನ / ಕವಿತೆ / ವಿಧಿ

ವಿಧಿ

ಹೇಳಿರಲಿಲ್ಲಿವೆ ನಾನು ನಿಮಗೆ
ಅವನಿರುವುದೆ ಹಾಗೆ
ಅವನ ಕೆಣಕಬೇಡಿರಿ ಎಂದು

ಅವನೇನು ಹುಚ್ಚನಲ್ಲ ಹೆಡ್ಡನೂ ಅಲ್ಲ
ಪ್ರೀತಿಯ ನೆಪದಲ್ಲಿ
ತಲೆ ಸಡಿಲಾದವನಲ್ಲ
ವಂಶಪಾರಂಪರ್ಯವಲ್ಲ
ಅವನ ಪೂರ್ವಜರಲ್ಲಿ
ಹೀಗೆ ಯಾರಿಗೂ ಇದ್ದಿರಲಿಲ್ಲ
ಅವನಷ್ಟಕ್ಕೆ ಬಿಟ್ಟರೆ ಅವನು
ಯಾರಿಗೇನೂ ಮಾಡುವುದಿಲ್ಲ

ಮಾತು ಬಯ್ಗಳದಂತೆ
ನಿಮಗೆ ಅನ್ನಿಸಬಹುದು
ಅವನ ರೀತಿ ಬೇರೆ-
ಪದಗಳನ್ನು ಹಣ್ಣಿನಂತೆ
ಕಚ್ಚುತ್ತಾನೆ
ಕಲ್ಲಿನಂತೆ ಎಸೆಯುತ್ತಾನೆ
ಜಗಲಿಯಲ್ಲಿ ಕುಳಿತು ವಾಕ್ಯಗಳನ್ನು
ನೂಲಿನಂತೆ ನೇಯುತ್ತಾನೆ
ಬೀಡಿಯ ಹೊಗೆಯಂತೆ
ಉಗುಳುತ್ತಾನೆ ಅರ್ಥದ
ದಟ್ಟ ಮೋಡಗಳನ್ನು

ದೇಶವಿದೇಶ ಸುತ್ತಿದವನಲ್ಲ
ಬಿಹಾರ ಬಂಗಾಳ ಒರಿಸ್ಸ
ಕಾಶ್ಮೀರ ಹಿಮಾಚಲಪ್ರದೇಶ
ಪಂಜಾಬ ಗುಜಾರಾತ ಮರಾಠ
ಎಲ್ಲಿಗೂ ಹೋಗಿಲ್ಲ
ಬೆಲ್ಚಿ ಭೋಪಾಲ ಭಾಗಲ್ಪುರ
ಮೀನಾಕ್ಷಿಪುರ ಕಾಮಾಟಿಪುರ ತಿರುವನಂತಪುರ
ಚಾರ್ಮಿನಾರ್ ಕುತುಬ್‌ಮಿನಾರ್ ಶ್ರವಣಬೆಳಗೂಳ
ಹಳದೀಘಾಟ ರಾಜಘಾಟ ತಾಳೀಕೊಟೆ
ಜಲಿಯನ್‌ವಾಲಾಬಾಗ್
ನೋಡಿದವನಲ್ಲ
ಗಾಂಧಿ ನೆಹರು ಪಟೇಲ ಜಿನ್ನ
ಶೇಖ್‌ಅಬ್ದುಲ್ಲ ಇಂದಿರಾಗಾಂಧಿ ಸಂಜಯಗಾಂಧಿ
ಫೂಲನ್ ದೇವಿ ಹಾಜಿಮಸ್ತಾನ
ಮೊರಾರ್ಜಿ ದೇಸಾಯಿ ಕಾಂತಿದೇಸಾಯಿ ವಾಜಪೇಯಿ
ಅಕ್ಬರ್ ಆಶೋಕ ತುಘಲಕ
ಚರಣ್‌ಸಿಂಗ್ ಸ್ವರಣ್‌ಸಿಂಗ್ ಭಿಂದ್ರಾನ್‌ವಾಲೆ
ರಾಜನಾರಾಯಣ್ ಅಮಜದ್‌ಖಾನ್
ಖಾನ್ ಅಬ್ದುಲ್ ಗಫಾರ್‌ಖಾನ್
ಡಾಕ್ಟರ್ ರಾಮ ಮನೋಹರ ಲೋಹಿಯಾ
ಯಾರನ್ನೂ ಕಂಡವನಲ್ಲ
ಆದರೂ ಅವನು ಹೇಳುವುದರಲ್ಲಿ ಸುಳ್ಳಿಲ್ಲ
ಎಲ್ಲ ಕಡೆ ಹೋಗಿದ್ದಾನೆ
ಎಲ್ಲ ನೋಡಿದ್ದಾನೆ
ಎಲ್ಲ ಕಂಡಿದ್ದಾನೆ

ಯಾರು ನಂಬಿದರೆಷ್ಟು ಬಿಟ್ಟರೆಷ್ಟು
ಮಹಾತ್ಮಾ ಗಾಂಧಿ ತಾನೇ ಎಂದು
ಕಿತ್ತೊಗೆದಿದ್ದನು ಅಂಗಿಯನ್ನು
ದಂಡಿಯಾತ್ರೆ ಕೈಗೊಳ್ಳುವೆನೆಂದು
ನಡೆದು ಹೋಗಿದ್ದನು ಕುಂಬಳೆಗೆ
ಅದೆಷ್ಟೋ ಬಾರಿ ಅನ್ನನೀರು ಬಿಟ್ಟು
ಉಪವಾಸ ಮಲಗಿದ್ದನು
ಗಾಂಧಿಯ ಕೊಲೆಯಾದಂದು
ತಾನೇ ಸತ್ತ ಎಂದುಕೊಂಡಿದ್ದನು
ನಂತರ ನಾಥೂರಾಮ್ ಗೋಡ್ಸೆಯನ್ನು
ಗಲ್ಲಿಗೇರಿಸಿದಾಗ
ತಲೆಬಾಗಿಸಿ ನಿಂತವನು ಇವನೇ!

ಕೊಲೆ ಸುಲಿಗೆ ಅತ್ಯಾಚಾರ ಅಹಿಂಸೆ
ಕ್ಷಾಮ ದಾಮರ ರೋಗ ರುಜಿನು ಮಹಾಯುದ್ಧ
ಎಲ್ಲ ವಿಧಿಗೂ ಬದ್ಧ
ನಡು ಮಧ್ಯಾಹ್ನದ ಸೂರ್ಯನನ್ನು
ಬಿಡುಗಣ್ಣಿನಿಂದ ನೋಡಿ ನಿಲ್ಲುವನು
ಎಂಥ ಸತ್ಯಕ್ಕೂ ಸಿದ್ಧ
ಆದರೂ ಯಾವ ದೇಶ ತಾನೆ
ಇಬ್ಬರು ಸೂರ್ಯರನ್ನು ಸಹಿಸುವುದು?
ಇವನು ಈಗಾಗಲೆ
ಅಂಧನಾಗತೊಡಗಿದ್ದಾನೆ !
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...