Home / ಕವನ / ಕವಿತೆ / ಮನದನ್ನೆ

ಮನದನ್ನೆ

ಮಾನಾಪಮಾನವನು ತೊರೆದು ಬಂದೆನು ನಲ್ಲೆ
ಏನಾದರೇನೆನಗೆ ನೀನೆ ಗತಿ ನಾ ಬಲ್ಲೆ

ನೀನೊಲಿದು ಮುದ ಬೀರೆ, ನಿನ್ನ ನಗೆ ಮೊಗದೋರೆ,
ನಾನಹುದು ನಿನ್ನ ಬಗೆ ಮುಗಿಲೊಳಿಹ ಧೃವತಾರೆ.

ಎನ್ನಂತರಂಗದಲಿ ನೀನೆ ನರ್ತಿಸುತಿರುವೆ
ನಿನ್ನ ಪ್ರತಿಬಿಂಬ ನಾನಂತೆ ವರ್ತುಸುತಿರುವೆ

ನನಗೆಲ್ಲಿ ಅಸ್ತಿತ್ವ! ನಿನ್ನೊಳಿದ ಒಳಸತ್ವ
ಮಿನುಗಿಲ್ಲಿ ಮೈಗೊಂಡು ನಿಂತಿರುವ ಮಹತತ್ತ್ವ

ನೀನು ರೂಪಿಸಿದಂತೆ ನಾನು ವ್ಯಾಪಿಸುತಿಹೆನು
ಭಾನು ಬೀರುವ ಬೆಳಕ ನಾ ಹೋಲುತಿಹೆನು

ನೀನೆನ್ನ ಸಂಜೀವಿ ನಾ ಬರಿಯ ಮೃತ ಜೀವಿ
ನಿನ್ನೆದೆಯ ಕನಸಿನಲಿ ಅಲೆಯುತಿಹ ಅನುಭಾವಿ

ನಿನ್ನ ಕಲ್ಪನೆ ಕುದುರಿ ಕೆತ್ತಿರುವ ಮೂರ್ತಿನಾ
ನಿನ್ನ ಜೀವನದೊಡನೆ ಸಾಗಿ ಬಹ ಕೀರ್ತಿ ನಾ

ನೀನಿಲ್ಲದಿರೆ ನಾನು ಕುರುಡು ಕಣ್ಣಿನ ಭಾನು
ನೀನೆಲ್ಲಿ ನಾನಲ್ಲಿ ತುಂಬಿ ತುಳುಕುವ ಜೇನು

ಕುರುಡು ಪ್ರೇಮಕೆ ಎನ್ನ ನೀನೆ ಎರಡೂ ಕಣ್ಣು
ಬರಡು ಜೀವನಲತೆಗೆ ಫಲಿಸಿ ಬಹ ಹಣ್ಣು

ಹೆಣ್ಣಲ್ಲ ನೀನು ಬರಿ ಎನ್ನ ಪ್ರೀತಿಯ ದೂತಿ
ಪುಣ್ಯವೆನ್ನಯದೀಗ ಫಲಿಸಿರುವ ಹೊಸ ರೀತಿ
* * *

ಯಾವ ಮಾತಿನಿಂದ ನಿನ್ನ ಭಾವ ತಿಳಿಯಲಿ!
ಯಾವ ಕೃತಿಯನೆಸಗಿ ನಿನ್ನ ಹೇವ ಬೆಳೆಸಲಿ!

ಎಂತು ಎನ್ನ ಅಂತರಂಗವನ್ನು ತಿಳಿಸಲಿ!
ಚಿಂತೆಯೊಂದೆ ಹೇಗೆ ನಿನ್ನ ಪ್ರೀತಿ ಗಳಿಸಲಿ!
* * *

ದೇವ ತೋರು ಕರುಣೆ ಬೀರು ದಿಕ್ಕುಗಾಣದಾಗಿಹೆ
ನೋವನಿತ್ತು ಕಾವ ಬಗೆಯನಿಂತು ಅರಿಯದಾಗಿಹೆ

ಪ್ರೇಮವನ್ನೆ ಬಸಿರೊಳಿರಿಸಿ ಪ್ರೇಮವನ್ನೆ ಉಸಿರುವಂತೆ
ಪ್ರೇಮಪುತ್ಥಳಿಯ ಮಾಡು ಪ್ರೇಮ ಜೀವ ಉದಿಸಿದಂತೆ
* * *

ನಿನ್ನ ಮನಸೆ ನನ್ನ ಮನಸು ನಿನಗೆ ವಿಜಯವಾಗಲೀ
ಎನ್ನಹಂಕಾರವಳಿದು ನಿನ್ನ ತನವ ಪಡೆಯಲಿ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...