Home / ಕವನ / ಅನುವಾದ / ಸೃಷ್ಟಿ

ಸೃಷ್ಟಿ

ಮೂಲ: ಮಣೀಂದ್ರ ಗುಪ್ತ

“ವಿಶ್ವಪ್ರಳಯದ ಬಳಿಕ ಹೊಸ ಜಗತ್ತಿನ ಸೃಷ್ಟಿ
ಆಗಬೇಕಿದೆ ಅಂತ ಇಟ್ಟುಕೊ
ಭಾರಿ ತೇಜೋಗೋಲ ಕಾಣಿಸುತ್ತಿದೆ ಅಗೋ ಆಕಾಶದಲ್ಲಿ
ಹೇಳು ನೋಡೋಣ ಆ ಹೊಸಗೋಲದಲ್ಲಿ
ಏನೇನಿರಬೇಕು ಅಂತ ಬಯಸುತ್ತೀಯೆ ನೀನು?”

“ಸೂರ್ಯ, ಚಂದ್ರ, ಗಾಳಿ, ನದಿ ಸರೋವರಗಳು.
ಅಂದ ಹಾಗೇ ಮರೆತೆ
ಚಿಗುರು, ಹೂ ಮರಗಳು”

“ನೀನಿರುವುದಿಲ್ಲವೇ ?”

“ಎಲ್ಲಾದರೂ ಉಂಟೆ? ಹೇಳುವ ಅಗತ್ಯವಿದೆಯೆ?
ನಾನು ಇದ್ದೇ ಇರುವೆ”

“ಇನ್ನೂ ಏನಾದರೂ?”

“ಮುಗಿಲು ಅವಕ್ಕೆ ಬಣ್ಣ
ನೀರಲ್ಲಿ ಮೀನುಗಳು, ಗಾಳಿಯಲ್ಲಿ ಹಕ್ಕಿಗಳು”

“ಋತುಗಳು ಸ್ವಪ್ನಗಳು ನೆನಪುಗಳು ಮರವೆಗಳು
ಬೇಡವೆ ಇವೆಲ್ಲ?”

“ಸ್ವಲ್ಪ ಯೋಚಿಸಿ ಎಲ್ಲ ಮತ್ತೆ ಹೇಳುವೆ ತಾಳು
ತಪ್ಪಾಗಬಾರದಲ್ಲ”

“ಮೋಹಕ ಬೆಳಗಿನ ದೃಶ್ಯ, ಮಧ್ಯಾಹ್ನ, ಸಂಜೆ?
ನವಿಲಗರಿ ಕಾಂತಿಯ ಮುಗಿಲಮರೆ ಶಿಖರ?
ಹಣ್ಣುಗಳು, ಮಗುವಿಗೆ ಬಾಯ್ಬಿಡುವ ಹೆಣ್ಣುಗಳು?
ಹಬ್ಬ ಹರಿದಿನಗಳು, ಮದ್ದುಗುಂಡುಗಳು,
ಯುದ್ಧ ಜಯ ಸೋಲುಗಳು?
ಬೇಡವೆ ಹೊಟೇಲುಗಳು, ಜಿಂಕೆಗಳು ಕುದುರೆಗಳು,
ರೈಲು ಕಾರುಗಳು?”

“ಆಹ! ಬೇಡದೆ ಉಂಟೆ?”

“ನೃತ್ಯ ಸಂಗೀತ ಚಿತ್ರ, ಕಟು ತೀಕ್ಷ್ಯ ಮಧುಗಳು?
ಜೇನಿನ ರುಚಿ ಮರೆಸುವ ಸಲ್ಲಾಪ ಸುರತಗಳು?
ಹಕ್ಕಿಗಳ ಸಿಕ್ಕಿಸಿ ನೆಲಕ್ಕೆಳೆವ ಬಲೆಗಳು?”

“ಎಂಥದೋ ತೊಡಕಾದ ಬಲೆಯೊಳಗೆ ನನ್ನನ್ನು
ಸಿಕ್ಕಿಸುತ್ತಿರುವೆ.
ದಟ್ಟಮಾವಿನ ಮರದ ಹಚ್ಚನೆಯ ತೋಪಿನಲ್ಲಿ
ದಿಕ್ಕುಕಾಣದೆ ನಾನು ನಿಂತಿದ್ದೇನೆ.
ಸತ್ತ ಹುಡುಗನನ್ನು ಸುಡಲು ಒಯ್ಯುತ್ತಿರುವೆ
ಸುತ್ತಲೂ ಸಂಜೆಕಾಂತಿಯ ತೊಯಿಸಿ ಸುರಿವ ಮಳೆ
ಮೋಹಕ ಭಯಾನಕ!
ಕಾಪಾಡು ದೇವರೇ
ಹೋಗಬೇಕಿದೆ ನಾನು ಸುಡುವ ಜಾಗಕ್ಕೆ, ನನ್ನ ಕೆಲಸಕ್ಕೆ”

“ಸರಿ, ಹೋಗು, ಯೋಚಿಸು
ವಿಶ್ವವನು ಸೃಷ್ಟಿಸಿದ ದೈವ ನಿನಗಿಂತ ಎಷ್ಟು
ಎತ್ತರದ ಕವಿಯೆಂದು”
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...