Home / ಕವನ / ಅನುವಾದ / ಸೃಷ್ಟಿ

ಸೃಷ್ಟಿ

ಮೂಲ: ಮಣೀಂದ್ರ ಗುಪ್ತ

“ವಿಶ್ವಪ್ರಳಯದ ಬಳಿಕ ಹೊಸ ಜಗತ್ತಿನ ಸೃಷ್ಟಿ
ಆಗಬೇಕಿದೆ ಅಂತ ಇಟ್ಟುಕೊ
ಭಾರಿ ತೇಜೋಗೋಲ ಕಾಣಿಸುತ್ತಿದೆ ಅಗೋ ಆಕಾಶದಲ್ಲಿ
ಹೇಳು ನೋಡೋಣ ಆ ಹೊಸಗೋಲದಲ್ಲಿ
ಏನೇನಿರಬೇಕು ಅಂತ ಬಯಸುತ್ತೀಯೆ ನೀನು?”

“ಸೂರ್ಯ, ಚಂದ್ರ, ಗಾಳಿ, ನದಿ ಸರೋವರಗಳು.
ಅಂದ ಹಾಗೇ ಮರೆತೆ
ಚಿಗುರು, ಹೂ ಮರಗಳು”

“ನೀನಿರುವುದಿಲ್ಲವೇ ?”

“ಎಲ್ಲಾದರೂ ಉಂಟೆ? ಹೇಳುವ ಅಗತ್ಯವಿದೆಯೆ?
ನಾನು ಇದ್ದೇ ಇರುವೆ”

“ಇನ್ನೂ ಏನಾದರೂ?”

“ಮುಗಿಲು ಅವಕ್ಕೆ ಬಣ್ಣ
ನೀರಲ್ಲಿ ಮೀನುಗಳು, ಗಾಳಿಯಲ್ಲಿ ಹಕ್ಕಿಗಳು”

“ಋತುಗಳು ಸ್ವಪ್ನಗಳು ನೆನಪುಗಳು ಮರವೆಗಳು
ಬೇಡವೆ ಇವೆಲ್ಲ?”

“ಸ್ವಲ್ಪ ಯೋಚಿಸಿ ಎಲ್ಲ ಮತ್ತೆ ಹೇಳುವೆ ತಾಳು
ತಪ್ಪಾಗಬಾರದಲ್ಲ”

“ಮೋಹಕ ಬೆಳಗಿನ ದೃಶ್ಯ, ಮಧ್ಯಾಹ್ನ, ಸಂಜೆ?
ನವಿಲಗರಿ ಕಾಂತಿಯ ಮುಗಿಲಮರೆ ಶಿಖರ?
ಹಣ್ಣುಗಳು, ಮಗುವಿಗೆ ಬಾಯ್ಬಿಡುವ ಹೆಣ್ಣುಗಳು?
ಹಬ್ಬ ಹರಿದಿನಗಳು, ಮದ್ದುಗುಂಡುಗಳು,
ಯುದ್ಧ ಜಯ ಸೋಲುಗಳು?
ಬೇಡವೆ ಹೊಟೇಲುಗಳು, ಜಿಂಕೆಗಳು ಕುದುರೆಗಳು,
ರೈಲು ಕಾರುಗಳು?”

“ಆಹ! ಬೇಡದೆ ಉಂಟೆ?”

“ನೃತ್ಯ ಸಂಗೀತ ಚಿತ್ರ, ಕಟು ತೀಕ್ಷ್ಯ ಮಧುಗಳು?
ಜೇನಿನ ರುಚಿ ಮರೆಸುವ ಸಲ್ಲಾಪ ಸುರತಗಳು?
ಹಕ್ಕಿಗಳ ಸಿಕ್ಕಿಸಿ ನೆಲಕ್ಕೆಳೆವ ಬಲೆಗಳು?”

“ಎಂಥದೋ ತೊಡಕಾದ ಬಲೆಯೊಳಗೆ ನನ್ನನ್ನು
ಸಿಕ್ಕಿಸುತ್ತಿರುವೆ.
ದಟ್ಟಮಾವಿನ ಮರದ ಹಚ್ಚನೆಯ ತೋಪಿನಲ್ಲಿ
ದಿಕ್ಕುಕಾಣದೆ ನಾನು ನಿಂತಿದ್ದೇನೆ.
ಸತ್ತ ಹುಡುಗನನ್ನು ಸುಡಲು ಒಯ್ಯುತ್ತಿರುವೆ
ಸುತ್ತಲೂ ಸಂಜೆಕಾಂತಿಯ ತೊಯಿಸಿ ಸುರಿವ ಮಳೆ
ಮೋಹಕ ಭಯಾನಕ!
ಕಾಪಾಡು ದೇವರೇ
ಹೋಗಬೇಕಿದೆ ನಾನು ಸುಡುವ ಜಾಗಕ್ಕೆ, ನನ್ನ ಕೆಲಸಕ್ಕೆ”

“ಸರಿ, ಹೋಗು, ಯೋಚಿಸು
ವಿಶ್ವವನು ಸೃಷ್ಟಿಸಿದ ದೈವ ನಿನಗಿಂತ ಎಷ್ಟು
ಎತ್ತರದ ಕವಿಯೆಂದು”
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...