Home / ಕಥೆ / ಕಿರು ಕಥೆ / ಕಲ್ಲು-ಹುಲ್ಲು

ಕಲ್ಲು-ಹುಲ್ಲು

ಒಮ್ಮೆ ಒಂದು ಕಲ್ಲು ಬಂಡೆಯ ಪಕ್ಕದಲ್ಲಿ ಬೆಳೆದ ಹುಲ್ಲುಗರಿಗೆ, ಕಲ್ಲು ಬಂಡೆಯ ಮೇಲೆ ಪ್ರೇಮ ಅಂಕುರಿಸಿತು. ಹುಲ್ಲಿನ ಗರಿ ಗಾಳಿ ಬಂದ ನೆಪದಲ್ಲಿ ಕಲ್ಲು ಬಂಡೆಯ ಎದೆಯನ್ನು ಬಾಗಿತಾಗಿ, ತನ್ನ ಪ್ರೀತಿ ತೋರುತ್ತಿತ್ತು. ಹಸಿರು ಹುಲ್ಲಿನಲ್ಲಿ ಪ್ರೀತಿ ಉಕ್ಕಿ ಒಮ್ಮೊಮ್ಮೆ ನರ್ತನವನ್ನು ಮಾಡಿ ಬಂಡೆಯ ಮನವೊಲಿಸಲು ತೊಡಗುತ್ತಿತ್ತು. ಇದನ್ನು ಗಮನಿಸಿದ ಕಲ್ಲು ಬಂಡೆಗೆ ಏನೂ ಅರ್ಥವಾಗಲಿಲ್ಲ. ಬರಡು ಬಂಡೆಯಲ್ಲಿ ಭಾವ ಸ್ಪಂದನವಿರಲಿಲ್ಲ. ಅದರ ಹೃದಯ ಹೆಪ್ಪುಗಟ್ಟಿ ಬಿಟ್ಟಿತ್ತು. ಆರ್ದ್ರತೆ ಎಂಬುದು ಬಂಡೆಗೆ ಗೊತ್ತಿರಲಿಲ್ಲ. ಹುಲ್ಲಿನ ಮೃದುಲತೆ ಕೂಡ ಎಂದೂ ಅನುಭವಿಸಿರಲಿಲ್ಲ. ಕಲ್ಲು ಬಂಡೆ ಕನಸುಗಳನ್ನೆಲ್ಲಾ ಮೂಟೆ ಕಟ್ಟಿ ಘನೀಭೂತವಾಗಿ ಕೂತಿತ್ತು. ಆದರೆ ಹುಲ್ಲಿಗೆ ಮಾತ್ರ ಬಂಡೆಯ ಮೇಲಿನ ಪ್ರೀತಿ ಹೋಗಲಿಲ್ಲ. ಆಗಾಗ ಗಾಳಿಯಲ್ಲಿ ವಾಲಿ ಬಂಡೆಯನ್ನು ಅಪ್ಪಿ ಮುದ್ದಿಸುತ್ತಿತ್ತು. ತನ್ನ ಎದೆಯ ಮೇಲೆ ಇಬ್ಬನಿ ಬಿದ್ದಾಗ ಅದನ್ನು ಬಂಡೆಯ ಎದೆಯ ಮೇಲಿಟ್ಟು ತನ್ನ ಪ್ರೇಮದ ಕಾಣಿಕೆ ಕೊಡುತ್ತಿತ್ತು.

ಹುಲ್ಲಿನ ಈ ಪ್ರೇಮಾರಾಧನೆ ಬಂಡೆಗೆ ಏನೂ ಅರ್ಥವಾಗಲಿಲ್ಲ. ಇದೇನು ಈ ಹುಲ್ಲಿನ ವಿಚಿತ್ರ ವರ್ತನೆ ಎಂದು ಯೋಚಿಸಿ ಒಂದು ದಿನ ತುಟಿ ತೆರೆದು ಮಾತನಾಡಲಾರಂಭಿಸಿತು.

“ಎಲೆ ಹುಲ್ಲೆ! ನೀನು ಏಕೆ ನನ್ನ ಬಳಿಯೇ ಜೀವಿಸುತ್ತಿರುವೆ?”ಎಂದಿತು.
“ನನಗೆ ನಿನ್ನ ಕಂಡರೆ ಬಲು ಪ್ರೀತಿ”ಎಂದಿತು ಹುಲ್ಲು.
“ಪ್ರೀತಿ” ಹಾಗಂದರೆ ಏನು?” ಎಂದಿತು ಕಲ್ಲು.
“ಬೀಡು ಬಿಟ್ಟಿರುವ ನನ್ನ ಬೇರಿನ ಜೀವರಸವಾದ ಹಸಿರೇ ಪ್ರೀತಿ”
“ಅದು ಸರಿ, ನನ್ನನೇಕೆ ನೆಚ್ಚಿಕೊಂಡಿರುವೆ?” ಎಂದಿತು ಕಲ್ಲು.
“ಕಮಾನಿನಂತೆ ಬಾಗುವ ನನ್ನ ಹೃದಯ ಭಾವಗಳಿಗೆ ನೀನು ಆಧಾರ, ಆಶ್ರಯವಾಗಿರುವೆ. ಅದಕ್ಕೆ ನಿನ್ನ ಕಂಡರೆ ನನಗೆ ಬಲು ಪ್ರೀತಿ” ಎಂದಿತು.
“ನಾನು ಕಲ್ಲು ಬಂಡೆ, ಬಲು ಒರಟು, ಗಟ್ಟಿ, ನೀನು ಹುಲ್ಲು ನವಿರು, ಮತ್ತು ಮೃದು. ನಮ್ಮಿಬ್ಬರ ಸಮಾಗಮ ಸಾಧ್ಯವಿಲ್ಲ.” “ನನ್ನಿಂದ ನಿನ್ನ ಸಾವು ಕೂಡ ಸಾಧ್ಯ. ಆದ್ದರಿಂದ ನನ್ನಿಂದ ನೀನು ದೂರ ಹೋಗಿ ಬಿಡು” ಎಂದಿತು ಕಲ್ಲು ಬಂಡೆ.

“ಹಾಗೆ ಹೇಳಬೇಡ ಪ್ರಿಯಕರ ಕಲ್ಲು ಬಂಡೆ! ನಮ್ಮಲ್ಲಿ ಸಹ ಜೀವನ ಸಾಧ್ಯ. ನನ್ನ ಮೃದುಲತೆಗೆ ನಿನ್ನ ಕಠಿಣತೆಯ ಮೋಹವಿದೆ. ನಿನ್ನ ಕಠಿಣತೆಗೆ ನನ್ನ ಮೃದುಲತೆಯ ಆಶೆ ಇದೆ. ನಿನ್ನ ಪಾದದ ಅಡಿದಾವರೆಯಲಿ ನನ್ನ ಬೆಳೆಯಲು ಬಿಡು, ನಾವು ಜೋಡಿಯಾಗಿ ಇರೋಣ, ಬಾಳೋಣ, ಕಲ್ಲು-ಹುಲ್ಲಿನ ಬಾಳು ವಿಶ್ವ ಕನ್ನಡಿಯಲಿ ಸಮರಸದ ಬಿಂಬವಾಗಲಿ” ಎಂದಿತು.

ಕಲ್ಲು ಬಂಡೆಗೆ ಹೃದಯ ಕರಗಿತು. ಪ್ರೀತಿ ಅಂಕುರಿಸಿತು.
*****

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...