Home / ಕಥೆ / ಜನಪದ / ಒಂದು ಹಾಡು ಒಂದು ಕಥೆ

ಒಂದು ಹಾಡು ಒಂದು ಕಥೆ

ಒಂದೂರಿನಲ್ಲಿ ಒಬ್ಬ ಗೃಹಿಣಿಯಿದ್ದಳು. ಆಕೆಗೆ ಒಂದು ಕಥೆ ಗೊತ್ತಿತ್ತು.  ಒಂದು ಹಾಡು ಬರುತ್ತಿತ್ತು. ಆದರೆ ಅವಳು ತನಗೆ ಗೊತ್ತಿದ್ದ ಕಥೆಯನ್ನು
ಯಾರಮುಂದೆಯೂ ಹೇಳಿದವಳಲ್ಲ. ತಾನು ಕಲಿತ ಹಾಡನ್ನು ಯಾರಮುಂದೆಯೂ ಹಾಡಿದವಳಲ್ಲ.

ಆಕೆಯ ಮನಸ್ಸಿನಲ್ಲಿ ಸೆರೆಸಿಕ್ಕಿ ಆ ಕಥೆ ಆ ಹಾಡು ಅಲ್ಲಿಂದ ಕಾಲ್ತೆಗೆದು ಓಡಿ ಹೋಗಬೇಕೆಂದು ಮಾಡಿದವು. ಅಲ್ಲಿ ನಿಲ್ಲುವುದೇ ಬೇಡವಾಗಿತ್ತು ಅವುಗಳಿಗೆ. ಯಾವ ಬಗೆಯಿಂದ ಹೊರಬೀಳಬೇಕು – ಎಂದು ಯೋಚಿಸಿ ಕಡೆಗೆ ಕಥೆಯು ಹೊರಬಿದ್ದು ಅಂಗಳದಲ್ಲಿ ಎರಡು ಬೂಟುಗಳಾಗಿ ಕುಳಿತಿತು. ಹಾಡು ಒಂದು ಕೋಟು ಆಗಿ ಗೂಟಿಗೆ ನೇತು ಬಿದ್ದಿತು.

ಆ ಗೃಹಿಣಿಯ ಪತಿಯು ಮನೆಗೆ ಬಂದಾಗ ಅಂಗಳದೊಳಗಿನ ಬೂಟುಗಳನ್ನೂ ಗೂಟಕ್ಕೆ ತೂಗಬಿದ್ದ ಕೋಟನ್ನೂ ಕಂಡು ಹೆಂಡತಿಗೆ ಕೇಳಿದನು – “ಯಾರು ಬಂದಿದ್ದಾರೆ ಮನೆಗೆ?”

“ಯಾರೂ ಬಂದಿಲ್ಲವಲ್ಲ!” ಎಂದಳು ಹೆಂಡತಿ.

“ಹಾಗಾದರೆ ಈ ಬೂಟು ಈ ಕೋಟು ಯಾರವು?” ಪತಿಯ ಪ್ರಶ್ನೆ.

“ನನಗೂ ತಿಳಿಯದು” ಎಂದು ಸತಿ ಹೇಳಿದ ಉತ್ತರದಿಂದ ಗಂಡನಿಗೆ ಸಮಾಧಾನವೆನಿಸಲಿಲ್ಲ. ಸಂಶಯವೇ ಹುಟ್ಟಿಕೊಂಡಿತು. ಅದರಿಂದ ಅವರ ಮಾತುಕತೆಗಳಲ್ಲಿ ವಿರಸವು ಮೊಳೆಯಿತು. ವಿರಸವು ಕದನವಾಗಿ ಪರಿಣಮಿಸಿತು.  ಗಂಡನು ಹೆಂಡತಿಯ ಮೇಲೆ ಮುನಿಸಾಗಿ, ತನ್ನ ಕಂಬಳಿಯನ್ನು ತೆಗೆದುಕೊಂಡವನೇ ಹೊರಬಿದ್ದು ಹನುಮಂತ ದೇವರ ಗುಡಿಗೆ ಮಲಗಲು ಹೋದನು.

ಗೃಹಿಣಿಗೇನೂ ತಿಳಿಯಲಿಲ್ಲ. ಮನೆಯಲ್ಲಿ ಒಬ್ಬಳೇ ಅಡ್ಡಾದಳು. ನಿದ್ರೆಯೇ ಬರಲೊಲ್ಲದು. ಅದೇ ಚಿಂತೆ; ಅದೇ ವಿಚಾರ, ತಿರುತಿರುಗಿ ಬಂದು ನಿಲ್ಲುವದು. ಆ ಬೂಟು ಆ ಕೋಟು ಯಾರವು ? ಬಹಳ ಹೊತ್ತಿನ ಮೇಲೆ ಬೇಸತ್ತು ದೀಪವನ್ನಾರಿಸಿ ಮಲಗಿಕೊಂಡಳು.

ಆ ಊರೊಳಗಿನ ಹಣತಿಗಳೆಲ್ಲ ರಾತ್ರಿಯನ್ನು ಕಳೆಯಲು ಹನುಮಂತ ದೇವರ ಗುಡಿಗೆ ತೆರಳುವುದು ವಾಡಿಕೆಯಾಗಿತ್ತು. ಎಲ್ಲ ಮನೆಗಳಿಂದ ಹಣತಿಗಳು ಬಂದು ಬಂದು ನೆರೆದವು. ಬಹಳ ತಡಮಾಡಿ ಒಂದು ಹಣತಿ ಬಂದಿತು.  ಅದಕ್ಕೆ ಉಳಿದ ಹಣತಿಗಳೆಲ್ಲ ಕೇಳಿದವು – “ಇಷ್ಟೇಕೆ ತಡ ಬರಲಿಕ್ಕೆ ?”

“ನಮ್ಮ ಮನೆಯಲ್ಲಿ ಗಂಡಹೆಂಡರು ಜಗಳಾಡುತ್ತ ಕುಳಿತಿದ್ದರಿಂದ ರಾತ್ರಿಯಾಯಿತು” ಎಂದಿತು ಆ ಹಣತಿ.

“ಏಕೆ ಜಗಳಾಡಿದರು ಆ ಗಂಡಹೆಂಡಿರು ?”

“ಗಂಡನಿಲ್ಲದಾಗ ಅವರ ಮನೆಯಂಗಳಕ್ಕೆ ಜೋಡು ಬೂಟುಗಳು ಪಡಸಾಲೆಯ ಗೂಟಿಗೆ ಒಂದು ಕೋಟು ಬಂದಿದ್ದವು. ಅವು ಯಾರವು ಎಂದು ಗಂಡ ಕೇಳಿದರೆ, ನನಗೆ ಗೊತ್ತಿಲ್ಲವೆಂದು ಹೆಂಡತಿ ಹೇಳಿದಳು. ಅದಕ್ಕಾಗಿ ಜಗಳಾಡಿದರು” ಎಂದಿತು ಹಣತಿ.

“ಹಾಗಾದರೆ ಆ ಬೂಟು ಕೋಟು ಎಲ್ಲಿಂದ ಬಂದವು ?”

“ನಮ್ಮ ಮನೆಯೊಡತಿಗೆ ಒಂದು ಕಥೆ, ಒಂದು ಹಾಡು ಗೊತ್ತಿದೆ. ಎಷ್ಟು ಚಾಲುವರೆದರೂ ತಾನು ಕಲಿತ ಕಥೆ ಹೇಳಿದವಳಲ್ಲ.  ತನ್ನ ಹಾಡು ಅಂದು ತೋರಿಸಿದವಳಲ್ಲ. ಸೆರೆಸಿಕ್ಕ ಆ ಕಥೆ ಹಾಡುಗಳು ಬೂಟುಕೋಟುಗಳಾಗಿ ಹೊರಬಿದ್ದಿವೆ. ಅದು ಆಕೆಗೆ ಗೊತ್ತಾಗಿಲ್ಲ.”

ಆ ಹಣತಿಯ ವಿವರಣೆಯನ್ನೆಲ್ಲ ಕಂಬಳಿ ಮುಸುಕಿನಲ್ಲಿಯೇ ಕೇಳಿದ ಆ ಗಂಡನ ಸಂಶಯವೆಲ್ಲ ನಿವಾರಣೆ ಆಯ್ತು.  ನಿಶ್ಚಿಂತೆಯಿಂದ ಮಲಗಿ ನಿದ್ದೆಮಾಡಿ ಮುಂಜಾನೆ ಮನೆಗೆ ಹೋದನು. ಕಥೆ ಹಾಡಿನ ಸುದ್ದಿ ತೆಗೆದು ಹೆಂಡತಿಗೆ ಮಾತಾಡಿಸಿ ನೋಡಿದನು. ಆದರೆ ಆಕೆಗೆ ಬರುತ್ತಿದ್ದ ಕಥೆ ಹಾಡು ಎರಡೂ ಮರೆತುಹೋದವೆಂದು ತಿಳಿಯಿತು.
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...