Home / ಕವನ / ಕವಿತೆ / ಈ ಜನುಮವೆ ಮುಗಿವ ಮುನ್ನ

ಈ ಜನುಮವೆ ಮುಗಿವ ಮುನ್ನ

ಈ ಜನುಮವೆ ಮುಗಿವ ಮುನ್ನ
ಕಾಣೆನೊ ಕಾಣುವೆನೊ ನಿನ್ನ
ನರಿಯದೊಡನಭಿನ್ನಮೆನ್ನ
ಮನದ ತಿತಿಕ್ಷೆ
ಇಂದಲ್ಲಡೆ ಮುಂದೆ ನೆರೆಯ
ದಿರದಿಲ್ಲಿಯೆ ಬಲ್ಲೆನೆರೆಯ-
ಸಲದೆ ತಾಯ ಬಸಿರ ಮರೆಯ
ಮಗುವ ದಿದೃಕ್ಷೆ?

ನಿನ್ನೊಳೊಗೆದ ನನ್ನೊಳಿಂತು
ನಿನ್ನ ಕಾಂಬ ಬಯಕೆ ಬಂತು,
ಕಡಲಾಳದ ತೆರೆಯೊಳೆಂತು
ಕಡಲ ಕಾಣಿಕೆ;

ನನಗೀ ಜನುಮದಿ ಪ್ರಸನ್ನ
ನಹುದು ಕಣಾ ಹೊಣೆಯೆ ನಿನ್ನ,
ಕಡಲ ಹೊಣೆಯದೆಂತು ತನ್ನ
ತೆರೆಯ ಪೂಣಿಕೆ.

ನಾನಿದೊ ಬರೆ ಬಾಷ್ಪದಂಧು,
ನೀನೊಡೆಯಾ ದಯಾಸಿಂಧು-
ನಿನ್ನಿಂದ ಸಮೀಪಬಂಧು
ವಾರೊಳರೆನ್ನ?
ಇಂತೆನೆ ಮೊಗಮರಸಿ ಬೆಂಗೆ
ಬಂದಡೆ ಮೊಗ ಮರಸೆ ಹಂಗೆ?
ಎನ್ನೆಗಮಿಂತೆನ್ನ ಕಂಗೆ
ಮಾಚುವೆ ನಿನ್ನ?

ಜನನದಿ ಮರಣಾಂತಮಿಲ್ಲಿ
ಬಾಳ್ವೆ ನಿನ್ನನರಸುವಲ್ಲಿ,
ನೋಡದಿಲ್ಲಿ ಕೂಡಲಲ್ಲಿ
ಬಲ್ಲುದೆ ನಿನ್ನ?
ಮರಳಿ ತನ್ನ ಹೊರಟ ರೇವ
ನಯ್ದೆ ಸುತ್ತಿ ಬರುವ ನಾವ
ಮಿಳಿಸಿತೆ ಹಾಯದರ ಸೋವ
ಕಾಣದ ಮುನ್ನ?

ಉದಯಾಸ್ತಂ ಬಡೆವ ಖರ್ವ
ಗತಿಯಂತಿನನೊಡನೆ ಪರ್ವ
ವಡೆವ ಗತಿಯುಮೆಂತು ಶರ್ವ
ರೀಶಗೆ ದ್ವಿಧಾ

ಜೀವನದಿಂದಂತು ಭಿನ್ನ
ಪಥಮೆನಗಿಲ್ಲಿರಲಖಿನ್ನ
ಮದಂ ನಡೆವಗೆಂತು ನಿನ್ನ
ದರ್‍ಶನಂ ಮುಧಾ?

ಬಾಳ್ವೆಯ ನಿಡುಮರಳಿನಲ್ಲಿ
ಸುಖದಿಂ ದಣಿದೊಣಗಿದಲ್ಲಿ
ನಡುದೀವಿಗಳಳಲೊಳಲ್ಲಿ
ಕಾವನಾವನಿಂ
ಕಂಬನಿಯಾತಿಥ್ಯ ದೊರೆತೆ
ನವನ ಮುಂದುವರಿಯೆ ಮರೆತೆ-
ನಿನ್ನಿಂದವನಕಟ ಪೆರತೆ?
ಪೇಳ ದೇವ ನೀಂ!

ನಿನ್ನನಿಲ್ಲಿ ನಮಗೆ ತೋರ
ಲಲ್ಲಡಳಲು ಬರಿದೆ ಬಾರ;
ಕಂಡ ನಿನ್ನ ನೋಡಲಾರ
ದೆನ್ನ ಕಣ್ಣಿಗೆ
ಬಲ್ಲೆನಿಲ್ಲೆ ಕಾಣಬರುವೆ-
ಎಂದೊ ಎಂತೊ ನೀನೆ ಅರಿವೆ,
ಬಗೆಗೆ ಕಾವ ಕವಿಯೊಲಿರುವೆ
ನಿಂತು ತಣ್ಣಗೆ.

ಬಲ್ಲೆನೆಂತು ಬಾಳ್ವೆ ಸಂದು
ನಿನ್ನೊಳೆ ಮೆಯ್ಗರೆವೆನೆಂದು,
ಬಲ್ಲೆನಂತು ಬಾಳುವಂದು
ಕಾಣುವೆ ನಿನ್ನ,
ರವಿಯಲಿ ಮೆಯ್ಗರೆವ ಮುಂತು
ಹುಣ್ಣಿಮೆಯಮೃತಾಂಶು ನಿಂತು
ಮುಖಾಮುಖಿಯೆ ಕಾಣುವಂತು
ಭಾಸ್ಕರನನ್ನ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...