ನಾಲ್ಕು ಮನೆಗಳ ಸಮೀಪದಲ್ಲಿ ಒಬ್ಬ ಗವಳಿಯ ಗುಡಿಸಲು. ಅಂಗಳದಲ್ಲಿ ಅವನು ಹಾಲು ಹಿಂಡುತ್ತಿದ್ದ. ಒಳಗೆ ಅವನ ಹೆಂಡತಿ ಬೆಂಕಿ ಮಾಡುತಿದ್ದಳು. ಹೇಗೋ ಆಗಿ ಆಳೆತ್ತರದ ಆ ಗುಡಿಸಲಿಗೆ ಬೆಂಕಿ ಬಿತ್ತು, ಗಂಡ ಹೆಂಡರಿಬ್ಬರೂ ಬೊಬ್ಬಿಟ್ಟರು. ನೆರೆಯವರೆಲ್ಲ ಸೇರಿ “ನೀರು ತನ್ನಿ ಬೆಂಕಿ ಬಿದ್ದಿದೆ” ಎಂದು ಗೊಂದಲ ಎಬ್ಬಿಸಿದರು. ಎಲ್ಲರ ಬಾಯಿಂದಲೂ “ಪಾಪ! ಬಡವನ ಗುಡಿಸಲು ಬೂದಿಯಾಯಿತು” ಎಂಬ ಉದ್ಗಾರ ಹೊರಟಿತು.
ಮಣ್ಣು ಎರಚಿದ ಮೇಲೆ ಬೆಂಕಿ ಶಾಂತವಾಯಿತು. ಆದರೂ ಗವಳಿಯು ಹಾಲಿನ ಕೊಡಗಳನ್ನು ತಂದು ಬೆಂಕಿಗೆ ಸುರುವಿದ. “ಉರಿಯುವದು ನಿಂತಿತು. ಇನ್ನೇಕೆ ಹಾಲು ಸುರಿದು ಹಾಳುಮಾಡುತ್ತೀಯೋ?” ಎಂದು ಕೇಳಿದರು ನೆರೆದವರು. “ನನ್ನ ಗುಡಿಸಲಂತೂ ಸುಟ್ಟು ಹೋಯಿತು. ಕಿಡಿಹಾರಿ ನಿಮ್ಮ ಮನೆಗಳಿಗೆ ತಾಗಬಾರದು ಅಣ್ಣಾ” ಅಂದ ಗವಳಿ.
ನಳದ ಬಳಿ ಕಚ್ಚಾಡಿ ಮನೆಯಲ್ಲಿ ನೀರು ತುಂಬಿಕೊಂಡು, ಬೆಂಕಿ ಆರಿಸಲು ಒಂದು ತಂಬಿಗೆ ನೀರನ್ನೂ ತರದ ಅವರಲ್ಲಿ ಅನೇಕರಿಗೆ ನಾಚಿಕೆಯಿಂದ ಮೊಗ ಇಷ್ಟು ಸಣ್ಣದಾಯಿತು.
*****

















