Home / ಕವನ / ಅನುವಾದ / ಬ್ಲೆನ್‌ಹೀಮ್ ಕದನ

ಬ್ಲೆನ್‌ಹೀಮ್ ಕದನ

ಬೇಸಗೆಯಲಿ ಸಂಜೆಯಾಯಿತು; ಕೆಲಸವ
ಮುತ್ತಜ್ಜ ತೀರಿಸಿಕೊಂಡ.
ಹಟ್ಟಿಯ ಬಾಗಿಲ ಬಳಿಯಲಿ ನೋಡುತ
ಹೊಂಬಿಸಿಲಲಿ ಕುಳಿತುಕೊಂಡ.
ಅಲ್ಲಿಯೆ ಹಸುರಮೇಲಾಡುತಲಿದ್ದಳು
ಅಜ್ಜನ ಮುದ್ದಿನ ಪುಟ್ಟ ಮೊಮ್ಮಗಳು.
ಕಂಡಳು ಕೂಗಿಕೊಂಡಣ್ಣನು ಬರುವುದ
ಆಡುತ, ಹೊಳೆಯಂಚಿನಿಂದ
ದಪ್ಪಗೆ, ದುಂಡಗೆ, ಏನನೊ ಒಂದನು
ಉರುಳಿಸಿಕೊಂಡವ ತಂದ.
ದಪ್ಪಗೆ, ನುಣ್ಣಗೆ, ದುಂಡಗೆ ಇರುವುದು,
ಅಜ್ಜ ಇದೇನೆಂದು ಕೇಳಲು ಬಂದ.
ಅಜ್ಜ ತೆಗೆದುಕೊಂಡ ಕೈಗದ, ಹುಡುಗನು
ನಿಂತ ಹತ್ತಿರ ಕಿವಿಗೊಟ್ಟು.
ನೋಡಿ, ಆ ಮುದುಕನು ತಲೆಯನಲ್ಲಾಡಿಸಿ,
ಮರುಗುತ ನಿಟ್ಟುಸಿರಿಟ್ಟು,
ಪಾಪ, ಇದಾರದೋ ತಲೆಯೋಡು-ಯಾವನೊ
ಬಿದ್ದವನಾ ದೊಡ್ಡ ಜಯದಲಿ ಎಂದ.
ಎಷ್ಟೋ ನೋಡಿರುವೆನು ನಮ್ಮ ತೋಟದಲೆಲ್ಲ,
ಬಿಸುಡುವೆನೊಕ್ಕಡೆಗಿಕ್ಕಿ.
ಉಳುತ ಹೋದಾಗೆಲ್ಲ ಮೇಲಕೆ ಬರುವುವು
ನೇಗಿಲ ಕುಳದಲಿ ಸಿಕ್ಕಿ.
ಸಾವಿರಗಟ್ಟಳೆ ಜನಗಳು ಕೊಲೆಯಾಗಿ
ಬಿದ್ದವರಾ ದೊಡ್ಡ ಜಯದಲಿ ಎಂದ.
ಆ ಕಥೆ ಏನದು? ನಮಗೆಲ್ಲ ಹೇಳಜ್ಜ ,
ಎಂದನು ಪುಟ್ಟ ಮೊಮ್ಮಗನು.
ಅಚ್ಚರಿ ಕಾಯುತ, ಅರಳಿದ ಕಣ್ಣೆತ್ತಿ
ನಿಂದಳು ಪುಟ್ಟ ಮೊಮ್ಮಗಳು.
ಯುದ್ಧದ ಕಥೆಯೇನು ನಮಗೆಲ್ಲ ಹೇಳಜ್ಜ
ಏತಕೆ ಕಾದಾಡಿದರೊ ಅದ ಹೇಳು.
ಮುತ್ತಜ್ಜ ಹೇಳಿದ – ಇಂಗ್ಲಿಷರಿರುವರೆ,
ಮುರಿದರು ಫ್ರೆಂಚರ ಪಡೆಯ.
ಏತಕೆ ಕಾದಾಡಿದರೊ ಅದ ನಾ ಬೇರೆ
ಕಾಣೆನು ಚೆನ್ನಾಗಿ ಅಡಿಯ.
ಆದರೆ ಯಾರನೆ ಕೇಳವರೆಲ್ಲರು
ಲೋಕಪ್ರಸಿದ್ದಿಯ ಜಯವೆಂಬರೆಂದ.
ನಮ್ಮಯ್ಯ ಗುಡಿಸಲ ಮಾಡಿಕೊಂಡಿದ್ದನು
ಆ ಹೊಳೆಯಂಚಿನನಾಗ,
ಸೂರೆ ಹೊಡೆದು ಬೀಡ ನೆಲಸಮ ಸುಟ್ಟರು;
ತಲೆಯ ತಪ್ಪಿಸಿಕೊಂಡು ಬೇಗ
ಹೆಂಡತಿ ಮಕ್ಕಳ ಕಟ್ಟಿಕೊಂಡೋಡಿದ
ನಿಂತಲ್ಲಿ ನಿಲ್ಲದೆ ನೆಲೆಗಾಣದಲೆದ.
ಬೆಂಕಿಯ, ಕತ್ತಿಯ ಬಾಯಿಗೆ ಬಲಿಯಾಗಿ
ದೇಶವೆ ಹಾಳಾಯಿತೆಲ್ಲ.
ತುಂಬುಬಸಿರಿಯರು, ಹಾಲುಮಕ್ಕಳು ಸತ್ತ
ಲೆಕ್ಕವ ದೇವರೆ ಬಲ್ಲ
ಅದರಂತಹುದೆಷ್ಟೊ ಆಗಲೇಬೇಕಲ್ಲ
ಲೋಕಪ್ರಸಿದ್ಧಿಯ ಜಯದಲಿ ಎಂದ.
ನೋಡಲುಬಾರದು ಎಂಬರು ಘೋರವ
ಗೆದ್ದ ಮೇಲಾರಣದಲ್ಲಿ,
ಸಾವಿರಗಟ್ಟಳೆ ಹೆಣಗಳು ಕೊಳೆಯುತ
ಬಿಸಿಲಲಿ ಬಿದ್ದಿದ್ದುವಲ್ಲಿ.
ಆದರಂತಹುದೆಷ್ಟೊ ಆಗಲೇಬೇಕಲ್ಲ
ಲೋಕಪ್ರಸಿದ್ದಿಯ ಜಯದಲಿ ಎಂದ.
ದೇಶವೆ ಹೊಗಳಿತು ಗೆದ್ದ ನಾಯಕರನು,
ಸುರಿದುವು ಹೂವು ಮಳೆಗಳು-
ಛೀ ತೆಗೆ, ಏನದು, ಬಲುಕೆಟ್ಟ ಕೆಲಸವು!
ಎಂದಳು ಪುಟ್ಟ ಮೊಮ್ಮಗಳು.
ಅಲ್ಲವೆ, ಅಲ್ಲವೆ, ಪುಟ್ಟ ಹುಡುಗಿ. ಕೇಳು.
ಲೋಕಪ್ರಸಿದ್ಧಿಯ ಜಯವದು ಎಂದ.
ಎಲ್ಲರು ಹೊಗಳಿದರಾ ದೊಡ್ಡ ಯುದ್ಧವ
ಗೆದ್ದವರನು ಶೂರರನ್ನು-
ಒಳ್ಳೆಯದದರಿಂದ ಕಡೆಗಾದುದೇನಜ್ಜ?
ಎಂದನು ಪುಟ್ಟ ಮೊಮ್ಮಗನು.
ಅದ ನಾನು ಬಲ್ಲೆನೆ? ಯಾರನೆ ಕೇಳದು
ಲೋಕಪ್ರಸಿದ್ಧಿಯ ಜಯವೆಂಬರೆಂದ.
*****
SOUTHEY (1774 -1843) : After Blenheim
Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...