ಆಶಯ

ಇಹದ ಸುಖವನು ಬಯಸಿ, ಆತ್ಮಯೋಗದ ಬಲವು
ತನ್ನದೆಂಬುದ ನೆಚ್ಚಿ, ಮುಂಗುರಿಯ ದೃಷ್ಠಿಯನು
ನಂಬಿಕೆಯ ನೇತೃದಲಿ ನೋಡುತಲು, ಜೀವನದ
ಧ್ಯೇಯವನು ದಿಗ್ಭ್ರಾಂತ ತರಂಗದೊಳಾಡಿಸುತ,
ಕೋಟಿಮಾನವರಲ್ಲಿ ತನ್ನ ಪ್ರತಿಭೆಯ ಸಾಕ್ಷ್ಯ
ಸಾರುತಲಿ ಪಾಡುತಲಿ, ಮಾನವನು ತಾನ್ಪಡೆದ
ಜನ್ಮಸಾರ್ಥಕವೆಂದು ಜಡನಂತೆ ಮರುಳಾಗಿ
ವಿಶ್ವನಿಯಮದ ಎದುರು ಪಕ್ಕಮಿಲ್ಲದ ಪಾತೆ-
ಯಂತೆ ಸೇರ್ವನು ಸೋಲ ಸುರಂಗವನ್ನು!

ಕಾಲಪುರುಷನು ತಾಳ್ದ ಅನುಭವವೆ ಅದು ಚಿತ್ರ!
ಎಲ್ಲಿಂದೆಲಿಗೆ ಹಾಯ್ದು ಎಂತೆಂಥಾ ಭೀಕರದ
ನೋಟವನು, ಜನತೆಗಳ ಭಾಗ್ಯ ದೌರ್ಭಾಗ್ಯಗಳ
ಜೀವನವ ನೋಡಿ ಕನಿಕರಗೊಂಡು, ಮನಸಿನಾ
ಭಿತ್ತಿಯಲಿ ಆ ಹಾಳೂಬಾಳಿನಾ ಬೇಗುದಿಯ
ಚಿತ್ರವನು, ಆ ಕಾಲ ಮಹಿಮಾ ಮಹತ್ವವನು
ಒಂದಾಗಿ, ಗುರುಜನರ ನೃಪಜನದ ತತ್ವದಿಂ
ಆಳ್ಕೆಯಿಂ ಬಗೆ ಬಗೆಯ ಸೋಗನ್ನು ಜಗಪಡೆದ
ತೆರವನ್ನು ನೋಡುತೋಡುತ ಸಾರ್ವುದಾಹಾ!

ಎನ್ನೆದೆನ್ನದುವೆಂದು ಔತ್ಕೃಷ್ಟ್ಯವಾದದಲಿ,
ಒಲ್ಮೆ ನಲ್ಮೆಯ ಸುಖನು ಎಂಬ ವಿಚಾರದಲಿ,
ರಸಿಕ ಜೀವನ ತಾಳ್ವ ಮೋಹ ಸಂಘಟನೆಯಲಿ,
ಸಮರನಾದದಿ ಏಳ್ವ ಜನದ ತಳಮಳದಲ್ಲಿ,
ವೈರಾಗ್ಯ ಜೀವನವು ಪಡೆವ ಸಾರ್ಥಕದಲ್ಲಿ,
ಮನಕೆ ತೋರುವವೊಂದು ವಿಸ್ಮಯಾಂತಕವಾದ-
ಧ್ವನಿಯ ಲೋಕಕೆ ಸಾರ್ವ ಮಂಗಲಾಮಂಗಲವೊ
ಹೇಳ ಬಲ್ಲವರಾರು?  ಹೃದಯಾದಾವೇಶವನು
ಅನುಭವವೆ ಒಪ್ಪಿಸುವುದು ಕಾಣ್ಕೆಯಾಗಿ!

ಲೇಖನಿಯನುರುಳಿಸೆನು ಕವಿಯೆಂಬ ಹೆಮ್ಮೆಯಲಿ,
ಪಾಡ್ದನಿಯನೊಪ್ಪಿಸೆನು ಗಮಕಿಯೆಂಬರ್ಥದಲಿ,
ಜಗದಿರವ ಚಿತ್ರಿಸೆನು ಚಿತ್ರಿಕನ ರೀತಿಯಲಿ,
ತತ್ವಗಳ ನೊರೆಯೆನಾ ತಾತ್ವಿಕನ ಸೂಕ್ತಿಯಲಿ,
ಎಮ್ಮೆ ಜೀವದ ಛಾಯೆ ಪರರ ಬಾಳಿನ ಮಾಯೆ
ಹಾಸುಹೊಕ್ಕಾಗಿ ತರಂಗಗಳ ತಲ್ಪದಲಿ
ಬಿದ್ದುರುಳುವುದ ಕಂಡು ಮನವಾರೆ ಸೋಲುತಲಿ
ನೀಳ್ಗತೆಯ ಕಿರಿದಾಗಿ ವಿಷಯಗಳ ಲಘುವಾಗಿ
ಅಂಧ ಸಾಧಕನಂತೊರೆಯಲಿಳಿದೆನೊರ್ವ!

ಬ್ರಹ್ಮಾಂಡ ನೆಲಗಟ್ಟು ಪ್ರೇಮದಾಧಾರದಲಿ
ವಿಶ್ವನಿಯಮದ ಬಲವು ಪ್ರೇಮಸುಧೆ ಧಾರೆಯಲಿ,
ಮಾನವನ ವ್ಯವಹಾರ ಪ್ರೇಮ ಪೋಷಾಕಿನಲಿ,
ಜೀವಿಗಳ ಸ್ವಾತಂತ್ರ್‍ಯ ಪ್ರೇಮಪ್ರಲಾಪದಲಿ-
ಅಡಗಿರಲು, ಈರೇಳು ಲೋಕದಾ ಘಟನೆಯಲಿ
ಪ್ರೇಮಜಾಲದಿ ಏಳ್ವ ಪ್ರಣಯಧೂಮದ ರೂಪ
ಅದೆಂತು ವೈಚಿತ್ರ್‍ಯ!  ಎಂತು ಮನೋಹರವು!!
ಎನ್ನ ಸೊಲ್ಲನು ಇಲ್ಲಿ ತದ್ವಿಶೇಷದಿ ಚೆಲ್ಲಿ
ನೋಟಕರ ಹಾಯೆಣಿಸಲಸದಳವೊ!

ಮನಸಿಜನ ಮಾಯೆಯಲಿ ಜನದಲಿಹ ಮೋಹದಲಿ
ಕವಿಪಾಕವೊಸರುವುದು ಆತ್ಮರಸಬಟ್ಟಲಿಂ!
ಸುಖದ ದುಃಖದ ಬೇರೆ ಪಾಲು ಎರಡನು ಮಾಡಿ
ಸೋಗಿನನುಭವದಲ್ಲಿ ಸವಿದು ಸವಿಕಹಿಯನ್ನು
ನೋಡಿ ಲೋಕದ ಬಗೆಯ ಚಿತ್ರಿಸಿಡುತಲಿ ವಿಧವ-
ಹಾಹಾಕಾರದ ಕಾಣ್ಕೆ ಗುಣದ ದೋಷದ ಪೂಣ್ಕೆ
ಒಂದನೊಂದರಲಿಟ್ಟು, ತನ್ನ ಇರವನು ತನ್ನ
ಬುದ್ಧಿಬಲದಿಂ ಬೆಳಗಿ ಆದರ್ಶ ಜೀವನಕೆ
ಆಧಾರನಾಗಿರಲು ಸಲ್ವುದೆನಿತೊ!
*****

ಪುಸ್ತಕ: ಸೂರ್ಯ ಕಾಂತಿ

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...