Home / ಕವನ / ಕವಿತೆ / ಸೀರೆ ಝಾಡಿಸಿದಳೆಂದರೆ

ಸೀರೆ ಝಾಡಿಸಿದಳೆಂದರೆ

ಮಕ್ಕಳು ಆಡುತ್ತಿರುತ್ತವೆ
ತಾಯಿ ಮಗುವಿಗೆ ಹಾಲು ಕೊಡುತ್ತಿರುತ್ತಾಳೆ
ದುಡಿವ ಜನ ದುಡಿಯುತ್ತಿರುತ್ತಾರೆ
ಓಡಾಡುವವರು ಓಡಾಡುತ್ತಿರುತ್ತಾರೆ
ಮಲಗಿರುವವರು ಮಲಗಿರುತ್ತಾರೆ
ಕುಳಿತಿರುವವರು ಕುಳಿತಿರುತ್ತಾರೆ
ಹೊಟ್ಟೆಗೋ ಹೊಟ್ಟೆಕಿಚ್ಚಿಗೋ
ಕರುಳ ಕರೆಗೋ ಸಂಚು ಹೊಂಚುಗಳಿಗೋ
ಸೆಳೆದಾಟಗಳಿಗೋ ಹಲವರು
ಹಲವು ವಿಧಗಳಲ್ಲಿ ಬಡಿದಾಡುತ್ತಿರುತ್ತಾರೆ
ಇಲ್ಲೇ ಇಲ್ಲೇ ಶಾಶ್ವತವಾಗಿ ಇರುತ್ತೇವೆಂಬಂತೆ
ಅಷ್ಟಾವಕ್ರಗಳಲ್ಲೂ ಎಲ್ಲಾ ಸುಸೂತ್ರ
ನಡೆದಿರುತ್ತದೆ ಬದುಕು ಜಟಕಾ ಬಂಡಿ
ಇವನೆಲ್ಲ ಹೊತ್ತ ಈ ತಾಯಿ
ಸುಮ್ಮನೆ ಬಿಮ್ಮನೆ ಬೀಗಿಕೊಂಡಿದ್ದರೆ
ಎಲ್ಲ ಸಲೀಸಾಗಿ ಸಾಗುತ್ತಿರುತ್ತದೆ
ಅವಳಿಗೆ ಹೊಟ್ಟೆ ನೋವಾಗಿ
ಹೊಡೆಮರಳಿತೆಂದರೆ
ಬೇಜಾರಾಗಿ ಒಮ್ಮೆ ಮೈ ನಡುಗಿಸಿದಳೆಂದರೆ…
ಅಥವಾ ಬಾಯಿ ತೆರೆದು ಆಕಳಿಸಿದಳೆಂದರೆ….
ಅಥವಾ ಅವಳಿಗೆ ಸೀನು ಬಂದು
ಸುಡು ಸುಡು ದ್ರವದ ಸೀನು
ಸೀದಿದಳೆಂದರೆ….
ಅಥವಾ ತನ್ನ ಸೀರೆ ನೆರಿಗೆಗಳ
ಸರಿಪಡಿಸಿಕೊಳ್ಳಲು ಸೀರೆ ಝಾಡಿಸಿದಳೆಂದರೆ…
ಅಥವಾ ಯಾಕಾದರೂ ನಿಟ್ಟುಸಿರು ಬಿಟ್ಟು
ಭೋರೆಂದು ಉಸಿರು ಬಿಡತೊಡಗಿದಳೆಂದರೆ…
ನಿಂತವರು ನಿಂತಲ್ಲಿ ಕುಂತವರು ಕುಂತಲ್ಲಿ
ಮಲಗಿದವರು ಅಲ್ಲೆ ಓಡಾಡುವವರು ಅಲ್ಲಲ್ಲೆ
ಬಡಿದಾಡುವವರು ಕಚ್ಚಾಡುವವರು
ಪ್ರೀತಿಸುವವರು ರಮಿಸುವವರು
ರೋಗಿಗಳು ಭೋಗಿಗಳು ಯುವಕರು ಮುದುಕರು
ಕೂಸು ಕುನ್ನಿ ಗಂಡು ಹೆಣ್ಣು ಎಲ್ಲ ಎಲ್ಲರೂ
ನೆಲಸಮ ಮಣ್ಣಲ್ಲಿ ಮಣ್ಣು
ಇಲ್ಲಿ ಉಳಿದ ಬಾಯಿ ಬಡಕೊಳ್ಳುವವರು
ಪತ್ರಿಕೆ-ಆಕಾಶವಾಣಿ-ದೂರವಾಣಿ ಸುದ್ದಿಗಳಿಗೆ
ಕೆಲವು ದಿನ ಆಹಾರ ಸಿಗುವುದು
ಅನುಕಂಪಗಳ ಸುರಿಮಳೆ ಸುರಿಯುತ್ತದೆ
ಸಹಾಯ ಹಸ್ತ ಭೂಮಂಡಲದುದ್ದ ಚಾಚುತ್ತವೆ
ಕೆಲಕಾಲ ಗತಿಸಿದಂತೆಲ್ಲಾ
ಈ ತಾಯಿಯ ಮೈಮೇಲಾದ ಗಾಯ
ಮಾದು ಹೋಗಿಬಿಡುತ್ತವೆ
ಎಂದಿನಂತೆ ಆಡುವವರು ಆಡುತ್ತಾರೆ
ಹೊಡೆದಾಡುವವರು ಹೋರಾಡುವವರು
ದುಡಿಯುವವರು ದುಃಖಿಸುವವರು
ನಗುವವರು ಕೆಲೆಯುವವರು
ತಂತಮ್ಮ ಪರಿಗಳ ಬದುಕುತ್ತಾರೆ
ಮತ್ತೆ ಈ ತಾಯಿ ಸುಮ್ಮನೆ ಬಿಮ್ಮನೆ
ಬೀಗುತ್ತ ಸಾಗುತ್ತಾಳೆ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...