Home / ಕವನ / ಅನುವಾದ / ಧೂರ್‍ತ ಒರಟು ಮುದುಕ

ಧೂರ್‍ತ ಒರಟು ಮುದುಕ

ಮೂಲ: ವಿಲಿಯಂ ಬಟ್ಲರ್ ಏಟ್ಸ್

‘ಹೆಣ್ಣುಗಳ ವ್ಯಾಮೋಹ ಇದೆಯೆಂತಲೇ ನನಗೆ
ಮಲೆಗಳಲ್ಲೂ ಇಂಥ ಮೋಹ’
ದೈವ ಕಳಿಸಿದ ಜಾಗದಲ್ಲಿ ಅಲೆಯುವ ಒರಟು
ಮುದುಕ ನುಡಿದನು ಹೀಗೆ ಮನವ.
“ಸಾಯಲಾರೆನೆ ನಾನು ಮನೆಯ ಚಾಪೆಯ ಮೇಲೆ
ಮುಚ್ಚು ಕಣ್ಣನು ನಿನ್ನ ಕೈಯಿಂದಲೇ,
ಆಕಾಶದಲ್ಲಿರುವ ಆ ಮುದುಕನಿಂದ ನಾ
ಇಷ್ಟನ್ನೆ ಕೇಳುವುದು ನಲ್ಲೆ’
– ಬೆಳಗಾಯ್ತು, ಮುಂಬತ್ತಿ ಮುಗಿಯಿತು.

‘ಏನು ಹಿತವೇ ಚಿನ್ನ ನಿನ್ನ ಮಾತುಗಳೆಲ್ಲ
ಉಳಿದಿದ್ದ ಕೊಡದೆ ಇರಬೇಡೇ;
ಹತ್ತ ಮುದುಕನ ರಕ್ತ ಯಾವಾಗ ಆರೀತೊ
ತಿಳಿಯಬಲ್ಲವರಾರು ಹೇಳೆ?
ಭಾರಿ ಪ್ರೀತಿಸುವಂಥ ಯಾವ ಯುವಕಗೂ ಇರದ
ಬೇರೇನೊ ಇದೆ ನನ್ನ ಒಳಗೆ
ಬಹಳವೆಂದರೆ ಆತ ಸೋಕಬಲ್ಲನು, ನಾನೊ
ಮಾತಿನಲೆ ಹೃದಯವನ್ನಿರಿವೆ?
-ಬೆಳಗಾಯ್ತು, ಮುಂಬತ್ತಿ ಮುಗಿಯಿತು.

ಬಗಲಲ್ಲಿ ದಪ್ಪದೊಣ್ಣೆಯ ಊರಿ ನಿಂತಿದ್ದ
ಧೂರ್‍ತ ಮುದುಕನಿಗಾಕೆ ನುಡಿದಳು:
‘ಪ್ರೇಮವನು ಕೊಡುವುದೋ, ಇಲ್ಲ ಹೋಗೆನ್ನುವುದೊ
ನನ್ನದಾಗಿಲ್ಲ ನಾ ಆಳು.
ಮುಗಿಲಮನೆ ಮುದುಕನಿಗೆ, ನಿನಗಿಂತ ಹಿರಿಯನಿಗೆ
ಕೊಟ್ಟು ಬಿಟ್ಟೆನೊ ಎಲ್ಲವನ್ನ
ಅವನ ಜಪಮಣಿ ಹಿಡಿದ ಬೆರಳಿಗಿಲ್ಲವೊ
ಬಿಡುವು ಮುಚ್ಚಲಾರವು ಅವು ಕಣ್ಣ’.
– ಬೆಳಗಾಯ್ತು ಮುಂಬತ್ತಿ ಮುಗಿಯಿತು.

‘ನಿನ್ನ ದಾರಿಯ ಹಿಡಿದು ಹೋಗೆ ಹಾಗೇ ಹೆಣ್ಣೆ
ನನ್ನ ಗುರಿಯೇ ಬೇರೆ ಇದೆಯೆ,
ಕಡಲ ದಂಡೆಯ ಮೇಲೆ ಕತ್ತಲಿನರ್‍ಥ ತಿಳಿದು
ಸುಳಿವ ಹುಡುಗಿಯರ ಗುಂಪಿದೆಯ,
ಮೀನುಗಾರರ ಕೂಡ ಪೋಲಿಮಾತಿನ ಲಲ್ಲೆ
ಬೆಸ್ತ ಚಿಣ್ಣರಿಗಾಗಿ ಕುಣಿತ,
ಕತ್ತಲಿಳಿಯಿತೊ ಕಡಲಮೇಲೆ ಹೆಣ್ಣುಗಳಿಗೆ
ಹಾಸಿಗೆಯ ಅರಳಿಸುವ ತವಕ,’
– ಬೆಳಗಾಯ್ತು ಮುಂಬಡ್ತಿ ಮುಗಿಯಿತು.

‘ಒಡ್ಡು ಮಾತಿನ ಮುದುಕ ನಾನು ಹಗಲಲ್ಲಷ್ಟೆ
ಕತ್ತಲಾಯಿತೊ ಗಟ್ಟಿಯುವಕ,
ಬೆಕ್ಕ ನಗಿಸಲು ಬಲ್ಲೆ, ಗುಟ್ಟ ಕೂಗಿಸಬಲ್ಲೆ
ಜಾಣನುಡಿಯಲಿ ತೆಗೆದು ಚಿಲಕ.
ಮೊಡವೆ ಮೂಡಿದ ಮುಖದ ಎಳೆಯ ನುಡಿಸುವನೇನೆ
ನೆಣದೊಳಗೆ ಹುದುಗಿರುವ ಹಾಡ?
ಬದಿಗೆ ಮಲಗಿದ್ದ ಮಾತ್ರಕ್ಕೆ ದಕ್ಕೀತೇನು
ಕಾಲಪಾತಾಳಗಳ ಗೂಢ?’
– ಬೆಳಗಾಯ್ತು ಮುಂಬತ್ತಿ ಮುಗಿಯಿತು.

‘ಹುಟ್ಟುಹಾಕಲು ಮುಂದೆ ಬಾಗಿರುವ ಅಂಬಿಗನೊ,
ಮಗ್ಗದಲಿ ಬಗ್ಗಿರುವ ನೇಯ್ಗೆಯವನೊ,
ಎದೆಸೆಟಿಸಿ ಕೂತ ಅಶ್ವಾರೋಹಿಯೋ ಅಥವ
ಬಸಿರಿನಲಿ ಮುದುಡಿ ಮಲಗಿರುವ ಶಿಶುವೊ,
ಮೇಲಕೊಯ್ಯುವ ದಾರಿ ಹಿಡಿದವರೆ ಆಗಿರಲಿ
ಕೆಳನೆಲೆಯಲುಳಿದಂಥ ತೃಪ್ತರಿರಲಿ,
ನೋವಿನಲೆ ಬಾಳುವರು ಎಲ್ಲ ಮಾನವರೂ
ನನ್ನಂಥ ಕೆಲವರೇ ಇದ ಬಲ್ಲರು.’
– ಬೆಳಗಾಯ್ತು, ಮುಂಬತ್ತಿ ಮುಗಿಯಿತು.

‘ಬಲ್ಲ ಜನ ಯಾರೂ ಅಲ್ಲಗಳೆಯುವುದಿಲ್ಲ
ಮುಗಿಲಿನೊಳಗಿರುವ ಆ ಮುದುಕ
ಮಿಂಚಿನ ಧಾರೆ ಕಳಿಸಿ ಯಾತನೆಯ ಹರಿಸುವನು
ಎಂಬ ನಂಬಿಕೆಯ ಹಳೆಮಾತ.
ಆದರೂ ನಾ ಮಾತ್ರ ಬಲು ಒರಟು ಮುದುಕನೇ,
ನನಗಿರಲಿ ಎರಡನೆಯ ದಾರಿ,
ಹೆಣ್ಣಿನೆದೆ ಮೇಲೊರಗಿ ಮಲಗುವೆನು ಹಾಯಾಗಿ
ಯಾತನೆಯ ಮರವೆಯಲಿ ಹೂಳಿ.’
– ಬೆಳಗಾಯ್ತು, ಮುಂಬತ್ತಿ ಮುಗಿಯಿತು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...