Home / ಕವನ / ಕವಿತೆ / ಹಂಬಲು

ಹಂಬಲು

ದೇಗುಲದಿ ನಿನ್ನ ಶಿಲೆಯಮೂರುತಿಯ ಮುಂದೆ
ಬಾರಿಸುವ ಜೇಗಟೆಯದನಿಗೆ ದೇವ!
ಮರೆತು ನಿದ್ದೆಯಮಾಡುತಿಹ ಎನ್ನ ಹೃದಯದಲಿ
ಅರಿವಿಲ್ಲ! ಎಚ್ಚರಿಸು ಪರಮಾತ್ಮನೆ! ೧

ಕಂದದಯೆ ಕುಂದದೆಯೆ ನಿನ್ನ ಬಿಂಬದ ಮುಂದೆ
ನಿಂದು ಉರಿಯುತಿಹ ನಂದಾದೀಪವು
ಹರಿಸಲಾರದೆದೆಯಲಿಹ ಗಾಢಾಂಧತೆಯ
ತೋರು ನೀಂ ಜ್ಞಾನಜೋತಿಯನು ದೇವ! ೨

ಹೊಳೆಯುತಿಹ ನಿನ್ನ ವಿಗ್ರಹದ ಮುಂಗಡೆಯಲ್ಲಿ
ಬೆಳಗುತಿಹೆ ಕಪ್ಪುರಾರತಿಯು ಮತ್ತೆ
ಘಮಘಮಿಪ ಧೂಪಧೂಮದ ಕಂಪು ಎನ್ನೆದೆಯ
ಕಲುಷಿತವ ಹರಿಸಲಳವಲ್ಲ ದೇವ! ೩

ಪಂಡಿತರು ಘೋಷಿಸುವ ವೇದಮಂತ್ರಗಳೆಲ್ಲ
ಮಂದಮತಿಯಾದೆನಗೆ ನಿಲುಕಲಾರ
ವೆಂದೆನ್ನೆದೆಯ ಒಳದನಿಯು ನುಡಿಯುತಿದೆ ದೇವ!
ಮನದ ಬಂಧನ ಹರಿಸು ಗುರುದೇವನೆ! ೪

ಬಾರಿಸುವ ಜೇಗಟೆಯು ಉರಿವ ನಂದಾದೀಪ
ಬೆಳಗುತಿಹ ಕಪ್ಪುರಾರತಿಯು ಮತ್ತೆ
ಧೂಪಧೂಮದ ಕಂಪು ಪಂಡಿತರ ಮಂತ್ರಗಳು
ಬರಿಯ ಬಯಲಾಟದಂತಿಹವು ದೇವ! ೫

ತಿಳಿನೀರಕೊಳದ ಮೇಗಡೆಯಲ್ಲಿ ಮುಸುಕಿರುವ
ಶೈಲೂಷವನು ಕಲ್ಲೆಸೆದು ಹರಿಸು
ವಂತೆನ್ನ ಹೃದಯ ಕಾಸಾರ ಕಲುಷಹಿತವ ಹರಿ
ಸಲಾರದು ನಾನೆಸಗುತಿಹ ಕರ್ಮವು ೬

ಕರ್ಮವೆಂತೆಸಗಿದರು ಫಲವೇನು? ಗುರುದೇವ!
ಮರ್ಮವರಿಯದೆ ತೊಳಲುವೆನೆಲ್ಲೆಲ್ಲು!
ಜ್ಞಾನದಾಹದಿ ಬಳಲಿರುವ ಎನಗೆ ನಿಜತತ್ವ
ಪೀಯೂಷಪಾನವನು ನೀಡು ದೇವ! ೭

ಕಾನನದ ಮಧ್ಯದಲಿ ಕಾರಿರುಳ ಕೊನೆಯಲ್ಲಿ
ಅರಳುತಿಹ ಸುಮದಂತೆ ಅರಳಿಸೆನ್ನ
ಒಳಗಣ್ಣ ಹೂವನು ಕಾರುಣ್ಯ ಮೂರುತಿಯೆ!
ಬಗೆಹರಿಸು ಮನದ ತೊಡಕನ್ನು ದೇವ! ೮
*****

Tagged:

Leave a Reply

Your email address will not be published. Required fields are marked *

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...