ಮೂರು ಗುಲಾಬಿ ಪೊದೆಗಳು

ಮೂಲ: ವಿಲಿಯಂ ಬಟ್ಲರ್ ಏಟ್ಸ್

ಕುಲೀನ ಯುವತಿ ನುಡಿದಳು ಪ್ರೇಮಿಗೆ :
‘ತಕ್ಕ ತಿನಿಸನ್ನು ಉಣಿಸದ ಪ್ರೇಮವ
ಯಾರು ನೆಚ್ಚುವರು, ಹೇಗೆ?
ಅದಕ್ಕೆ ಪ್ರೇಮವೆ ಅಳಿಯುವುದಾದರೆ
ಹಾಡುವಿ ಪ್ರೇಮವ ಹೇಗೆ? ಆಗ
ನಾ ಗುರಿಯಾಗುವೆ ನಿಂದೆಗೆ.
ಓ ನನ್ನೊಲವೇ, ಓ ನನ್ನೊಲವೇ,

‘ಬೆಳಕು ಇರದಿರಲಿ ನಿನ್ನ ಕೋಣೆಯಲಿ’
ನುಡಿದಳು ಪ್ರೇಮಿಗೆ ಚೆಲುವೆ,
‘ನಟ್ಟಿರುಳಲ್ಲಿ ನನಗೆ ನುಸುಳಿ ಬರ
ಲಾಗುವ ಹಾಗೆ ಶಯ್ಯೆಗೆ,
ನುಸುಳುತ ನನ್ನನ್ನು ಕಂಡರೆ ನಾನೇ
ಕುಸಿದೇ ಹೋಗುವೆ. ಒಮ್ಮೆಗೇ’
ಓ ನನ್ನೊಲವೇ, ಓ ನನ್ನೊಲವೇ.

‘ಗುಟ್ಟಿನಲ್ಲಿ ಒಲಿದಿರುವೆ ಒಬ್ಬನನು’,
ಯುವತಿ ಹೇಳಿದಳು ದಾಸಿಗೆ.
‘ಕಳೆದುಕೊಂಡೆನೋ ಅವನೊಲವನ್ನ
ಕುಸಿದೇ ಹೋಗುವೆ ಮಣ್ಣಿಗೆ – ಹಾಗೇ
ನೀಗಿಕೊಂಡರೂ ನನ್ನ ಕನ್ನೆತನ
ಕುಸಿದೇ ಹೋಗುವ ಒಮ್ಮೆಗೇ.
ಓ ನನ್ನೊಲವೇ, ಓ ನನ್ನೊಲವೇ.

‘ಮಲಗು ನೀನವನ ಬದಿಯಲ್ಲಿ
ನಾನೇ ಎನ್ನಿಸುವಂತೆ’
ಬೆಳಕೇ ಇಲ್ಲದ ಕಡೆಯಲಿ, ಹೆಣ್ಣೇ
ಎಲ್ಲದೇಹ ಸಮವಂತೆ,
ಬೆತ್ತಲೆಯಾಗುವ ಮೈಗಳಲಿ
ವ್ಯತ್ಯಾಸವೆ ಇರದಂತೆ’.
ಓ ನನ್ನೊಲವೇ, ಓ ನನ್ನೊಲವೇ.

ಯಾವ ನಾಯಿಯೂ ಬೊಗಳಲಿಲ್ಲ ನಡು-
ರಾತ್ರಿ ಎಂಥ ಮೊಳಗು,
‘ಎಂಥ ಒಳ್ಳೆ ಆಲೋಚನೆ, ನಲ್ಲನ
ಮುಖದೊಳೆಂಥ ಬೆಳಗು’;
ಎನ್ನಿಸಿಯೂ ನಿಟ್ಟುಸಿರು, ದಾಸಿ ಇಡಿ
ದಿನ ಆಕಳಿಸುತ್ತಿರಲು.
ಓ ನನ್ನೊಲವೇ, ಓ ನನ್ನೊಲವೇ.

‘ಬೇಡ ಬೇರೊಂದು ಹಾಡಿನ ಹಂಗು’
ಎಂದನು ಆ ಯುವಕ,
‘ನಲ್ಲೆ ಮೊದಲ ಸಲ ಕೂಡಿ ಹಾಡಿದಳು
ಇಂದಿಗಾಯ್ತು ವರುಷ
ಗಂಟೆ ಬಡಿಯಿತೋ ಹೊದಿಕೆಯೊಳೊಬ್ಬನೆ
ಉಳಿಯುವೆ ನಲ್ಲೆಗೆ ಕಾಯುತ’.
ಓ ನನ್ನೊಲವೇ, ಓ ನನ್ನೊಲವೇ.

‘ನಗುವ, ಅಳುವ, ಪವಿತ್ರಗೀತೆ
ವ್ಯಭಿಚಾರೀ ಗೀತೆ’,
ಎಂದರು ಜನ. ಹಿಂದೆಂದೂ ಇಲ್ಲ
ಇಂಥದ ಕೇಳಿದ್ದಿಂದೇ;
ಇಂಥ ಸವಾರಿಯ ಮಾಡಿದ್ದವನೇ
ಯಾರೂ ಮಾಡಿಲ್ಲ ಹಿಂದೆ.
ಓ ನನ್ನೊಲವೇ, ಓ ನನ್ನೊಲವೇ.

ಆದರೆ ಓಡುತ ಕುದುರೆ ಕಾಲನ್ನು
ಇಟ್ಟಿತು ಮೊಲಬಿಲದೊಳಗೆ
ಕೆಳಗೆ ಉರುಳಿ ಸತ್ತನು ಆ ಯುವಕ
ಯುವತಿ ಕಂಡಳದ ತಾನೇ,
ಅವನಾತ್ಮವನೇ ಒಲಿದವಳಲ್ಲವೆ?
ತಾನೂ ಸತ್ತಳು ಒಡನೆ.
ಓ ನನ್ನೊಲವೇ, ಓ ನನ್ನೊಲವೇ.

ದಾಸಿ ಬಾಳಿದಳು ಮುಂದೂ – ಬಂದುವು
ಗೋರಿಗಳವಳ ವಶಕ್ಕೆ,
ನೆಟ್ಟಳು ಎರಡು ಗುಲಾಬಿಯ, ಬೆಳೆದುವು
ದೊಡ್ಡದಾಗಿ ಮೇಲಕ್ಕೆ,
ಒಂದೇ ಮೂಲದ ಎರಡು ಟಿಸಿಲಂತೆ
ಹಾಕಿಕೊಂಡವು ತೆಕ್ಕೆ.
ಓ ನನ್ನೊಲವೇ, ಓ ನನ್ನೊಲವೇ.

ಮುದುಕಿಯಾಗಿ ಕಡೆಯುಸಿರ ಬಿಡುವಾಗ
ಬಂದನು ಪಾದ್ರಿ ಬಳಿಗೆ,
ತೋಡಿಕೊಂಡಳು ಕಥೆಯನ್ನೆಲ್ಲಾ
ಮರುಗಿದ ಪಾದ್ರಿ ಒಳಗೇ,
ಒಳ್ಳೆಯ ಜೀವ ಒಳ್ಳೆಯ ಹೃದಯವ
ಅರಿಯದಿದ್ದೀತು ಹೇಗೆ?
ಓ ನನ್ನೊಲವೇ, ಓ ನನ್ನೊಲವೇ.

ಒಡತಿಯ, ನಲ್ಲನ ಗೋರಿಯ ಬದಿಗೇ
ಅವಳದೂ ಇರುವಂತೆ
ಪಾದ್ರಿ ಮಾಡಿಸಿದ ಗೋರಿಯ, ಮೇಲೆ
ನೆಡಿಸಿದ ಗುಲಾಬಿ ಟೊಂಗೆ,
ಹೂವು ಸುರಿಸುವುವು ಮೂರು ಗಿಡಗಳೂ
ಹೆಣೆದಿವೆ ಒಂದಕ್ಕೊಂದು,
ಯಾವ ಗಿಡದ ಹೂ ಯಾವುದು ತಿಳಿಯದು
ಕೀಳುವ ಜನಕ್ಕೆ ಇಂದೂ.
ಓ ನನ್ನೊಲವೇ, ಓ ನನ್ನೊಲವೇ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಡುತಾವ ನೆನಪುಗಳು – ೧೯

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…