Home / ಕವನ / ಅನುವಾದ / ಮೂರು ಗುಲಾಬಿ ಪೊದೆಗಳು

ಮೂರು ಗುಲಾಬಿ ಪೊದೆಗಳು

ಮೂಲ: ವಿಲಿಯಂ ಬಟ್ಲರ್ ಏಟ್ಸ್

ಕುಲೀನ ಯುವತಿ ನುಡಿದಳು ಪ್ರೇಮಿಗೆ :
‘ತಕ್ಕ ತಿನಿಸನ್ನು ಉಣಿಸದ ಪ್ರೇಮವ
ಯಾರು ನೆಚ್ಚುವರು, ಹೇಗೆ?
ಅದಕ್ಕೆ ಪ್ರೇಮವೆ ಅಳಿಯುವುದಾದರೆ
ಹಾಡುವಿ ಪ್ರೇಮವ ಹೇಗೆ? ಆಗ
ನಾ ಗುರಿಯಾಗುವೆ ನಿಂದೆಗೆ.
ಓ ನನ್ನೊಲವೇ, ಓ ನನ್ನೊಲವೇ,

‘ಬೆಳಕು ಇರದಿರಲಿ ನಿನ್ನ ಕೋಣೆಯಲಿ’
ನುಡಿದಳು ಪ್ರೇಮಿಗೆ ಚೆಲುವೆ,
‘ನಟ್ಟಿರುಳಲ್ಲಿ ನನಗೆ ನುಸುಳಿ ಬರ
ಲಾಗುವ ಹಾಗೆ ಶಯ್ಯೆಗೆ,
ನುಸುಳುತ ನನ್ನನ್ನು ಕಂಡರೆ ನಾನೇ
ಕುಸಿದೇ ಹೋಗುವೆ. ಒಮ್ಮೆಗೇ’
ಓ ನನ್ನೊಲವೇ, ಓ ನನ್ನೊಲವೇ.

‘ಗುಟ್ಟಿನಲ್ಲಿ ಒಲಿದಿರುವೆ ಒಬ್ಬನನು’,
ಯುವತಿ ಹೇಳಿದಳು ದಾಸಿಗೆ.
‘ಕಳೆದುಕೊಂಡೆನೋ ಅವನೊಲವನ್ನ
ಕುಸಿದೇ ಹೋಗುವೆ ಮಣ್ಣಿಗೆ – ಹಾಗೇ
ನೀಗಿಕೊಂಡರೂ ನನ್ನ ಕನ್ನೆತನ
ಕುಸಿದೇ ಹೋಗುವ ಒಮ್ಮೆಗೇ.
ಓ ನನ್ನೊಲವೇ, ಓ ನನ್ನೊಲವೇ.

‘ಮಲಗು ನೀನವನ ಬದಿಯಲ್ಲಿ
ನಾನೇ ಎನ್ನಿಸುವಂತೆ’
ಬೆಳಕೇ ಇಲ್ಲದ ಕಡೆಯಲಿ, ಹೆಣ್ಣೇ
ಎಲ್ಲದೇಹ ಸಮವಂತೆ,
ಬೆತ್ತಲೆಯಾಗುವ ಮೈಗಳಲಿ
ವ್ಯತ್ಯಾಸವೆ ಇರದಂತೆ’.
ಓ ನನ್ನೊಲವೇ, ಓ ನನ್ನೊಲವೇ.

ಯಾವ ನಾಯಿಯೂ ಬೊಗಳಲಿಲ್ಲ ನಡು-
ರಾತ್ರಿ ಎಂಥ ಮೊಳಗು,
‘ಎಂಥ ಒಳ್ಳೆ ಆಲೋಚನೆ, ನಲ್ಲನ
ಮುಖದೊಳೆಂಥ ಬೆಳಗು’;
ಎನ್ನಿಸಿಯೂ ನಿಟ್ಟುಸಿರು, ದಾಸಿ ಇಡಿ
ದಿನ ಆಕಳಿಸುತ್ತಿರಲು.
ಓ ನನ್ನೊಲವೇ, ಓ ನನ್ನೊಲವೇ.

‘ಬೇಡ ಬೇರೊಂದು ಹಾಡಿನ ಹಂಗು’
ಎಂದನು ಆ ಯುವಕ,
‘ನಲ್ಲೆ ಮೊದಲ ಸಲ ಕೂಡಿ ಹಾಡಿದಳು
ಇಂದಿಗಾಯ್ತು ವರುಷ
ಗಂಟೆ ಬಡಿಯಿತೋ ಹೊದಿಕೆಯೊಳೊಬ್ಬನೆ
ಉಳಿಯುವೆ ನಲ್ಲೆಗೆ ಕಾಯುತ’.
ಓ ನನ್ನೊಲವೇ, ಓ ನನ್ನೊಲವೇ.

‘ನಗುವ, ಅಳುವ, ಪವಿತ್ರಗೀತೆ
ವ್ಯಭಿಚಾರೀ ಗೀತೆ’,
ಎಂದರು ಜನ. ಹಿಂದೆಂದೂ ಇಲ್ಲ
ಇಂಥದ ಕೇಳಿದ್ದಿಂದೇ;
ಇಂಥ ಸವಾರಿಯ ಮಾಡಿದ್ದವನೇ
ಯಾರೂ ಮಾಡಿಲ್ಲ ಹಿಂದೆ.
ಓ ನನ್ನೊಲವೇ, ಓ ನನ್ನೊಲವೇ.

ಆದರೆ ಓಡುತ ಕುದುರೆ ಕಾಲನ್ನು
ಇಟ್ಟಿತು ಮೊಲಬಿಲದೊಳಗೆ
ಕೆಳಗೆ ಉರುಳಿ ಸತ್ತನು ಆ ಯುವಕ
ಯುವತಿ ಕಂಡಳದ ತಾನೇ,
ಅವನಾತ್ಮವನೇ ಒಲಿದವಳಲ್ಲವೆ?
ತಾನೂ ಸತ್ತಳು ಒಡನೆ.
ಓ ನನ್ನೊಲವೇ, ಓ ನನ್ನೊಲವೇ.

ದಾಸಿ ಬಾಳಿದಳು ಮುಂದೂ – ಬಂದುವು
ಗೋರಿಗಳವಳ ವಶಕ್ಕೆ,
ನೆಟ್ಟಳು ಎರಡು ಗುಲಾಬಿಯ, ಬೆಳೆದುವು
ದೊಡ್ಡದಾಗಿ ಮೇಲಕ್ಕೆ,
ಒಂದೇ ಮೂಲದ ಎರಡು ಟಿಸಿಲಂತೆ
ಹಾಕಿಕೊಂಡವು ತೆಕ್ಕೆ.
ಓ ನನ್ನೊಲವೇ, ಓ ನನ್ನೊಲವೇ.

ಮುದುಕಿಯಾಗಿ ಕಡೆಯುಸಿರ ಬಿಡುವಾಗ
ಬಂದನು ಪಾದ್ರಿ ಬಳಿಗೆ,
ತೋಡಿಕೊಂಡಳು ಕಥೆಯನ್ನೆಲ್ಲಾ
ಮರುಗಿದ ಪಾದ್ರಿ ಒಳಗೇ,
ಒಳ್ಳೆಯ ಜೀವ ಒಳ್ಳೆಯ ಹೃದಯವ
ಅರಿಯದಿದ್ದೀತು ಹೇಗೆ?
ಓ ನನ್ನೊಲವೇ, ಓ ನನ್ನೊಲವೇ.

ಒಡತಿಯ, ನಲ್ಲನ ಗೋರಿಯ ಬದಿಗೇ
ಅವಳದೂ ಇರುವಂತೆ
ಪಾದ್ರಿ ಮಾಡಿಸಿದ ಗೋರಿಯ, ಮೇಲೆ
ನೆಡಿಸಿದ ಗುಲಾಬಿ ಟೊಂಗೆ,
ಹೂವು ಸುರಿಸುವುವು ಮೂರು ಗಿಡಗಳೂ
ಹೆಣೆದಿವೆ ಒಂದಕ್ಕೊಂದು,
ಯಾವ ಗಿಡದ ಹೂ ಯಾವುದು ತಿಳಿಯದು
ಕೀಳುವ ಜನಕ್ಕೆ ಇಂದೂ.
ಓ ನನ್ನೊಲವೇ, ಓ ನನ್ನೊಲವೇ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...