Home / ಕವನ / ಕವಿತೆ / ಪ್ರಭಾತ

ಪ್ರಭಾತ

ಇರುಳು ಅಡಗಿ ಮೂಡು ಬೆಳಗಿ
ಕಮಲದಂತೆ ತೆರೆಯಿತು
ಹೃದಯದಿಂದ ಗೀತವೊಂದು
ಹೊಮ್ಮಿ ದೆಸೆಯ ತುಂಬಿತು.

ನಭದ ನೆಲದ ಕೆನ್ನೆಗಿತ್ತ
ಉಷೆಯ ಪ್ರೀತಿ ಚುಂಬನ
ಕೊನರಿಸಿತೈ ಮನಸಿನಲ್ಲಿ
ಕನಸು ಕಂಡ ನಂದನ!

ಬಾನ ಭಾಲದಲ್ಲಿ ಹೆಣೆದ
ಅರುಣ ಕಿರಣ ಗುಂಫನ
ಮನದ ಭಾವ ವಿಹಗಗಳಿಗೆ
ಆಯಿತೇನೊ ಮಧುವನ!

ನೂರುದಿನದ ಮರೆತ ಮಧುರ
ಸ್ವಪ್ನವೆಲ್ಲ ಕಲೆತವು
ಮೌನವಾಂತ ಅಧರದಿಂದ
ಹರುಷ ಹಾಡು ಸಿಡಿದವು.

ಶೃತಿಯ ತುಂಬಿ ಹೊಮ್ಮಿ ಹರಿದ
ವಿಹಂಗಮದ ಸುಸ್ವರ
ನನ್ನಿ ಜೊನ್ನ ಹನಿವ, ನಲ್ಲೆ,
ನಿನ್ನ ಲಲ್ಲೆ ಬಂಧುರ!

ಪವನ ವೀಣೆ ಮಿಡಿವ ಗಾನ
ವೇದದಂತೆ ಪಾವನ!
ಕೋಟಿ ಕೊರಳೊಳಿಳಿದ ಗೀತ
ಕರಳಿತೊಡನೆ ಮನ್ಮನ.

ಕಲೆತ ಜಗದ ಸಂಘಗೀತ
ದಿಕ್ತಟಾಕ ತುಂಬಿತು
ಮರೆತ ಮನದ ನೂರು ಸುಖದ
ಹಿಗ್ಗು ಹಾಡು ಹೊಮ್ಮಿತು

ತುಂಬಿ ತಳುಕಿತೆಲ್ಲವನ
ತುಂಬಿ ತುಳುಕಿತೆನ್ನ ಮನ
ಬಾನ ಬುವಿಯ ತುಂಬಿತೀ
ಪ್ರಭಾತ ಸುಭಗ ನಿಸ್ವನ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...