Home / ಕವನ / ಕವಿತೆ / ತೌಳವ ಮಾತೆ

ತೌಳವ ಮಾತೆ

ರಾಗ ಭೈರವೀ-ತ್ರಿತಾಲ
(‘ಪತಿತೋದ್ಧಾರಿಣಿ ಗಂಗೇ’ ಎಂಬ ಬಂಗಾಳೀ ಹಾಡಿನಂತೆ)

ಜಯ ಜಯ ತೌಳವ ತಾಯ ||ಪಲ್ಲ||
ಮಣಿವೆ ತಂದೆತಾಯಂದಿರ ತಾಯೇ,
ಭುವನದಿ ತ್ರಿದಿವಚ್ಛಾಯೇ ||ಅನು||
ಭಾರ್ಗವನಂದು ಬಿಸುಡೆ ಕೊಡಲಿಯ ನೀ ಕಡಲೊಡೆದೆಡೆಯಿಂ ಮೂಡಿ,

ಭಾರತಮಾತೆ ತೊಡೆಯೊಳೊಡಗೂಡಿಸೆ, ಸಹ್ಯವೀಣೆಯಂ ತೀಡಿ-
ದೆಸೆದೆಸೆ ರವಿಶಶಿ ಕಿರಣದ ಮಳೆಕುಳಿರಿನ ಮಿಸುಸೇಸೆಯ ಸೂಸೆ-
ನವನವ ರಿತುಗಾನವನವತರಿಸುವೆ, ಗಗನವನಧಿಯೋಲೈಸೆ ||೧||

ಸಾತಿಯಪುತರ ತವರ್ಮನೆ, 1ಸಾತರ ತೆಂಕಣ ನೆಲೆಮನೆಯ ಲೂಪರಾ
ಕೆಳಮನೆ, ಪಾಂಡ್ಯರ ಮೇಲ್ಮನೆ, ನೆರೆಯರಮನೆ ಕನ್ನಾಡಿನ ಭೂಪರಾ;
ಭೈರವ ಬಂಗರ ಚೌಟರಜಿಲ ಸಾವಂತರ ಮನೆಮನೆಯಿಂಬೇ,
ತುಳುವರ ತಾಯ್ಮನೆಯುಳಿದರ ಕಾಯ್ಮನೆ – ನೀನೆಮ್ಮಯ ಮನೆಯಂಬೇ ||೨||

ದೇಗುಲಗಳೊ ಧರ್ಮದ ಬಾಗಿಲಗಳೊ? ಪುಣ್ಯಘಟಂ ತಟಿನೀತಟಂ!
ಬಸದಿಗಳೋ ಕನಸೇ ಕಲ್ಲಾದುವೋ? ನೆಲಬಿರಿದೆದ್ದರೆ ಗೊಮ್ಮಟಂ?
ನಿನ್ನ ಪುಲಕವೇ ಪಸುರಿದಂತೆ ಪಸರಿಸಿದೀ ಸಸ್ಯದ ಚೆಲುವೇಂ!
ಜೀವನಸಾಮವನಾಡುನ ಪಾಡುವ ಖಗಮೃಗಪತಂಗದೊಲನೇಂ ||೩||

ಹಿಂದು ಜೈನ ಮಸ್ಲೀಮ ಕೈಸ್ತ್ರರಾವೊಂದೇ ಬಾಂಧವರೆಮ್ಮಾ
ತಂದೆ ದೇವರೊಬ್ಬನೆ, ನೀನೊಬ್ಬಳೆ ನಮ್ಮೆಲ್ಲರ ತಾಯಮ್ಮಾ!
ಎಂದಿನವಳೊ ನೀನಿಂದಿನವರೆ ನಾವಾದೊಡೆಮ್ಮನಕ್ಕರೆಯಿಂ
ನಿನ್ನೆದೆ ತೊಟ್ಟಿಲೊಳಿಟ್ಟು ಸಾಕುತಿಹೆ, ಸರಸಿಯಂತೆ ತಾವರೆಯೆಂ ||೪||

ಧನ್ಯನೆನಿತೊ ನಾ ನಿನ್ನಯ ಬಸುರಿಂದುಸುರಿಸಲೀ ಹೂವನ್ನ!
ಕೆಸರೊಳುದುರಲೀಯದೆ, ನಿನ್ನಡಿಗರ್ಪಿಸಿಕೊಳು ಸೌಸವವನ್ನ!
ಬೇಡುವೆನವ್ವಾ, ಬೀಳ್ಕೊಡುವಂದೆನ್ನನೆತ್ತಿದಂಕದಿ ನಿನ್ನ,
‘ಮರಳಿ ಬಾರ, ಕಂದಾ, ನನ್ನುದರದಿ’ ಎಂದು ತಬ್ಬಿ ಹರಸೆನ್ನ! ||೫||
*****
೧ ಸಾತವಾಹನರು

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...