ಶೀತಕ್ಕೆ ಔಷಧಿ ಇದೆಯೇ?

ಎಡೆಬಿಡದೆ ಸುರಿಯುವ ಮೂಗು, ನುಗ್ಗಿ ಬರುವ ಸೀನು, ಹತ್ತಿಕ್ಕಲಾಗದ ಕೆಮ್ಮು, ಭಾರವೆನಿಸುವ ತಲೆ, ಉರಿಯುವ ಕಣ್ಣುಗಳು ಇವೆಲ್ಲ ಸೇರಿಕೊಂಡರೆ…. ಅದುವೇ ಶೀತ. ನಾವೆಲ್ಲರೂ ಹಲವು ಬಾರಿ ಶೀತಬಾಧೆ ಅನುಭವಿಸಿ, ಶೀತಕ್ಕೆ ಮದ್ಧಿಲ್ಲ ಎಂಬ ಪಾಠ ಕಲಿತಿದ್ದೇವೆ.

ಆದರೂ ಶೀತದ ಬಾಧೆಯಿಂದ ಪಾರಾಗಲಿಕ್ಕಾಗಿ ನಾವು ಏನು ಮಾಡಲಿಕ್ಕೂ ತಯಾರು. ಹಾಗಾಗಿಯೇ ಶೀತದ ಹಾವಳಿ ಹಬ್ಬಿದಾಗ ಮನೆಮನೆಗಳಲ್ಲೂ ಶೀತಶಮನ ಮಾತ್ರೆ ಹಾಗೂ ಸಿರಪ್‌ಗಳ ಭರಾಟೆ. ಹಿರಿಯರು ಮಕ್ಕಳೆನ್ನದೇ ಎಲ್ಲರೂ ಈ ಔಷಧಿಗಳಿಗೇ ಶರಣು.

ಆದರೆ ಇವು ಪರಿಣಾಮಕಾರಿಯೇ? ಸುರಕ್ಷಿತವೇ? ಈ ಅನೇಕ ಮಾತ್ರೆ ಹಾಗೂ ಸಿರಪ್‌ಗಳಲ್ಲಿ ಪಿಪಿಎ (ಪೀನೈಲ್ ಪ್ರೊಪನೋಮೈನ್) ಎಂಬ ರಾಸಾಯನಿಕ ಇದೆ. ಇದರ ಅಪಾಯಗಳ ಬಗ್ಗೆ ಆಮೆರಿಕದ ಔಷಧ ಆಡಳಿತ ಇಲಾಖೆ (ಫೆಡರಲ್ ಡ್ರಗ್ ಅಡ್ಮಿನಿಸ್ಟ್ರೇಷನ್) 2000ನೇ ಇಸವಿಯಲ್ಲೇ ಎಚ್ಚರಿಕೆ ನೀಡಿದೆ.

ಏನಿದು ಪಿಪಿಎ? ಸೈನಸ್ನ ನಿಬಿಡತೆ (ಕಂಜೆಷನ್) ಮತ್ತು ಸಿಂಬಳ ತುಂಬಿದ ಮೂಗಿಗೆ ಚಿಕಿತ್ಸೆ ನೀಡಲು ಪಿಪಿಎಯನ್ನು ಬಳಸುತ್ತಾರೆ. ಹಸಿವನ್ನು ಆದಮಿಡುವ ಅದರ ಪರಿಣಾಮ ಆಧರಿಸಿ ಇದನ್ನು ಬೊಚ್ಚು ಕರಗಿಸಲಿಕ್ಕೂ ಬಳಸುತ್ತಾರೆ.

ಪಿಪಿಎಯ ಎರಡು ಔಷಧೀಯ ಪರಿಣಾಮಗಳು : ರಕ್ತನಾಳಗಳನ್ನು ಸಂಕುಚಿತಗೊಳಿಸುವುದು ಮತ್ತು ಹಸಿವನ್ನು ಕಡಿಮೆ ಮಾಡುವುದು. ರಕ್ತನಾಳಗಳು ಸಂಕುಚಿತವಾಗುವುದರಿಂದ ಸಿಂಬಳ ತುಂಬಿದ ಮೂಗು ನಿರಾಳವಾಗುತ್ತದೆ. ಹಸಿವನ್ನು ಪಿಪಿಎ ಹೇಗೆ ಕಡಿಮೆ ಮಾಡುತ್ತದೆ ಎಂಬುದು ಇನ್ನೂ ಸ್ಪಷ್ಟ ವಾಗಿಲ್ಲ. ಇದಕ್ಕೆ ಕೇಂದ್ರ ನರಮಂಡಲದ ಮೇಲೆ ಪೀಪಿಎ ಬೀರುವ ಪರಿಣಾಮ ಕಾರಣವಾಗಿರಬಹುದು.

ಪಿಪಿಎಯ ಇತಿಹಾಸ
ಅಮೆರಿಕದಲ್ಲಿ ಈ ಔಷಧಿ ಐವತ್ತು ವರುಷಗಳಿಂದ ಮಾರಾಟ ವಾಗುತ್ತಿದ್ದರೆ ಭಾರತದಲ್ಲಿ ಕಳೆದ 30 ವರುಷಗಳಿಂದ ಮಾರಾಟ ವಾಗುತ್ತಿದೆ. 1970ನೆಯ ದಶಕದ ಆರಂಭದಲ್ಲಿ ಯುಎಸ್ಎಯಲ್ಲಿ ಔಷಧಿ ಆಂಗಡಿಗಳಲ್ಲಿ ನೇರವಾಗಿ ಮಾರಾಟವಾಗುವ ಪಿಪಿಎ ಮತ್ತು ಇತರ ಅನೇಕ ಔಷಧಿಗಳ ಮರುಪರಿಶೀಲನೆ ನಡೆಯಿತು. ಸೊಂಕು ಬಾಧಿತ ಮೂಗಿನ ಚಿಕಿತ್ಸೆಗೆ ಪಿಪಿಎ ಸುರಕ್ಷಿತ ಹಾಗೂ ಪರಿಣಾಮಕಾರಿ ಎಂದು 1976ರಲ್ಲಿ ಮೊದಲ ಬಾರಿಗೆ ತಜ್ಞರ ಸಮಿತಿ ಶಿಫಾರಸು ಮಾಡಿತು. ಅದೇ ರೀತಿ 1962ರಲ್ಲಿ ಬೊಚ್ಚು ಕರಗಿಸಲಿಕ್ಕೂ, ಪಿಪಿಎಯನ್ನು ಶಿಫಾರಸು ಮಾಡಲಾಯಿತು. ಆದರೆ ಮೆದುಳಿನಲ್ಲಿ ರಕ್ತಸ್ರಾವ (ಹೆಮೊರಾಜಿಕ್ ಸ್ಟ್ರೋಕ್) ಆದ ರೋಗಿಗಳು ಪಿಪಿಎ ಸೇವಿಸುತ್ತಿದ್ದರು ಎಂಬ  ವರದಿಗಳು ಬರುತ್ತಿದ್ದ ಕಾರಣ, ಔಷಧ ಆಡಳಿತ ಇಲಾಖೆ ಇದು ‘ಸುರಕ್ಷಿತ ಔಷಧ’ ಎಂದು ಪರಿಗಣಿಸಲಿಲ್ಲ.

ಪಿಪಿಎ ಸುರಕ್ಷಿತವಲ್ಲ
ಎರಡು ವರ್ಷಗಳ ಹಿಂದೆ ಯೇಲ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿದ ಅಧ್ಯಯನದ ಪ್ರಕಾರ, ಪಿಪಿಎ ಸೇವಿಸುವ ವ್ಯಕ್ತಿಗಳಿಗೆ ಮೆದುಳಿನ ರಕ್ತಪ್ರಾವದ ಅಪಾಯ ಸಂಭವ (ರಿಸ್ಕ್) ಜಾಸ್ತಿ; ಅದಲ್ಲದೆ ಸ್ಟ್ರೋಕ್ ಆಗುವ ವ್ಯಕ್ತಿಗಳ ಸಂಖ್ಯೆ ಪಿಪಿಎ ಸೇವಿಸುವವರಲ್ಲಿ ಅಧಿಕವೆಂದು ಕಂಡುಬಂತು. ಮೆದುಳಿನ ರಕ್ತನಾಳಗಳು ಪಿಪಿಎಯಿಂದಾಗಿ ನೋವಿನಿಂದ ಬಾತುಕೊಳ್ಳುತ್ತವ. ಆಗಲೇ ಪಿಪಿಎಯಿಂದಾಗಿ ರಕ್ತದ ಒತ್ತಡವೂ ಏರುತ್ತದೆ. ಇವೆರಡೂ ಸೇರಿದಾಗ ಮೆದುಳಿನ ರಕ್ತಪ್ರಾವ ಮತ್ತು ಸ್ಟ್ರೋಕ್ ಉಂಟಾಗುತ್ತದೆ ಎಂಬುದು ಆ ಅಧ್ಯಯನದ ಮುಖ್ಯಾಂಶ.

ಪಿಪಿಎಯಿಂದಾಗಿ ಮೆದುಳಿನ ರಕ್ತಪ್ರಾವ ಮತ್ತು ಸ್ಟ್ರೋಕಿನ ರಿಸ್ಕ್ ತೀರಾ ಕಡಿಮೆಯಾದರೂ ಸ್ಟ್ರೋಕ್ ಪ್ರಾಣಾಂತಿಕ ಹಾಗೂ ಯಾರಿಗೆ ಸ್ಟ್ರೋಕ್ ಆದೀತೆಂದು ಹೇಳಲಾಗದು. ಅನೇಕ ಗಂಭೀರ ಪ್ರತಿಕೂಲ ಪರಿಣಾಮಗಳಿಗೂ ಪಿಪಿಎ ಕಾರಣವೆಂದು ವೈದ್ಕಕೀಯ ಅಧ್ಯಯನಗ್ಟಳು ತೋರಿಸಿಕೊಟ್ಟವೆ. (ಬಾಕ್ಸ್ ನೋಡಿ)

ಇವೆಲ್ಲವನ್ನು ಗಮನಿಸಿದ ಅಮೆರಿಕೆಯ ಔಷಧ ಆಡಳಿತ ಇಲಾಖೆಯು ಪಿಪಿಎ ಇರುವ ಔಷಧಗಳನ್ನು ಉಪಯೋಗಿಸಬಾರದೆಂದು ಬಳಕೆದಾರರನ್ನು ಎಚ್ಚರಿಸಿತು. ಅಂತಿಮವಾಗಿ ನವೆಂಬರ್ 2000ದಲ್ಲಿ ಇವುಗಳ ಮಾರಾಟವನ್ನು ತಾವಾಗಿಯೇ ನಿಲ್ಲಿಸಬೇಕೆಂದು ಉತ್ಪಾದಕರನ್ನು ಆಗ್ರಹಿಸಿತು.

ಭಾರತದ ಪರಿಸ್ಥಿತಿ
ಭಾರತದಲ್ಲಿ ಐವತ್ತಕ್ಕಿಂತಲೂ ಅಧಿಕ ಉತ್ಪಾದಕರು ಕೋಟಿಗಟ್ಟಲೆ ರೂಪಾಯಿ ವಹಿವಾಟಿನ ಶೀತ ನಿರೋಧಿ ಔಷಧಿಗಳಲ್ಲಿ ಪಿಪಿಎ ಬಳಸುತ್ತಿದ್ದಾರೆ. ಇಲ್ಲಿ ಪ್ರತಿ ವರುಷ ಮಾರಾಟವಾಗುವ ಶೀತನಿರೋಧಿ ಮಾತ್ರಗಳ ಬೆಲೆ ರೂ. 100 ಕೋಟಿಗಳು ಮತ್ತು ಶೀತನಿರೋಧಿ ಸಿರಪ್‌ಗಳ ಬೆಲೆ ರೂ. 50 ಕೋಟಿಗಳು. ಅಪಾಯಕಾರಿ ಅಂಶವೆಂದರೆ ಇಂಥ ಅನೇಕ ಔಷಧಿಗಳನ್ನು ವೈದ್ಕರ ಚೀಟಿ ಇಲ್ಲದೆ ಔಷಧಿ ಅಂಗಡಿಗಳಿಂದ ನೇರವಾಗಿ ಖರೀದಿಸಬಹುದಾಗಿದೆ.

ಇವುಗಳ ಲೇಬಲಿನಲ್ಲಿ ಪಿಪಿಎಯ ಅಪಾಯಗಳ ಬಗ್ಗೆ ಯಾವುದೇ ಎಚ್ಚರಿಕೆ ಮುದ್ರಸುವುದಿಲ್ಲ! ಇದರಿಂದ ಆಗಬಹುದಾದ ಅನಾಹುತಗಳಿಗೆ ಯಾರು ಹೊಣೆ? ಅಮೆರಿಕೆಯಲ್ಲಿ ಈ ನಿಯಂತ್ರಣಗಳೆಲ್ಲ ಜಾರಿಗೆ ಬಂದರೂ ಆ ಕುರಿತು ಭಾರತದ ಔಷಧ ನಿಯಂತ್ರಣ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ಹೇಗಿದೆ ಇವರ ಕಾರ್ಯವೈಖರಿ? ಪಾಶ್ಚಾತ್ಯ ದೇಶಗಳಲ್ಲಿ ಬಳಕೆಯೋಗ್ಕ ಅಂದಾಕ್ಷಣ ಆ ಔಷಧಿಗಳಿಗೆ ನಮ್ಮಲ್ಲಿ ಪರವಾನಗಿ ನೀಡುತ್ತಾರೆ. ಆದರೆ ಅಲ್ಲಿ ಅವಕ್ಕೆ ನಿಷೇಧ ಹೇರಿದ ಬಳಿಕ ವರುಷಗಳು ಸರಿದರೂ ಇಲ್ಲಿ ನಿಷೇಧ ಹೇರುವುದಿಲ್ಲ !

ನಿಷೇಧಕ್ಕಾಗಿ  ಪ್ರಯತ್ನ
ಭಾರತದಲ್ಲೂ ಶೀತಶಮನ ಔಷಧಿಗಳಲ್ಲಿ ಪಿಪಿಎ ನಿಷೇಧಕ್ಕಾಗಿ ಅಹ್ಮದಾಬಾದಿನ ಕನ್ಸೂಮರ್ ಎಜುಕೇಶನ್ ಅಂಡ್ ರೀಸರ್ಚ್ ಸೊಸೈಟಿ ಪ್ರಯತ್ನ ನಡೆಸಿದೆ.

ಔಷಧಿ ಮಹಾ ನಿಯಂತ್ರಕರಿಗೆ ಬರೆದ ಪತ್ರದಲ್ಲಿ ಶೀತ ಮತ್ತು ಕಫದ ಔಷಧಿಗಳಲ್ಲಿ ಪಿಪಿಎ ನಿಷೇಧಿಸಬೇಕೆಂದೂ ಆ ತನಕ ಪಿಪಿಎ ಇರುವ ಔಷಧಿಗಳ ಲೇಬಲಿನಲ್ಲಿ ಅದರ ಅಪಾಯಗಳ ಬಗ್ಗೆ ಎಚ್ಚರಿಕೆ ಮುದ್ರಿಸಬೇಕೆಂದೂ ಆಗ್ರಹಿಸಿದೆ.

ಶೀತದ ಸೋಂಕು ಹೇಗೆ?
ಶೀತದ ಸೋಂಕು ಹರಡುವುದು ಹೇಗೆಂದು ಅರ್ಥ ಮಾಡಿಕೊಂಡರೆ ಶೀತ ಶಮನ ಔಷಧಿಗಳ ಅಬ್ಬರದ ಪ್ರಚಾರಕ್ಕೆ ಮರುಳಾಗದಿರಲು ಸಾಧ್ಯ. ಇತರ ಎಲ್ಲ ಸೋಂಕಿನಂತೆ ಶೀತದ ಸೋಂಕು ಕೂಡಾ ಈಗಾಗಲೇ ಶೀತಬಾಧಗೊಳಗಾದ ವ್ಯಕ್ತಿಯಿಂದ ಹರಡುತ್ತದೆ. ಆ ವ್ಯಕ್ತಿ ಸೀನುವಾಗ ಅಸಂಖ್ಯ ವೈರಸ್‌ಗಳನ್ನು ಗಾಳಿಗೆ ತೂರುತ್ತಾನೆ. ನಾವು ಉಸಿರಾಡುವಾಗ ಆ ವೈರಸ್‌ಗಳು ನಮ್ಮ ಮೂಗಿನೊಳಗೆ ಸೆಳೆಯಲ್ಪಟ್ಟು ಒಳಪೊರೆಯಲ್ಲಿ ತಳವೂರುತ್ತವೆ. ಅಲ್ಲಿ ಜೀವಕೋಶಗಳೊಳಗೆ ಈ ವೈರಸ್ ಗಳು ಸಂಖ್ಯಾಭಿವೃದ್ದಿ ಮಾಡಿಕೊಳ್ಳುತ್ತವೆ. ಆ ಜೀವಕೋಶಗಳು ಒಡೆದು ಪುನಃ ವೈರಸ್‌ಗಳನ್ನು ಬಿಡುಗಡೆ ಮಾಡುತ್ತವೆ. ಇವು ಇನ್ನುಳಿದ ಆರೋಗ್ಕವಂತ ಜೀವಕೋಶಗಳ ಮೇಲೆ ಧಾಳಿ ಮಾಡುತ್ತವೆ. ಹೀಗೆ ವೈರಸ್‌ಗಳ ಆಕ್ರಮಣ ಪ್ರಚಂಡ ವೇಗದಲ್ಲಿ ಮೂಗಿನೊಳಗೆ ಹಬ್ಬುತ್ತದೆ.

ಈ ರೀತಿಯಲ್ಲಿ ಬಹುಪಾಲು ಜೀವಕೋಶಗಳು ನಾಶವಾದಾಗ, ಅವನ್ನು ಮೂಗಿನಿಂದ ಹೊರತಳ್ಳಬೇಕಾಗುತ್ತದೆ. ಅದಕ್ಕಾಗಿ ಮೂಗಿನ ಜಿನುಗು ಕೋಶಗಳು ಅಧಿಕ ದ್ರವವನ್ನು ಜಿನುಗಿಸಿ, ನಾಶವಾದ ಕೋಶಗಳನ್ನು ತೊಳೆದು ಹಾಕುತ್ತವೆ. ಈ ಕಾರಣದಿಂದಾಗಿ ಶೀತವಾದಾಗ ಮೂಗಿನಿಂದ ‘ನೀರು’ ಸುರಿಯುತ್ತದೆ. ಶೀತದ ವೈರಸ್ ಗಂಟಲಿನ ಮೃದುಕೋಶಗಳನ್ನೂ ನಾಶಪಡಿಸುತ್ತದೆ. ಆದ್ದರಿಂದ ಶೀತದೊಂದಿಗೆ ಕೆಮ್ಮು ಶುರುವಾಗುತ್ತದೆ. ಅದೇನಿದ್ದರೂ ಶೀತದ ವೈರಸ್‌ಗಳಿಂದ ನಾಶವಾದ ಕೋಶಗಳೆಲ್ಲವೂ ಬೇಗನೇ ಪುನರುತ್ತತ್ತಿ ಆಗುವುದು ನಮ್ಮ ಶರೀರದ ವೈಚಿತ್ರ್ಯಗಳಲ್ಲೊಂದು.

ಆರೋಗ್ಕವಂತ ವ್ಕಕ್ತಿಗೆ ಶೀತದ ಸೋಂಕು ತಗಲಿದೊಡನೆ ಆತನೂ ಶೀತದ ವೈರಸ್‌ನ ವಾಹಕನಾಗಿ ದ್ಯೆಹಿಕ ಸಂಪರ್ಕ ಹಾಗೂ ಬಟ್ಟೆಗಳ ಮೂಲಕ ಸೊಂಕು ತಗಲಿಸುತ್ತಾನೆ. ಜಗತ್ತಿನಲ್ಲಿ ಉಳಿದೆಲ್ಲಾ ಸೊಂಕುಗಳಿಗಿಂತ ವೇಗವಾಗಿ ಶೀತದ ಸೊಂಕು ಹರಡುತ್ತದೆ.

ಶೀತಕ್ಕೆ ಮದ್ದುಂಟೇ?
ಪಿಪಿಎ ಮಾತ್ರವಲ್ಲ, ಇತರ ಹಲವಾರು ಔಷಧಿಗಳನ್ನು ಶೀತನಿವಾರಕ ಔಷಧಿಗಳೆಂದು ಶಿಫಾರಸು ಮಾಡಲಾಗುತ್ತದೆ. ಆದರೆ, ವೈದ್ಯಕೀಯ ಚರಿತ್ರೆಯಲ್ಲಿ ಯಾವುದೇ ಔಷಧಿಗೂ ಶೀತವನ್ನು ನಿವಾರಿಸಲು ಸಾಧ್ಯವಾಗಿಲ್ಲ. ಶೀತಬಾಧೆ
7 ಅಥವಾ 10 ದಿನಗಳಲ್ಲಿ ತಾನಾಗಿಯೇ ಕೊನೆಗೊಳ್ಳುತ್ತದೆ. ಏಕೆಂದರೆ ಆ ಹೊತ್ತಿಗಾಗಲೇ ಮೂಗಿನ ಒಳಪೊರೆಯ ಮೃದುಕೋಶಗಳೆಲ್ಲ ನಾಶವಾಗಿರುತ್ತವೆ ಮತ್ತು ವೈರಸ್‌ನ ಆಕ್ರಮಣಕ್ಕೆ ಆಹುತಿಯಾಗಲು ಯಾವುದೇ ಮೃದುಕೋಶ ಉಳಿದಿರುವುದಿಲ್ಲ. ಅದಲ್ಲದೆ, ಅಷ್ಟು ದಿನಗಳಲ್ಲಿ ಮಾನವನ ಶರೀರವು ಶೀತದ ಪೈರಸನ್ನು ನಾಶ ಮಾಡುವ ಆಂಟಿಬಾಡಿಗಳನ್ನು ಉತ್ಪಾದಿಸಿ ತನ್ನನ್ನು ತಾನೇ ರಕ್ಷಿಸಿಕೊಳ್ಳುತ್ತದೆ.

ಶೀತದ ಲಕ್ಷಣಗಳನ್ನು ಶಮನ ಮಾಡುವ ಔಷಧಿಗಳಿವೆಯೇ ಹೊರತು ಶೀತವನ್ನು ಗುಣಪಡಿಸುವ ಮದ್ಧಿಲ್ಲ.

ಆದ್ದರಿಂದಲೇ ಯಾವುದೇ ಔಷಧಿಯ ಲೇಬಲಿನಲ್ಲಿ ‘ಇದು ಶೀತವನ್ನು ಗುಣಪಡಿಸುತ್ತದೆ’ ಎಂದು ಮುದ್ರಿಸುವುದಿಲ್ಲ. ಹಾಗಿರುವಾಗ ಔಷಧಿಗಳಿಂದ ಶೀತ ಗುಣವಾಗುತ್ತದೆಂದು ನಂಬಿದರೆ ಅದು ನಮ್ಮದೇ ಭ್ರಾಂತಿ, ಅಲ್ಲವೇ? ನಮ್ಮ ಆರೋಗ್ಕದ ಬಗ್ಗೆ ನಿಗಾವಹಿಸಿ, ಶರೀರದ ರೋಗ ನಿರೋಧಕ ಶಕ್ತಿ ಉತ್ತಮಪಡಿಸಿಕೊಳ್ಳುವುದನ್ನು ಬಿಟ್ಟು ಅನ್ಯಮಾರ್ಗವಿಲ್ಲ.

***************************************************************************
ಶೀತ ಶಮನಕ್ಕೆ ಸೂಚನೆಗಳು
* ಹಬೆಯಾಡುವ ನೀರಿನ ಪಾತ್ರೆಯನ್ನು ಎದುರಿಗಿಟ್ಟುಕೂಂಡು, ನಿಧಾನವಾಗಿ ಹಬೆಯನ್ನು ಮೂಗಿನಿಂದ ಒಳಕ್ಕೆಳೆದುಕೊಂಡರೆ ಸಿಂಬಳದಿಂದ ಕಟ್ಟಿಕೊಂಡ ಮೂಗು ನಿರಾಳವಾಗುತ್ತದೆ. ಉಗುರುಬೆಚ್ಚಗಿನ ಉಪ್ಪು ನೀರಿನ ವಾಸನೆಯನ್ನು ಮೂಗಿನಿಂದ ಒಳಕ್ಕೆಳೆದುಕೂಳ್ಳುವುದು ಮೂಗಿನ ಒಳಪೊರೆಗೆ ಹಿತಕಾರಿ.
* ಶೀತದ ಚಿಕಿತ್ಸೆಗೆ ಪಿಪಿಎ ಇರುವ ಮಾತ್ರೆ / ಸಿರಪ್ ಸೇವಿಸದೆ ಇರುವುದು ಸುರಕ್ಷಿತ. ಒಂದು ವೇಳೆ ಸೇವಿಸುವುದಾದರೆ, ಆ ಔಷಧಿಯ ಹಾನಿಕಾರಕ ಪರಿಣಾಮಗಳೇನೆಂದು ಲೇಬಲಿನಿಂದ ಓದಿರಿ.
* ಹೃದಯ ಕಾಯಿಲೆ, ಅಧಿಕ ರಕ್ತದೊತ್ತಡ, ಅತಿಕ್ರಿಯಾಶೀಲ ಥೈರಾಯಿಡ್ ಇರುವವರು ಪಿಪಿಎ ಸೇವಿಸಬಾರದು. ಇತರ ಯಾವುದೇ ಔಷಧಿ ಸೇವಿಸುತ್ತಿರುವವರೂ ಪಿಪಿಎ ಸೇವಿಸಬಾರದು.
* ಡಯಾಬಿಟಿಸ್, ಗ್ಲುಕೋಮಾ ಅಥವಾ ಉಬ್ಬಿಕೊಂಡ ಪ್ರೋಸ್ಟ್ರೇಟ್ ಈ ತೊಂದರೆಗಳು ಪೀಪಿಎ ಯಿಂದಾಗಿ ಅಧಿಕವಾದೀತು. ಪಿಪಿಎ ಸೇವಿಸುವ ಅವಧಿಯಲ್ಲಿ ಜಾಸ್ತಿ  ಕಾಫಿ ಟೀ ಅಥವಾ ಕೋಲಾ ಕುಡಿಯಬಾರದು.
* ಶೀತ ಬೇಗ ಗುಣವಾಗಲೆಂದು ಒಂದರ ಬದಲು ಎರಡು ಮಾತ್ರೆ(ಅಥವಾ ಇಮ್ಮಡಿ ಸಿರಪ್) ಸೇವಿಸಬಾರದು ಅಥವಾ ವೈದ್ಕರು ದಿನಕ್ಕೆ ಎರಡು ಬಾರಿ ಔಷಧಿ ಸೇವಿಸಿ ಅಂದಿದ್ದರೆ ನೀವಾಗಿಯೇ ಜಾಸ್ತಿ ಸೇವಿಸಬಾರದು.
***************************************************************************

ಶೀತಕ್ಕೆ ವ್ಯಾಕ್ಸಿನ್ ಏಕಿಲ್ಲ?
ಮಳೆಗೆ ನೆನೆದರೆ ಅಥವಾ ಚಳಿಯಿರುವಾಗ ತಿರುಗಾಡಿದರೆ ಶೀತ ತಗಲುತ್ತದೆ ಎಂದು ಭಾವಿಸುತ್ತೇವೆ. ಆದರೆ ಶೀತ
ತಗಲುವುದು ಮೂಗಿಗೆ ದಾಳಿಯಿಡುವ ವೈರಸ್‌ಗಳಿಂದಾಗಿ. ಇವನ್ನು ರೈನೋ ವೈರಸ್‌ಗಳು ಎಂದು ಕರೆಯುತ್ತಾರೆ. (ಗ್ರೀಕ್ ಭಾಷೆಯಲ್ಲಿ ರೈನೋ ಅಂದರೆ ಮೂಗು.)

ಈ ವೈರಸಿನ ಉದ್ದವೆಷ್ಟು? ಒಂದು ಇಂಚನ್ನು 1,25,000 ಮಿಲಿಯ ಭಾಗ ಮಾಡಿದರೆ ಅದರಲ್ಲೊಂದು ಭಾಗಕ್ಕಿಂತಲೂ ಕಡಿಮೆ. ಇಂಥ ಸೂಕ್ಷ್ಮಾಣು ಮನುಷ್ಯರನ್ನೇ ಬಾಧಿಸುತ್ತದೆ. ಅಪರೂಪವಾಗಿ ಚಿಂಪಾಂಜಿಗಳನ್ನೂ ಬಾಧಿಸುತ್ತದೆ. ಇತರ ಪ್ರಾಣಿಗಳಿಗೆ ಶೀತ ತಗಲುವುದಿಲ್ಲ! ಕೊರೋನಾ ವೈರಸ್, ಅಡಿನೋ ವೈರಸ್ ಮತ್ತು ಅನೇಕ ಇತರ ಗುಂಪುಗಳ ವೈರಸ್‌ಗಳೂ ಶೀತಕ್ಕೆ ಕಾರಣ. ಪ್ರತಿ ಗುಂಪಿನಲ್ಲಿಯೂ 190ಕ್ಕಿಂತ ಜಾಸ್ತಿ ಪ್ರಭೇದಗಳಿವೆ. ಪ್ರತಿಯೊಂದು ಪ್ರಭೇದಲ್ಲಿರುವ ಭಿನ್ನ ಭಿನ್ನ ಜೈವಿಕ ವಸ್ತುವಿನಿಂದಾಗಿ ಮನುಷ್ಯ ಶರೀರಕ್ಕೆ ಶೀತ ಪ್ರತಿರೋಧ ಶಕ್ತಿ ಬೆಳೆಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದಲೇ ಶೀತ ನಿಗ್ರಹಕ್ಕಾಗಿ ಏಕ್ಕೆಕ ಪರಿಣಾಮಕಾರಿ ವ್ಯಾಕ್ಸೀನ್ ನಿರ್ಮಿಸಲು ವೈದ್ಕ ವಿಜ್ಞಾನಿಗಳಿಗೂ ಸಾಧ್ಯವಾಗಿಲ್ಲ.

ಉದಯವಾಣಿಃ6-7-2002

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಲ ಬಂದಿದೆ
Next post ನಗೆಡಂಗುರ – ೧೨೪

ಸಣ್ಣ ಕತೆ

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

cheap jordans|wholesale air max|wholesale jordans|wholesale jewelry|wholesale jerseys