Home / ಕವನ / ಕವಿತೆ / ಬಗೆ ಬಗೆ

ಬಗೆ ಬಗೆ

ಮೆದುಭೂಮಿ
ಹದ ಗಾಳಿ
ಬೇಕಷ್ಟು ಬೆಳಕು
ಸಾಕಷ್ಟು ನೀರು
ಎಲ್ಲಾ ಇದ್ದೂ
ಮೊಳಕೆಯೊಡೆಯಲೋ
ಬೇಡವೋ?
ಈಗಲೋ ಆಗಲೋ
ಅನುಮಾನದಲ್ಲೇ
ಸ್ತಬ್ದಗೊಂಡ ನುಗ್ಗೆಬೀಜ.

ಯಾವ ಪರುಷಸ್ಪರ್ಶವೋ
ಆಳಕ್ಕೆ ಬೇರನಿಳಿಸಿ
ನೆಲ‌ಒಡಲು ಸೀಳಿ
ಮೊಳಕೆಯೊಡೆಸಿ
ಬುರಬುರನೆ ಎತ್ತರಕ್ಕೇರಿ
ಆಕಾಶವನ್ನೇ ಮುಟ್ಟುವ ಚಪಲ
ನೆಲವನೊದ್ದು ಬಾನನಪ್ಪುವ ಹಂಬಲ
ಆಸೆಬುರುಕ, ನುಗ್ಗೆ ಮರದ ಕಾಂಡಕ್ಕೆ

ಮಣ್ಣಿನಾಳಕೆ ಹೂತು
ತಣ್ಣಗೆ ಕಲೆತು
ನೆಲದ ಸಾರವ ಹೀರಿ
ಮೇಲಿನ ಮರಕ್ಕೆ ತೂರಿ
ನೇಪಥ್ಯದಲ್ಲೇ ಧನ್ಯತೆಯಲಿ
ಬೀಗುತ್ತಾ ಬಾಗುವ
ಸಂತ, ನುಗ್ಗೆಯ ಬೇರು.

ಕುಡಿಯೆಡೆಯಲ್ಲೆಲ್ಲಾ
ಮೊಗ್ಗೊಡೆಸಿ ಹೂವರಳಿಸಿ
ಕಣಕಣವೇ ಆರಳಿ ನಿಂತರೂ
ಒಂದೊಂದು ತೊಟ್ಟಿನಲೂ
ಕಾಯಿ ಮೂಡಿಸುವ ಬಯಕೆಯಿಲ್ಲ
ಬಯಕೆ ಫಲಿಸಲು ಹರಕೆಯಿಲ್ಲ
ಜೀವವಿದ್ದುದು ಕಾಯಾಗಲಿಬಿಡೆಂಬ
ನಿರ್ಲಿಪ್ತ, ನುಗ್ಗೆ ಹೂವು.

ಕೊಂಬೆರೆಂಬೆಗಳ ತುಂಬ
ಹಸಿರು ಹಾಸಿ
ಗಾಳಿ ಬೀಸಿದಾಗ ತೊನೆದು
ಮಳೆ ಬಿದ್ದಾಗ ನೆನೆದು
ಎಲ್ಲ ಅನುಭವಿಸುವ ಹಿಗ್ಗು
ಗಾಳಿ ಮಳೆ ನಿಂತಾಗ.
ಅನುಭವಿಸಿದ್ದ ನೆನಸಿ ಮೆಲುನಗುವ
ರಸಿಕ, ಹರಡಿ ನಿಂತ ನುಗ್ಗೆ ಎಲೆ.

ಬೆಳಕು, ಬಾನು ಗಾಳಿ ಮಳೆ
ಎಲ್ಲ ಬರಿಯ ಸುಳ್ಳು ,
ಬಾಹ್ಯವೆಲ್ಲ ಪೊಳ್ಳು
ಇನ್ನೇನೂ ಬೇಡೆಂಬ ನಿರಾಕರಣದಲಿ
ನೆಲದಾಯಿಯ ಅಂತರಂಗದ
ಮಡಿಲಿಗಿಳಿದೇ ಬಿಡುವ ಉಮೇದಿನಲಿ
ಉದ್ದುದ್ದ ದಾಪುಗಾಲಿಡುವ ಆತುರ
ನಿರಾಶಾವಾದಿ ನುಗ್ಗೆ ಕಾಯಿಗೆ.

ಈ ಬಗೆಯ
ಬಗೆಗಳನೆಲ್ಲ
ಹಿಡಿದಿಟ್ಟ ಬಗೆಯೇ ದಿವ್ಯ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...