ಪರಶಿವಗು ತಪದಿಚ್ಛೆಯೊಮ್ಮೆಗೆ ಹರಿಗು ಯೋಗದ ನಿದ್ದೆಯು
ಭಾರತಾತ್ಮವೆ, ನಿನಗು ಅಂತರ್ಮುಖತೆಯಾಯಿತೆ ಸಹಜದಿ?
ನೀನು ಸಾಸಿರವರುಷ ಜಡರೊಳೆಯಿದ್ದೆ ಹರಣವ ಹದುಗಿಸಿ
ತವರ ಸೇರಿದ ಮೇಲೆ ಜಾನಕಿ ರಾಮರಾಜ್ಯವಿದೋ ಎನೆ.
ಕೃಷಿಯುಪೇಕ್ಷಿತವಾಗಿ ಹುಲುಸದ ನೆಲಕೆ ಚಿಚ್ಚರದೊಕ್ಕಲು
ಗೊಬ್ಬರವನಿಕ್ಕೊವೊಲು ತಂದನು ಪರಜನವ ಪಶುಪತಿಯೆನೆ
ಶಕರು ಹೂಣರು ತುರುಕರಾಫ್ಘನರಂತೆ ಮುಘಲರು ತಮ್ಮಯ
ತನುಮನವ ಬೆರಸಿದರು ನಿನ್ನಯ ಮಣ್ಣಿನೊಳು ರಸವೂರಲು.
ಬೇಸಾಯ ಬೆಳೆಯಪ್ಪ ಕಾಲಕೆ ಕಳೆಗಳೇಳ್ವವು ಹುಳುಗಳೂ
ಹಾಲು ತೆನೆಗೂಡುತಿರೆ ಪೈರೊಳು ಬೆಳ್ಳಕ್ಕಿ ಸಾಲಿಡುವುವು
ಇಂತೆ ಆಯಿತೊ ಏನೊ ನಮ್ಮೀನಾಡಿನೈಸಿರಿ ಸುಗ್ಗಿಗೆ
ಈ ನೆಲದಿ ಹುಳು ಹುಪಟೆ ಹೆಚ್ಚಿತು, ಬಿಳಿಯ ಜನ ಕಾಲೂರಿತು.
ಮೇದನಿಯ ಬಲದಿಂದಲೊಯ್ಯುವ ಹಿರಣ್ಯಾಕ್ಷರೊ ಎಂಬೊಲು
ಆಸುರವ ಮೆರೆಸುತ್ತ ಸೆಳೆದರು ಭಾರತಾತ್ಮವನಾಂಗ್ಲರು
ವಿಜ್ಞಾನ ಪಾಶಗಳ ಬೀಸುತ ಬಂಧಿಸುತ ಕೊಂಡೊಯ್ದರು
ಸಪ್ತಸಾಗರದಾಚೆ ತಮ್ಮಯ ನಾಡ ಮಂಚಕೆ ಬಿಗಿದರು.
ಎಲೆ, ಹರಿಪ್ರಿಯೆ, ನಿನ್ನ ತನುಜರ ಭಂಗಕಾವನು ಮರುಗನು
ನಿನ್ನ ಋಷಿಕವಿದೇವಗಮನವ ಸೆಳೆದೆಯಾ ನಿಟ್ಟುಸಿರೊಳು?
ಮುಕ್ತರವರನುತಪಿಸಿ ಬಿದ್ದರೆ ಪುನರ್ಜನ್ಮದ ಬವಣೆಗೆ
ನಿನ್ನ ಮಣ್ಣೊಳೆ ತನುವನಾನುತ ನಿನ್ನ ನಿಭವವ ಮರಳಿಸೆ?
*****

















