ಮಾಯದ ನೋವು

(ಶೋಕಗೀತ)


ಶಕ್ತಿದೈವತದ ಬಲಗೈಯ ಕರವಾಲವೇ,
ಯುಕ್ತಿಯಲಿ ಹಗೆಯ ಬಂಧಿಸುವಿಂದ್ರಜಾಲವೇ,
ದಿಕ್ಕು-ದಿಕ್ಕುಗಳ ರಕ್ಷಿಸಿದೇಕ ದಿಗ್ಗಜವೆ,
ಭರತರಾಷ್ಟ್ರದ ಧೈರ್ಯಪುರುಷ ಕೀರ್ತಿಧ್ವಜವೆ!
ಭಾಯಿ, ವಲ್ಲಭಭಾಯಿ ಭಾರತಿಯ ಕಣ್ಮಣಿ-
ನಿನ್ನನೂ ಕಬಳಿಸಿದಳೇ ಮೃತ್ಯುರಾಣಿ ?


ಓ, ಮೃತ್ಯು ದೇವತೆಯೆ ನಿರ್ದಯೇ, ನಿನ್ನನೂ
ದೇವಿಯರ ಶ್ರೇಣಿಯಲ್ಲಿ ಸೇರಿಸಿದನಾವನು ?
ನಿನಗೆ ಕಣ್ಣಿವೆಯೇನು ? ನಿನಗೆ ಕರುಳಿದೆಯೇನು ?
ಕನಸೊಳಾದರು ಲೋಕಹಿತವ ಬಗೆದಿಹೆಯೇನು ?
ಲೋಕಹಿತಕಿರದವಳು ನೀನೆಂತು ದೇವತೆಯು ?
ಲೌಕಿಕರ ದುಃಖದಲಿ ನೂಕುವುದೆ ಸತ್ಕೃತಿಯು ?


ಓ! ಮೃತ್ಯುರಾಣೇಽಽ! ಬಾ, ನೋಡು ಬಾರಿಲ್ಲಿ,
ನೀನಿಂದು ಗೆಯ್ದ ತಾಂಡವದ ಪರಿಣಾಮವನು !
ಎಂಥ ಜೀವದ ಹೂವ ತುಳಿ-ತುಳಿದು ಬಳಲಿಸಿದೆ?
ಆ ಹೂವ ಬಯಸುವರ ಎದೆಯೆದೆಯನಳಲಿಸಿದೆ!
ನಾಡಿನಲಿ ಹರಿಯುತಿದೆ ಕಂಬನಿಯ ಹೊನಲು
ಚಳಿಗಾಳಿಯೂ ಚೆಲ್ಲುತಿದೆ ಬಿಸಿಯ ಸುಯಿಲು!


ಉಕ್ಕಿನೆದೆಯವನೆಂದು ಹೆಸರಾಂತ ಧೀರಾ !
ಉಕ್ಕಿನೆದೆಯನ್ನು ಕಾಯಲಿಕೆಂದು ಮೈಯನೂ
ಉಕ್ಕಿನದೆ ಪಡೆದುಕೊಂಡಿರ್ದ್ದೆಯೆಂದಿರ್ದ್ದೆವೈ !
ನಿನ್ನ ಉಕ್ಕಿನ ಜೀವ ಭಾರತದ ರಕ್ಷಣೆಗೆ
ಬನ್ನವಿಲ್ಲದ ಕವಚವೆಂದು ಬಗೆದಿರ್ದ್ದೆವೈ !
ಬಂಧು, ವಲ್ಲಭರಾಜ, ನಿನ್ನ ಮರಣವಿದು-
ನಮ್ಮ ನಂಬುಗೆಗೆಂಥ ಹಾರೆಯಿಕ್ಕಿದುದು !


ನಿರ್ಜೀವದಲ್ಲಿ ಜೀವವನೂದಿದವ ನೀನು,
ಬೆಂಡುಗಳಲೂ ಬಲದ ಸಾರವರೆದವನು ;
ಬಯಲಲ್ಲಿ ಧೈರ್ಯಮೇರುವ ಮೆರಸಿದವ ನೀನು
ಭಯವನ್ನು ಶೌರ್ಯದಲಿ ಮಾರ್ಪಡಿಸಿದವನು!
ಓ, ಅಣ್ಣ ವಲ್ಲಭಾ, ನೀನು ಸಾಹಸಮಲ್ಲ,
ನಿನಗೆ ಸಾವೇ ? ಸುಳ್ಳು ಸುಳ್ಳು! ಹುಸಿಮಾತೆಲ್ಲ!


ಅಯ್ಯೋ, ಏನಿದು ಭ್ರಮೆಯು! ದುಃಖದುನ್ಮಾದ!
ಭಾರತದಿ ತುಂಬಿರುವ ಈ ಆರ್ತನಾದ….
ಕಿವಿಗೆ ಕೇಳುತಲಿಹುದು, ಮನಕೆ ಕಾಣುತಲಿಹುದು,
ಸುಳ್ಳು ಎಂತಾಗುವುದು ವಲ್ಲಭನ ಮರಣವದು !
ನಿಜವೆ, ಅಂತಾದೊಡಾ ಧೀರನಾ ಸಾವು ?
ಅಯ್ಯೊ, ನಾಡಿನ ಜನಕೆ ಮಾಯದಾ ನೋವು!


ಅಕ್ಕಟಾ!
ಭಾರತದ ಕಾಪಿಂಗೆ ಕೋಟೆಯಿನ್ನಾರು ?
ಹಗೆಯ ಗುಂಡಿಗೆಯೊಡೆವ ಗುಡುಗು ಇನ್ನಾರು ?
ಕಂಗೆಟ್ಟ ಜನಕುಲಕೆ ಕಣ್ಣು ಇನ್ನಾರು ?
ಸಿಡಿಲುನುಡಿಯಿಂದ ಭಯವನು ಜಡಿವರಾರು ?
ಯಾರಿಹರು ? ಯಾರಿಹರು ? ಯಾರು, ಇನ್ನಾರು ?
ಈ ಕೇಳ್ಕೆಗುತ್ತರವ ಕೊಡುವರಾರಿಹರು ?


ಶಕ್ತಿದೈವತದ ಬಲಗೈಯ ಕರವಾಲವೆ ?
ಯುಕ್ತಿಯಲಿ ಹಗೆಯ ಬಂಧಿಸುವಿಂದ್ರಜಾಲವೆ?
ದಿಕ್ಕು-ದಿಕ್ಕುಗಳ ರಕ್ಷಿಸಿದೇಕ ದಿಗ್ಗಜವೆ!
ಭರತರಾಷ್ಟ್ರದ ಧೈರ್ಯಪುರುಷ ಕೀರ್ತಿಧ್ವಜವೆ?
ಭಾಯಿ, ವಲ್ಲಭಭಾಯಿ, ಭಾರತದ ಕಣ್ಮಣಿ,
ನಿನ್ನನೂ ಕಬಳಿಸಿದಳೇ ಮೃತ್ಯರಾಣಿ ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪದ್ಯಗದ್ಯಗಳ ರಾಷ್ಟ್ರೀಯತೆ
Next post ಮಾಸತಿ

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

cheap jordans|wholesale air max|wholesale jordans|wholesale jewelry|wholesale jerseys