Home / ಕವನ / ಕವಿತೆ / ಮರದ ವ್ಯಥೆ

ಮರದ ವ್ಯಥೆ

ನಿಮ್ಮ ಮನೆಯಂಗಳಕೆ ಗುಲಾಬಿ
ಮಲ್ಲಿಗೆ ಗಿಡವಾಗಿ ಬೆಳೆದಿದ್ದರೆ
ನಿಮ್ಮ ಉಡಿಯಲಿ ಬೆಚ್ಚಗಿರುತ್ತಿದ್ದೆ.

ಬೆಳೆದಿದ್ದೇನೆ, ಅಲ್ಲಲ್ಲ-ಬೆಳೆಸಿದ್ದಾರೆ
ಕಾರ್ಪೊರೇಶನ್‌ದವರು ನಿಮ್ಮ ಕಂಪೌಂಡಿನ ಹೊರಗೆ
ಅದಕ್ಕೆ ನಾನು ನಿಮ್ಮ ಮಗುವಲ್ಲವೆಂದು ಗೊತ್ತಾದುದು.
ಬೆಳೆಯುತ್ತಿದ್ದೇನೆ ನಿಮ್ಮ ಮಕ್ಕಳನು
ನೋಡುತ್ತಾ ಆಟ ಆಡುತ್ತಾ,
ಮೈಲಿಗೆ ಅಸಮಾನತೆ ಅನಿಸಿತೋ
ಕೈ ಕತ್ತರಿಸಿದ್ದೀರಿ
ಪೋಲಿ ಹುಡುಗರು ಮತ್ತೊಂದು ಕೈ ಮುರಿದರು.
ಆದರೂ ಮತ್ತೆ ಚಿಗುರಿ ಮರವಾಗಿ ಬೆಳೆದು
ನೆರಳು ಕೊಡುವ ಕನಸುಕಣ್ಣಿನ ಮರ ನಾನು.

ನಾಯಿಹಂದಿಗಳ ಕಚ್ಚಾಟದ ನಡುವೆ
ವಿಷಹೊಗೆಯ ಒದೆತಗಳು ತಿನ್ನುತ
ಬೆಳೆಯುತ್ತಿದ್ದೇನೆ ಇಕ್ಕಟ್ಟಾದ ರಸ್ತೆಯ ಎಡಬಲಕೆ.

ಆದರೇನು!-
ವಿದ್ಯುತ್ ಇಲಾಖೆಯವ ಕಠಿಣ ಹೃದಯಿ
ಕೆಳಗೆ ಕೆಬಲ್‌ಗೆಂದು ಕಾಲುಬೆರಳುಗಳು ಕತ್ತರಿಸಿ
ಮೇಲೆ ತೋಳು ತೋಳುಗಳೂ ಕತ್ತರಿಸಿದ
ಹೃದಯವಂತ ಭಕ್ತರೂ ಕೂಡಾ
ಗಣೇಶ ಮೆರವಣಿಗೆಯ ಲಾರಿಗೆ
ಅಡ್ಡ ಎಂದು ಮತ್ತೆ ಮತ್ತೆ ಮುರಿದು ಎಸಿಯುವದೆ?

ಉರುವಲಕೆ ಲಟಲಟನೆ
ಮುರಿಯುವ ಕೆಲವರ ಖುಷಿಯೊಳಗೆ
ನನ್ನುಸಿರ ಸುಡುವುದು ಗೊತ್ತಾದೀತೆ?

ಈಗ,
ಬಳಲಿ ಬಳಲಿ ಕೃಶವಾಗಿ
ಆಕಾಶಕ್ಕೆ ಮೊರೆಯಿಡುತ್ತ ಮೇಲೇರುತ್ತಿದ್ದರೆ
ಅಲ್ಲಿಯೂ ಗಾಳಿದೇವನ ಹೊಡೆತವೆ?
ಎಷ್ಟೊಂದು ಸಹಿಸಲಿ ನಾನು?
ನಿಮ್ಮ ಮನೆಯ ಮೇಲೆ
ಸ್ಕೂಟರ್ ಕಾರ್ ಕಂಪೌಂಡುಗಳ ಮೇಲೆ
ಬಿದ್ದದ್ದು ನಿಮಗೂ ಒಂದಿಷ್ಟು ಪೆಟ್ಟು ಕೊಟ್ಟದ್ದು
ನನಗೂ ವ್ಯಥೆ, ಹೇಳಿ ಏನು ಮಾಡಲಿ ನಾನು
ನೀವೇ ಮಾಡಿದ್ದು
ಮಾಡಿದ್ದುಣ್ಣೋ ಮಹಾರಾಯಾ.

ಒಂದೈದು ನಿಮಿಷ ಬನ್ನಿ ಬನ್ನಿ
ನಿಮ್ಮ ಕಂಪೌಂಡಿಗೆ, ಸುಂದರ ಟೆರಸ್ಸಿಗೂ
ಅಂಗಾಂಗ ಕೊಚ್ಚಿ ಕೊಚ್ಚಿ ಹಾಕಿ
ಮೊಂಡು ಮಾಡಿದ ಈ
ಕುಷ್ಟರೋಗಿಯನ್ನೋ ಕುಂಟನನ್ನೋ ನೋಡಲು.
ಕಾಡಿನಲಿ ಹುಟ್ಟಿಬೆಳೆದರೂ
ಬಿಡುವುದಿಲ್ಲ ಬಿಡಿ ನೀವು
ಬೆಂಕಿ ಹಚ್ಚುವದು, ಬೇರು ಸಮೇತ ಉರುಳಿಸಿ
ನಿಮ್ಮ ಮನೆಗೆ ಬಾಗಿಲುಮಾಡಿ
ನೀವು ಭಧ್ರವಾಗಿದ್ದು
ನಮ್ಮನ್ನು ಅಭಧ್ರವಾಗಿಸುವವರು.

ದೇವರೇ ಕ್ಷಮಿಸು ಮನುಷ್ಯರನು
ಕಲಿಸು ಪ್ರೀತಿ ಶಾಂತಿ ಸಹನೆ!
————————
‘ಹಿಂದೆ ಬಂದರೆ ಒದಯಬೇಡಿ ಮುಂದೆ ಬಂದರೆ ಹಾಯಬೇಡಿ’- ಗೋವಿನ ಹಾಡು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...