Home / ಕವನ / ಕವಿತೆ / ನೇಣುಗಂಬದಲ್ಲಿ ನಿರಪರಾಧಿ

ನೇಣುಗಂಬದಲ್ಲಿ ನಿರಪರಾಧಿ

ಬಿಸಿಲ ಸೂರ್‍ಯನ ಕಾವು ತಟ್ಟಿ
ಕರುಳ ಬಳ್ಳಿಯ ಹೂವು ಬಾಡಿ
ಶಂಕೆಯಿದ್ದರೆ ಶೋಧಿಸಿ ನೋಡಿರಿ
ನನ್ನ ಮನೆ, ಮಾಡು, ಮೂಲೆ, ಗೂಡು
ಬೇಕಿದ್ದರೆ ನನ್ನ ರಕ್ತದ ಕಣಕಣದಲ್ಲಿ
ಕೋಟಿಕೋಟಿ ಜೀವಂತ ಸಾಕ್ಷಿಗಳಿವೆ.
ಹೆಕ್ಕಿ ನೋಡಿರಿ ಮುಕ್ಕಾದರೂ ಸರಿಯೇ
ಅಲ್ಲಿ ಪೂರ್‍ವಿಕರ ಜೋಗುಳ ಕೋಶವಿದೆ.
ಮಳೆ, ಮೋಡ, ಮೋಳಕೆಯಲ್ಲಿ ಶೋಧಿಸಿರಿ
ಸಿಡಿಲು, ಮಿಂಚು, ಗುಡುಗಿನ ಶಬ್ದದಲ್ಲಿ
ಸೂರ್‍ಯ ಚಂದ್ರರು ಸಂಧಿಸುವಲ್ಲಿ.

ತುತ್ತು ತುತ್ತಿಗೂ ಬೆವರ ಬಿತ್ತುವ
ಒಡಲಧಗೆ ನಂದಿಸುವ ಶ್ರಮಿಕನವನು.
ಕರುಳ ಬತ್ತಿಯ ಹೊಸೆದು ದೀಪ ಹಚ್ಚುವನು.
ಬಿರುಗಾಳಿಗೆ ಆರಿ ಹೋಗದಂತೆ
ಒಡಲೊಳಗಿನ ಕೆಂಡದ ಕನಸುಗಳಿಗೆ
ಕಿಡಿ ತಾಗದಂತೆ ಅಡ್ಡಗೋಡೆಯಾದವನು.

ಧರೆ ಹೊತ್ತಿ ಉರಿಯದಂತೆ
ಕಣ್ಣಾಳದ ಆಕಾಶ ನೆಲಕಚ್ಚದಂತೆ
ಕೊಲೆಕಗಡುಕರ ಸಂತೆ ಮೈದಾನದಲ್ಲಿ
ನಾಳೆಗಳು ಸುಟ್ಟು ಕರಕಲಾಗದಂತೆ
ಮುಳ್ಳುಗಳು ಚುಚ್ಚದಂತೆ ಎಚ್ಚರದಲಿ,
ಧರೆಯ ಭಾರಕ್ಕೆ ಹೆಗಲ ನೀಡಿದವನು.

ಭಯ ತುಂಬಿದ ಮುಖ ಬಿಳಿಚಿಕೊಂಡಿದೆ
ರಕ್ತ ಹೆಪ್ಪುಗಟ್ಟುತ್ತಿದೆ ಸ್ಫೋಟದ ಶಬ್ದಕೆ
ಎಲುಬಿಗೂಡಿನ ಹಂದರಗಳು ನಲುಗಿವೆ
ಗೋರಿಯಿಂದೆದ್ದ ಮೋಡ ಕಂಬನಿ ಸುರಿಸಿ
ಕೇಳುತ್ತಿದೆ ಹೇಳು ವ್ಯಾಘ್ರನೆ
ಸಿಡಿಮದ್ದಿಗೆ ಸಮುದಾಯದ ಬಲಿಯೇಕೆ?
ನೆಲದ ಮೇಲೆ ನರಮಂಡಲದ ಬಳ್ಳಿಯಿದೆ.
ನೇಣುಗಂಬದಲ್ಲಿ ನಿರಪರಾಧಿ ಬೇರುಗಳು
ರಕ್ತದೋಕುಳಿಯಲ್ಲಿ ತೊಯ್ಯಬೇಕೇಕೆ?
ಶಸ್ತ್ರಾಸ್ತ್ರಗಳು ನಾಗರೀಕತೆಯ ಕುರುಹುಗಳಲ್ಲ
ನಾಟಿ ಔಷಧಿಯೂ ಅಲ್ಲ, ಬುದ್ಧನ ಬೆಳಕು ಅಲ್ಲ,
ಪ್ರವಾದಿಗಳ ಹಿತನುಡಿಯೂ ಅಲ್ಲ
ಬಂದೂಕಿನ ನಳಿಕೆಯಲಿ ಕೊಳಲಿನ ಗಾನ
ಬದುಕಿನ ಕನಸುಗಳಿವೆ ಜೋಪಾನ!

ಬೆಟ್ಟದೆತ್ತರಕ್ಕೆ ಬಿದ್ದ ಹೆಣರಾಶಿಯಿಂದ
ಅರೆಜೀವಗಳ ನಾಬಿಯಾಳದ ಸಂಕಟ
ನೋವಿನ ಕಿಡಿಗಳ ನೇರ ನೋಟ
ಕಾಲನ ಹಾಲಾಹಲದ ಮುನ್ಸೂಚನೆಯೇ?
ದೇಶದ್ದುದ್ದಗಲಕ್ಕೂ ಸಂಚಾರ ಹೊರಟ ಭಸ್ಮಾಸುರ

ಜನಾಂಗೀಯ ದ್ವೇಷ ಬೆಳಸಿದ್ದು ಸಾಕು.
ಓಟಿನ ಬೇಟೆಯ ಲೆಕ್ಕಚಾರದಲ್ಲಿ
ಬೆನ್ನಹುರಿಗೆ ಸಿಡಿಮದ್ದು ಸಿಕ್ಕಿಸಿಕೊಂಡಿಹನು
ಚರ್‍ಚು, ಮಠ, ಮಸೀದಿಗಳ ಶಿಖರಕ್ಕೆ
ನೆತ್ತರು ಕಲೆಗಳಿವೆ-ಅತ್ತರು, ಉದುಬತ್ತಿಗಳಿವೆ.

ಅನಾಥ ಮಗುವಿನ ತುಟಿಯಲ್ಲಿ ನಗುವಿಲ್ಲ
ತುಕ್ಕು ಹಿಡಿದಿದೆ ಬುದ್ದಿಗೆ ಆತ್ಮಸಾಕ್ಷಿಗೆ
ಲೋಕದಲಿ ಮುಗಿದಿಲ್ಲ ಯುದ್ಧವಿನ್ನೂ
ಕ್ಯಾತೆ ತೆಗೆಯುತ್ತಲೇ ಇದ್ದಾನೆ ಠೇಕೇದಾರ.
ಮುಗಿಲಮೋಡಗಳು ಸಾಗರದಾಚೆ ನಿಂತು
ನೆತ್ತರ ಕಂಬನಿ ಸುರಿಸಿ ಬಿಕ್ಕುತ್ತಿವೆ.
ಧ್ಯಾನ ಗೋರಿಯಿಂದ ಹೊರ ಬಂದ ಬೆಳ್ಳಕ್ಕಿ
ಕಾಲದ ಗಂಟೆ ಬಾರಿಸಿ ಕೇಳುತ್ತಿದೆ.
ಒಬ್ಬನ ತಪ್ಪಿಗೆ ಸಮುದಾಯದ ಬಲಿಯೇಕೆ?
ನೇಣುಗಂಬದಲಿ ನಿಲ್ಲಿಸಿದ ಠೇಕೇದಾರನೇ ಹೇಳು
ಹೇಳುವದಾದರೆ ಅಪರಾಧಿಯ ಹೆಸರು.
ಸಮುದಾಯವನು ಸೂಲಿಗೇರಿಸುವ ಛಲವೇಕೆ?
ಮುಖ್ಯ ವಾಹಿನಿ ಛಿದ್ರಗೊಳಿಸುವ ಹುನ್ನಾರವೇಕೆ?
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ