Home / ಕವನ / ಕವಿತೆ / ಬಗೆ ಬಗೆ

ಬಗೆ ಬಗೆ

ಮೆದುಭೂಮಿ
ಹದ ಗಾಳಿ
ಬೇಕಷ್ಟು ಬೆಳಕು
ಸಾಕಷ್ಟು ನೀರು
ಎಲ್ಲಾ ಇದ್ದೂ
ಮೊಳಕೆಯೊಡೆಯಲೋ
ಬೇಡವೋ?
ಈಗಲೋ ಆಗಲೋ
ಅನುಮಾನದಲ್ಲೇ
ಸ್ತಬ್ದಗೊಂಡ ನುಗ್ಗೆಬೀಜ.

ಯಾವ ಪರುಷಸ್ಪರ್ಶವೋ
ಆಳಕ್ಕೆ ಬೇರನಿಳಿಸಿ
ನೆಲ‌ಒಡಲು ಸೀಳಿ
ಮೊಳಕೆಯೊಡೆಸಿ
ಬುರಬುರನೆ ಎತ್ತರಕ್ಕೇರಿ
ಆಕಾಶವನ್ನೇ ಮುಟ್ಟುವ ಚಪಲ
ನೆಲವನೊದ್ದು ಬಾನನಪ್ಪುವ ಹಂಬಲ
ಆಸೆಬುರುಕ, ನುಗ್ಗೆ ಮರದ ಕಾಂಡಕ್ಕೆ

ಮಣ್ಣಿನಾಳಕೆ ಹೂತು
ತಣ್ಣಗೆ ಕಲೆತು
ನೆಲದ ಸಾರವ ಹೀರಿ
ಮೇಲಿನ ಮರಕ್ಕೆ ತೂರಿ
ನೇಪಥ್ಯದಲ್ಲೇ ಧನ್ಯತೆಯಲಿ
ಬೀಗುತ್ತಾ ಬಾಗುವ
ಸಂತ, ನುಗ್ಗೆಯ ಬೇರು.

ಕುಡಿಯೆಡೆಯಲ್ಲೆಲ್ಲಾ
ಮೊಗ್ಗೊಡೆಸಿ ಹೂವರಳಿಸಿ
ಕಣಕಣವೇ ಆರಳಿ ನಿಂತರೂ
ಒಂದೊಂದು ತೊಟ್ಟಿನಲೂ
ಕಾಯಿ ಮೂಡಿಸುವ ಬಯಕೆಯಿಲ್ಲ
ಬಯಕೆ ಫಲಿಸಲು ಹರಕೆಯಿಲ್ಲ
ಜೀವವಿದ್ದುದು ಕಾಯಾಗಲಿಬಿಡೆಂಬ
ನಿರ್ಲಿಪ್ತ, ನುಗ್ಗೆ ಹೂವು.

ಕೊಂಬೆರೆಂಬೆಗಳ ತುಂಬ
ಹಸಿರು ಹಾಸಿ
ಗಾಳಿ ಬೀಸಿದಾಗ ತೊನೆದು
ಮಳೆ ಬಿದ್ದಾಗ ನೆನೆದು
ಎಲ್ಲ ಅನುಭವಿಸುವ ಹಿಗ್ಗು
ಗಾಳಿ ಮಳೆ ನಿಂತಾಗ.
ಅನುಭವಿಸಿದ್ದ ನೆನಸಿ ಮೆಲುನಗುವ
ರಸಿಕ, ಹರಡಿ ನಿಂತ ನುಗ್ಗೆ ಎಲೆ.

ಬೆಳಕು, ಬಾನು ಗಾಳಿ ಮಳೆ
ಎಲ್ಲ ಬರಿಯ ಸುಳ್ಳು ,
ಬಾಹ್ಯವೆಲ್ಲ ಪೊಳ್ಳು
ಇನ್ನೇನೂ ಬೇಡೆಂಬ ನಿರಾಕರಣದಲಿ
ನೆಲದಾಯಿಯ ಅಂತರಂಗದ
ಮಡಿಲಿಗಿಳಿದೇ ಬಿಡುವ ಉಮೇದಿನಲಿ
ಉದ್ದುದ್ದ ದಾಪುಗಾಲಿಡುವ ಆತುರ
ನಿರಾಶಾವಾದಿ ನುಗ್ಗೆ ಕಾಯಿಗೆ.

ಈ ಬಗೆಯ
ಬಗೆಗಳನೆಲ್ಲ
ಹಿಡಿದಿಟ್ಟ ಬಗೆಯೇ ದಿವ್ಯ!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...