ಒಬ್ಬ ಮುದುಕ ಕಾಟ ಕೊಡುತ್ತಿದ್ದ ನೊಣವನ್ನು ತನ್ನ ಎರಡು ಅಂಗೈಯಲ್ಲಿ ಹಿಡಿದು ಬಡಿದು ಹಾಕಿದ. ನಂತರ ಅವನಿಗೆ ವೇದನೆಯಾಗ ತೊಡಗಿತು. ಹಾರಾಡುತ್ತಿದ್ದ ನೊಣವನ್ನು ಸಾಯಿಸಿ ಬಿಟ್ಟೆನಲ್ಲಾ ಎಂದು ಮರುಕಗೊಂಡ. ತಪ್ಪಿತಸ್ತ ಮನೋಭಾವದಲ್ಲಿ ಬೆಂದುಹೋದ. ಸತ್ತಜೀವಕ್ಕೆ ಜೀವಕೊಡುವ ಸಾಮರ್ಥ್ಯ ತನಗಿಲ್ಲ. ತಾನು ಏನು ಮಾಡಿ ನೊಣಕ್ಕೆ ಸದ್ಗತಿ ಕೊಡಬಹುದೆಂದು ಯೋಚಿಸಿದ. ನೊಣದ ಹಣವನ್ನು ಸೀದಾ ಸ್ವರ್ಗಕ್ಕೆ ಕಳಿಸಬೇಕೆಂದು ನಿರ್ಧರಿಸಿ ಸತ್ತ ನೊಣವನ್ನು ಒಂದು ಲಕೋಟೆಯಲ್ಲಿ ಹಾಕಿ ಮೇಲೆ ಸ್ವರ್ಗದಲ್ಲಿರುವ ದೇವರಿಗೆ ಎಂದು ವಿಳಾಸ ಬರೆದು ಟಪಾಲಿನಲ್ಲಿ ಹಾಕುವ ಮುನ್ನ ದೇವರ ಕೈಗೆ ಸೇರದಿದ್ದಲ್ಲಿ ವಾಪಸ್ಸು ಕಳಿಸುವ ತನ್ನ ವಿಳಾಸವನ್ನು ಬರೆದು ಹಾಕಿದನು. ಲಕೋಟೆ ಕೆಲವು ದಿನದ ಮೇಲೆ ಇವನ ಕೈಗೆ ಬಂದಿತು. ಟಪಾಲು ಪೆಟ್ಟಿಯಲ್ಲಿ ಸತ್ತ ನೊಣದ ನಾರುವ ದೇಹಕ್ಕೆ ಅಂಟಿಕೊಂಡು ಒಂದು ಇರುವೆ ಕೂಡ ಲಕೊಟೆ ತೆರೆದಾಗ ಹೊರಬಂದಿತು. ಮುದುಕ ಅತ್ಯಂತ ಹರ್ಷದಿಂದ ತನ್ನ ಸ್ನೇಹಿತ ಮುದುಕನನ್ನು ಕರೆದು ಸತ್ತ ನೊಣ ಸ್ವರ್ಗದಿಂದ ಪುನರ್ ಜನ್ಮ ಪಡೆದು ಇರುವೆಯಾಗಿ ಹಿಂತಿರುಗಿದೆ ಎಂದು ಘೋಷಿಸಿದ. ಮುದುಕನ ಸ್ನೇಹಿತ ಮುದುಕನ ಬೆನ್ನು ತಟ್ಟಿ “ಭಯಪಡಬೇಡ ನೀನು ಸತ್ತ ಮೇಲೆ ನಿನ್ನ ದೇಹವನ್ನು ಸ್ವರ್ಗಕ್ಕೆ ಚೀಲದಲ್ಲಿ ಕಟ್ಟೆ ಕಳಿಸುತ್ತೇನೆ. ನೀನು ಸ್ವರ್ಗದಿಂದ ವಾಪಸ್ಸು ಮತ್ತೆ ಜನ್ಮ ಪಡೆದು ನನ್ನ ಸ್ನೇಹಿತನಾಗಿ ಬಾ” ಎಂದ. ಮುದುಕನಿಗೆ ತನ್ನ ಅರಿವು ಮೂಡಿ ತನ್ನ ಬಗ್ಗೆ ತನಗೇ ನಾಚಿಕೆಯಾಯಿತು.
*****

















