Home / ಕವನ / ಕವಿತೆ / ಮರದ ವ್ಯಥೆ

ಮರದ ವ್ಯಥೆ

ನಿಮ್ಮ ಮನೆಯಂಗಳಕೆ ಗುಲಾಬಿ
ಮಲ್ಲಿಗೆ ಗಿಡವಾಗಿ ಬೆಳೆದಿದ್ದರೆ
ನಿಮ್ಮ ಉಡಿಯಲಿ ಬೆಚ್ಚಗಿರುತ್ತಿದ್ದೆ.

ಬೆಳೆದಿದ್ದೇನೆ, ಅಲ್ಲಲ್ಲ-ಬೆಳೆಸಿದ್ದಾರೆ
ಕಾರ್ಪೊರೇಶನ್‌ದವರು ನಿಮ್ಮ ಕಂಪೌಂಡಿನ ಹೊರಗೆ
ಅದಕ್ಕೆ ನಾನು ನಿಮ್ಮ ಮಗುವಲ್ಲವೆಂದು ಗೊತ್ತಾದುದು.
ಬೆಳೆಯುತ್ತಿದ್ದೇನೆ ನಿಮ್ಮ ಮಕ್ಕಳನು
ನೋಡುತ್ತಾ ಆಟ ಆಡುತ್ತಾ,
ಮೈಲಿಗೆ ಅಸಮಾನತೆ ಅನಿಸಿತೋ
ಕೈ ಕತ್ತರಿಸಿದ್ದೀರಿ
ಪೋಲಿ ಹುಡುಗರು ಮತ್ತೊಂದು ಕೈ ಮುರಿದರು.
ಆದರೂ ಮತ್ತೆ ಚಿಗುರಿ ಮರವಾಗಿ ಬೆಳೆದು
ನೆರಳು ಕೊಡುವ ಕನಸುಕಣ್ಣಿನ ಮರ ನಾನು.

ನಾಯಿಹಂದಿಗಳ ಕಚ್ಚಾಟದ ನಡುವೆ
ವಿಷಹೊಗೆಯ ಒದೆತಗಳು ತಿನ್ನುತ
ಬೆಳೆಯುತ್ತಿದ್ದೇನೆ ಇಕ್ಕಟ್ಟಾದ ರಸ್ತೆಯ ಎಡಬಲಕೆ.

ಆದರೇನು!-
ವಿದ್ಯುತ್ ಇಲಾಖೆಯವ ಕಠಿಣ ಹೃದಯಿ
ಕೆಳಗೆ ಕೆಬಲ್‌ಗೆಂದು ಕಾಲುಬೆರಳುಗಳು ಕತ್ತರಿಸಿ
ಮೇಲೆ ತೋಳು ತೋಳುಗಳೂ ಕತ್ತರಿಸಿದ
ಹೃದಯವಂತ ಭಕ್ತರೂ ಕೂಡಾ
ಗಣೇಶ ಮೆರವಣಿಗೆಯ ಲಾರಿಗೆ
ಅಡ್ಡ ಎಂದು ಮತ್ತೆ ಮತ್ತೆ ಮುರಿದು ಎಸಿಯುವದೆ?

ಉರುವಲಕೆ ಲಟಲಟನೆ
ಮುರಿಯುವ ಕೆಲವರ ಖುಷಿಯೊಳಗೆ
ನನ್ನುಸಿರ ಸುಡುವುದು ಗೊತ್ತಾದೀತೆ?

ಈಗ,
ಬಳಲಿ ಬಳಲಿ ಕೃಶವಾಗಿ
ಆಕಾಶಕ್ಕೆ ಮೊರೆಯಿಡುತ್ತ ಮೇಲೇರುತ್ತಿದ್ದರೆ
ಅಲ್ಲಿಯೂ ಗಾಳಿದೇವನ ಹೊಡೆತವೆ?
ಎಷ್ಟೊಂದು ಸಹಿಸಲಿ ನಾನು?
ನಿಮ್ಮ ಮನೆಯ ಮೇಲೆ
ಸ್ಕೂಟರ್ ಕಾರ್ ಕಂಪೌಂಡುಗಳ ಮೇಲೆ
ಬಿದ್ದದ್ದು ನಿಮಗೂ ಒಂದಿಷ್ಟು ಪೆಟ್ಟು ಕೊಟ್ಟದ್ದು
ನನಗೂ ವ್ಯಥೆ, ಹೇಳಿ ಏನು ಮಾಡಲಿ ನಾನು
ನೀವೇ ಮಾಡಿದ್ದು
ಮಾಡಿದ್ದುಣ್ಣೋ ಮಹಾರಾಯಾ.

ಒಂದೈದು ನಿಮಿಷ ಬನ್ನಿ ಬನ್ನಿ
ನಿಮ್ಮ ಕಂಪೌಂಡಿಗೆ, ಸುಂದರ ಟೆರಸ್ಸಿಗೂ
ಅಂಗಾಂಗ ಕೊಚ್ಚಿ ಕೊಚ್ಚಿ ಹಾಕಿ
ಮೊಂಡು ಮಾಡಿದ ಈ
ಕುಷ್ಟರೋಗಿಯನ್ನೋ ಕುಂಟನನ್ನೋ ನೋಡಲು.
ಕಾಡಿನಲಿ ಹುಟ್ಟಿಬೆಳೆದರೂ
ಬಿಡುವುದಿಲ್ಲ ಬಿಡಿ ನೀವು
ಬೆಂಕಿ ಹಚ್ಚುವದು, ಬೇರು ಸಮೇತ ಉರುಳಿಸಿ
ನಿಮ್ಮ ಮನೆಗೆ ಬಾಗಿಲುಮಾಡಿ
ನೀವು ಭಧ್ರವಾಗಿದ್ದು
ನಮ್ಮನ್ನು ಅಭಧ್ರವಾಗಿಸುವವರು.

ದೇವರೇ ಕ್ಷಮಿಸು ಮನುಷ್ಯರನು
ಕಲಿಸು ಪ್ರೀತಿ ಶಾಂತಿ ಸಹನೆ!
————————
‘ಹಿಂದೆ ಬಂದರೆ ಒದಯಬೇಡಿ ಮುಂದೆ ಬಂದರೆ ಹಾಯಬೇಡಿ’- ಗೋವಿನ ಹಾಡು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...