Home / ಕವನ / ಕವಿತೆ / ಮಾಯದ ನೋವು

ಮಾಯದ ನೋವು

(ಶೋಕಗೀತ)


ಶಕ್ತಿದೈವತದ ಬಲಗೈಯ ಕರವಾಲವೇ,
ಯುಕ್ತಿಯಲಿ ಹಗೆಯ ಬಂಧಿಸುವಿಂದ್ರಜಾಲವೇ,
ದಿಕ್ಕು-ದಿಕ್ಕುಗಳ ರಕ್ಷಿಸಿದೇಕ ದಿಗ್ಗಜವೆ,
ಭರತರಾಷ್ಟ್ರದ ಧೈರ್ಯಪುರುಷ ಕೀರ್ತಿಧ್ವಜವೆ!
ಭಾಯಿ, ವಲ್ಲಭಭಾಯಿ ಭಾರತಿಯ ಕಣ್ಮಣಿ-
ನಿನ್ನನೂ ಕಬಳಿಸಿದಳೇ ಮೃತ್ಯುರಾಣಿ ?


ಓ, ಮೃತ್ಯು ದೇವತೆಯೆ ನಿರ್ದಯೇ, ನಿನ್ನನೂ
ದೇವಿಯರ ಶ್ರೇಣಿಯಲ್ಲಿ ಸೇರಿಸಿದನಾವನು ?
ನಿನಗೆ ಕಣ್ಣಿವೆಯೇನು ? ನಿನಗೆ ಕರುಳಿದೆಯೇನು ?
ಕನಸೊಳಾದರು ಲೋಕಹಿತವ ಬಗೆದಿಹೆಯೇನು ?
ಲೋಕಹಿತಕಿರದವಳು ನೀನೆಂತು ದೇವತೆಯು ?
ಲೌಕಿಕರ ದುಃಖದಲಿ ನೂಕುವುದೆ ಸತ್ಕೃತಿಯು ?


ಓ! ಮೃತ್ಯುರಾಣೇಽಽ! ಬಾ, ನೋಡು ಬಾರಿಲ್ಲಿ,
ನೀನಿಂದು ಗೆಯ್ದ ತಾಂಡವದ ಪರಿಣಾಮವನು !
ಎಂಥ ಜೀವದ ಹೂವ ತುಳಿ-ತುಳಿದು ಬಳಲಿಸಿದೆ?
ಆ ಹೂವ ಬಯಸುವರ ಎದೆಯೆದೆಯನಳಲಿಸಿದೆ!
ನಾಡಿನಲಿ ಹರಿಯುತಿದೆ ಕಂಬನಿಯ ಹೊನಲು
ಚಳಿಗಾಳಿಯೂ ಚೆಲ್ಲುತಿದೆ ಬಿಸಿಯ ಸುಯಿಲು!


ಉಕ್ಕಿನೆದೆಯವನೆಂದು ಹೆಸರಾಂತ ಧೀರಾ !
ಉಕ್ಕಿನೆದೆಯನ್ನು ಕಾಯಲಿಕೆಂದು ಮೈಯನೂ
ಉಕ್ಕಿನದೆ ಪಡೆದುಕೊಂಡಿರ್ದ್ದೆಯೆಂದಿರ್ದ್ದೆವೈ !
ನಿನ್ನ ಉಕ್ಕಿನ ಜೀವ ಭಾರತದ ರಕ್ಷಣೆಗೆ
ಬನ್ನವಿಲ್ಲದ ಕವಚವೆಂದು ಬಗೆದಿರ್ದ್ದೆವೈ !
ಬಂಧು, ವಲ್ಲಭರಾಜ, ನಿನ್ನ ಮರಣವಿದು-
ನಮ್ಮ ನಂಬುಗೆಗೆಂಥ ಹಾರೆಯಿಕ್ಕಿದುದು !


ನಿರ್ಜೀವದಲ್ಲಿ ಜೀವವನೂದಿದವ ನೀನು,
ಬೆಂಡುಗಳಲೂ ಬಲದ ಸಾರವರೆದವನು ;
ಬಯಲಲ್ಲಿ ಧೈರ್ಯಮೇರುವ ಮೆರಸಿದವ ನೀನು
ಭಯವನ್ನು ಶೌರ್ಯದಲಿ ಮಾರ್ಪಡಿಸಿದವನು!
ಓ, ಅಣ್ಣ ವಲ್ಲಭಾ, ನೀನು ಸಾಹಸಮಲ್ಲ,
ನಿನಗೆ ಸಾವೇ ? ಸುಳ್ಳು ಸುಳ್ಳು! ಹುಸಿಮಾತೆಲ್ಲ!


ಅಯ್ಯೋ, ಏನಿದು ಭ್ರಮೆಯು! ದುಃಖದುನ್ಮಾದ!
ಭಾರತದಿ ತುಂಬಿರುವ ಈ ಆರ್ತನಾದ….
ಕಿವಿಗೆ ಕೇಳುತಲಿಹುದು, ಮನಕೆ ಕಾಣುತಲಿಹುದು,
ಸುಳ್ಳು ಎಂತಾಗುವುದು ವಲ್ಲಭನ ಮರಣವದು !
ನಿಜವೆ, ಅಂತಾದೊಡಾ ಧೀರನಾ ಸಾವು ?
ಅಯ್ಯೊ, ನಾಡಿನ ಜನಕೆ ಮಾಯದಾ ನೋವು!


ಅಕ್ಕಟಾ!
ಭಾರತದ ಕಾಪಿಂಗೆ ಕೋಟೆಯಿನ್ನಾರು ?
ಹಗೆಯ ಗುಂಡಿಗೆಯೊಡೆವ ಗುಡುಗು ಇನ್ನಾರು ?
ಕಂಗೆಟ್ಟ ಜನಕುಲಕೆ ಕಣ್ಣು ಇನ್ನಾರು ?
ಸಿಡಿಲುನುಡಿಯಿಂದ ಭಯವನು ಜಡಿವರಾರು ?
ಯಾರಿಹರು ? ಯಾರಿಹರು ? ಯಾರು, ಇನ್ನಾರು ?
ಈ ಕೇಳ್ಕೆಗುತ್ತರವ ಕೊಡುವರಾರಿಹರು ?


ಶಕ್ತಿದೈವತದ ಬಲಗೈಯ ಕರವಾಲವೆ ?
ಯುಕ್ತಿಯಲಿ ಹಗೆಯ ಬಂಧಿಸುವಿಂದ್ರಜಾಲವೆ?
ದಿಕ್ಕು-ದಿಕ್ಕುಗಳ ರಕ್ಷಿಸಿದೇಕ ದಿಗ್ಗಜವೆ!
ಭರತರಾಷ್ಟ್ರದ ಧೈರ್ಯಪುರುಷ ಕೀರ್ತಿಧ್ವಜವೆ?
ಭಾಯಿ, ವಲ್ಲಭಭಾಯಿ, ಭಾರತದ ಕಣ್ಮಣಿ,
ನಿನ್ನನೂ ಕಬಳಿಸಿದಳೇ ಮೃತ್ಯರಾಣಿ ?
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...