Home / ಕವನ / ಕವಿತೆ / ಕೋಗಿಲೆ

ಕೋಗಿಲೆ

ಬಾರೆಲೆ ಕೋಗಿಲೆಯುಲಿಯುತ ಬನದೊಳು
ತಾರೆಲೆ ಮೋದವ ಮೇದಿನಿಗೆ
ಹಾಡೆಲೆ ಬಹುವಿಧ ರಾಗದೆ ನರರನು
ತೇಲಿಸಿ ಕುಣಿಸೆಲೆ ಲೀಲೆಮಿಗೆ
ಕುಡಿಗೊನರೆಲ್ಲವು ಗಿಡಗಳ ಮಡಲೊಳು
ಬಿಡದಲೆ ಕಾಣುವೆ ಕೋಗಿಲೆಯೆ
ತಡವನು ಮಾಡದೆ ಒಡನೆಯೆ ನಯನುಡಿ
ಬೆಡಗನು ಬಿಡಿಸಲೆ ಬಿಂಕದಲಿ
ಬೇಸಿಗೆ ಕಾಲನು ನಲವಿಂದಿಡುತಿದೆ
ಮಾಗಿಯು ಮುಗ್ಗುತ ಮುಡಿಯುತಿದೆ
“ಕುವೋಽಕುವೋs” ಸವಿದನಿ ಸೊದೆಯನು
ಬೀರುತ ಬಾರೈ‌ ಕೋಗಿಲೆಯೆ
ಕೇಳಿದೆ ಕೇಳಿದೆ ಕೆಲಬಲಕುಲಿಯುವ
“ಕೂಽವೊ ಕೂಽವೊ” ಮೆಲುದನಿಯ
ವಸಂತ ಸಮಯನ್ನು ಸಮನಿಸಿದೊಸಗೆಯ
ವಸುಮತಿ ದಿಶೆಶೆಗುಸಿರುತಿದೆ
ಏನಿದು ಗಾನಮೊ ಸುಮನೋಹರಮೊ !
ರಸಋಷಿರಸನೆಯೊಳೊಸರುವರಸಮೊ !
ನಿಶೀಥ ಸಮಯದ ನಿಶಾಂತ ಸನಮೊ !
ವಸುಮತಿ ದೇವಿಯ ಸುಗ್ಗಿಯ ಸೊಗಮೊ !
ವಸಂತ ರಮಣಿಯ ನಿನದದ ನಯಮೊ !
ರತಿಯುತ ಸತಿಮಣಿ ಸುಸಿಲಿನ ಸನಮೊ !
ಪಸುಳೆಯ ಮುದ್ದಿನ ಮಾತಿನ ಮುದಮೊ !!
ಕಾಣುವೆ ಕೇಳುವೆ ಕೆಲಬಲದಲ್ಲಿ
ಕುಣಿಕುಣಿದಾಡುವ ತಣಿನೆಳಲಲ್ಲಿ
ಚಲುವಿನ ಮೃದುತಮ ಮನಸಿರಿಯಲ್ಲಿ
ಬಳಲಿಕೆ ಬಾರದ ತೊಲಿಕೆಯಲ್ಲಿ
ತಿಳಿಯದಲಂಪಿನ ಮೆಲುದನಿಯಲ್ಲಿ
ತಿಳಿಗೊಳದಲಂಪಿನ ಪರಿಮಳದಲ್ಲಿ
ಮುಳಗುವೆ ಸಂದದ ಸಂತಸದಲ್ಲಿ
ನುಡಿತಡೆಬಿಡುಗಡೆ ಪಡೆಯುವ ಸಮಯದೆ
ನುಡಿಯುವ ನುಡಿಯನುಕರಿಸದಿಹೆ
“ಕುವೊ ಕುವೊ ಕರ್ರೇ” ಎನ್ನುತ ಸಾರಲು
ನಾಡಿನ ಬಿಡುಗಡೆ ಕಾಣದಿಹೆ
ಕವಿಗಳ ಕಣ್ಣೊಳು ಕುಣಿಕುಣಿದಲೆಯುವ
ಮಾವಿನ ತಳಿರೊಳೆ ತಳ್ತಿರದೆ
ತರುಗಳ ಭೇದವ ಹೃದಯದೆ ತಾರದೆ
ಚಲುವಿನ ತಳಿರನು ಮೆಲುತಿರುವೆ
ಬೇವಿನ ಕಿಸಲಯ ಹಸುರೆಲೆ ಬೀಡೊಳು
ಮಂಚದ ಮೇಲೆ ಮಲಗಿರಲು
ಬೆಳಗಿನ ಗಳಿಗೆಯೊಳುಲಿಯುತ ಮೆಲುದನಿ
ತಲ್ಪದೆ ತಲೆಯನು ತೊನೆಸುತಿಹೆ
ಸವಿದನಿಯೆಸಕವನೊಸೆದೊಸೆದಾಲಿಸೆ
ಬಾಲ್ಯದೆ ತೇಲಿಸಿ ಕುಣಿಸುತಿಹೆ
ಶಿಶುತನದೊಸಗೆಯ ಹೊಸದಾಗೇಳಿಸಿ
ಬಿಸಿಬಿಸಿಯುಸಿರನು ಬಿಡಿಸುತಿಹೆ
೧೦
ತಾಯಿಯ ತಾಯ್ನುಡಿ ತಂದೆಯ ತನಿನುಡಿ
ಕೋಗಿಲೆ ಬಗ್ಗಣೆ ಹಾರೈಸಿ
ಕುಣಿಯುತ ಕುಲುಕುಲು ನಗುತಿಹ ದಿನಗಳ
ನೆನಪೇ ನೋವಿನ ಸೀಮೆಯಲೆ
೧೧
ದನಿಯನು ಬದಲಿಸಿ ಪದುಳದೆ ಪಾಡುವ
ಹದನವ ತಲೆಯಲಿ ತೂಗುತಿರೆ
ಚದುರನು ಜಗದೊಳು ಜನರುಚಿಯರಿಯುತ
ಬದಲಿಪ ನಡೆನುಡಿ ನಟಿಸುತಿಹೆ
೧೨
ಬಾನೊಳು ಮುನಿದಿರುವಿನಿಯಳ ಬೆನ್ನೊಳು
ಪ್ರಣಯದ ತನಿಸೊದೆ ಸೂಸುತಲಿ
ಓಪನು ಓಪಳ ಕಳೆಯನು ಕೇಳುತ
ತರುಗಳ ಬಳಸುತ ತೇಲುತಿರೆ
೧೩
ಸ್ಮೃತಿಪಥಕೇಳುವ ಮುನಿದಿಹ ನಲ್ಲೆಯ
ಚಿತ್ರವ ರೂಪಿಸಿ ನಲಿಸುತಿಹೆ
ನಲ್ಲನ ನಲ್ಲೆಯ ಲಲ್ಲೆಯ ಸೊಲ್ಲಿನ
ಮಲುದನಿ ಸೊಂಪನು ಸೂಸುತಿಹೆ
೧೪
ಕಾಡಿಗೆ ಕಪ್ಪಿನ ಮೋಡದ ಬಣ್ಣವ
ಬರಸೆಳೆದಾಡುವ ಒಡಲಿಂದೆ
ಮೂಡುವ ನಯನುಡಿ ಗಾಡಿಯ ನೋಡಲು
ಪೊಡವಿಯ ಮೌಢ್ಯದೆ ಕೆಡಹುತಿಹೆ
೧೫
ಪುಚ್ಚವನೇಳಿಸಿ ಬೀಳಿಸಿ ಕಲೆವುದ
ನೊಚ್ಚರೆಗಂಗಳು ನೋಡುತಿರೆ
ಒನಪಿನ ಉಯ್ಯಲೆಯಾಂತಿಹ ಭುವನದೆ
ಕುಳಿತಿಹ ದೇವನ ನಾದಮಿದೊ
೧೬
ಪೊಡವಿಯೊಳಡಗಿಹ ಶಕುನಿಯ ಸೃಷ್ಟಿಯ
ದಿಟ್ಟಿಸಿ ನೋಡಲು ನುಡಿಗಳನು
ತರತಮಭಾವದೆ ಕಾಲದೆ ಕಾಲದೆ
ಕಲೆಯುತ ಕೆಲಬಲ ಕಲೆತಿಹವು
೧೭
ನಾಕಾಧೀಶನ ಗಮನವನೆಣಿಸದೆ
ತುಂಬುರನೆಂಬುವ ಕಿನ್ನರನು
ವೀಣೆಯ ಗಾನದ ನಾದದೆ ನಾಂದಿರೆ
ಶಾಪವು ಪಿಕವನು ರೂಪಿಸಿತೊ
೧೮
ಶಾಪವಿಮೋಚನೆ ಯಾಚಿಸಿ ಕೇಳದೆ
ಶೋಕವ ಮಾಡದೆ ಭೂತಲದೆ
ಕೋಗಿಲೆಯಾಗಿರೆ ಮಾಗಿಯ ಬೇಟಿಗ
ನೀಗದ ನಿಡುಸರ ತುಡುಕಿಹನೊ
೧೯
ವರ್ಷಾಕಾಲದ ಸೆರೆ ಪಿರಿದಲ್ತೈ
ಎಂದಾದರು ಪದ ಪಾಡುತಿಹೆ
ಸಂದಿದ ಮಾತನು ಹೊಂದಿಸಿ ಹಂಬಲ
ಮಾಡುವವನುಚಿತವನ್ನುತಿಹೆ
೨೦
ಕಾರಿನ ಕಾಲದೆ ಕೋಗಿಲೆಯುಲಿಯನು
ಕೇಳುತ ಬಂದೆನು ಕೆಲವುಕಡೆ
ರಾಗದೆ ರಾಗವ ಕೂಗುತ ಕೂಗುವ
ವೇಗಕೆ ಬೀಗವು ಬೀಳುತಿದೆ
೨೧
ವಸಂತಸಮಯದ ಸವಿದನಿಯೆಸಕವ
ವಸುಮತಿಗೂಡಿಸಿ ನುಡಿಸದಿದೆ
ನಿಶೆಯೊಳು ದಿನದೊಳು ಕೇಳಿದ ಕಿವಿಯಾ
ಸುಖವದು ಸಾರಿತು ದೆಸೆದೆಸೆಗೆ
೨೨
ಕುಗ್ಗಿದ ಕಂಠದೆ “ಕುವೊ ಕುವೊ” ಎನ್ನುವ
ಹಿಗ್ಗದ ಕೂಗನು ಕೇಳುತಿಹೆ
ಸಗ್ಗದ ಸುಖದಾ ಸೊದೆಯನು ಸವಿದಿಹ
ಹಿಗ್ಗಿದ ಮನವದು ಮುದುಡುತಿದೆ
೨೩
ಜಗದೊಳು ಜೀವಿಗೆ ಸುಖದುಃಖಂಗಳು
ಬಿಡದಿಹ ಕರ್ಮವು ಎನುತಿರುವೆ
ಮಿಗೆ ಸಮ ಭಾವನ ತಳೆಯುತ ಕಳೆವುದು
ಲೋಕದೆ ಮೇಲೆಂದೆನುತಿರುವೆ
*****
Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...