Home / ಕವನ / ಕವಿತೆ / ವಿಧಿ

ವಿಧಿ

ಹೇಳಿರಲಿಲ್ಲಿವೆ ನಾನು ನಿಮಗೆ
ಅವನಿರುವುದೆ ಹಾಗೆ
ಅವನ ಕೆಣಕಬೇಡಿರಿ ಎಂದು

ಅವನೇನು ಹುಚ್ಚನಲ್ಲ ಹೆಡ್ಡನೂ ಅಲ್ಲ
ಪ್ರೀತಿಯ ನೆಪದಲ್ಲಿ
ತಲೆ ಸಡಿಲಾದವನಲ್ಲ
ವಂಶಪಾರಂಪರ್ಯವಲ್ಲ
ಅವನ ಪೂರ್ವಜರಲ್ಲಿ
ಹೀಗೆ ಯಾರಿಗೂ ಇದ್ದಿರಲಿಲ್ಲ
ಅವನಷ್ಟಕ್ಕೆ ಬಿಟ್ಟರೆ ಅವನು
ಯಾರಿಗೇನೂ ಮಾಡುವುದಿಲ್ಲ

ಮಾತು ಬಯ್ಗಳದಂತೆ
ನಿಮಗೆ ಅನ್ನಿಸಬಹುದು
ಅವನ ರೀತಿ ಬೇರೆ-
ಪದಗಳನ್ನು ಹಣ್ಣಿನಂತೆ
ಕಚ್ಚುತ್ತಾನೆ
ಕಲ್ಲಿನಂತೆ ಎಸೆಯುತ್ತಾನೆ
ಜಗಲಿಯಲ್ಲಿ ಕುಳಿತು ವಾಕ್ಯಗಳನ್ನು
ನೂಲಿನಂತೆ ನೇಯುತ್ತಾನೆ
ಬೀಡಿಯ ಹೊಗೆಯಂತೆ
ಉಗುಳುತ್ತಾನೆ ಅರ್ಥದ
ದಟ್ಟ ಮೋಡಗಳನ್ನು

ದೇಶವಿದೇಶ ಸುತ್ತಿದವನಲ್ಲ
ಬಿಹಾರ ಬಂಗಾಳ ಒರಿಸ್ಸ
ಕಾಶ್ಮೀರ ಹಿಮಾಚಲಪ್ರದೇಶ
ಪಂಜಾಬ ಗುಜಾರಾತ ಮರಾಠ
ಎಲ್ಲಿಗೂ ಹೋಗಿಲ್ಲ
ಬೆಲ್ಚಿ ಭೋಪಾಲ ಭಾಗಲ್ಪುರ
ಮೀನಾಕ್ಷಿಪುರ ಕಾಮಾಟಿಪುರ ತಿರುವನಂತಪುರ
ಚಾರ್ಮಿನಾರ್ ಕುತುಬ್‌ಮಿನಾರ್ ಶ್ರವಣಬೆಳಗೂಳ
ಹಳದೀಘಾಟ ರಾಜಘಾಟ ತಾಳೀಕೊಟೆ
ಜಲಿಯನ್‌ವಾಲಾಬಾಗ್
ನೋಡಿದವನಲ್ಲ
ಗಾಂಧಿ ನೆಹರು ಪಟೇಲ ಜಿನ್ನ
ಶೇಖ್‌ಅಬ್ದುಲ್ಲ ಇಂದಿರಾಗಾಂಧಿ ಸಂಜಯಗಾಂಧಿ
ಫೂಲನ್ ದೇವಿ ಹಾಜಿಮಸ್ತಾನ
ಮೊರಾರ್ಜಿ ದೇಸಾಯಿ ಕಾಂತಿದೇಸಾಯಿ ವಾಜಪೇಯಿ
ಅಕ್ಬರ್ ಆಶೋಕ ತುಘಲಕ
ಚರಣ್‌ಸಿಂಗ್ ಸ್ವರಣ್‌ಸಿಂಗ್ ಭಿಂದ್ರಾನ್‌ವಾಲೆ
ರಾಜನಾರಾಯಣ್ ಅಮಜದ್‌ಖಾನ್
ಖಾನ್ ಅಬ್ದುಲ್ ಗಫಾರ್‌ಖಾನ್
ಡಾಕ್ಟರ್ ರಾಮ ಮನೋಹರ ಲೋಹಿಯಾ
ಯಾರನ್ನೂ ಕಂಡವನಲ್ಲ
ಆದರೂ ಅವನು ಹೇಳುವುದರಲ್ಲಿ ಸುಳ್ಳಿಲ್ಲ
ಎಲ್ಲ ಕಡೆ ಹೋಗಿದ್ದಾನೆ
ಎಲ್ಲ ನೋಡಿದ್ದಾನೆ
ಎಲ್ಲ ಕಂಡಿದ್ದಾನೆ

ಯಾರು ನಂಬಿದರೆಷ್ಟು ಬಿಟ್ಟರೆಷ್ಟು
ಮಹಾತ್ಮಾ ಗಾಂಧಿ ತಾನೇ ಎಂದು
ಕಿತ್ತೊಗೆದಿದ್ದನು ಅಂಗಿಯನ್ನು
ದಂಡಿಯಾತ್ರೆ ಕೈಗೊಳ್ಳುವೆನೆಂದು
ನಡೆದು ಹೋಗಿದ್ದನು ಕುಂಬಳೆಗೆ
ಅದೆಷ್ಟೋ ಬಾರಿ ಅನ್ನನೀರು ಬಿಟ್ಟು
ಉಪವಾಸ ಮಲಗಿದ್ದನು
ಗಾಂಧಿಯ ಕೊಲೆಯಾದಂದು
ತಾನೇ ಸತ್ತ ಎಂದುಕೊಂಡಿದ್ದನು
ನಂತರ ನಾಥೂರಾಮ್ ಗೋಡ್ಸೆಯನ್ನು
ಗಲ್ಲಿಗೇರಿಸಿದಾಗ
ತಲೆಬಾಗಿಸಿ ನಿಂತವನು ಇವನೇ!

ಕೊಲೆ ಸುಲಿಗೆ ಅತ್ಯಾಚಾರ ಅಹಿಂಸೆ
ಕ್ಷಾಮ ದಾಮರ ರೋಗ ರುಜಿನು ಮಹಾಯುದ್ಧ
ಎಲ್ಲ ವಿಧಿಗೂ ಬದ್ಧ
ನಡು ಮಧ್ಯಾಹ್ನದ ಸೂರ್ಯನನ್ನು
ಬಿಡುಗಣ್ಣಿನಿಂದ ನೋಡಿ ನಿಲ್ಲುವನು
ಎಂಥ ಸತ್ಯಕ್ಕೂ ಸಿದ್ಧ
ಆದರೂ ಯಾವ ದೇಶ ತಾನೆ
ಇಬ್ಬರು ಸೂರ್ಯರನ್ನು ಸಹಿಸುವುದು?
ಇವನು ಈಗಾಗಲೆ
ಅಂಧನಾಗತೊಡಗಿದ್ದಾನೆ !
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...