Home / ಕವನ / ಕವಿತೆ / ಬಗೆ ಬಗೆ

ಬಗೆ ಬಗೆ

ಮೆದುಭೂಮಿ
ಹದ ಗಾಳಿ
ಬೇಕಷ್ಟು ಬೆಳಕು
ಸಾಕಷ್ಟು ನೀರು
ಎಲ್ಲಾ ಇದ್ದೂ
ಮೊಳಕೆಯೊಡೆಯಲೋ
ಬೇಡವೋ?
ಈಗಲೋ ಆಗಲೋ
ಅನುಮಾನದಲ್ಲೇ
ಸ್ತಬ್ದಗೊಂಡ ನುಗ್ಗೆಬೀಜ.

ಯಾವ ಪರುಷಸ್ಪರ್ಶವೋ
ಆಳಕ್ಕೆ ಬೇರನಿಳಿಸಿ
ನೆಲ‌ಒಡಲು ಸೀಳಿ
ಮೊಳಕೆಯೊಡೆಸಿ
ಬುರಬುರನೆ ಎತ್ತರಕ್ಕೇರಿ
ಆಕಾಶವನ್ನೇ ಮುಟ್ಟುವ ಚಪಲ
ನೆಲವನೊದ್ದು ಬಾನನಪ್ಪುವ ಹಂಬಲ
ಆಸೆಬುರುಕ, ನುಗ್ಗೆ ಮರದ ಕಾಂಡಕ್ಕೆ

ಮಣ್ಣಿನಾಳಕೆ ಹೂತು
ತಣ್ಣಗೆ ಕಲೆತು
ನೆಲದ ಸಾರವ ಹೀರಿ
ಮೇಲಿನ ಮರಕ್ಕೆ ತೂರಿ
ನೇಪಥ್ಯದಲ್ಲೇ ಧನ್ಯತೆಯಲಿ
ಬೀಗುತ್ತಾ ಬಾಗುವ
ಸಂತ, ನುಗ್ಗೆಯ ಬೇರು.

ಕುಡಿಯೆಡೆಯಲ್ಲೆಲ್ಲಾ
ಮೊಗ್ಗೊಡೆಸಿ ಹೂವರಳಿಸಿ
ಕಣಕಣವೇ ಆರಳಿ ನಿಂತರೂ
ಒಂದೊಂದು ತೊಟ್ಟಿನಲೂ
ಕಾಯಿ ಮೂಡಿಸುವ ಬಯಕೆಯಿಲ್ಲ
ಬಯಕೆ ಫಲಿಸಲು ಹರಕೆಯಿಲ್ಲ
ಜೀವವಿದ್ದುದು ಕಾಯಾಗಲಿಬಿಡೆಂಬ
ನಿರ್ಲಿಪ್ತ, ನುಗ್ಗೆ ಹೂವು.

ಕೊಂಬೆರೆಂಬೆಗಳ ತುಂಬ
ಹಸಿರು ಹಾಸಿ
ಗಾಳಿ ಬೀಸಿದಾಗ ತೊನೆದು
ಮಳೆ ಬಿದ್ದಾಗ ನೆನೆದು
ಎಲ್ಲ ಅನುಭವಿಸುವ ಹಿಗ್ಗು
ಗಾಳಿ ಮಳೆ ನಿಂತಾಗ.
ಅನುಭವಿಸಿದ್ದ ನೆನಸಿ ಮೆಲುನಗುವ
ರಸಿಕ, ಹರಡಿ ನಿಂತ ನುಗ್ಗೆ ಎಲೆ.

ಬೆಳಕು, ಬಾನು ಗಾಳಿ ಮಳೆ
ಎಲ್ಲ ಬರಿಯ ಸುಳ್ಳು ,
ಬಾಹ್ಯವೆಲ್ಲ ಪೊಳ್ಳು
ಇನ್ನೇನೂ ಬೇಡೆಂಬ ನಿರಾಕರಣದಲಿ
ನೆಲದಾಯಿಯ ಅಂತರಂಗದ
ಮಡಿಲಿಗಿಳಿದೇ ಬಿಡುವ ಉಮೇದಿನಲಿ
ಉದ್ದುದ್ದ ದಾಪುಗಾಲಿಡುವ ಆತುರ
ನಿರಾಶಾವಾದಿ ನುಗ್ಗೆ ಕಾಯಿಗೆ.

ಈ ಬಗೆಯ
ಬಗೆಗಳನೆಲ್ಲ
ಹಿಡಿದಿಟ್ಟ ಬಗೆಯೇ ದಿವ್ಯ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...