Home / ಕವನ / ಅನುವಾದ / ಬೈಜಾಂಟಿಯಮ್

ಬೈಜಾಂಟಿಯಮ್

ಮೂಲ: ವಿಲಿಯಂ ಬಟ್ಲರ್ ಏಟ್ಸ್

ಸರಿಯುವ ಹಿಂದೆ, ಹಗಲಿನ ಅಶುದ್ಧ ಪ್ರತಿಮೆಗಳು;
ನಿದ್ರಿಸಿದ್ದಾರೆ ಚಕ್ರವರ್‍ತಿಯ ಮತ್ತ ಸೈನಿಕರು;
ಇರುಳ ದನಿಯನುರಣನ ಮೆಲ್ಲಮೆಲ್ಲಗೆ ಅಳಿದು
ದೊಡ್ಡ ಚರ್‍ಚಿನ ಗಂಟೆ ಬಡಿದು, ಗಾಳಿಯಲೀಗ
ರಾತ್ರಿಂಚರರ ಹಾಡು. ಚಿಕ್ಕಯೋ ಚಂದ್ರನೋ
ಹಚ್ಚಿಟ್ಟ ಧವಳಗುಮ್ಮಟ ತಿರಸ್ಕರಿಸುತಿದೆ ಮರ್‍ತ್ಯನ ಸಮಸ್ತವನ್ನೂ,
ಮರ್‍ತ್ಯ ಬಾಳಿನ ಎಲ್ಲ ಸಂಕೀರ್‍ಣತೆಗಳನ್ನು
ಮರ್‍ತ್ಯಧಮನಿಗಳ ರೊಚ್ಚೆ ರೋಷಗಳನ್ನು

ತುಯ್ಯುತಿದೆ ಕಣ್ಣ ಮುಂದೊಂದು ಪ್ರತಿಮೆ, ಮನುಷ್ಯನೋ ನೆರಳೋ,
ನೆರಳೆನ್ನುವುದೆ ಸರಿ, ನೆರಳಿಗಿಂತಲು ಪ್ರತಿಮೆ ಎಂದರಿನ್ನೂ ಸರಿ;
ಮಮ್ಮಿವಸ್ತ್ರದಲಿ ಹುಗಿದಿಟ್ಟ ಅಧೋಲೋಕದ ಆತ್ಮ
ಸುತ್ತಬೇಕಾದ ಪಥವ ಬಿಚ್ಚಬಹುದು;
ಉಸಿರಿರದ ತೇವವಿಲ್ಲದ ಬಾಯಿಯೊಂದು
ಉಸಿರು ಬಿಗಿಹಿಡಿದ ಬಾಯಿಗಳ ತನ್ನಲ್ಲಿಗೆ ಕರೆಸಬಹುದು;
ಅತಿಮಾನುಷಕ್ಕೆ ಉಘೇ ಎನ್ನುವವ ನಾನು;
ಬಾಳಿನಲ್ಲಿನ ಸಾವು, ಸಾವಿನಲ್ಲಿನ ಬಾಳು ಎನ್ನುವೆ ಅದನ್ನು

ಇದು ಪವಾಡವೆ, ಹಕ್ಕಿಯೆ, ಹೊನ್ನಿನಲಿ ಕೊರೆದ ಕುಶಲ ಕೈಕಸುಬೆ?
ಹಕ್ಕಿಗಿಂತ, ಹಸ್ತಕೌಶಲಕ್ಕಿಂತ ಇದು ದಿಟ ಪವಾಡವೆ,
ನಕ್ಷತ್ರದೀಪ್ತ ಚಿನ್ನದ ಕೊಂಬೆಮೇಲೆ ಇದು ನೆಟ್ಟು ನಿಲಿಸಿದ್ದು
ಅಧೋಲೋಕದ ಹುಂಜಗಳ ಹಾಗೆ ಕೊರಳೆತ್ತಿ ಕೂಗಬಲ್ಲದ್ದು.
ಚಂದ್ರಕಾಂತಿಯ ತಿವಿತಕುದ್ದೀಪ್ತವಾಗಿ ಇದು ಮೂದಲಿಸೀತು ಕೂಗಿ
ನಿಜದ ಹಕ್ಕಿಗಳನ್ನು ಹೂವಿನೆಸಳುಗಳನ್ನು
ರಕ್ತದ್ದೊ ರೊಚ್ಚೆಯದೊ ಎಲ್ಲ ಗೋಜಲುಗಳನ್ನು
ಪರಿವರ್‍ತನೆಯೆ ಇರದ ಲೋಹವೈಭವದಲ್ಲಿ ಬೀಗಿ.

ಚಕ್ರವರ್‍ತಿಯ ಮಹಲ ನೃತ್ಯದಂಗಣದಲ್ಲಿ
ಅರಣಿ ಉದ್ದೀಪಿಸದ, ಉಕ್ಕು ಉರಿಹೊತ್ತಿಸದ, ಬಿರುಗಾಳಿ ಬಾಧಿಸದ,
ಜ್ವಾಲೆಯಿಂದಲೆ ಎದ್ದ ಜ್ವಾಲೆ ಜಿಗಿದಾಡುವುವು,
ಅಲ್ಲಿ ಬರುವುವು ರಕ್ತಸಂಜನಿತ ಜೀವಗಳು,
ಕೆರಳು ಮೊಳೆಸಿದ ತೊಡಕುಗಳನ್ನೆಲ್ಲ ನೀಗುವುವು,
ಲಯವಾಗಿ ನೃತ್ಯದಲಿ
ಸಮಾಧಿಯ ಮಧುರ ನೋವಿನಲಿ
ವಸ್ತ್ರದಂಚನ್ನು ಸಹ ಸುಡಲಾರದಂಥ ಜ್ವಾಲೆಯ ವೇದನೆಯಲ್ಲಿ

ಕೆಸರು ನೆತ್ತರ ಮಧ್ಯೆ ಡಾಲ್ಫಿನಿನ ಬೆನ್ನೇರಿ ಜೀವಗಳ ಸಾಲು,
ಸಾಲುಜೀವದ ಧಾರೆಯನ್ನು ಅಲ್ಲಲ್ಲೇ ಛೇದಿಸುವ ಕುಲುಮೆಗಳು,
ಚಕ್ರವರ್‍ತಿಯ ಗೃಹದ ಹೊನ್ನ ಕುಲುಮೆಗಳು!
ಒಡೆಯುತಿವೆ ಕೆರಳು ಮೂಡಿಸಿದ ಗೋಜಲುಗಳನ್ನು
ನೃತ್ಯದಂಗಣದ ಅಮೃತಶಿಲೆಯ ಹಾಸುಗಳು;
ಆ ಪ್ರತಿಮೆಗಳು ಅವುಗಳಿಂದ ಒಡಮೂಡುವ
ಬೇರೆ ಹೊಸ ಪ್ರತಿಮೆಗಳು,
ಆ ಡಾಲ್ಫಿನನ್ನು ಸೀಳಿರುವ, ಆ ಗಂಟೆದನಿ ಪೀಡಿಸುವ ಕಡಲುಗಳು.
*****
(೩೩) ಡಾಲ್ಫಿನ್ನಿನ ಬೆನ್ನೇರಿ: ಸತ್ತವರ ಜೀವಗಳು ಡಾಲ್ಫಿನ್ನಿನ ಬೆನ್ನು ಹತ್ತಿ ಪರಲೋಕಕ್ಕೆ ಬರುತ್ತವೆ ಎಂಬ ನಂಬಿಕೆ.

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...