Home / ಕವನ / ಕವಿತೆ / ಎರಡು ಚಿತ್ರ

ಎರಡು ಚಿತ್ರ

ಹುಡುಗ ಹಾಡುತಿತ್ತು, ಮತ್ತೆ ಆಡುತಿತ್ತು,
ನಡುನಡುವೆ ಓಡುತಿತ್ತು;
ಹುಡಗ ಕೆಲೆಯುತಿತ್ತು, ಹಾಗೆ ಕುಣಿಯುತಿತ್ತು,
ಏನೋ ತೊದಲಾಡುತಿತ್ತು.
ಏನು ತಿಳಿಯತಿತ್ತೊ! ಏನು ಹೊಳೆಯುತಿತ್ತೊ!
ಕೈಹೊಯ್ದು ನಗುತಲಿತ್ತು;
ಏನು ನಿಟ್ಟಿಸುತಿತ್ತೊ! ಏನು ದಿಟ್ಟಿಸುತಿತ್ತೊ!
ಹಿಗ್ಗೊಂದು ಮಿಗುತಲಿತ್ತು.
ಒಮ್ಮೊಮ್ಮೆ ಬಂದದ್ದೆ ‘ಅಪ್ಪ ಅಪ್ಪಾ’ ಎಂದು
ತೊಡೆಗಳನ್ನಪ್ಪುತಿತ್ತು;
ಒಮ್ಮೆ ಮುನಿದಂತೆ ದುರುದುರನೆ ನೋಡುತ್ತಿತ್ತು,
ಎಲ್ಲವೂ ಒಪ್ಪುತಿತ್ತು.
ಮತ್ತೆ ಅಳುತಲು ಇತ್ತು, ಹುಚ್ಚುಚ್ಚು ನಗುತ್ತಿತ್ತು,
ಯಾಕೇನೊ ಚೀರುತಿತ್ತು;
ಮತ್ತೇನು ಮುಗುದೇನು? ಏನು ಮಾಡಿದ್ದೆಲ್ಲ
ಚೆಂದವೇ ತೋರುತಿತ್ತು.
* * * *

ಹಿರಿಯನಡ್ಡಾಡುತಿಹ, ಮನದೆಡೆಯಲಾಡುತಿಹ,
ಎದೆ ಹೊಕ್ಕು ನೋಡುತಿಹನು;
ಹಿರಿಯ ತೀರದ ದುಃಖವನ್ನು ತಾ ತಿರುತಿರುಗಿ
ಮನದೊಳಗೆ ತೋಡುತಿಹನು.
ತುದಿಸಿಗದ ತೊಡಕನ್ನು ಬಿಡಿಸಲೆಳಸುವನೊಮ್ಮೆ
ಬಿಡಿಸದೆಯೆ ಬಿಡುತಲಿಹನು;
ಎದೆಯ ಬೀದಿಯ ಬಳಸಿ, ಮನದ ಮಾರ್‍ಗವ ತುಳಿದು,
ಹಳೆ ಹಾದಿ ಹಿಡಿಯುತಿಹನು.
ಮುಳ್ಳಹಾಸಿಗೆ ಮಂಚ, ಹೊದೆಯೆ ಚಿಂತೆಯ ಕಂತೆ,
ಮೇಲೆ ಮಳೆಗರೆವ ಮುಗಿಲು;
ದಳ್ಳುರಿಯನಿಟ್ಟುಸಿರು ಬೀಸುವದು ಒಳಗೆಲ್ಲ,
ಉಸಿರಿಲ್ಲ ಒಮ್ಮೆ ನಗಲು.
* * * *

ಕರ್‍ಮಲೇಪವು ಇಲ್ಲ, ಬಗೆಯ ತಾಪವು ಇಲ್ಲ,
ಅಂದು ಒಂದು ನೀರ ಹೂವು;
ಮರ್‍ಮಭಿನ್ನರು ಮತ್ತೆ ಹೃದಯಭಿನ್ನರು ನಾವು
ಬುಡದೊಳಿಹ ಕೆಸರಠಾವು.
ಆಗಿ ಹುಣ್ಣಿಮೆಯ ಹಗಲು, ಗೌರಿಹುಣ್ಣಿಮೆ ಇರುಳು,
ಹೀಗಿಹುದು ಅದರ ದಿನವು;
ಚಿಗರಿಯಂದದಲಿಹುದು ದಿಂಕಿಡುವ ಅದರ ಮನ
ಕಿರಿಗರಿಯ ಹಾಗೆ ತನವು.
ಇಲ್ಲ ದುಃಖದ ಮಳೆಯು, ಇಲ್ಲ ಭೀತಿಯ ಚಳಿಯು
ಚಿಂತೆ ಸಂತಾಪವಿಲ್ಲ;
ಎಲ್ಲ ಸೊಗಸಿನ ಬೆಳೆಯು, ಎಲ್ಲ ಸೊಬಗಿನ ಕಳೆಯು,
ನಲಿವೊಲವು ಚೆಲವು ಎಲ್ಲ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...