Home / ಕವನ / ಕವಿತೆ / ಇನ್ನು ನೀನೆನ್ನವನು

ಇನ್ನು ನೀನೆನ್ನವನು

ಇನ್ನು ನೀನೆನ್ನವನು
ನಾನಿನ್ನು ನಿನ್ನವನು
ಇಂದಿನಿಂದೆ,
ಇಂದಿನಿಂದ ಮುಂದೆ.

ನಿನ್ನ ನೆನವುದೆ ಚನ್ನ,
ನಿನ್ನ ಕನವುದೆ ನನ್ನ
ದಿನದ ಬಾಳು,
ನನ್ನ ಮನದ ಕೂಳು.

ಮಳೆಯೆ ಬೇಸಗೆಯಾಸೆ
ಯಂತೆ ನನ್ನ ಪಿಪಾಸೆ
ಯೆದೆಯ ನೀನೆ
ತಣಿಪ ಸೊದೆಯ ಸೋನೆ.

ಮುಚ್ಚುಕಿಟಿಕಿಯ ಮುಂತೆ
ಕಾವ ತಂಬೆಲರಂತೆ
ನನ್ನ ಕಾವೆ
ಮನದಿ ನಿನ್ನ ತೀವೆ.

ತನ್ನ ದೃಷ್ಟಿಯ ಕಾಣ
ದಂಬಕದೊಲೇಂ ಜಾಣ
ನೆನ್ನ ಬಳಿಯೆ
ಸುಳಿವ ನಿನ್ನ ತಿಳಿಯೆ?

ಒಳಮಿಂಚು ಹೊರಮಿರುಗು
ವರಮಂಬುದಂ ತಿರುಗು
ವಂತೆ ನಿನ್ನ
ನರಿಯದಾಂತೆ ಬನ್ನ

ಜೇನನಿಳಿಸದ ಮುನ್ನ
ಜ್ಯೋತಿ ಮಯಣದೊಳೆನ್ನ?
ಮೋಹವಿಳಿಸು
ನಿನ್ನ ನೇಹ ಬೆಳಸು.

ನಿನ್ನ ಗುರುತೆದೆಗಿಲ್ಲ
ದೆಡನಾಣ್ಯವಿದು ಸಲ್ಲ
ದೊತ್ತು ನಿನ್ನ
ಅಚ್ಚನೆತ್ತು ನನ್ನ.

ನುಡಿಗೆ ಬಾರದ ಬಾಸೆ
ಯಿಂದ ಬೇಡುವುದಾಸೆ
ನಿನ್ನ ನೋಡೆ,
ನಿನಗೆ ನನ್ನ ನೀಡೆ.

ರವಿಯ ತೋರಿಸೆ ರವಿಯೊ?
ಮಿಣುಕು ಬತ್ತಿಯ ಛವಿಯೊ?
ನೋಡಲೆನ್ನ
ಮನಕೆ ಮೂಡು ಮುನ್ನ.

ಹಗಲೊಡನೆ ಮಸೆವಂತೆ
ಇರುಳೆ ಹಗಲಿಸುವಂತೆ,
ನಿನ್ನ ಮಲೆವೆ
ನಾದಡೆನ್ನ ಕಲೆವೆ.

ತಂದೆ ಗದ್ದಿಸದೆನ್ನ,
ತಾಯೆ ಮುದ್ದಿಸುತೆನ್ನ
ಕೇಡ ಮರೆಯ,
ನನಗೆ ನೀಡ ಮರೆಯ.

ನಿನ್ನನಲ್ಲದೆ ಸಲ್ಲ
ದೇನ ನಿನ್ನೊಡನೆಲ್ಲ
ಬೇಡಲಿಲ್ಲ!
ನಿನ್ನ ಕಾಡಲಿಲ್ಲ!

ಇಲ್ಲ ವೆನದದನೆಲ್ಲ
ನನಗೊದವಿಸಿದೆಯಲ್ಲ!
ಎರೆದೆನೆಂತು
ದೂರವರಿದೆನಂತು!

ಇನ್ಯಾವುದಂ ಬೇಡ
ಲೊಲ್ಲೆ; ನನಗೇಂ ಬೇಡ-
ಬೇಡಲಿಂತು
ನಿನ್ನ ಕೂಡಲೆಂತು?

ಏನೆನಗೆ ಬೇಕಿಲ್ಲ,
ನೀನೆನಗೆ ಸಾಕಲ್ಲ ?
ನೀನೆ ಬೇಕು
ನನಗೆ ನೀನೆ ಸಾಕು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...