Home / ಕವನ / ಕವಿತೆ / ಮೂರು ಲಂಗಗಳ ಮಾತುಕತೆ

ಮೂರು ಲಂಗಗಳ ಮಾತುಕತೆ

ಲಂಗ ೧

‘ಏನೇ
ಇಷ್ಟೊಂಽಽಽದು ಘಮ್ ಅಂತೀಯಾ
ರಾತ್ರಿಯೆಲ್ಲಾ ಜೋರಾಽಽಽ?

ಒಂದಕ್ಕೊಂದು ಗಂಟು ಹಾಕಿ
ದ ಗಂಟಿನೊಳಗೇ ಕುಳಿತು
ಶುರುವಿಟ್ಟುಕೊಂಡವು ಎಂದಿನಂತೇ ಮಾತಿಗೆ
ಗಂಟು ಮೋರೆಯ ಸಡಿಲಿಸುತ

ಲಂಗ ೨

‘ಅದು ಬ್ಯಾರೆ ಕೇಡು ಈ ಜನುಮಕ್ಕೆ
ನಾನೇನು
ನಿನ್‌ಥರ
ಇದ್ದವರ ಮನೆಯ ಮಗಳಾ?
ಬೆಳಗೆದ್ರೆ ನೀರು ಬರಲಿಲ್ಲ
ತರಕಾರಿ ತರಲಿಲ್ಲ
ಹಾಲು ಸಿಗಲಿಲ್ಲ
ಕರೆಂಟು ಬಿಲ್ಲು ಕಟ್ಟಲಿಲ್ಲ
ನೂಽಽಽರು ರಗಳೆ
ಸಂಜೆ ಟ್ಯೂಷನ್ನಿಗೋದ ಮಕ್ಕಳು
ಮನೆ ಸೇರುವವರೆಗೂ ಜೀವವಿಲ್ಲ
ಕುಡಿದು ತೂರಾಡುವ ಗಂಡ
ನಿಗೆ ಕಾದ ಮೈ
ಕೆಂಡವಾಗಿದ್ದಷ್ಟೇ ಪುಣ್ಯ
ಉಫ್… ನನ್ ಹಣೆ ಬರಹ’

ಮುದುಡಿಕೊಂಡಿದ್ದ ಕೆಂಪು
ಲಂಗದ ಕಡೆ ಮುಖ ತಿರುವಿ
‘ನೀನೇನು
ಎಷ್ಟೊಂದು ಮೆತ್ತಗಾಗಿದ್ದೀಯಾ
ಏನ್ ಸಮಾಚಾರ, ಸುಸ್ತಾ…?’

ಲಂಗ ೩
ತೂಕಡಿಸುವ ಕಣ್ಣುಗಳನ್ನು ಉಜ್ಜಿಕೊಳ್ಳುತ್ತಾ
ಮೂಲೋಕ ಕಾಣುವಂತೆ ಆಕಳಿಸುತ್ತಾ

‘ನನ್ ಸುಸ್ತು ಯಾರ್ ಕೇಳ್ತಾರೆ ಬಿಡಕ್ಕ
ನನಗೋ
ಗಂಟೆಗೊಬ್ಬ ಗೆಳೆಯ
ಅವ ತಂದಿದ್ದು ಉಡುವುದೊರೊಳಗೆ
ಇವ ಕೈ ಮಾಡಿ ಕರೆಯುತ್ತಾನೆ
ಬಾಗಿಲಲ್ಲಿ ಹೂ ಹಿಡಿದು ನಿಲ್ಲುತ್ತಾನೆ

ಇನ್ನೊಬ್ಬ ಕಚ್ಚೆಗೇ ಕೈ ಹಾಕುತ್ತಾನೆ…
ರಾತ್ರಿಯೆಲ್ಲಾಽಽಽ
ಜೀವವಿಲ್ಲದ ಗೊಂಬೆಯಂತೆ
ಗಾಳಿ ಇಲ್ಲದ ಚೆಂಡಿನಂತೆ
ಹಾಸಿಗೆ ತುಂಬಾ ಅವರ ಬುಡಕ್ಕೆ
ಹರಕೆ ಹೊತ್ತವಳಂತೆ ಉರುಳಾಡಿ
ಪ್ರತಿನಿತ್ಯ ಜಾಗರಣೆ
ನಂದೂ ಒಂದು ಬದುಕು
ಅಂತ ಯಾರ್ಗೇಳಾಣ…?’

*

ಉಳಿದ ಲಂಗಗಳು ಮೂಕವಾಗಿ
ಬಾಯಿ ತೆರೆದು ಕೇಳುತ್ತಿರುವಂತೇ
ಎದುರು ಲಂಗದ ಕಣ್ಣಲ್ಲಿ
ಎರಡು ಹನಿ ಉದುರುವ ಮುನ್ನ
ಅಗಸಗಿತ್ತಿ
ಸರಬರನೆ ಎಲ್ಲರನು ಎತ್ತಿ
ಕುದಿವ ಹಂಡೆಯೊಳಗೆ ಒತ್ತಿ
ಕೈ ತೊಳೆದುಕೊಂಡು
ತನ್ನ ಹರಕು ಲಂಗಕ್ಕೆ
ಒರೆಸಿಕೊಂಡಳು
*****

Tagged:

Leave a Reply

Your email address will not be published. Required fields are marked *

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...