Home / ಕವನ / ಕವಿತೆ / ಜೋಕುಮಾರ

ಜೋಕುಮಾರ

ಜೋಕುಮಾರ ಹುಟ್ಟಲಿ ಲೋಕವು ಬೆಳೆಯಲಿ
ಆಕಳ ಹಾಲ ಕರೆಯಲಿ| ಹರಿಯಾಗ
ಕಾತೆದ್ದು ಮಸರ ಕಡೆಯಾಲಿ ೧

ಅಡ್ಡಡ್ಡ ಮಳೆಬಡದ, ದೊಡ್ಡ ದೊಡ್ಡ ಕೆರೆ ತುಂಬಿ
ಗುಡ್ಡಗಳೆಲ್ಲ ಹೈನಾಗಿ || ಜೋ || ಗೌಡಽರ
ಸೆಡ್ಡಿಯ ಮ್ಯಾಲೆ ಸಿರಿಬಂದ || ಜೋ || ೨

ಹಾಸ್ಹ್ಯಾಸಿ ಮಳೆಬಡದ, ಬೀಸ್ಬೀಸಿ ಕೆರೆತುಂಬಿ
ಬಾಸಿಂಗದಂಥ ತೆನೆಬಾಗಿ || ಜೋ || ಗೌಡಽರ
ರಾಸಿಯ ಮ್ಯಾಲೆ ಸಿರಿಬಂದ || ಜೋ || ೩

ಕರುಣುಳ್ಳ ಕುಮರಾನ, ಕೆರೆ ನೋಡ ಹೋದಾನ
ಕರದು ಕಾರ್ಗಾಲ ಮಳೆ ಬಂತ || ಜೋ || ಗೌಡಽರು
ಕರೆದು ಹಚ್ಚಡ ಹೊಚ್ಚ್ಯಾರ || ಜೋ || ೪

ಕೆಂಚ ನಮ್ಮ ಕುಮಾರ, ಬೆಂಚೀಯ ನೋಡ ಹೋದ
ಮಿಂಚಾವ ಕಾರ ಮಳೆಬಂದ || ಜೋ || ಗೌಡಽರು
ಕೆಂಪು ಹಚ್ಚಡ ಹೊಚ್ಚ್ಯಾರ || ಜೋ || ೫

ಹುಟ್ಟಿದೇಳು ದಿವಸದಲಿ, ಪಟ್ಟಣವ ತಿರುಗ್ಯಾನ
ದಿಟ್ಣಾದೇವಿ ನಿನ ಮಗನ || ಜೋ || ಕೋಮರಾಗ
ಕೊಟ್ರವ್ವೇಳು ದಿನಗಳ || ಜೋ || ೬

ವುಂಡಿಯ ವಲ್ಲೆ ನಂಜು, ಕೊಂಡು ತಾನುಣಲಿಲ್ಲ
ದಂಡನಾಳವನ ಬಂಕ್ಯಾಗ || ಜೋ || ನಮದೇವಿ
ಹೊಂಬಳಿ ಸರವ ಬಗೆಸಿದಳ || ಜೋ || ೭

ಚಕ್ಕೋಟಿ ರಸಪಲ್ಲೆ, ಇಕ್ಕೊಂಡು ಉಣಲಿಲ್ಲ
ದಿಕ್ಕನಾಳವನ ಬಂಕ್ಯಾಗ || ಜೋ || ನಮದೇವಿ
ಚೊಕ್ಕ ಮುತ್ತಿನ ಸರಬರೆಸಿ || ಜೋ || ೮

ಅರಕೊಂಬ ಅರಿಷಿಣವ, ದರಬಟ್ಲ ಒಳ್ಳೆಣ್ಣೆ
ನರ ನಮ ದೇವಿ ಕುಲಿ ಹೊಕ್ಕ || ಜೋ || ಎರಕೊಂಡ
ತೆರೆಬಂದು ನೀರು ಬಾಗಿಲಕ || ಜೋ || ೯

ಬಾಲ ಹುಟ್ಟಿದನಂತ, ಬನಕ ತೊಟ್ಟಿಲ ಕಟ್ಟಿ,
ಬಾಲಗನ್ನೆರು ನೆರೆಯುತಲಿ | ಜೋ || ಹಾಡಿದರ
ಕೋಲೆನು ಜನಕ ಜಯಜಯವ || ಜೋ || ೧೦

ಕಬ್ಬುಳ್ಳ ತ್ವಾಟ್ದಾಗ ಇಬ್ಬನ್ನಿ ಹಿರದ್ಹಂಗ
ಇಬ್ಬರು ತೂಗಲು ಮಲಗನ || ಜೋ || ನಮದೇವಿ
ಹೆಬ್ಬುಲಿ ಮಗನ ಹಡೆದಾಳ || ಜೋ || ೧೧

ಹಾರೂರ ಕೇರ್ಯಾಗ, ಹಾರಿ ಚಂಡಾಡ್ಯಾನ
ನಾರಿ ನಿನಮಗ ಕೊಮರಯ್ಯ || ಜೋ || ಚೆಂಡಾಡಿ
ಊರ ಭೂಮೆಲ್ಲ ಬೆಳಿಬಂದ || ಜೋ || ೧೨

ಒಕ್ಕಽಲಗೇರ್ಯಾಗ, ಹೊಕ್ಕ ಚೆಂಡಾಡ್ಯಾನ
ಅಕ್ಕನ ಮಗನವ ಕೊಮರಯ್ಯ || ಜೋ || ಆಡಿದರ
ಅಕ್ಕಿ ನಾಡೆಲ್ಲ ಬೆಳಿಬಂದ || ಜೋ || ೧೩

ಹಾಲ್ಬೇಡಿ ಹಲುಬ್ಯಾನ ಕೆನೆಬೇಡಿ ಕುಣಿದಾನ
ಮೊಸರಬೇಡಿ ಕೆಸರ ತುಳಿದಾನ || ಜೋ || ಕೊಮರಾಮ
ಕುಸುರಾದ ಗೆಜ್ಜೆ ಕೆಸರಾಗಿ || ಜೋ || ೧೪

ಸಂದಿಯಾ ಮನೆಯನ್ನ ಗೋಂದಿಯಾ ಮನೆಯನ್ನ
ಗೊಂಜಾಳದನ್ನ ಕೆಸರನ್ನ || ಜೋ || ನಮಕೊಮರ
ಸಂದೀಯ ಹೊಕ್ಕ ನಡುಗೇರಿ || ಜೋ || ೧೫

ಹಾದಿಽಯ ಮನೆಯನ್ನ ಬೀದಿಽಯ ಮನೆಯನ್ನ
ಬಾಜರದನ್ನ ಮೊಸರನ್ನ || ಜೋ || ಕೋಮರಯ್ಯ
ಗೌಳೇರೋಣಿ ಹೊಕ್ಕಾನ || ಜೋ || ೧೬

ಹಳ್ಳಕ ತಾ ಹೋಗಿ ಸಣ್ಣವ್ನ ಇಟ್ಟಾನ
ಕನ್ನುಡಿ ತಗೆದು ಮೊಕನೊಡೊ || ಜೋ || ಕೋಮರಾಮ
ಕಣ್ಣು ಮೂಗಿಲೆ ಕರಚಲುವ || ಜೋ || ೧೭

ಅಳಕೂತ ಬಳಕೂತ, ಬಂದಾಳ ಗುಳಕವ್ವ
ಬಂದು ನಿಂತಾಳ ಅಗಸ್ಯಾಗ || ಜೋ || ಗೌಡಽರು
ತಂದು ಇಳಿಸ್ಯಾರ ಸೆಳಿಮಂಚ || ಜೋ || ೧೮

ಕೊಮಾರ ತಾ ಬರ್ತಾನಂತ, ಕೋಣೀಯ ಸಾರಿಸಿ
ಜಣ ಒಕ್ಕಲಗಿತ್ತಿ ಚದರಿಽಯ || ಜೋ || ಮನಿಯಾಗ
ಒಂದಾರ ಜಾವ ಇರಲಿಲ್ಲ || ಜೋ || ೧೯

ಹೋಗೂತ ಹೊನ್ನೀ ಮುರಿದ, ಬರೂತ ಬನ್ನೀ ಮುರಿದ
ಕಂಡಕಂಡಲ್ಲಿ ಕರಿಬೇವ || ಜೋ || ಮುಡುವಂತ
ಪುಂಡನ್ನ ದೇವಿ ಹಡೆದಾಳ || ಜೋ || ೨೦

ಅಕ್ಕ ಹಡೆದಾಳಂತ, ಏನೊಯ್ದೆ ಬನವಯ್ಯ
ಮುತ್ತಿನ ಚೆಂಡ ಕಾರ್ಮುಗಿಲ || ಜೋ || ಸುರಿಮಳೆಯ
ಅರತಿಲಿ ಒಯ್ದೆ ಹರಳೆಲೆಯ || ಜೋ || ೨೧

ಬೆಣ್ಣಿಽಯ ತಾ ಮುದ್ದಿ, ಕನ್ಯುಳ್ಳ ಕೊಮರಾಗ
ಹೊನ್ನ ಮಾಳಿಗೆ ಮನೆಯವ್ವ || ಜೋ || ಕೆನೆ ಮೊಸರ
ಬಿನ್ನಾಯ ಹೇಳ ಕೊಮರಾಗ || ಜೋ || ೨೨

ಹಾಲ ತಾ ಮಗಿತುಂಬಿ, ಬಾಲ ನಮ್ಮ ಕುವರಾಗ
ಮೇಲ ಮಾಳಿಗೆ ಮನೆಯವ್ವ || ಜೋ || ನೀ ಕೊಟ್ರ
ಮೇಲಾಗಿ ಬೆಳಿಲಿ ನಿಂಭೂಮಿ || ಜೋ || ೨೩

ಅಳೂತಲಿ ಸಿರಿತಾನು, ಬಳಲುತಲಿ ಬಂದಾಳು
ಅಳಕಾದಂಬಲಿ ತಡೆದಾವು || ಜೋ || ನಮಕೊಮರ
ಕಳೆದೇಳು ದಿನಕ ಮರಣವ್ವ || ಜೊ || ೨೪

ಹುಟ್ಟಿದ ಏಳ್ದಿನಕ, ಪಟ್ಟಣವ ತಿರುಗ್ಯಾನ
ದಿಟ್ಣಾದೇವಿ ನಿನ ಮಗ || ಜೋ || ಕೊಮರಾಗ
ಬರೆದಾಳ ಸೆಟವಿ ಏಳ್ದಿನ || ಜೋ || ೨೫

ಪುಂಡಽನ ಪುಂಡಾಟ್ಕ, ಹಿಂಡ ಮಂದಿ ಕೂಡ್ಯಾರ
ಕಂಡಲಿ ಕಲ್ಲೀಗೆ ಬಡಿದಾರ || ಜೋ || ರಾತ್ರ್ಯಾಗ
ಅಗಸರ ಕಲ್ಲಾಗ ತುರಿಕ್ಯಾರ || ಜೋ || ೨೬

ಜಂಗಮ ನಾನಲ್ಲ, ಜೋಗಯ್ಯ ನಾನಲ್ಲ
ತಿಂಗಳಿಗೆ ಬರುವ ತಿರುಕಲ್ಲ || ಜೋ || ತಾಯವ್ವ
ತುಂಬಿ ಮೊರ ಜೋಳ ನೀಡವ್ವ || ಜೋ || ೨೭

ಕಲ್ಗಳಿಗಿ ಕಬ್ಬಿಣದ, ಮೆಟ್ಟ್ಹಚ್ಚಿ ಏರ್ಯಾಳ
ಬಳಕೂತ ಬಳತವ ತಗೆದಾಳ || ಜೋ || ಒಕ್ಕಲಗಿತ್ತಿ
ಬಿಳಿ ಎಳ್ಳ ತುಂಬಿ ನೀಡಾಳ || ಜೋ || ೨೮

ಜಯ ಜಯ ಕೊಮರಾಗ, ಜಯ ಜಯ ಹಾಡಿಽರೆ
ಜಯ ಜಯ ಭೂಮಿ ಬೆಳಸಿಽಗೆ ||ಜೋ|| ಹಡದವ್ವ
ಜಯ ಜಯವಿರಲಿ ಜಗದಾಗ ||ಜೋ || ೨೯
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...