Home / ಕವನ / ಕವಿತೆ / ಮರದ ವ್ಯಥೆ

ಮರದ ವ್ಯಥೆ

ನಿಮ್ಮ ಮನೆಯಂಗಳಕೆ ಗುಲಾಬಿ
ಮಲ್ಲಿಗೆ ಗಿಡವಾಗಿ ಬೆಳೆದಿದ್ದರೆ
ನಿಮ್ಮ ಉಡಿಯಲಿ ಬೆಚ್ಚಗಿರುತ್ತಿದ್ದೆ.

ಬೆಳೆದಿದ್ದೇನೆ, ಅಲ್ಲಲ್ಲ-ಬೆಳೆಸಿದ್ದಾರೆ
ಕಾರ್ಪೊರೇಶನ್‌ದವರು ನಿಮ್ಮ ಕಂಪೌಂಡಿನ ಹೊರಗೆ
ಅದಕ್ಕೆ ನಾನು ನಿಮ್ಮ ಮಗುವಲ್ಲವೆಂದು ಗೊತ್ತಾದುದು.
ಬೆಳೆಯುತ್ತಿದ್ದೇನೆ ನಿಮ್ಮ ಮಕ್ಕಳನು
ನೋಡುತ್ತಾ ಆಟ ಆಡುತ್ತಾ,
ಮೈಲಿಗೆ ಅಸಮಾನತೆ ಅನಿಸಿತೋ
ಕೈ ಕತ್ತರಿಸಿದ್ದೀರಿ
ಪೋಲಿ ಹುಡುಗರು ಮತ್ತೊಂದು ಕೈ ಮುರಿದರು.
ಆದರೂ ಮತ್ತೆ ಚಿಗುರಿ ಮರವಾಗಿ ಬೆಳೆದು
ನೆರಳು ಕೊಡುವ ಕನಸುಕಣ್ಣಿನ ಮರ ನಾನು.

ನಾಯಿಹಂದಿಗಳ ಕಚ್ಚಾಟದ ನಡುವೆ
ವಿಷಹೊಗೆಯ ಒದೆತಗಳು ತಿನ್ನುತ
ಬೆಳೆಯುತ್ತಿದ್ದೇನೆ ಇಕ್ಕಟ್ಟಾದ ರಸ್ತೆಯ ಎಡಬಲಕೆ.

ಆದರೇನು!-
ವಿದ್ಯುತ್ ಇಲಾಖೆಯವ ಕಠಿಣ ಹೃದಯಿ
ಕೆಳಗೆ ಕೆಬಲ್‌ಗೆಂದು ಕಾಲುಬೆರಳುಗಳು ಕತ್ತರಿಸಿ
ಮೇಲೆ ತೋಳು ತೋಳುಗಳೂ ಕತ್ತರಿಸಿದ
ಹೃದಯವಂತ ಭಕ್ತರೂ ಕೂಡಾ
ಗಣೇಶ ಮೆರವಣಿಗೆಯ ಲಾರಿಗೆ
ಅಡ್ಡ ಎಂದು ಮತ್ತೆ ಮತ್ತೆ ಮುರಿದು ಎಸಿಯುವದೆ?

ಉರುವಲಕೆ ಲಟಲಟನೆ
ಮುರಿಯುವ ಕೆಲವರ ಖುಷಿಯೊಳಗೆ
ನನ್ನುಸಿರ ಸುಡುವುದು ಗೊತ್ತಾದೀತೆ?

ಈಗ,
ಬಳಲಿ ಬಳಲಿ ಕೃಶವಾಗಿ
ಆಕಾಶಕ್ಕೆ ಮೊರೆಯಿಡುತ್ತ ಮೇಲೇರುತ್ತಿದ್ದರೆ
ಅಲ್ಲಿಯೂ ಗಾಳಿದೇವನ ಹೊಡೆತವೆ?
ಎಷ್ಟೊಂದು ಸಹಿಸಲಿ ನಾನು?
ನಿಮ್ಮ ಮನೆಯ ಮೇಲೆ
ಸ್ಕೂಟರ್ ಕಾರ್ ಕಂಪೌಂಡುಗಳ ಮೇಲೆ
ಬಿದ್ದದ್ದು ನಿಮಗೂ ಒಂದಿಷ್ಟು ಪೆಟ್ಟು ಕೊಟ್ಟದ್ದು
ನನಗೂ ವ್ಯಥೆ, ಹೇಳಿ ಏನು ಮಾಡಲಿ ನಾನು
ನೀವೇ ಮಾಡಿದ್ದು
ಮಾಡಿದ್ದುಣ್ಣೋ ಮಹಾರಾಯಾ.

ಒಂದೈದು ನಿಮಿಷ ಬನ್ನಿ ಬನ್ನಿ
ನಿಮ್ಮ ಕಂಪೌಂಡಿಗೆ, ಸುಂದರ ಟೆರಸ್ಸಿಗೂ
ಅಂಗಾಂಗ ಕೊಚ್ಚಿ ಕೊಚ್ಚಿ ಹಾಕಿ
ಮೊಂಡು ಮಾಡಿದ ಈ
ಕುಷ್ಟರೋಗಿಯನ್ನೋ ಕುಂಟನನ್ನೋ ನೋಡಲು.
ಕಾಡಿನಲಿ ಹುಟ್ಟಿಬೆಳೆದರೂ
ಬಿಡುವುದಿಲ್ಲ ಬಿಡಿ ನೀವು
ಬೆಂಕಿ ಹಚ್ಚುವದು, ಬೇರು ಸಮೇತ ಉರುಳಿಸಿ
ನಿಮ್ಮ ಮನೆಗೆ ಬಾಗಿಲುಮಾಡಿ
ನೀವು ಭಧ್ರವಾಗಿದ್ದು
ನಮ್ಮನ್ನು ಅಭಧ್ರವಾಗಿಸುವವರು.

ದೇವರೇ ಕ್ಷಮಿಸು ಮನುಷ್ಯರನು
ಕಲಿಸು ಪ್ರೀತಿ ಶಾಂತಿ ಸಹನೆ!
————————
‘ಹಿಂದೆ ಬಂದರೆ ಒದಯಬೇಡಿ ಮುಂದೆ ಬಂದರೆ ಹಾಯಬೇಡಿ’- ಗೋವಿನ ಹಾಡು.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್