Home / ಕವನ / ಕವಿತೆ / ಮಾಯದ ನೋವು

ಮಾಯದ ನೋವು

(ಶೋಕಗೀತ)


ಶಕ್ತಿದೈವತದ ಬಲಗೈಯ ಕರವಾಲವೇ,
ಯುಕ್ತಿಯಲಿ ಹಗೆಯ ಬಂಧಿಸುವಿಂದ್ರಜಾಲವೇ,
ದಿಕ್ಕು-ದಿಕ್ಕುಗಳ ರಕ್ಷಿಸಿದೇಕ ದಿಗ್ಗಜವೆ,
ಭರತರಾಷ್ಟ್ರದ ಧೈರ್ಯಪುರುಷ ಕೀರ್ತಿಧ್ವಜವೆ!
ಭಾಯಿ, ವಲ್ಲಭಭಾಯಿ ಭಾರತಿಯ ಕಣ್ಮಣಿ-
ನಿನ್ನನೂ ಕಬಳಿಸಿದಳೇ ಮೃತ್ಯುರಾಣಿ ?


ಓ, ಮೃತ್ಯು ದೇವತೆಯೆ ನಿರ್ದಯೇ, ನಿನ್ನನೂ
ದೇವಿಯರ ಶ್ರೇಣಿಯಲ್ಲಿ ಸೇರಿಸಿದನಾವನು ?
ನಿನಗೆ ಕಣ್ಣಿವೆಯೇನು ? ನಿನಗೆ ಕರುಳಿದೆಯೇನು ?
ಕನಸೊಳಾದರು ಲೋಕಹಿತವ ಬಗೆದಿಹೆಯೇನು ?
ಲೋಕಹಿತಕಿರದವಳು ನೀನೆಂತು ದೇವತೆಯು ?
ಲೌಕಿಕರ ದುಃಖದಲಿ ನೂಕುವುದೆ ಸತ್ಕೃತಿಯು ?


ಓ! ಮೃತ್ಯುರಾಣೇಽಽ! ಬಾ, ನೋಡು ಬಾರಿಲ್ಲಿ,
ನೀನಿಂದು ಗೆಯ್ದ ತಾಂಡವದ ಪರಿಣಾಮವನು !
ಎಂಥ ಜೀವದ ಹೂವ ತುಳಿ-ತುಳಿದು ಬಳಲಿಸಿದೆ?
ಆ ಹೂವ ಬಯಸುವರ ಎದೆಯೆದೆಯನಳಲಿಸಿದೆ!
ನಾಡಿನಲಿ ಹರಿಯುತಿದೆ ಕಂಬನಿಯ ಹೊನಲು
ಚಳಿಗಾಳಿಯೂ ಚೆಲ್ಲುತಿದೆ ಬಿಸಿಯ ಸುಯಿಲು!


ಉಕ್ಕಿನೆದೆಯವನೆಂದು ಹೆಸರಾಂತ ಧೀರಾ !
ಉಕ್ಕಿನೆದೆಯನ್ನು ಕಾಯಲಿಕೆಂದು ಮೈಯನೂ
ಉಕ್ಕಿನದೆ ಪಡೆದುಕೊಂಡಿರ್ದ್ದೆಯೆಂದಿರ್ದ್ದೆವೈ !
ನಿನ್ನ ಉಕ್ಕಿನ ಜೀವ ಭಾರತದ ರಕ್ಷಣೆಗೆ
ಬನ್ನವಿಲ್ಲದ ಕವಚವೆಂದು ಬಗೆದಿರ್ದ್ದೆವೈ !
ಬಂಧು, ವಲ್ಲಭರಾಜ, ನಿನ್ನ ಮರಣವಿದು-
ನಮ್ಮ ನಂಬುಗೆಗೆಂಥ ಹಾರೆಯಿಕ್ಕಿದುದು !


ನಿರ್ಜೀವದಲ್ಲಿ ಜೀವವನೂದಿದವ ನೀನು,
ಬೆಂಡುಗಳಲೂ ಬಲದ ಸಾರವರೆದವನು ;
ಬಯಲಲ್ಲಿ ಧೈರ್ಯಮೇರುವ ಮೆರಸಿದವ ನೀನು
ಭಯವನ್ನು ಶೌರ್ಯದಲಿ ಮಾರ್ಪಡಿಸಿದವನು!
ಓ, ಅಣ್ಣ ವಲ್ಲಭಾ, ನೀನು ಸಾಹಸಮಲ್ಲ,
ನಿನಗೆ ಸಾವೇ ? ಸುಳ್ಳು ಸುಳ್ಳು! ಹುಸಿಮಾತೆಲ್ಲ!


ಅಯ್ಯೋ, ಏನಿದು ಭ್ರಮೆಯು! ದುಃಖದುನ್ಮಾದ!
ಭಾರತದಿ ತುಂಬಿರುವ ಈ ಆರ್ತನಾದ….
ಕಿವಿಗೆ ಕೇಳುತಲಿಹುದು, ಮನಕೆ ಕಾಣುತಲಿಹುದು,
ಸುಳ್ಳು ಎಂತಾಗುವುದು ವಲ್ಲಭನ ಮರಣವದು !
ನಿಜವೆ, ಅಂತಾದೊಡಾ ಧೀರನಾ ಸಾವು ?
ಅಯ್ಯೊ, ನಾಡಿನ ಜನಕೆ ಮಾಯದಾ ನೋವು!


ಅಕ್ಕಟಾ!
ಭಾರತದ ಕಾಪಿಂಗೆ ಕೋಟೆಯಿನ್ನಾರು ?
ಹಗೆಯ ಗುಂಡಿಗೆಯೊಡೆವ ಗುಡುಗು ಇನ್ನಾರು ?
ಕಂಗೆಟ್ಟ ಜನಕುಲಕೆ ಕಣ್ಣು ಇನ್ನಾರು ?
ಸಿಡಿಲುನುಡಿಯಿಂದ ಭಯವನು ಜಡಿವರಾರು ?
ಯಾರಿಹರು ? ಯಾರಿಹರು ? ಯಾರು, ಇನ್ನಾರು ?
ಈ ಕೇಳ್ಕೆಗುತ್ತರವ ಕೊಡುವರಾರಿಹರು ?


ಶಕ್ತಿದೈವತದ ಬಲಗೈಯ ಕರವಾಲವೆ ?
ಯುಕ್ತಿಯಲಿ ಹಗೆಯ ಬಂಧಿಸುವಿಂದ್ರಜಾಲವೆ?
ದಿಕ್ಕು-ದಿಕ್ಕುಗಳ ರಕ್ಷಿಸಿದೇಕ ದಿಗ್ಗಜವೆ!
ಭರತರಾಷ್ಟ್ರದ ಧೈರ್ಯಪುರುಷ ಕೀರ್ತಿಧ್ವಜವೆ?
ಭಾಯಿ, ವಲ್ಲಭಭಾಯಿ, ಭಾರತದ ಕಣ್ಮಣಿ,
ನಿನ್ನನೂ ಕಬಳಿಸಿದಳೇ ಮೃತ್ಯರಾಣಿ ?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...