Home / ಕವನ / ಕವಿತೆ / ಗಂಟೆ ಹತ್ತಾಯಿತು

ಗಂಟೆ ಹತ್ತಾಯಿತು

ಗಡಿಯಾರದಲಿ ಗಂಟೆ ಹತ್ತಾಯಿತು!
ತಲೆ ತುಂಬಿ ನಿಂತಿರುವ ಚಿಂತೆ ಬೆಂತರನೊಡನೆ
ಕೈಯ ಕುಲುಕಿಸಿ ಕಾಲ ಗೆಲುವಾಯಿತು;
ಕುಳಿತಿರುವ ಕೋಣೆಯಲಿ ಕಂದೀಲ ದೀಪವದು
ಕುರುಡು ಕುರುಡಾಗೆನಿತೊ ಉರಿಯುತ್ತಿದೆ.
ಎಣ್ಣೆ ತೀರಿರಬಹುದೊ ಬತ್ತಿ ಕಿರಿದಾಗಿಹುದೊ
ನೋಡಬೇಕೆಂಬಾಸೆ ಬೆಳೆಯುತ್ತಿದೆ.
ಆದರೂ ಮೈತುಂಬ ಆಲಸ್ಯ ಇಳಿದಿಹುದು
ಕೈಯ ಚಾಚಲು ಮನಸು ಬರದಾಗಿದೆ;
ಪೆನ್ನಿನಲಿ ಮಸಿಯಿದ್ದರೂನೂ ಒಂದಕ್ಷರವು
ಪೂರ್ಣ ಮೂಡದೆ ಬರೆಹ ಮುನ್ನಡೆದಿದೆ.
ಈ ಹಾಳು ಕಂದೀಲು ನಿಬ್ಬು ಕೆಟ್ಟಿಹ ಪೆನ್ನು
ದಿನದಿನದ ಬಾಳಿನಲಿ ಒಂದಾಗಿವೆ;
ಬಂದ ಬಾಳನ್ನೆನಿತೊ ನೂಕಬೇಕೆನುವಂತೆ
ಭುಜಕೆ ಭುಜವನ್ನಿತ್ತು ನಿಂದಾಗಿವೆ.
ಅಡುಗೆ ಮನೆಯಲಿ ಅವಳು ಹೂಂ….ಅವಳೆ ನನ್ನವಳು
ಹೊಸ ಹೆಂಡತಿ!
ಗುಣುಗಣಿಸಿ ಹಾಡುವಳು ಜಾನಪದ ಕವಯಿತ್ರಿ
ಗೌರಿ-ಗರತಿ.
ಮೆಲ್ಲ ಮೆಲ್ಲನೆ ಅವಳು ಬಂದರೀಗೇನು ಗತಿ
ಈ ಬರಹ ಇಷ್ಟಕ್ಕೆ ನಿಲ್ಲಬಹುದು;
ಗಡಿಯಾರ ಟಕಟಕಿಸಿದಂತೆ ಮನ ಟುಕುಟುಕಿಸಿ
ಬಂದರೂ ಅವಳೇನು ಮಾಡಬಹುದು?
ಎಂಬ ನಿರ್ಧಾರದಲಿ ಪೆನ್ನು ಮುಂದೋಡಿತ್ತು.
ಯಾರ ಪರವೆಯು ಅದಕೆ ಇಲ್ಲದಾಯ್ತು.
ಆದರೇನೊಂದು ಚಣ ಕಳೆದುದಾಯಿತೊ ಏನೊ
ಬಾಗಿಲಲಿ ಕೈಬಳೆಯ ಮಧುರ ನಾದ!
ರೋಮ ರೋಮಗಳೆಲ್ಲ ಕಿವಿಯಾಗಿ ಕಣ್ಣಾಗಿ
ಅವಳ ಬರುವಿಕೆಯನ್ನು ಪ್ರತಿರೂಪಿಸಿ;
ರೈಲು ನಿಲ್ದಾಣದಲ್ಲಿ ಗಾಡಿ ಬರುತಿರುವಾಗ
ಸೂಚನೆಯ ಗಂಟೆಯೊಲು ಢಣ್… ಢಣಣಿಸಿ!
ಹೊರಳಿ ನೋಡಿತು ಮನಸು……..
ಮಲಗಿರುವ ನನ್ನವಳಿಗೇನೊ ಕನಸು
ಹುಣ್ಣಿಮೆಯ ಚಂದ್ರನಿಗು ಇಲ್ಲವೇ ಸೌಂದರ್ಯ
ಹಣೆಯ ಕುಂಕುಮ ಚಂದ್ರನಂತೆ ನೋಡು:
ಹೊಳೆವ ಗಾರುಡಿಗಣ್ಣು ಮುದ್ದಾದ ಮುಂಗುರುಳು
ಮನನ ಮೋಹಿಸುತ್ತಿರುವ ಎದೆಗಳೆರಡು.
ಮಗ್ಗುಲಲಿ ನೀಳಜಡೆ-ಮೈಸೋಂಕಿ ಮೈಮರೆತು
ತಳಕು ಹಾಕಿರುವೆರಡು ಕರಿನಾಗರ;
ನಿರ್ಧಾರ ಕರಕರಗಿ ಹರಿಯತೊಡಗಿತು ಚಿತ್ತ
ಮಧುವನದ ನಾಡಿನಲ್ಲಿ ಸ್ನೇಹಪೂರ.
ಕಣ್ಣ ಮಿಟಕಿಸಿ ಕುರುಡು ದೀಪವಾರಿತು ಪಾಪ
ಪೆನ್ನು ಉರುಳಿತು ಹೊರಳಿ ಮೂರು ಸುತ್ತು
ಕಾಗದದ ಮೇಲೆಲ್ಲ ಚಿತ್ತಪಟ್ಟು
ಡೊಂಬರಾಟದ ಗತ್ತು ಅದಕೆ ಗೊತ್ತು!
ಬಾಯ್-ತುಂಬ ಆಕಳಿಸಿ ಕೊನೆಯ ಪ್ರಾರ್ಥನೆ ಸಲ್ಲಿಸಿ
ದೇಹ ಹಾಸಿಗೆ ಹುಡುಕಿ ಹೊರಳಾಡಿತು;
ಬಂದಿರುವ ಆಲಸ್ಯ ಗಾಢ ಸಮ್ಮಿಲನದಲಿ
ಕತ್ತಲೆಯ ಮಸಿಯಲ್ಲಿ ಮರೆಯಾಯಿತು.
*****
Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...