Home / ಕವನ / ಕವಿತೆ / ನೇಣುಗಂಬದಲ್ಲಿ ನಿರಪರಾಧಿ

ನೇಣುಗಂಬದಲ್ಲಿ ನಿರಪರಾಧಿ

ಬಿಸಿಲ ಸೂರ್‍ಯನ ಕಾವು ತಟ್ಟಿ
ಕರುಳ ಬಳ್ಳಿಯ ಹೂವು ಬಾಡಿ
ಶಂಕೆಯಿದ್ದರೆ ಶೋಧಿಸಿ ನೋಡಿರಿ
ನನ್ನ ಮನೆ, ಮಾಡು, ಮೂಲೆ, ಗೂಡು
ಬೇಕಿದ್ದರೆ ನನ್ನ ರಕ್ತದ ಕಣಕಣದಲ್ಲಿ
ಕೋಟಿಕೋಟಿ ಜೀವಂತ ಸಾಕ್ಷಿಗಳಿವೆ.
ಹೆಕ್ಕಿ ನೋಡಿರಿ ಮುಕ್ಕಾದರೂ ಸರಿಯೇ
ಅಲ್ಲಿ ಪೂರ್‍ವಿಕರ ಜೋಗುಳ ಕೋಶವಿದೆ.
ಮಳೆ, ಮೋಡ, ಮೋಳಕೆಯಲ್ಲಿ ಶೋಧಿಸಿರಿ
ಸಿಡಿಲು, ಮಿಂಚು, ಗುಡುಗಿನ ಶಬ್ದದಲ್ಲಿ
ಸೂರ್‍ಯ ಚಂದ್ರರು ಸಂಧಿಸುವಲ್ಲಿ.

ತುತ್ತು ತುತ್ತಿಗೂ ಬೆವರ ಬಿತ್ತುವ
ಒಡಲಧಗೆ ನಂದಿಸುವ ಶ್ರಮಿಕನವನು.
ಕರುಳ ಬತ್ತಿಯ ಹೊಸೆದು ದೀಪ ಹಚ್ಚುವನು.
ಬಿರುಗಾಳಿಗೆ ಆರಿ ಹೋಗದಂತೆ
ಒಡಲೊಳಗಿನ ಕೆಂಡದ ಕನಸುಗಳಿಗೆ
ಕಿಡಿ ತಾಗದಂತೆ ಅಡ್ಡಗೋಡೆಯಾದವನು.

ಧರೆ ಹೊತ್ತಿ ಉರಿಯದಂತೆ
ಕಣ್ಣಾಳದ ಆಕಾಶ ನೆಲಕಚ್ಚದಂತೆ
ಕೊಲೆಕಗಡುಕರ ಸಂತೆ ಮೈದಾನದಲ್ಲಿ
ನಾಳೆಗಳು ಸುಟ್ಟು ಕರಕಲಾಗದಂತೆ
ಮುಳ್ಳುಗಳು ಚುಚ್ಚದಂತೆ ಎಚ್ಚರದಲಿ,
ಧರೆಯ ಭಾರಕ್ಕೆ ಹೆಗಲ ನೀಡಿದವನು.

ಭಯ ತುಂಬಿದ ಮುಖ ಬಿಳಿಚಿಕೊಂಡಿದೆ
ರಕ್ತ ಹೆಪ್ಪುಗಟ್ಟುತ್ತಿದೆ ಸ್ಫೋಟದ ಶಬ್ದಕೆ
ಎಲುಬಿಗೂಡಿನ ಹಂದರಗಳು ನಲುಗಿವೆ
ಗೋರಿಯಿಂದೆದ್ದ ಮೋಡ ಕಂಬನಿ ಸುರಿಸಿ
ಕೇಳುತ್ತಿದೆ ಹೇಳು ವ್ಯಾಘ್ರನೆ
ಸಿಡಿಮದ್ದಿಗೆ ಸಮುದಾಯದ ಬಲಿಯೇಕೆ?
ನೆಲದ ಮೇಲೆ ನರಮಂಡಲದ ಬಳ್ಳಿಯಿದೆ.
ನೇಣುಗಂಬದಲ್ಲಿ ನಿರಪರಾಧಿ ಬೇರುಗಳು
ರಕ್ತದೋಕುಳಿಯಲ್ಲಿ ತೊಯ್ಯಬೇಕೇಕೆ?
ಶಸ್ತ್ರಾಸ್ತ್ರಗಳು ನಾಗರೀಕತೆಯ ಕುರುಹುಗಳಲ್ಲ
ನಾಟಿ ಔಷಧಿಯೂ ಅಲ್ಲ, ಬುದ್ಧನ ಬೆಳಕು ಅಲ್ಲ,
ಪ್ರವಾದಿಗಳ ಹಿತನುಡಿಯೂ ಅಲ್ಲ
ಬಂದೂಕಿನ ನಳಿಕೆಯಲಿ ಕೊಳಲಿನ ಗಾನ
ಬದುಕಿನ ಕನಸುಗಳಿವೆ ಜೋಪಾನ!

ಬೆಟ್ಟದೆತ್ತರಕ್ಕೆ ಬಿದ್ದ ಹೆಣರಾಶಿಯಿಂದ
ಅರೆಜೀವಗಳ ನಾಬಿಯಾಳದ ಸಂಕಟ
ನೋವಿನ ಕಿಡಿಗಳ ನೇರ ನೋಟ
ಕಾಲನ ಹಾಲಾಹಲದ ಮುನ್ಸೂಚನೆಯೇ?
ದೇಶದ್ದುದ್ದಗಲಕ್ಕೂ ಸಂಚಾರ ಹೊರಟ ಭಸ್ಮಾಸುರ

ಜನಾಂಗೀಯ ದ್ವೇಷ ಬೆಳಸಿದ್ದು ಸಾಕು.
ಓಟಿನ ಬೇಟೆಯ ಲೆಕ್ಕಚಾರದಲ್ಲಿ
ಬೆನ್ನಹುರಿಗೆ ಸಿಡಿಮದ್ದು ಸಿಕ್ಕಿಸಿಕೊಂಡಿಹನು
ಚರ್‍ಚು, ಮಠ, ಮಸೀದಿಗಳ ಶಿಖರಕ್ಕೆ
ನೆತ್ತರು ಕಲೆಗಳಿವೆ-ಅತ್ತರು, ಉದುಬತ್ತಿಗಳಿವೆ.

ಅನಾಥ ಮಗುವಿನ ತುಟಿಯಲ್ಲಿ ನಗುವಿಲ್ಲ
ತುಕ್ಕು ಹಿಡಿದಿದೆ ಬುದ್ದಿಗೆ ಆತ್ಮಸಾಕ್ಷಿಗೆ
ಲೋಕದಲಿ ಮುಗಿದಿಲ್ಲ ಯುದ್ಧವಿನ್ನೂ
ಕ್ಯಾತೆ ತೆಗೆಯುತ್ತಲೇ ಇದ್ದಾನೆ ಠೇಕೇದಾರ.
ಮುಗಿಲಮೋಡಗಳು ಸಾಗರದಾಚೆ ನಿಂತು
ನೆತ್ತರ ಕಂಬನಿ ಸುರಿಸಿ ಬಿಕ್ಕುತ್ತಿವೆ.
ಧ್ಯಾನ ಗೋರಿಯಿಂದ ಹೊರ ಬಂದ ಬೆಳ್ಳಕ್ಕಿ
ಕಾಲದ ಗಂಟೆ ಬಾರಿಸಿ ಕೇಳುತ್ತಿದೆ.
ಒಬ್ಬನ ತಪ್ಪಿಗೆ ಸಮುದಾಯದ ಬಲಿಯೇಕೆ?
ನೇಣುಗಂಬದಲಿ ನಿಲ್ಲಿಸಿದ ಠೇಕೇದಾರನೇ ಹೇಳು
ಹೇಳುವದಾದರೆ ಅಪರಾಧಿಯ ಹೆಸರು.
ಸಮುದಾಯವನು ಸೂಲಿಗೇರಿಸುವ ಛಲವೇಕೆ?
ಮುಖ್ಯ ವಾಹಿನಿ ಛಿದ್ರಗೊಳಿಸುವ ಹುನ್ನಾರವೇಕೆ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...