Home / ಲೇಖನ / ಪತ್ರ / ಪೂರ‍್ಣಿಮ – ೨೧

ಪೂರ‍್ಣಿಮ – ೨೧

ಪೂರ‍್ಣಿಮೆ,
ಪ್ರತ್ಯುತ್ತರ ಬರೆಯಲಾರದಂತಹ ಪತ್ರವನ್ನು ಬರೆದು ಬಿಟ್ಟರುವಿ. ನನ್ನ ಗುಟ್ಟನ್ನು ಬಯಲು ಮಾಡಿರುವಿ. ನೀನು ಏನು ಬರೆದಿರುವಿಯೋ, ಅದು ನನ್ನ ನಿಜಪರಿಸ್ಥಿತಿಯ ಪೂರ್ಣ ಚಿತ್ರವಾಗಿದೆ. ನಿನಗೂ ಇದೇ ವಿಚಾರದ ಮಂಥನವಾಗುತ್ತಿರಬಹುದು. ಆದರೂ ನಿನ್ನ ಅಗಲಿಕೆ, ನಿನ್ನ ಬಳಲಿಕೆ, ನಿನ್ನ ಏಕಾಕಿತನ, ಇವನ್ನು ನೆನಸಿಕೊಂಡಾಗ ಎದೆಯ ಧೈರ್ಯವೆಲ್ಲವೂ ಕರಗಿ ಹೋಗುವುದು. ಹೀಗೆ ಕರಗಿ ಹೋದಾಗ ಮಾತ್ರ ನಾನು ಜಗತ್ತನ್ನು ನೋಡಿ ಹುಲಿಯನ್ನು ಕಂಡ ಹುಲ್ಲೆಯಂತೆ ಹೆದರಿಬಿಡುವೆನು. ಅಂತಹ ಸಮಯದಲ್ಲಿ ನೀನೇ ಬರೆದ ಈ ಪತ್ರಗಳನ್ನು ಓದಿದ ಮೇಲೆ ನನಗೆ ಬುದ್ಧಿ ಹೇಳಲಾರಂಭಿಸಿದಂತೆ ಭಾಸವಾಗುತ್ತದೆ.
ಇದು ಬುದ್ಧಿವಾದವಲ್ಲ, ಧೈರ್ಯ ಸಂಜೀವಿನಿ. ನೀನು ಅಬಲೆಯೋ ಸಬಲೆಯೋ ಈ ಪತ್ರವೇ ಹೇಳುತ್ತಿರುವುದು. ಇಷ್ಟೊಂದು ಧೈರ್ಯ ನಿನ್ನಲ್ಲಿ ಬಂದಿರುವಾಗ ನನ್ನ ಅಗಲಿಕೆಯನ್ನು ಸಂಯಮದಿಂದ ಇಂತು ಸಹಿಸಿಕೊಳ್ಳುವುದಾದರೆ ನಿಜವಾಗಿಯೂ ನನ್ನ ಜೀವನಕ್ಕೆ ನೀನೇ ಧೈರ್ಯ ವಾಹಿನಿ.
ಪೂರ‍‍್ಣೀ, ನನ್ನ ಜೀವನದ ಪೂರ‍‍್ಣತೆಗಾಗಿಯೇ ಪೂರ‍‍್ಣಿಮೆಯಾಗಿ ನನ್ನ ಕೈ ಹಿಡಿದೆಯೆಂದು ನಿನ್ನನ್ನು ಹೊಗಳಿದರೆ ನೀನು ಉಬ್ಬಿ ಹೋಗಬೇಡ, ಇರುವ ಮಾತು ಇದ್ದಂತೆ ಹೇಳಿದರೆ ಉಬ್ಬಬೇಕೆ?
ನೀನು ನಿನ್ನ ಪತ್ರದಲ್ಲಿ ಆರಿಸಿ ಬರೆದಿರುವ ಬಸವಣ್ಣನವರ ವಚನಾಮೃತವು ನನ್ನ ಎಡೆತನವಲ್ಲಾ ಕರಗಿಸಹತ್ತಿದೆ. “ಪ್ರೇಮ ಕರ್ತವ್ಯದ ದಾರಿಯ ಬಂಡೆಗಲ್ಲಾಗಿರಬಾರದು. ಕರ್ತವ್ಯಕ್ಕೆ ಶಕ್ತಿ ವಾಹಿನಿಯಾಗಿರ ಬೇಕು” ಎಂದೆನ್ನುವಂತೆ ನೀನು ನನ್ನ ಈ ಕರ್ಮಕ್ಷೇತ್ರದಲ್ಲಿ ಹೆಗಲ ಸರಿಸಮ ನಿಂತು ಹೆಗಲುಬ್ಬಿಸುವುದಕ್ಕೆ ತೊಡಗಿದ ಮೇಲೆ ನನಗೇನು ಕಡಮೆ? ಬಹುಶಃ ಗುರುರಾಯರು ನನ್ನ ಸಂಯಮವನ್ನು ಒರೆಗೆ ಹಚ್ಚಲೆಂದೇ ಅಗಲಿಕೆಯ ಅಧ್ಯಾಯವನ್ನು ಮುಗಿಸಿಲ್ಲ. ನಾನಿನ್ನು ಅಂಜುವುದಿಲ್ಲ. ಭಕ್ತ ಕಂಪಿತರಾದ ಗುರುರಾಯರ ಮುಂದೆ ಕೈ ಮುಗಿದು ಕೂಡಲ ಸಂಗಮೇಶ್ವರನ ಮುಂದೆ ಕೈ ಮುಗಿದು ಬಸವಣ್ಣನವರು ಅಂದ ಮಾತನ್ನೇ ಪುನರುಚ್ಚರಿಸಿ ಅದನ್ನೆ ನನ್ನ ಧ್ಯಾನಮಂತ್ರವನ್ನಾಗಿ ಮಾಡಿಕೊಂಡು ನನ್ನ ಜೀವನದ ಸಿಹಿ ಕಹಿಯನ್ನು ಸೈರಿಸುವೆನು. ನೀನು ಧೈರ್ಯಗಟ್ಟಲ್ಲಿ ಮಾತ್ರ ನನ್ನ ಧೈರ್ಯದಿಂದೇನು ಫಲ? ನೀನು ಬೆನ್ನು ಕೊಡದಿದ್ದರೆ, ನನಗೆ ಬೇರೆಯವರು ಹೆಗಲ
ಮೇಲೆತ್ತಿ ಕುಣಿದಾಡಿದರೇನು ಫಲ? ನೀನೂ ಸಹ ಶ್ರೀ ರಾಘವೇಂದ್ರ ಯತಿಗಳ ಮುಂದೆ ಈ ಕೆಳಗಿನಂತೆ ದಿನದಿನವೂ ಪ್ರಾರ್ಥಿಸುತ್ತಿರು.
“ಕಾಯದ ಕಳವಳಕಂಜಿ 
ಕಾಯೋ ಎನ್ನನು ಜೀವನೋ 
ಪಾಯಕ್ಕಂಜಿ ಈಯಯ ಎನ್ನನು.”
“ಯದ್ಭಾವಂ ತದ್ಭವತಿ”
“ಉರಿಬರಲಿ, ಸಿರಿಬರಲಿ; ಬೇಕು ಬೇಡೆನ್ನೆನು 
ಆನು ನಿಮ್ಮ ಹಾರೆನು- ಮಾನವರ ಬೇಡೆನು. 
ಆಣೆ, ನಿಮ್ಮಾಣೆ ಕೂಡಲ ಸಂಗಮದೇವ.”
ಮಂತ್ರಾಲಯದ ಗುರುರಾಯರು ದಯಾಘನರು. ಅಗ್ನಿಯಲ್ಲಿ ಹಾಕಿ ಸುಟ್ಟರೂ ಮೈ ಬೇಯದಂತೆ ನೋಡಿಕೊಳ್ಳುವರು. ಇಲ್ಲವಾದರೆ ನಾನು ಜಗತ್ತಿನ ಕಣ್ಣಿನಲ್ಲಿ ತೀರ ಅಪರಾಧಿಯಾಗಿ ಮೋಸಗಾರನಾಗಿ, ದ್ರೋಹಿಯಾಗಿ ಕಂಡು ಕಂಡವರಿಗೆಲ್ಲ ಹೆದರಿ ದೇಶಭ್ರಷ್ಟನಾದಾಗ ನನ್ನನ್ನು ತಮ್ಮ ಬೃಂದಾವನದೆಡೆಗೆ ಬರುವಂತೆ ಪ್ರೇರೇಪಿಸಿ ಅಲ್ಲಿನ ಪೂಜ್ಯ ತುಂಗಭದ್ರೆಯಲ್ಲಿ ನನ್ನ ಪಾಪದ ಹೊರೆಯನ್ನೆಲ್ಲ ತೊಳೆಸುತ್ತಿದ್ದರೆ?
ಎಷ್ಟೊಂದು ದಯೆ ತೋರಿಸಿದರು? ಎಂತೆಂತಹ ಮಹಾಪಾಪಗಳನ್ನು ಕ್ಷಮಿಸಿದರು? ಜೀವನದ ಪರಿಶುದ್ಧತೆಗೆ ಎಂತಹ ಅವಕಾಶ ಕೊಟ್ಟರು ಅವರು? ಆದರೂ ಈ ಅಗಲಿಕೆಯನ್ನೇಕೆ ಕೊಟ್ಟಿರುವೆ ಎಂದೆನ್ನುವೆ ಏನು? ಅದಕ್ಕೆ ಉತ್ತರವೇನು ಗೊತ್ತೆ? ಅಷ್ಟು ಪಾಪಕ್ಕೆ ಇದೊಂದಾದರೂ ಶಿಕ್ಷೆ ಬೇಡವ ಪೂರ‍್ಣಿ? ಇದನ್ನು ಶಿಕ್ಷೆಯೆಂದು ನಾನು ಇನ್ನು ಮುಂದೆ ಕರೆಯುವುದಿಲ್ಲ. ಆ ಗುರುವಿನ ದೀಕ್ಷೆಯೆಂದು ಕರೆದುಕೊಳ್ಳುವೆನು.
ನೀನಿಂದು ಬರೆದಿರುವ ಪತ್ರವು ತುಳಸೀದಾಸನಿಗೆ ಮಮತಾದೇವಿಯು ಮಾಡಿದ ಉಪದೇಶದಂತಿದೆ. ಇದನ್ನು ಅನುದಿನ ಮನನ ಮಾಡಿ ದೀಕ್ಷೆಯಲ್ಲಿ ಯಶಸ್ವಿಯಾಗುವೆನು. ನೀನು ಅನುಗ್ರಹಿಸು; ಆಶೀರ್ವದಿಸು. ನಾನು ಸ್ತ್ರೀಯನ್ನು ಒಂದು ಶಕ್ತಿಯೆಂದೇ ಭಾವಿಸಿಕೊಂಡಿರುವೆನಲ್ಲವೆ? ನಿನಗೆ ನನ್ನನ್ನು ಹರಸುವ ಅಧಿಕಾರವು ಹೆಂಡತಿಯೆಂಬ ಸ್ಥಾನಮಾನದಿಂದ ಇಲ್ಲವೆಂದು ಅವರಿವರು ವಾದಿಸಿದರೂ ವಾದಿಸಲಿ, ಶಕ್ತಿಸ್ವರೂಪಿಣಿಯಾಗಿ, ತಾಯಾಗಿ, ಹರಸಬಲ್ಲ ಅಧಿಕಾರ ನಿನಗೆ ಇದೆ ಎಂದು ನಾನು ಸಮರ್ಥಿಸಿಕೊಳ್ಳುವೆನು.
ಇಂತಹ ಪತ್ರಗಳನ್ನು ಇನ್ನು ಮುಂದೆ ಬರೆಯುತ್ತಿರು. ಇದುವರೆಗೆ ನನ್ನನ್ನು ಸಂಸ್ಕರಿಸಿದವು ನನ್ನ ಪತ್ರಗಳು; ಇನ್ನು ಮುಂದೆ ನಿನ್ನ ಪತ್ರಗಳು ನನ್ನನ್ನು ಸಂಸ್ಕರಿಸಲಿ.
ನಮಸ್ತೆ, ಪೂರ‍್ಣಿಮಾ,
ಇತಿ ನಿನ್ನ ಒಡನಾಡಿ,
*****
Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...