Home / ಕವನ / ಅನುವಾದ / ಮೂರು ಗುಲಾಬಿ ಪೊದೆಗಳು

ಮೂರು ಗುಲಾಬಿ ಪೊದೆಗಳು

ಮೂಲ: ವಿಲಿಯಂ ಬಟ್ಲರ್ ಏಟ್ಸ್

ಕುಲೀನ ಯುವತಿ ನುಡಿದಳು ಪ್ರೇಮಿಗೆ :
‘ತಕ್ಕ ತಿನಿಸನ್ನು ಉಣಿಸದ ಪ್ರೇಮವ
ಯಾರು ನೆಚ್ಚುವರು, ಹೇಗೆ?
ಅದಕ್ಕೆ ಪ್ರೇಮವೆ ಅಳಿಯುವುದಾದರೆ
ಹಾಡುವಿ ಪ್ರೇಮವ ಹೇಗೆ? ಆಗ
ನಾ ಗುರಿಯಾಗುವೆ ನಿಂದೆಗೆ.
ಓ ನನ್ನೊಲವೇ, ಓ ನನ್ನೊಲವೇ,

‘ಬೆಳಕು ಇರದಿರಲಿ ನಿನ್ನ ಕೋಣೆಯಲಿ’
ನುಡಿದಳು ಪ್ರೇಮಿಗೆ ಚೆಲುವೆ,
‘ನಟ್ಟಿರುಳಲ್ಲಿ ನನಗೆ ನುಸುಳಿ ಬರ
ಲಾಗುವ ಹಾಗೆ ಶಯ್ಯೆಗೆ,
ನುಸುಳುತ ನನ್ನನ್ನು ಕಂಡರೆ ನಾನೇ
ಕುಸಿದೇ ಹೋಗುವೆ. ಒಮ್ಮೆಗೇ’
ಓ ನನ್ನೊಲವೇ, ಓ ನನ್ನೊಲವೇ.

‘ಗುಟ್ಟಿನಲ್ಲಿ ಒಲಿದಿರುವೆ ಒಬ್ಬನನು’,
ಯುವತಿ ಹೇಳಿದಳು ದಾಸಿಗೆ.
‘ಕಳೆದುಕೊಂಡೆನೋ ಅವನೊಲವನ್ನ
ಕುಸಿದೇ ಹೋಗುವೆ ಮಣ್ಣಿಗೆ – ಹಾಗೇ
ನೀಗಿಕೊಂಡರೂ ನನ್ನ ಕನ್ನೆತನ
ಕುಸಿದೇ ಹೋಗುವ ಒಮ್ಮೆಗೇ.
ಓ ನನ್ನೊಲವೇ, ಓ ನನ್ನೊಲವೇ.

‘ಮಲಗು ನೀನವನ ಬದಿಯಲ್ಲಿ
ನಾನೇ ಎನ್ನಿಸುವಂತೆ’
ಬೆಳಕೇ ಇಲ್ಲದ ಕಡೆಯಲಿ, ಹೆಣ್ಣೇ
ಎಲ್ಲದೇಹ ಸಮವಂತೆ,
ಬೆತ್ತಲೆಯಾಗುವ ಮೈಗಳಲಿ
ವ್ಯತ್ಯಾಸವೆ ಇರದಂತೆ’.
ಓ ನನ್ನೊಲವೇ, ಓ ನನ್ನೊಲವೇ.

ಯಾವ ನಾಯಿಯೂ ಬೊಗಳಲಿಲ್ಲ ನಡು-
ರಾತ್ರಿ ಎಂಥ ಮೊಳಗು,
‘ಎಂಥ ಒಳ್ಳೆ ಆಲೋಚನೆ, ನಲ್ಲನ
ಮುಖದೊಳೆಂಥ ಬೆಳಗು’;
ಎನ್ನಿಸಿಯೂ ನಿಟ್ಟುಸಿರು, ದಾಸಿ ಇಡಿ
ದಿನ ಆಕಳಿಸುತ್ತಿರಲು.
ಓ ನನ್ನೊಲವೇ, ಓ ನನ್ನೊಲವೇ.

‘ಬೇಡ ಬೇರೊಂದು ಹಾಡಿನ ಹಂಗು’
ಎಂದನು ಆ ಯುವಕ,
‘ನಲ್ಲೆ ಮೊದಲ ಸಲ ಕೂಡಿ ಹಾಡಿದಳು
ಇಂದಿಗಾಯ್ತು ವರುಷ
ಗಂಟೆ ಬಡಿಯಿತೋ ಹೊದಿಕೆಯೊಳೊಬ್ಬನೆ
ಉಳಿಯುವೆ ನಲ್ಲೆಗೆ ಕಾಯುತ’.
ಓ ನನ್ನೊಲವೇ, ಓ ನನ್ನೊಲವೇ.

‘ನಗುವ, ಅಳುವ, ಪವಿತ್ರಗೀತೆ
ವ್ಯಭಿಚಾರೀ ಗೀತೆ’,
ಎಂದರು ಜನ. ಹಿಂದೆಂದೂ ಇಲ್ಲ
ಇಂಥದ ಕೇಳಿದ್ದಿಂದೇ;
ಇಂಥ ಸವಾರಿಯ ಮಾಡಿದ್ದವನೇ
ಯಾರೂ ಮಾಡಿಲ್ಲ ಹಿಂದೆ.
ಓ ನನ್ನೊಲವೇ, ಓ ನನ್ನೊಲವೇ.

ಆದರೆ ಓಡುತ ಕುದುರೆ ಕಾಲನ್ನು
ಇಟ್ಟಿತು ಮೊಲಬಿಲದೊಳಗೆ
ಕೆಳಗೆ ಉರುಳಿ ಸತ್ತನು ಆ ಯುವಕ
ಯುವತಿ ಕಂಡಳದ ತಾನೇ,
ಅವನಾತ್ಮವನೇ ಒಲಿದವಳಲ್ಲವೆ?
ತಾನೂ ಸತ್ತಳು ಒಡನೆ.
ಓ ನನ್ನೊಲವೇ, ಓ ನನ್ನೊಲವೇ.

ದಾಸಿ ಬಾಳಿದಳು ಮುಂದೂ – ಬಂದುವು
ಗೋರಿಗಳವಳ ವಶಕ್ಕೆ,
ನೆಟ್ಟಳು ಎರಡು ಗುಲಾಬಿಯ, ಬೆಳೆದುವು
ದೊಡ್ಡದಾಗಿ ಮೇಲಕ್ಕೆ,
ಒಂದೇ ಮೂಲದ ಎರಡು ಟಿಸಿಲಂತೆ
ಹಾಕಿಕೊಂಡವು ತೆಕ್ಕೆ.
ಓ ನನ್ನೊಲವೇ, ಓ ನನ್ನೊಲವೇ.

ಮುದುಕಿಯಾಗಿ ಕಡೆಯುಸಿರ ಬಿಡುವಾಗ
ಬಂದನು ಪಾದ್ರಿ ಬಳಿಗೆ,
ತೋಡಿಕೊಂಡಳು ಕಥೆಯನ್ನೆಲ್ಲಾ
ಮರುಗಿದ ಪಾದ್ರಿ ಒಳಗೇ,
ಒಳ್ಳೆಯ ಜೀವ ಒಳ್ಳೆಯ ಹೃದಯವ
ಅರಿಯದಿದ್ದೀತು ಹೇಗೆ?
ಓ ನನ್ನೊಲವೇ, ಓ ನನ್ನೊಲವೇ.

ಒಡತಿಯ, ನಲ್ಲನ ಗೋರಿಯ ಬದಿಗೇ
ಅವಳದೂ ಇರುವಂತೆ
ಪಾದ್ರಿ ಮಾಡಿಸಿದ ಗೋರಿಯ, ಮೇಲೆ
ನೆಡಿಸಿದ ಗುಲಾಬಿ ಟೊಂಗೆ,
ಹೂವು ಸುರಿಸುವುವು ಮೂರು ಗಿಡಗಳೂ
ಹೆಣೆದಿವೆ ಒಂದಕ್ಕೊಂದು,
ಯಾವ ಗಿಡದ ಹೂ ಯಾವುದು ತಿಳಿಯದು
ಕೀಳುವ ಜನಕ್ಕೆ ಇಂದೂ.
ಓ ನನ್ನೊಲವೇ, ಓ ನನ್ನೊಲವೇ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...