Home / ಕಥೆ / ಕಿರು ಕಥೆ / ಕಲ್ಲು-ಹುಲ್ಲು

ಕಲ್ಲು-ಹುಲ್ಲು

ಒಮ್ಮೆ ಒಂದು ಕಲ್ಲು ಬಂಡೆಯ ಪಕ್ಕದಲ್ಲಿ ಬೆಳೆದ ಹುಲ್ಲುಗರಿಗೆ, ಕಲ್ಲು ಬಂಡೆಯ ಮೇಲೆ ಪ್ರೇಮ ಅಂಕುರಿಸಿತು. ಹುಲ್ಲಿನ ಗರಿ ಗಾಳಿ ಬಂದ ನೆಪದಲ್ಲಿ ಕಲ್ಲು ಬಂಡೆಯ ಎದೆಯನ್ನು ಬಾಗಿತಾಗಿ, ತನ್ನ ಪ್ರೀತಿ ತೋರುತ್ತಿತ್ತು. ಹಸಿರು ಹುಲ್ಲಿನಲ್ಲಿ ಪ್ರೀತಿ ಉಕ್ಕಿ ಒಮ್ಮೊಮ್ಮೆ ನರ್ತನವನ್ನು ಮಾಡಿ ಬಂಡೆಯ ಮನವೊಲಿಸಲು ತೊಡಗುತ್ತಿತ್ತು. ಇದನ್ನು ಗಮನಿಸಿದ ಕಲ್ಲು ಬಂಡೆಗೆ ಏನೂ ಅರ್ಥವಾಗಲಿಲ್ಲ. ಬರಡು ಬಂಡೆಯಲ್ಲಿ ಭಾವ ಸ್ಪಂದನವಿರಲಿಲ್ಲ. ಅದರ ಹೃದಯ ಹೆಪ್ಪುಗಟ್ಟಿ ಬಿಟ್ಟಿತ್ತು. ಆರ್ದ್ರತೆ ಎಂಬುದು ಬಂಡೆಗೆ ಗೊತ್ತಿರಲಿಲ್ಲ. ಹುಲ್ಲಿನ ಮೃದುಲತೆ ಕೂಡ ಎಂದೂ ಅನುಭವಿಸಿರಲಿಲ್ಲ. ಕಲ್ಲು ಬಂಡೆ ಕನಸುಗಳನ್ನೆಲ್ಲಾ ಮೂಟೆ ಕಟ್ಟಿ ಘನೀಭೂತವಾಗಿ ಕೂತಿತ್ತು. ಆದರೆ ಹುಲ್ಲಿಗೆ ಮಾತ್ರ ಬಂಡೆಯ ಮೇಲಿನ ಪ್ರೀತಿ ಹೋಗಲಿಲ್ಲ. ಆಗಾಗ ಗಾಳಿಯಲ್ಲಿ ವಾಲಿ ಬಂಡೆಯನ್ನು ಅಪ್ಪಿ ಮುದ್ದಿಸುತ್ತಿತ್ತು. ತನ್ನ ಎದೆಯ ಮೇಲೆ ಇಬ್ಬನಿ ಬಿದ್ದಾಗ ಅದನ್ನು ಬಂಡೆಯ ಎದೆಯ ಮೇಲಿಟ್ಟು ತನ್ನ ಪ್ರೇಮದ ಕಾಣಿಕೆ ಕೊಡುತ್ತಿತ್ತು.

ಹುಲ್ಲಿನ ಈ ಪ್ರೇಮಾರಾಧನೆ ಬಂಡೆಗೆ ಏನೂ ಅರ್ಥವಾಗಲಿಲ್ಲ. ಇದೇನು ಈ ಹುಲ್ಲಿನ ವಿಚಿತ್ರ ವರ್ತನೆ ಎಂದು ಯೋಚಿಸಿ ಒಂದು ದಿನ ತುಟಿ ತೆರೆದು ಮಾತನಾಡಲಾರಂಭಿಸಿತು.

“ಎಲೆ ಹುಲ್ಲೆ! ನೀನು ಏಕೆ ನನ್ನ ಬಳಿಯೇ ಜೀವಿಸುತ್ತಿರುವೆ?”ಎಂದಿತು.
“ನನಗೆ ನಿನ್ನ ಕಂಡರೆ ಬಲು ಪ್ರೀತಿ”ಎಂದಿತು ಹುಲ್ಲು.
“ಪ್ರೀತಿ” ಹಾಗಂದರೆ ಏನು?” ಎಂದಿತು ಕಲ್ಲು.
“ಬೀಡು ಬಿಟ್ಟಿರುವ ನನ್ನ ಬೇರಿನ ಜೀವರಸವಾದ ಹಸಿರೇ ಪ್ರೀತಿ”
“ಅದು ಸರಿ, ನನ್ನನೇಕೆ ನೆಚ್ಚಿಕೊಂಡಿರುವೆ?” ಎಂದಿತು ಕಲ್ಲು.
“ಕಮಾನಿನಂತೆ ಬಾಗುವ ನನ್ನ ಹೃದಯ ಭಾವಗಳಿಗೆ ನೀನು ಆಧಾರ, ಆಶ್ರಯವಾಗಿರುವೆ. ಅದಕ್ಕೆ ನಿನ್ನ ಕಂಡರೆ ನನಗೆ ಬಲು ಪ್ರೀತಿ” ಎಂದಿತು.
“ನಾನು ಕಲ್ಲು ಬಂಡೆ, ಬಲು ಒರಟು, ಗಟ್ಟಿ, ನೀನು ಹುಲ್ಲು ನವಿರು, ಮತ್ತು ಮೃದು. ನಮ್ಮಿಬ್ಬರ ಸಮಾಗಮ ಸಾಧ್ಯವಿಲ್ಲ.” “ನನ್ನಿಂದ ನಿನ್ನ ಸಾವು ಕೂಡ ಸಾಧ್ಯ. ಆದ್ದರಿಂದ ನನ್ನಿಂದ ನೀನು ದೂರ ಹೋಗಿ ಬಿಡು” ಎಂದಿತು ಕಲ್ಲು ಬಂಡೆ.

“ಹಾಗೆ ಹೇಳಬೇಡ ಪ್ರಿಯಕರ ಕಲ್ಲು ಬಂಡೆ! ನಮ್ಮಲ್ಲಿ ಸಹ ಜೀವನ ಸಾಧ್ಯ. ನನ್ನ ಮೃದುಲತೆಗೆ ನಿನ್ನ ಕಠಿಣತೆಯ ಮೋಹವಿದೆ. ನಿನ್ನ ಕಠಿಣತೆಗೆ ನನ್ನ ಮೃದುಲತೆಯ ಆಶೆ ಇದೆ. ನಿನ್ನ ಪಾದದ ಅಡಿದಾವರೆಯಲಿ ನನ್ನ ಬೆಳೆಯಲು ಬಿಡು, ನಾವು ಜೋಡಿಯಾಗಿ ಇರೋಣ, ಬಾಳೋಣ, ಕಲ್ಲು-ಹುಲ್ಲಿನ ಬಾಳು ವಿಶ್ವ ಕನ್ನಡಿಯಲಿ ಸಮರಸದ ಬಿಂಬವಾಗಲಿ” ಎಂದಿತು.

ಕಲ್ಲು ಬಂಡೆಗೆ ಹೃದಯ ಕರಗಿತು. ಪ್ರೀತಿ ಅಂಕುರಿಸಿತು.
*****

Tagged:

Leave a Reply

Your email address will not be published. Required fields are marked *

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...