Home / ಕವನ / ಕವಿತೆ / ಬಗೆ ಬಗೆ

ಬಗೆ ಬಗೆ

ಮೆದುಭೂಮಿ
ಹದ ಗಾಳಿ
ಬೇಕಷ್ಟು ಬೆಳಕು
ಸಾಕಷ್ಟು ನೀರು
ಎಲ್ಲಾ ಇದ್ದೂ
ಮೊಳಕೆಯೊಡೆಯಲೋ
ಬೇಡವೋ?
ಈಗಲೋ ಆಗಲೋ
ಅನುಮಾನದಲ್ಲೇ
ಸ್ತಬ್ದಗೊಂಡ ನುಗ್ಗೆಬೀಜ.

ಯಾವ ಪರುಷಸ್ಪರ್ಶವೋ
ಆಳಕ್ಕೆ ಬೇರನಿಳಿಸಿ
ನೆಲ‌ಒಡಲು ಸೀಳಿ
ಮೊಳಕೆಯೊಡೆಸಿ
ಬುರಬುರನೆ ಎತ್ತರಕ್ಕೇರಿ
ಆಕಾಶವನ್ನೇ ಮುಟ್ಟುವ ಚಪಲ
ನೆಲವನೊದ್ದು ಬಾನನಪ್ಪುವ ಹಂಬಲ
ಆಸೆಬುರುಕ, ನುಗ್ಗೆ ಮರದ ಕಾಂಡಕ್ಕೆ

ಮಣ್ಣಿನಾಳಕೆ ಹೂತು
ತಣ್ಣಗೆ ಕಲೆತು
ನೆಲದ ಸಾರವ ಹೀರಿ
ಮೇಲಿನ ಮರಕ್ಕೆ ತೂರಿ
ನೇಪಥ್ಯದಲ್ಲೇ ಧನ್ಯತೆಯಲಿ
ಬೀಗುತ್ತಾ ಬಾಗುವ
ಸಂತ, ನುಗ್ಗೆಯ ಬೇರು.

ಕುಡಿಯೆಡೆಯಲ್ಲೆಲ್ಲಾ
ಮೊಗ್ಗೊಡೆಸಿ ಹೂವರಳಿಸಿ
ಕಣಕಣವೇ ಆರಳಿ ನಿಂತರೂ
ಒಂದೊಂದು ತೊಟ್ಟಿನಲೂ
ಕಾಯಿ ಮೂಡಿಸುವ ಬಯಕೆಯಿಲ್ಲ
ಬಯಕೆ ಫಲಿಸಲು ಹರಕೆಯಿಲ್ಲ
ಜೀವವಿದ್ದುದು ಕಾಯಾಗಲಿಬಿಡೆಂಬ
ನಿರ್ಲಿಪ್ತ, ನುಗ್ಗೆ ಹೂವು.

ಕೊಂಬೆರೆಂಬೆಗಳ ತುಂಬ
ಹಸಿರು ಹಾಸಿ
ಗಾಳಿ ಬೀಸಿದಾಗ ತೊನೆದು
ಮಳೆ ಬಿದ್ದಾಗ ನೆನೆದು
ಎಲ್ಲ ಅನುಭವಿಸುವ ಹಿಗ್ಗು
ಗಾಳಿ ಮಳೆ ನಿಂತಾಗ.
ಅನುಭವಿಸಿದ್ದ ನೆನಸಿ ಮೆಲುನಗುವ
ರಸಿಕ, ಹರಡಿ ನಿಂತ ನುಗ್ಗೆ ಎಲೆ.

ಬೆಳಕು, ಬಾನು ಗಾಳಿ ಮಳೆ
ಎಲ್ಲ ಬರಿಯ ಸುಳ್ಳು ,
ಬಾಹ್ಯವೆಲ್ಲ ಪೊಳ್ಳು
ಇನ್ನೇನೂ ಬೇಡೆಂಬ ನಿರಾಕರಣದಲಿ
ನೆಲದಾಯಿಯ ಅಂತರಂಗದ
ಮಡಿಲಿಗಿಳಿದೇ ಬಿಡುವ ಉಮೇದಿನಲಿ
ಉದ್ದುದ್ದ ದಾಪುಗಾಲಿಡುವ ಆತುರ
ನಿರಾಶಾವಾದಿ ನುಗ್ಗೆ ಕಾಯಿಗೆ.

ಈ ಬಗೆಯ
ಬಗೆಗಳನೆಲ್ಲ
ಹಿಡಿದಿಟ್ಟ ಬಗೆಯೇ ದಿವ್ಯ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...