Home / ಕವನ / ಕವಿತೆ / ಅಶೋಕ ಚಕ್ರ

ಅಶೋಕ ಚಕ್ರ

ನೋಡದೊ ಸ್ವಾತಂತ್ರ್‍ಯಾಕಾಶದಲಿ
ಹಾರುತ್ತಿದೆ ನವ ರಾಷ್ಟ್ರಧ್ವಜವು!
ಹಾರಲಿ! ಏರಲಿ! ಈ ಹೊಸ ಬಾವುಟ!
ಚಿರ ಬಾಳಲಿ ನವ ಭಾರತ ಕೂಟ!

ಹಿಂದೂ ಮುಸ್ಲಿಮ ಸಿಕ್ಕರು ಒಂದು
ಹಿಂದೆ ಇಂದು ಮುಂದೆಂದೆಂದೂ-
ಇಂತು ಸಾರುತಿದೆ ಈ ಹೊಸ ಬಾವುಟ:
ಗೆಲ್ಲಲಿ ಎಲ್ಲರು ಒಂದೆನುವೀ ದಿಟ!

ಬಾರ ಬಾರ ಹರಿಕಾರ ಸಮೀರ
ತಾರ ತಾರ ಬಾವುಟಕ್ಕೆ ವಿಹಾರ
ತೋರ ತೋರ ಬಾವುಟದಾಕಾರ:
ಹಾಡಲಿ ಹರಸಲಿ ಲೋಕವಪಾರ!

ನಿಲ್ಗೆ ಚಂದ್ರತಾರಂಬರಮೀ ಧ್ವಜ
ಪುಣ್ಯಭೂಮಿಯಲಿ ನವ ಕಲ್ಪ ಕುಜ!
ತುಂಬಿ ಬಿಡುತಿರಲಿ ಫಲಪುಷ್ಪವ್ರಜ,
ಆಶ್ರಯ ಹೊಂದಲಿ ಸರ್ವಪ್ರಜಾ.

ಹಸುರು ಬಿಳಿಪು ಕೇಸರಿಗಳು ಕೂಡಿದ
ಮೂಬಣ್ಣದ ನಡುವೆಯಲದೊ ನೋಡು:
‘ಅಶೋಕ ಚಕ್ರ’ವು ಮೆರೆಯುತಿದೆ,
ಶಾಂತಿಯ ಯುಗವನು ತೆರೆಯುತಿದೆ.

ಅಂದು ಅಶೋಕನು ಧರಿಸಿದ ಚಕ್ರ:
ಯುದ್ಧವ ನಿಲಿಸಿದ ಶಾಂತಿಯ ಚಕ್ರ;
ಶಾಂತಿ ಪುಷ್ಟಿ ತುಷ್ಟಿಗಳನು ತುಂಬುವ,
ಭಗವಾನ್ ಬುದ್ಧನ ಧರ್ಮದ ಚಕ್ರ.

ಹಿಂದೆ ಕೃಷ್ಣನೇ ತೋರಿದ ದಾರಿ-
ಗಾಂಧಿ ಮಹಾತ್ಮರು ಎತ್ತಿಹಿಡಿದ ಗುರಿ-
ಸತ್ಯ ಅಹಿಂಸೆ ದಾನ ಧರ್ಮ ದಯೆ:
ಶೋಕವ ಹರಿಸುವ ‘ಅಶೋಕ’ ಚಕ್ರ.

ಯುದ್ಧವನೆಸಗದೆ, ಯಾರನು ಕೊಲ್ಲದೆ,
ಕೊಲ್ಲಬಂದವರ ರಕ್ತವ ಚೆಲ್ಲದೆ,
ಆಳರಸರ ಹೃದಯವ ಮಾರ್ಪಡಿಸಿದ
ದಿವ್ಯಮಂತ್ರವಿದು: ಅಶೋಕ ಚಕ್ರ.

ನಾಡಿನ ದಾಸ್ಯದ ಶೋಕವ ಕಳೆದು
ಹೆರರಿಗೆ ಶೋಕವ ತರುವುದನುಳಿದು
ಶಾಂತಿಯ ಬೆಳಸುವ ಧ್ಯೇಯವ ತಳೆದು
ತಿರುಗುತ ಬೆಳಗುತಲಿಹುದೀ ಚಕ್ರ.

ಭಾರತೀಯ ಸಂಸ್ಕೃತಿಗಿದೆ ಗುರುತು:
ಭೇದಭಾವಗಳನೆಲ್ಲರು ಮರೆತು
ಕೂಡಿ ಬಾಳೆ ಶೋಕವೆ ಹೊರತು:
ಆ ಬಾಳ ತರಲಿ ಈ ಶುಭ ಚಕ್ರ!

ಸತ್ಯ ಅಹಿಂಸೆಗಳಡಿಗಲ್ ಮೇಲೆ
ಸಮತೆಯ ಸೌಧವ ಕಟ್ಟಲು ನಾಳೆ
ಜನತೆಯ ಶೋಕವು ನೀಗುವುದಾಗಳೆ:
ಅದರ ಮುಂಗುರುಹು ಅಶೋಕ ಚಕ್ರ!

ಭಾರತ ಮಾತೆಗೆ ಕಿರೀಟವಿಟ್ಟು
ನಾಡಿಗೆ ನಲ್‌ನಗು ಮುಖವನು ಕೊಟ್ಟು
ವಿಶ್ವಕೆ ಶಾಂತಿಯ ಹರಕೆಯನಿಟ್ಟು
ತಿಗುತ್ತಿರಲಿ ಸನಾತನ ಚಕ್ರ!

ಎನಿತು ಸೂಳು ತಿರುಗಿದುದೀ ಚಕ್ರ,
ಎನಿತು ಸೂಳು ನಿಂತುದೊ ಈ ಚಕ್ರ;
ನಿಲ್ಲದೆ ತಿರುಗಲಿ ಅಶೋಕ ಚಕ್ರ,
ಗೆಲ್ಲಲಿ ಜಗವನೆ ಧರ್ಮದ ಚಕ್ರ!

ಶ್ರೀ ಕೃಷ್ಣ ಬುದ್ಧ ಅಶೋಕ ಗಾಂಧೀ
ಪ್ರಭೃತಿಪ್ರವರ್ತಿತ ಚಕ್ರಕ್ಕೆ ನಮೋ
ಧರ್ಮದ ಚಕ್ರಕೆ ನಮೋ ನಮೋ
ಅಶೋಕ ಚಕ್ರಕೆ ನಮೋ ನಮೋ

ಅಶೋಕ ಚಕ್ರಾಂಕಿತ ಧ್ವಜಕೆ ನಮೋ
ಭಾರತ ಮಾತೆಗೆ ನಮೋ ನಮೋ
ಭಾರತ ಜನತೆಗೆ ತೇಜವನೆರೆದು
ಸಲಹುವ ದೇವಗೆ ನಮೋ ನಮೋ
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...