Home / ಕವನ / ಕವಿತೆ / ಕೆಲವು ದೇಶಗಳು ರಶಿಯದ ಹಾಗೆ

ಕೆಲವು ದೇಶಗಳು ರಶಿಯದ ಹಾಗೆ

ಕೆಲವು ದೇಶಗಳು ರಶಿಯದ ಹಾಗೆ ಬಹಳ ಬೃಹತ್ತಾಗಿ
ಕೆಲವು ಮಾಲಿಯ ಹಾಗೆ ಸಂಕ್ಷಿಪ್ತ

ದೊಡ್ಡ ದೇಶದ ಜನ ಒಬ್ಬರಿಗೊಬ್ಬರು ಅಪರಿಚಿತ
ಒಂದು ಕೊನೆಯಿಂದ ಇನ್ನೊಂದು ಕೊನೆ ತನಕ
ತಲುಪಲು ದಿನಗಳು ವಾರಗಳು ಮಾಸಗಳು ಬೇಕು

ಪ್ರತಿ ಯಾತ್ರೆಯೂ ಒಂದು ಮಹಾಯಾತ್ರೆ
ಅಥವಾ ಶಿಕ್ಷೆ
ಮೋಸ್ಕೋದಿಂದ ಸೈಬೀರಿಯಾಕ್ಕೆ
ಕವಿಗಳು ಹೋದರು ಕ್ರಾಂತಿಕಾರಿಗಳು ಹೋದರು

ಚಿಕ್ಕ ದೇಶಗಳಲ್ಲಿ ಎಲ್ಲರಿಗೆ ಎಲ್ಲರೂ ಗೊತ್ತು
ಸುದ್ದಿಯೆಂದರೆ ಅದು ಬಾವಿಕಟ್ಟೆಯಲಿ ನೆರೆಕರೆಯ ಪಿಸುಮಾತು

ಸಾಗುವುದಕ್ಕೆ ಆರಂಭ ಅಂತ್ಯವೆಂಬುದಿಲ್ಲ
ಅದು ಗದ್ದೆ ಸುತ್ತಿದ ಹಾಗೆ ನಮ್ಮ ಹಳ್ಳಿಯಲ್ಲಿ ದಿನಾ

ದೊಡ್ಡ ದೇಶಗಳಲ್ಲಿ ಏಕ ಕಾಲಕ್ಕೆ ಒಂದೆಡೆ ಬೀಳುವುದು ಹಿಮ
ಇನ್ನೊಂದೆಡೆ ಬಿಸಿಲ ಝಳ
ಬೆಟ್ಟದ ತಪ್ಪಲಲ್ಲಿ ಕುರಿಗಳ ಹಿಂಡು

ಕರಾವಳಿಯಲ್ಲಿ ಬೆಸ್ತರ ದಂಡು
ಅವರ ಭಾಷೆಗಳು ಬೇರೆ ಅರ್ಥವಾಗುವುದು ಸ್ವಲ್ಪ ಸ್ವಲ್ಪ

ಚಿಕ್ಕ ದೇಶಗಳಲ್ಲಿ ಹವೆಯೊಂದೇ ಭಾಷೆಯೊಂದೇ
ಉಡುತೊಡುವ ರೀತಿ ಒಂದೇ ಊಟ ಒಂದೇ

ಚರಿತ್ರೆ ಹಣ್ಣು ಕತ್ತರಿಸುವಂತೆ ಕತ್ತರಿಸಿ ಇಡಲಿಲ್ಲ
ಮಾನವ ಜನಾಂಗವನ್ನು ಒಂದೆ ತಾಟಿನಲ್ಲಿ ನೀಟಾಗಿ

ನದಿಯೂ ಹರಿಯಲಿಲ್ಲ ನೇರ ಗೆರೆಗಳಲ್ಲಿ ಪರ್ವತಗಳೂ
ಇದ್ದುವು ತಮ್ಮ ಖುಷಿಯಲ್ಲಿ

ಸರಿಪಡಿಸುವ ಎಲ್ಲ ಪ್ರಯತ್ನಗಳೂ ತತ್ತರಿಸಿ ಬೀಳುತ್ತಿವೆ
ಸರಿ ಯಾವುದು ತಪ್ಪು ಯಾವುದು ಎಂದು ಗೊತ್ತಿಲ್ಲದಿರುತ್ತ

ವಲಸೆ ಬಂದ ಹಕ್ಕಿಗಳೇ
ನೀವೇನು ಹೇಳುವಿರಿ ಎಷ್ಟು ದೇಶಗಳ ಕಂಡವರು
ಮಾತಾಡದೆ ಇರುವಿರಿ
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...