Home / ಕವನ / ಕವಿತೆ / ಸೀರೆ ಝಾಡಿಸಿದಳೆಂದರೆ

ಸೀರೆ ಝಾಡಿಸಿದಳೆಂದರೆ

ಮಕ್ಕಳು ಆಡುತ್ತಿರುತ್ತವೆ
ತಾಯಿ ಮಗುವಿಗೆ ಹಾಲು ಕೊಡುತ್ತಿರುತ್ತಾಳೆ
ದುಡಿವ ಜನ ದುಡಿಯುತ್ತಿರುತ್ತಾರೆ
ಓಡಾಡುವವರು ಓಡಾಡುತ್ತಿರುತ್ತಾರೆ
ಮಲಗಿರುವವರು ಮಲಗಿರುತ್ತಾರೆ
ಕುಳಿತಿರುವವರು ಕುಳಿತಿರುತ್ತಾರೆ
ಹೊಟ್ಟೆಗೋ ಹೊಟ್ಟೆಕಿಚ್ಚಿಗೋ
ಕರುಳ ಕರೆಗೋ ಸಂಚು ಹೊಂಚುಗಳಿಗೋ
ಸೆಳೆದಾಟಗಳಿಗೋ ಹಲವರು
ಹಲವು ವಿಧಗಳಲ್ಲಿ ಬಡಿದಾಡುತ್ತಿರುತ್ತಾರೆ
ಇಲ್ಲೇ ಇಲ್ಲೇ ಶಾಶ್ವತವಾಗಿ ಇರುತ್ತೇವೆಂಬಂತೆ
ಅಷ್ಟಾವಕ್ರಗಳಲ್ಲೂ ಎಲ್ಲಾ ಸುಸೂತ್ರ
ನಡೆದಿರುತ್ತದೆ ಬದುಕು ಜಟಕಾ ಬಂಡಿ
ಇವನೆಲ್ಲ ಹೊತ್ತ ಈ ತಾಯಿ
ಸುಮ್ಮನೆ ಬಿಮ್ಮನೆ ಬೀಗಿಕೊಂಡಿದ್ದರೆ
ಎಲ್ಲ ಸಲೀಸಾಗಿ ಸಾಗುತ್ತಿರುತ್ತದೆ
ಅವಳಿಗೆ ಹೊಟ್ಟೆ ನೋವಾಗಿ
ಹೊಡೆಮರಳಿತೆಂದರೆ
ಬೇಜಾರಾಗಿ ಒಮ್ಮೆ ಮೈ ನಡುಗಿಸಿದಳೆಂದರೆ…
ಅಥವಾ ಬಾಯಿ ತೆರೆದು ಆಕಳಿಸಿದಳೆಂದರೆ….
ಅಥವಾ ಅವಳಿಗೆ ಸೀನು ಬಂದು
ಸುಡು ಸುಡು ದ್ರವದ ಸೀನು
ಸೀದಿದಳೆಂದರೆ….
ಅಥವಾ ತನ್ನ ಸೀರೆ ನೆರಿಗೆಗಳ
ಸರಿಪಡಿಸಿಕೊಳ್ಳಲು ಸೀರೆ ಝಾಡಿಸಿದಳೆಂದರೆ…
ಅಥವಾ ಯಾಕಾದರೂ ನಿಟ್ಟುಸಿರು ಬಿಟ್ಟು
ಭೋರೆಂದು ಉಸಿರು ಬಿಡತೊಡಗಿದಳೆಂದರೆ…
ನಿಂತವರು ನಿಂತಲ್ಲಿ ಕುಂತವರು ಕುಂತಲ್ಲಿ
ಮಲಗಿದವರು ಅಲ್ಲೆ ಓಡಾಡುವವರು ಅಲ್ಲಲ್ಲೆ
ಬಡಿದಾಡುವವರು ಕಚ್ಚಾಡುವವರು
ಪ್ರೀತಿಸುವವರು ರಮಿಸುವವರು
ರೋಗಿಗಳು ಭೋಗಿಗಳು ಯುವಕರು ಮುದುಕರು
ಕೂಸು ಕುನ್ನಿ ಗಂಡು ಹೆಣ್ಣು ಎಲ್ಲ ಎಲ್ಲರೂ
ನೆಲಸಮ ಮಣ್ಣಲ್ಲಿ ಮಣ್ಣು
ಇಲ್ಲಿ ಉಳಿದ ಬಾಯಿ ಬಡಕೊಳ್ಳುವವರು
ಪತ್ರಿಕೆ-ಆಕಾಶವಾಣಿ-ದೂರವಾಣಿ ಸುದ್ದಿಗಳಿಗೆ
ಕೆಲವು ದಿನ ಆಹಾರ ಸಿಗುವುದು
ಅನುಕಂಪಗಳ ಸುರಿಮಳೆ ಸುರಿಯುತ್ತದೆ
ಸಹಾಯ ಹಸ್ತ ಭೂಮಂಡಲದುದ್ದ ಚಾಚುತ್ತವೆ
ಕೆಲಕಾಲ ಗತಿಸಿದಂತೆಲ್ಲಾ
ಈ ತಾಯಿಯ ಮೈಮೇಲಾದ ಗಾಯ
ಮಾದು ಹೋಗಿಬಿಡುತ್ತವೆ
ಎಂದಿನಂತೆ ಆಡುವವರು ಆಡುತ್ತಾರೆ
ಹೊಡೆದಾಡುವವರು ಹೋರಾಡುವವರು
ದುಡಿಯುವವರು ದುಃಖಿಸುವವರು
ನಗುವವರು ಕೆಲೆಯುವವರು
ತಂತಮ್ಮ ಪರಿಗಳ ಬದುಕುತ್ತಾರೆ
ಮತ್ತೆ ಈ ತಾಯಿ ಸುಮ್ಮನೆ ಬಿಮ್ಮನೆ
ಬೀಗುತ್ತ ಸಾಗುತ್ತಾಳೆ
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...