Home / ಕಥೆ / ಕಿರು ಕಥೆ / ಕಲ್ಲು-ಹುಲ್ಲು

ಕಲ್ಲು-ಹುಲ್ಲು

ಒಮ್ಮೆ ಒಂದು ಕಲ್ಲು ಬಂಡೆಯ ಪಕ್ಕದಲ್ಲಿ ಬೆಳೆದ ಹುಲ್ಲುಗರಿಗೆ, ಕಲ್ಲು ಬಂಡೆಯ ಮೇಲೆ ಪ್ರೇಮ ಅಂಕುರಿಸಿತು. ಹುಲ್ಲಿನ ಗರಿ ಗಾಳಿ ಬಂದ ನೆಪದಲ್ಲಿ ಕಲ್ಲು ಬಂಡೆಯ ಎದೆಯನ್ನು ಬಾಗಿತಾಗಿ, ತನ್ನ ಪ್ರೀತಿ ತೋರುತ್ತಿತ್ತು. ಹಸಿರು ಹುಲ್ಲಿನಲ್ಲಿ ಪ್ರೀತಿ ಉಕ್ಕಿ ಒಮ್ಮೊಮ್ಮೆ ನರ್ತನವನ್ನು ಮಾಡಿ ಬಂಡೆಯ ಮನವೊಲಿಸಲು ತೊಡಗುತ್ತಿತ್ತು. ಇದನ್ನು ಗಮನಿಸಿದ ಕಲ್ಲು ಬಂಡೆಗೆ ಏನೂ ಅರ್ಥವಾಗಲಿಲ್ಲ. ಬರಡು ಬಂಡೆಯಲ್ಲಿ ಭಾವ ಸ್ಪಂದನವಿರಲಿಲ್ಲ. ಅದರ ಹೃದಯ ಹೆಪ್ಪುಗಟ್ಟಿ ಬಿಟ್ಟಿತ್ತು. ಆರ್ದ್ರತೆ ಎಂಬುದು ಬಂಡೆಗೆ ಗೊತ್ತಿರಲಿಲ್ಲ. ಹುಲ್ಲಿನ ಮೃದುಲತೆ ಕೂಡ ಎಂದೂ ಅನುಭವಿಸಿರಲಿಲ್ಲ. ಕಲ್ಲು ಬಂಡೆ ಕನಸುಗಳನ್ನೆಲ್ಲಾ ಮೂಟೆ ಕಟ್ಟಿ ಘನೀಭೂತವಾಗಿ ಕೂತಿತ್ತು. ಆದರೆ ಹುಲ್ಲಿಗೆ ಮಾತ್ರ ಬಂಡೆಯ ಮೇಲಿನ ಪ್ರೀತಿ ಹೋಗಲಿಲ್ಲ. ಆಗಾಗ ಗಾಳಿಯಲ್ಲಿ ವಾಲಿ ಬಂಡೆಯನ್ನು ಅಪ್ಪಿ ಮುದ್ದಿಸುತ್ತಿತ್ತು. ತನ್ನ ಎದೆಯ ಮೇಲೆ ಇಬ್ಬನಿ ಬಿದ್ದಾಗ ಅದನ್ನು ಬಂಡೆಯ ಎದೆಯ ಮೇಲಿಟ್ಟು ತನ್ನ ಪ್ರೇಮದ ಕಾಣಿಕೆ ಕೊಡುತ್ತಿತ್ತು.

ಹುಲ್ಲಿನ ಈ ಪ್ರೇಮಾರಾಧನೆ ಬಂಡೆಗೆ ಏನೂ ಅರ್ಥವಾಗಲಿಲ್ಲ. ಇದೇನು ಈ ಹುಲ್ಲಿನ ವಿಚಿತ್ರ ವರ್ತನೆ ಎಂದು ಯೋಚಿಸಿ ಒಂದು ದಿನ ತುಟಿ ತೆರೆದು ಮಾತನಾಡಲಾರಂಭಿಸಿತು.

“ಎಲೆ ಹುಲ್ಲೆ! ನೀನು ಏಕೆ ನನ್ನ ಬಳಿಯೇ ಜೀವಿಸುತ್ತಿರುವೆ?”ಎಂದಿತು.
“ನನಗೆ ನಿನ್ನ ಕಂಡರೆ ಬಲು ಪ್ರೀತಿ”ಎಂದಿತು ಹುಲ್ಲು.
“ಪ್ರೀತಿ” ಹಾಗಂದರೆ ಏನು?” ಎಂದಿತು ಕಲ್ಲು.
“ಬೀಡು ಬಿಟ್ಟಿರುವ ನನ್ನ ಬೇರಿನ ಜೀವರಸವಾದ ಹಸಿರೇ ಪ್ರೀತಿ”
“ಅದು ಸರಿ, ನನ್ನನೇಕೆ ನೆಚ್ಚಿಕೊಂಡಿರುವೆ?” ಎಂದಿತು ಕಲ್ಲು.
“ಕಮಾನಿನಂತೆ ಬಾಗುವ ನನ್ನ ಹೃದಯ ಭಾವಗಳಿಗೆ ನೀನು ಆಧಾರ, ಆಶ್ರಯವಾಗಿರುವೆ. ಅದಕ್ಕೆ ನಿನ್ನ ಕಂಡರೆ ನನಗೆ ಬಲು ಪ್ರೀತಿ” ಎಂದಿತು.
“ನಾನು ಕಲ್ಲು ಬಂಡೆ, ಬಲು ಒರಟು, ಗಟ್ಟಿ, ನೀನು ಹುಲ್ಲು ನವಿರು, ಮತ್ತು ಮೃದು. ನಮ್ಮಿಬ್ಬರ ಸಮಾಗಮ ಸಾಧ್ಯವಿಲ್ಲ.” “ನನ್ನಿಂದ ನಿನ್ನ ಸಾವು ಕೂಡ ಸಾಧ್ಯ. ಆದ್ದರಿಂದ ನನ್ನಿಂದ ನೀನು ದೂರ ಹೋಗಿ ಬಿಡು” ಎಂದಿತು ಕಲ್ಲು ಬಂಡೆ.

“ಹಾಗೆ ಹೇಳಬೇಡ ಪ್ರಿಯಕರ ಕಲ್ಲು ಬಂಡೆ! ನಮ್ಮಲ್ಲಿ ಸಹ ಜೀವನ ಸಾಧ್ಯ. ನನ್ನ ಮೃದುಲತೆಗೆ ನಿನ್ನ ಕಠಿಣತೆಯ ಮೋಹವಿದೆ. ನಿನ್ನ ಕಠಿಣತೆಗೆ ನನ್ನ ಮೃದುಲತೆಯ ಆಶೆ ಇದೆ. ನಿನ್ನ ಪಾದದ ಅಡಿದಾವರೆಯಲಿ ನನ್ನ ಬೆಳೆಯಲು ಬಿಡು, ನಾವು ಜೋಡಿಯಾಗಿ ಇರೋಣ, ಬಾಳೋಣ, ಕಲ್ಲು-ಹುಲ್ಲಿನ ಬಾಳು ವಿಶ್ವ ಕನ್ನಡಿಯಲಿ ಸಮರಸದ ಬಿಂಬವಾಗಲಿ” ಎಂದಿತು.

ಕಲ್ಲು ಬಂಡೆಗೆ ಹೃದಯ ಕರಗಿತು. ಪ್ರೀತಿ ಅಂಕುರಿಸಿತು.
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...