Home / ಕಥೆ / ಜನಪದ / ತಮ್ಮಕ್ಕ – ಅಕ್ಕೆಲೆ

ತಮ್ಮಕ್ಕ – ಅಕ್ಕೆಲೆ

Yeleyಮನೆಗೆ ಬಂದ ಅತಿಥಿ ಅಭ್ಯಾಗತರನ್ನು ಸತ್ಕರಿಸುವುದಕ್ಕೆ ಹಿಂದಿನ ದಿನಗಳಲ್ಲಿ ತಂಬಾಕು ಸೇದುವ ಏರ್ಪಾಡು ಮಾಡಿಕೊಡುತ್ತಿದ್ದರು. ಬಂದವರಿಗೆ ಎಕ್ಕೆಲೆ – ತಂಬಾಕುಗಳನ್ನು ಒದಗಿಸಿದರೆ ದೊಡ್ಡ ಮನ್ನಣೆ ಮಾಡಿದಂತೆ. ಬಂದ ಅತಿಥಿಯಾಗಲಿ ಆಪ್ತರಾಗಲಿ ಮನೆಯವರಿತ್ತ ಎಕ್ಕೆಲೆಯಿಂದ ಚುಟ್ಟಕಟ್ಟಿ ಅದರಲ್ಲಿ ತಂಬಾಕು ತುಂಬಿ, ಮೇಲೆ ಬೆಂಕಿಯ ಕಿಡಿಯಿಟ್ಟು ಧೂಮ್ರಪಾನ ಮಾಡುತ್ತಿದ್ದರು.

ಎಕ್ಕೆಲೆ ತಂಬಾಕುಗಳಿಗೆ ಅಷ್ಟೂಂದು ದೊಡ್ಡಸ್ತಿಕೆ ಬರಲು ಕಾರಣವೇನು ? ಎಕ್ಕೆಲೆ ತಂಬಾಕುಗಳು ಹುಟ್ಟಿಕೊಂಡಿದ್ದು ಎಂದಿನಿಂದ ?

ಬಹಳ ಹಿಂದಿನ ಕಾಲದಲ್ಲಿ ಅ೦ದರೆ ಈ ಭೂಮಿಯ ಮೇಲೆ ಮನುಷ್ಯ ಪ್ರಾಣಿ ಹುಟ್ಟಿಬಂದ ಬಳಿಕ, ಮನೆಯೊಳಗಿನ ಗಂಡು ಹೆಣ್ಣುಗಳಿಗೆ ಹೊಂದಾಣಿಕೆಗೊಳಿಸಿ ಮದುವೆ ಮಾಡುವ ಪರಿಪಾಠವಿರಿಸಿಕೊಳ್ಳಲಾಗಿತ್ತು. ಮುಂದೆ ಅನೇಕ ಶತಮಾನಗಳನ್ನು ಕಳೆಯುವ ಹೊತ್ತಿಗೆ ಮನುಷ್ಯರ ಸಂಖ್ಯೆ ಬೆಳೆಯಿತು. ಅವರು ಗುಂಪು ಗುಂಪಾಗಿ ನೆಲೆಸತೊಡಗಿದರು. ಆವಾಗ ಮನುಷ್ಯ ಪ್ರಮುಖರು ಹೊಸಯುಕ್ತಿಯೊಂದನ್ನು ಕಂಡುಹಿಡಿದರು. ಏನೆಂದರೆ – ಗಂಡಿಗೆ ಹೆಣ್ಣನ್ನು ಮನೆಯೊಳಗಿಂದಲೇ ತೆಗೆದುಕೊಳ್ಳದೆ ಬೇರೂಂದು ಗುಂಪಿನೊಳಗಿನಿಂದ ತರುವುದು ಒಳ್ಳೆಯದು.

ಹೀಗೆ ಕೊಡುಗೂಸುಗಳನ್ನು ಬೇರೊಂದು ಮನೆಗೆ ಕೊಡುವ ಕ್ರಮವು ಬಳಕೆಯಲ್ಲಿ ಬಂದಿತು. ಆದರೆ ಹಳೆಯ ಸಂಪ್ರದಾಯವೂ ಅಧರ್ಮವೆನಿಸುತ್ತಿರಲಿಲ್ಲ. ಬೇರೊಂದು ಗುಂಪಿಗೆ ಕೊಡಮಾಡಿದ ಹೆಣ್ಣನ್ನು ಹಬ್ಬ – ಹುಣ್ಣಿಮೆ. ಉತ್ಸವ ಆಮೋದದ ಕಾಲಕ್ಕೆ ತವರುಮನೆಗೆ ಕರೆತರತೊಡಗಿದರು.

ನಾಗರಪಂಚಮಿ ಹಬ್ಬದ ಕಾಲಕ್ಕೆ ಮನೆಯ ಹೆಣ್ಮಗಳನ್ನು ತವರಿಗೆ ಕರೆತರುವದಕ್ಕೆ ತಮ್ಮನ್ನು ಕಂಟಲಿ ಎತ್ತು ತೆಗೆದುಕೊಂಡು, ಬೇರೊಂದು ಗುಂಪು ಇರುವಲ್ಲಿಗೆ ಹೋದನು. ಅಕ್ಕನ ಅತ್ತೆ ಮಾವಂದಿರು ಯಾವ ನೆವವನ್ನೂ ಮುಂದೊಡ್ಡದೆ ಸೊಸೆಯನ್ನು ಆಕೆಯ ತವರುಮನೆಗೆ ಕಳಿಸುವ ಏರ್ಪಾಡು ಮಾಡಿದರು.

ಅಕ್ಕನನ್ನು ಎತ್ತಿನಮೇಲೆ ಕುಳ್ಳಿರಿಸಿಕೊಂಡು ತನ್ನೂರಿಗೆ ಸಾಗಿದ ತಮ್ಮನ್ನು ಪ್ರಾಯದಿಂದ ತುಂಬಿತುಳುಕುವ ಅಕ್ಕನನ್ನು ಕಂಡು ತಬ್ಬಿಬ್ಬಾದನು. ಆಕೆಯು ಧರಿಸಿದ ಬಂಗಾರದೊಡವೆಗಳಿಂದ ಆಕೆಯ ಚೆಲುವು ನೂರ್ಮಡಿಸಿತ್ತು. ಹಿಂದಿನ ಕಾಲವಾಗಿದ್ದರೆ ಅಕ್ಕನೇ ತನ್ನ ಹೆ೦ಡತಿ ಆಗುತ್ತಿದ್ದಳಲ್ಲವೇ, ಎಂದು ಎಣಿಸಿದನು. ಅದೇ ಪದ್ಧತಿ ಯೋಗ್ಯವಾಗಿತ್ತೆಂದೂ ಬಗೆದನು. ಅಕ್ಕನೂ ಏನಾದರೂ ಕೇಳಿದರೆ ತಮ್ಮನು ತನ್ನ ತಲೆಯೊಳಗೆ ಸುಳಿದಾಡುವ ವಿಚಾರವನ್ನೇ ಮುಂದೆ ಮಾಡಿ ಮರುನುಡಿಯುವನು. ದಾರಿಸಾಗುತ್ತಲೇ ಇತ್ತು.

ಹೊತ್ತು ಮುಳುಗುವ ಸಮಯವಾಯಿತು. ತಮ್ಮನ ಬುದ್ಧಿ ತೀರ ಚಂಚಲ ಗೊಂಡಿತು. ಅವನ ಕಂಟಲಿ ಎತ್ತು ತೀರ ನಿರ್ಜನಪ್ರದೇಶವನ್ನು ಪ್ರವೇಶಿಸಿತು. ಒಂದೆರಡು ಕೂಗಳತೆ ದಾಟಿತ್ತೋ ಇಲ್ಲವೋ ತಮ್ಮನು ಅಡ್ಡಬಂದು ಎತ್ತಿನ ಮುಗದಾಣಿ ಹಿಡಿದನು. ಅದು ಗಕ್ಕನೆ ನಿಂತಿತು. ಅಕ್ಕನಿಗೆ ಕೆಳಗಿಳಿಯಲು ಹೇಳಿದನು.

ಆಕೆ ಮರುನುಡಿದಳು –

“ಹೊತ್ತು ಮುಳುಗಿತು, ಕತ್ತಲಾಗುವಷ್ಟರಲ್ಲಿ ಊರು ಸೇರುವುದು ಒಳ್ಳೆಯದಲ್ಲವೇ ? ಹುಲಿಕರಡಿಗಳ ಬಾಯಿಗೆ ಬೀಳುವುದಾಗಲಿ, ಕಳ್ಳರ ಕೈಗೆ ಸಿಗುವದಾಗಲಿ ಅದರಿಂದ ತಪ್ಪುತ್ತದೆ. ಆದ್ದರಿಂದ ಎತ್ತನ್ನು ಅವಸರದಿಂದ ಹೊಡೆಯುವುದನ್ನು ಬಿಟ್ಟು ಇಲ್ಲೇಕೆ ಇಳಿಯಬೇಕು?”

“ಊರು ಇನ್ನು ದೂರವಿಲ್ಲ. ಇಳಿದುಬಿಡು. ನೀರು ಕುಡಿದು ಮುಂದೆ ಸಾಗೋಣ” ಎಂದು ತಮ್ಮನು ಅಕ್ಕನಿಗೆ ನೆರವು ನೀಡಿ ಎತ್ತಿನಿಂದ ಕೆಳಗಿಳಿಸಿಕೊಂಡನು. ಆಕೆಯ ಸ್ಪರ್ಶದಿಂದ ಆತನಲ್ಲಿ ವಿದ್ಯುತ್ಸಂಚಾರವೇ ಆದಂತಾಯಿತು.

ಮುಂದೆ ಏನು ನಡೆಯಿತೆಂಬುದನ್ನು ಹೇಳುವ ಕಾರಣವೇ ಇಲ್ಲ, ಬಲಾತ್ಕಾರ! “ಇದು ಧರ್ಮವಲ್ಲ” ಎಂದು ಅಕ್ಕನು ಹಲುಬಿದಳು. “ಹಳೆಯದಾದರೇನು, ಇದು ಧರ್ಮವಾಗಿಯೇ ಇತ್ತು” ಎಂದನು ತಮ್ಮ.

“ಬಿಟ್ಟುಕೊಟ್ಟ ಧರ್ಮದದಾರಿ ಅಧರ್ಮವೇ ಅಲ್ಲವೇ ? ದೇವಿ, ಭೂಮಿತಾಯೀ, ಇಲ್ಲಿ ನೀನಲ್ಲದೆ ಇನ್ನಾರೂ ಇಲ್ಲ. ಅಧರ್ಮದಿಂದ ನನ್ನನ್ನು ಉಳಿಸು ತಾಯಿ” ಎಂದು ಕೈಮುಗಿದು ಹೃತ್ಪೂರ್ವಕವಾಗಿ ಮೊರೆಯಿಟ್ಟಳು.

ಭೂಮಿತಾಯಿಗೆ ಕೇಳಿಸಿತೇನೋ ಆಕೆಯಮೊರೆ. ಅದು ಬಿರಿದು ಬಿಟ್ಟಿತು. ದುಃಖಾರ್ತೆಯು ನೆಲದ ಬಿರುಕಿನಲ್ಲಿ ಇಳಿಯತೊಡಗಿದಳು. ಅದನ್ನು ಕಂಡು ತಮ್ಮನು ಮುಗಿದ ಆ ಕೈಗಳೆರಡನ್ನೂ ಹಿಡಿದು ಹಿಂದೆಳೆಯತೊಡಗಿದನು. ಆದರೆ ಅಕ್ಕನ ಇಡಿಯ ಶರೀರದೊಡನೆ ಮೇಲೆತ್ತಿದ್ದ ಕೈಗಳೆರಡೂ ಅಡಗಿಕೊಂಡವಾದರೂ ಮುಗಿದ ಹಸ್ತಗಳು ಮಾತ್ರ ಹೊರಗೆ ಕಾಣಿಸಿಕೊಂಡವು.

ಅದನ್ನೆಲ್ಲ ಕಂಡು ತಮ್ಮನಿಗೆ ಪಶ್ಚಾತ್ತಾಪವಾಯಿತು. ಅಕ್ಕನನ್ನು ಕಳೆದು ಕೊಂಡೆನೆಂದು ದಿಕ್ಕು ಮರುದನಿಗೊಡುವಂತೆ ಆಕ್ರೋಶಿಸತೊಡಗಿದನು. ಮುಂದುಗಾಣದೆ ಎತ್ತು ಎಳೆದುಕೊಂಡು ಊರದಾರಿ ಹಿಡಿದನು. ತಾಯಿ ತಂದೆಗಳ ಮುಂದೆ ಅಕ್ಕನ ಸುದ್ದಿಯನ್ನು ಏನೆಂದು ಹೇಳಲಿ – ಎಂಬ ವಿಚಾರದಲ್ಲಿಯೇ ಮುಳುಗಿದನು. ನೆಲದಲ್ಲಿ ಮುಗಿದುಹೋದ ಆ ಪವಿತ್ರಾತ್ಮಳ ಹಸ್ತಗಳೆರಡೂ ಮುಂದೆ ಎರಡು ಎಲೆಗಳಾಗಿ ಚಿಗುರಿದವು. ಒಂದು ಅಕ್ಕೆಲೆ, ಇನ್ನೊಂದು ತಮ್ಮಕ್ಕ.

ಅಂದಿನ ಆ ಅಕ್ಕೆಲೆಯೇ ಎಕ್ಕೆಲೆ ಎನಿಸಿತು. ತಮ್ಮಕ್ಕವೆ ತಂಬಾಕು ಎನಿಸಿತು. ಆ ಪವಿತ್ರಾತ್ಮಳು ಕೊಟ್ಟುಹೋದ ಎಕ್ಕೆಲೆ ತಂಬಾಕುಗಳೆರಡೂ ಅತಿಥಿಸತ್ಕಾರದಲ್ಲಿ ಹಿರಿಮೆಯಸ್ಥಾನ ಗಳಿಸಿದವು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...