Home / ಕವನ / ಕವಿತೆ / ಇನ್ನು ನೀನೆನ್ನವನು

ಇನ್ನು ನೀನೆನ್ನವನು

ಇನ್ನು ನೀನೆನ್ನವನು
ನಾನಿನ್ನು ನಿನ್ನವನು
ಇಂದಿನಿಂದೆ,
ಇಂದಿನಿಂದ ಮುಂದೆ.

ನಿನ್ನ ನೆನವುದೆ ಚನ್ನ,
ನಿನ್ನ ಕನವುದೆ ನನ್ನ
ದಿನದ ಬಾಳು,
ನನ್ನ ಮನದ ಕೂಳು.

ಮಳೆಯೆ ಬೇಸಗೆಯಾಸೆ
ಯಂತೆ ನನ್ನ ಪಿಪಾಸೆ
ಯೆದೆಯ ನೀನೆ
ತಣಿಪ ಸೊದೆಯ ಸೋನೆ.

ಮುಚ್ಚುಕಿಟಿಕಿಯ ಮುಂತೆ
ಕಾವ ತಂಬೆಲರಂತೆ
ನನ್ನ ಕಾವೆ
ಮನದಿ ನಿನ್ನ ತೀವೆ.

ತನ್ನ ದೃಷ್ಟಿಯ ಕಾಣ
ದಂಬಕದೊಲೇಂ ಜಾಣ
ನೆನ್ನ ಬಳಿಯೆ
ಸುಳಿವ ನಿನ್ನ ತಿಳಿಯೆ?

ಒಳಮಿಂಚು ಹೊರಮಿರುಗು
ವರಮಂಬುದಂ ತಿರುಗು
ವಂತೆ ನಿನ್ನ
ನರಿಯದಾಂತೆ ಬನ್ನ

ಜೇನನಿಳಿಸದ ಮುನ್ನ
ಜ್ಯೋತಿ ಮಯಣದೊಳೆನ್ನ?
ಮೋಹವಿಳಿಸು
ನಿನ್ನ ನೇಹ ಬೆಳಸು.

ನಿನ್ನ ಗುರುತೆದೆಗಿಲ್ಲ
ದೆಡನಾಣ್ಯವಿದು ಸಲ್ಲ
ದೊತ್ತು ನಿನ್ನ
ಅಚ್ಚನೆತ್ತು ನನ್ನ.

ನುಡಿಗೆ ಬಾರದ ಬಾಸೆ
ಯಿಂದ ಬೇಡುವುದಾಸೆ
ನಿನ್ನ ನೋಡೆ,
ನಿನಗೆ ನನ್ನ ನೀಡೆ.

ರವಿಯ ತೋರಿಸೆ ರವಿಯೊ?
ಮಿಣುಕು ಬತ್ತಿಯ ಛವಿಯೊ?
ನೋಡಲೆನ್ನ
ಮನಕೆ ಮೂಡು ಮುನ್ನ.

ಹಗಲೊಡನೆ ಮಸೆವಂತೆ
ಇರುಳೆ ಹಗಲಿಸುವಂತೆ,
ನಿನ್ನ ಮಲೆವೆ
ನಾದಡೆನ್ನ ಕಲೆವೆ.

ತಂದೆ ಗದ್ದಿಸದೆನ್ನ,
ತಾಯೆ ಮುದ್ದಿಸುತೆನ್ನ
ಕೇಡ ಮರೆಯ,
ನನಗೆ ನೀಡ ಮರೆಯ.

ನಿನ್ನನಲ್ಲದೆ ಸಲ್ಲ
ದೇನ ನಿನ್ನೊಡನೆಲ್ಲ
ಬೇಡಲಿಲ್ಲ!
ನಿನ್ನ ಕಾಡಲಿಲ್ಲ!

ಇಲ್ಲ ವೆನದದನೆಲ್ಲ
ನನಗೊದವಿಸಿದೆಯಲ್ಲ!
ಎರೆದೆನೆಂತು
ದೂರವರಿದೆನಂತು!

ಇನ್ಯಾವುದಂ ಬೇಡ
ಲೊಲ್ಲೆ; ನನಗೇಂ ಬೇಡ-
ಬೇಡಲಿಂತು
ನಿನ್ನ ಕೂಡಲೆಂತು?

ಏನೆನಗೆ ಬೇಕಿಲ್ಲ,
ನೀನೆನಗೆ ಸಾಕಲ್ಲ ?
ನೀನೆ ಬೇಕು
ನನಗೆ ನೀನೆ ಸಾಕು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...