ಊರು ಕೇರಿ, ಮನೆ ಮಠ ತೊರೆದು ಹೋದ ಮಗನಿಗಾಗಿ ನೊಂದ ತಾಯಿ ಬಹಳಷ್ಟು ಕಾಯುತ್ತಿದ್ದಳು. ಬಿಟ್ಟು ಹೋದ ಒಬ್ಬನೇ ಮಗನ ಹಂಬಲ ಅವಳನ್ನು ಬಹಳಷ್ಟು ಕಾಡುತಿತ್ತು.
ಒಂದು ಸುಂದರ ಬೆಳಗು, ಅಂಗಳದಲ್ಲಿ ರಂಗವಲ್ಲಿ ಬಿಡಿಸುವಾಗ ಇವಳ ಕರುಳಕುಡಿ ಬಂದು ನಿಂತ ಅಂಗಳದಲ್ಲಿ. ರಂಗವಲ್ಲಿಯಲ್ಲಿ ಕರುಳ ಹೂ ಅರಳಿಸಿದ್ದ ತಾಯಿಗೆ ಮಗನನ್ನು ನೋಡಿ ಸಂತಸವಾಯಿತು.
“ಮಗನೇ! ಅದೇಕೆ, ಮನೆ ತೊರೆದು ಹೋದೆ. ನಿನ್ನ ತಾಯಿಯ ಕರುಳಧ್ವನಿ ನಿನಗೆ ಕೇಳಲಿಲ್ಲವೇ?” ಎಂದಳು.
“ಮನೆತೊರೆದು ಹೋಗಿ, ಜಗದ ಎಲ್ಲಾ ಧ್ವನಿಗಳನ್ನು ಕೇಳಿ, ಅಳೆದು ಸುರಿದು ಬಂದಿರುವೆ. ಧ್ವನಿಯೊಳಗೆ ಧ್ವನಿ ಗುರುತಿಸಿರುವೆ. ಧ್ವನಿ ಮೆಟ್ಟಿಲು ಹತ್ತಿಳಿದು ಬಂದು, ಧ್ವನಿ ಲೋಕವನ್ನು ಅರ್ಥವಿಸಿ ಬಂದಿರುವೆ. ಧ್ವನಿಯಲ್ಲಿ ಅಡಗಿದ ಹಾವ ಭಾವಗಳು, ಪ್ರೀತಿ, ಪ್ರೇಮ, ಒಂದೇ ಅಲ್ಲದೆ ನಿರ್ಲಕ್ಷ್ಯ, ವೈಷಮ್ಯ, ಅಸೂಯೆ ದೂರ ಅಟ್ಟಿ-ಕರುಣೆ, ಗುರುತಿಸಿರುವೆ. ಲೋಕದ ಧ್ವನಿಯಲ್ಲಿ, ಸಮಾಜದ ಧ್ವನಿಯಲ್ಲಿ, ನನ್ನನ್ನು ಬೆಳೆಸಿಕೊಂಡಿರುವೆ. ಪ್ರಕೃತಿಯ ಧ್ವನಿಯಲ್ಲಿ ನನ್ನನ್ನು ನಾ ಕಂಡುಕೊಂಡಿರುವೆ. ಅಧಿಕಾರದ ಧ್ವನಿಯಲ್ಲಿ ನನ್ನನ್ನು ತಿದ್ದಿಕೊಂಡಿರವೆ. ಅಭಯದ ಧ್ವನಿಯಲ್ಲಿ ಬಾಳಿರುವ, ಅಭೇದ್ಯ ಧ್ವನಿಯಲ್ಲಿ ಜ್ಞಾನ ಗುರುತಿಸಿರುವೆ. ಅಶರೀರ ಧ್ವನಿಯಲ್ಲಿ ದೈವತ್ವ, ಕಂಡಿರುವೆ. ಪ್ರೀತಿ ಕರುಣೆ ಧ್ವನಿಯಲ್ಲಿ ತಾಯಿಯ ಗುರುತಿಸಿ ನಿನ್ನಲ್ಲಿಗೆ ಬಂದಿರುವೆ. ನಿನ್ನ ಪಾರದರ್ಶಕ ಧ್ವನಿಯಲ್ಲಿ ದೈವತ್ವವ ಕಂಡಿರುವೆ. ನಿನ್ನ ಧ್ವನಿಯ ಧ್ಯಾನದಲ್ಲಿ ನಾನು ಈಗ ನಿನ್ನ ಪಾದಕ್ಕೆ ಬಂದು ಸೇರಿರುವೆ” ಎಂದ ಮಗ.
ಧ್ವನಿಯನ್ನು ಗುರವಾಗಿಸಿಕೊಂಡ ಮಗನನ್ನು ಅಪ್ಪಿ, ತಾಯಿ ಧ್ವನಿಯಲ್ಲಿ ಪ್ರತಿ ಧ್ವನಿಯಾಗಿ, ಪ್ರೀತಿ ಧ್ವನಿಯಾದಳು.
*****

















