Home / ಕವನ / ಅನುವಾದ / ಬ್ಲೆನ್‌ಹೀಮ್ ಕದನ

ಬ್ಲೆನ್‌ಹೀಮ್ ಕದನ

ಬೇಸಗೆಯಲಿ ಸಂಜೆಯಾಯಿತು; ಕೆಲಸವ
ಮುತ್ತಜ್ಜ ತೀರಿಸಿಕೊಂಡ.
ಹಟ್ಟಿಯ ಬಾಗಿಲ ಬಳಿಯಲಿ ನೋಡುತ
ಹೊಂಬಿಸಿಲಲಿ ಕುಳಿತುಕೊಂಡ.
ಅಲ್ಲಿಯೆ ಹಸುರಮೇಲಾಡುತಲಿದ್ದಳು
ಅಜ್ಜನ ಮುದ್ದಿನ ಪುಟ್ಟ ಮೊಮ್ಮಗಳು.
ಕಂಡಳು ಕೂಗಿಕೊಂಡಣ್ಣನು ಬರುವುದ
ಆಡುತ, ಹೊಳೆಯಂಚಿನಿಂದ
ದಪ್ಪಗೆ, ದುಂಡಗೆ, ಏನನೊ ಒಂದನು
ಉರುಳಿಸಿಕೊಂಡವ ತಂದ.
ದಪ್ಪಗೆ, ನುಣ್ಣಗೆ, ದುಂಡಗೆ ಇರುವುದು,
ಅಜ್ಜ ಇದೇನೆಂದು ಕೇಳಲು ಬಂದ.
ಅಜ್ಜ ತೆಗೆದುಕೊಂಡ ಕೈಗದ, ಹುಡುಗನು
ನಿಂತ ಹತ್ತಿರ ಕಿವಿಗೊಟ್ಟು.
ನೋಡಿ, ಆ ಮುದುಕನು ತಲೆಯನಲ್ಲಾಡಿಸಿ,
ಮರುಗುತ ನಿಟ್ಟುಸಿರಿಟ್ಟು,
ಪಾಪ, ಇದಾರದೋ ತಲೆಯೋಡು-ಯಾವನೊ
ಬಿದ್ದವನಾ ದೊಡ್ಡ ಜಯದಲಿ ಎಂದ.
ಎಷ್ಟೋ ನೋಡಿರುವೆನು ನಮ್ಮ ತೋಟದಲೆಲ್ಲ,
ಬಿಸುಡುವೆನೊಕ್ಕಡೆಗಿಕ್ಕಿ.
ಉಳುತ ಹೋದಾಗೆಲ್ಲ ಮೇಲಕೆ ಬರುವುವು
ನೇಗಿಲ ಕುಳದಲಿ ಸಿಕ್ಕಿ.
ಸಾವಿರಗಟ್ಟಳೆ ಜನಗಳು ಕೊಲೆಯಾಗಿ
ಬಿದ್ದವರಾ ದೊಡ್ಡ ಜಯದಲಿ ಎಂದ.
ಆ ಕಥೆ ಏನದು? ನಮಗೆಲ್ಲ ಹೇಳಜ್ಜ ,
ಎಂದನು ಪುಟ್ಟ ಮೊಮ್ಮಗನು.
ಅಚ್ಚರಿ ಕಾಯುತ, ಅರಳಿದ ಕಣ್ಣೆತ್ತಿ
ನಿಂದಳು ಪುಟ್ಟ ಮೊಮ್ಮಗಳು.
ಯುದ್ಧದ ಕಥೆಯೇನು ನಮಗೆಲ್ಲ ಹೇಳಜ್ಜ
ಏತಕೆ ಕಾದಾಡಿದರೊ ಅದ ಹೇಳು.
ಮುತ್ತಜ್ಜ ಹೇಳಿದ – ಇಂಗ್ಲಿಷರಿರುವರೆ,
ಮುರಿದರು ಫ್ರೆಂಚರ ಪಡೆಯ.
ಏತಕೆ ಕಾದಾಡಿದರೊ ಅದ ನಾ ಬೇರೆ
ಕಾಣೆನು ಚೆನ್ನಾಗಿ ಅಡಿಯ.
ಆದರೆ ಯಾರನೆ ಕೇಳವರೆಲ್ಲರು
ಲೋಕಪ್ರಸಿದ್ದಿಯ ಜಯವೆಂಬರೆಂದ.
ನಮ್ಮಯ್ಯ ಗುಡಿಸಲ ಮಾಡಿಕೊಂಡಿದ್ದನು
ಆ ಹೊಳೆಯಂಚಿನನಾಗ,
ಸೂರೆ ಹೊಡೆದು ಬೀಡ ನೆಲಸಮ ಸುಟ್ಟರು;
ತಲೆಯ ತಪ್ಪಿಸಿಕೊಂಡು ಬೇಗ
ಹೆಂಡತಿ ಮಕ್ಕಳ ಕಟ್ಟಿಕೊಂಡೋಡಿದ
ನಿಂತಲ್ಲಿ ನಿಲ್ಲದೆ ನೆಲೆಗಾಣದಲೆದ.
ಬೆಂಕಿಯ, ಕತ್ತಿಯ ಬಾಯಿಗೆ ಬಲಿಯಾಗಿ
ದೇಶವೆ ಹಾಳಾಯಿತೆಲ್ಲ.
ತುಂಬುಬಸಿರಿಯರು, ಹಾಲುಮಕ್ಕಳು ಸತ್ತ
ಲೆಕ್ಕವ ದೇವರೆ ಬಲ್ಲ
ಅದರಂತಹುದೆಷ್ಟೊ ಆಗಲೇಬೇಕಲ್ಲ
ಲೋಕಪ್ರಸಿದ್ಧಿಯ ಜಯದಲಿ ಎಂದ.
ನೋಡಲುಬಾರದು ಎಂಬರು ಘೋರವ
ಗೆದ್ದ ಮೇಲಾರಣದಲ್ಲಿ,
ಸಾವಿರಗಟ್ಟಳೆ ಹೆಣಗಳು ಕೊಳೆಯುತ
ಬಿಸಿಲಲಿ ಬಿದ್ದಿದ್ದುವಲ್ಲಿ.
ಆದರಂತಹುದೆಷ್ಟೊ ಆಗಲೇಬೇಕಲ್ಲ
ಲೋಕಪ್ರಸಿದ್ದಿಯ ಜಯದಲಿ ಎಂದ.
ದೇಶವೆ ಹೊಗಳಿತು ಗೆದ್ದ ನಾಯಕರನು,
ಸುರಿದುವು ಹೂವು ಮಳೆಗಳು-
ಛೀ ತೆಗೆ, ಏನದು, ಬಲುಕೆಟ್ಟ ಕೆಲಸವು!
ಎಂದಳು ಪುಟ್ಟ ಮೊಮ್ಮಗಳು.
ಅಲ್ಲವೆ, ಅಲ್ಲವೆ, ಪುಟ್ಟ ಹುಡುಗಿ. ಕೇಳು.
ಲೋಕಪ್ರಸಿದ್ಧಿಯ ಜಯವದು ಎಂದ.
ಎಲ್ಲರು ಹೊಗಳಿದರಾ ದೊಡ್ಡ ಯುದ್ಧವ
ಗೆದ್ದವರನು ಶೂರರನ್ನು-
ಒಳ್ಳೆಯದದರಿಂದ ಕಡೆಗಾದುದೇನಜ್ಜ?
ಎಂದನು ಪುಟ್ಟ ಮೊಮ್ಮಗನು.
ಅದ ನಾನು ಬಲ್ಲೆನೆ? ಯಾರನೆ ಕೇಳದು
ಲೋಕಪ್ರಸಿದ್ಧಿಯ ಜಯವೆಂಬರೆಂದ.
*****
SOUTHEY (1774 -1843) : After Blenheim
Tagged:

Leave a Reply

Your email address will not be published. Required fields are marked *

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...