Home / ಕವನ / ಕವಿತೆ / ನವಯುಗಾರಂಭ

ನವಯುಗಾರಂಭ

(ಭಾರತ ಸ್ವಾತಂತ್ರ ದಿನದಂದಿನ ಉಲ್ಲಸಿತಭಾವನೆಯ ಉತ್ಸಾಹ ಪ್ರಗಾಥ)


ಇಂದಿನುದಯ ರವಿ ತಂದಿಹನೈ, ತ-
ನ್ನೊಂದಿಗೆ ನವಯುಗವ,
ಇಂದಿನ ಮಧುರಸಮೀರ ಹರಡುತಿಹ
ಸ್ವಾತಂತ್ರ್ಯದ ಸೊಗವ!

ಇಂದಿನ ಉಸಿರಾಟಕೆ ತಡೆಯಿಲ್ಲವು
ಕಳಚಿ ಕೊರಳ ನೊಗವ-
ಹೊಂದಿಹವೈ ಮನ-ಮನವು ರೆಕ್ಕೆಗಳ,
ಮೀರಿಸಿಹವು ಖಗವ!

ಪ್ರಳಯದಿಳೆಯ ತಮ ಮರೆಯಾಯ್ತೋ-ಕಡ-
ಲೊಳಗಿನ ನೌಕೆಯು ಕರೆಗಾಯ್ತೋ-ಮನು-
ಕುಲದ ಬಾಳ ಗೋಳದು ಹೋಯ್ತೊ….!

ಉಳಿದಿವೆ ಶಕ್ತಿಯ ಬೀಜಗಳೆಲ್ಲವು ;
ಕಂಡೆವು ನವಯುಗವ….
ಬೆಳೆಯ ಕೊಂಡು ನಾವಿನ್ನು ಬಲಿಯ ಬೇ-
ಕಾಗಿದೆ ಹೊಸಜಗವ !

ಇಂದಿನುದಯರವಿ ತಂದಿಹನೈ, ತ-
ನ್ನೊಂದಿಗೆ ನವೆಯುಗವ-
ಮಂದಿ ಕಾಣುತಿದೆ ಭಾರತಮಾತೆಯ
ಚೆಂದದ ನಗೆಮೊಗವ !


ಇಂದು ಹುಟ್ಟಿದಣುಗನಿಗೆ ಇಲ್ಲವೈ,
ಪರದಾಸ್ಯದ ಹೊಲೆಯು !
ಬೆಂದುಹೋಯ್ತು ದೆಸೆದೆಸೆಗಳಲ್ಲಿಯೂ
ಹಗೆಯು ಹೆಣೆದ ಬಲೆಯು !

ಹಿಂದೆ ತಿಂದ ಕೂಳೇನ ಕೊಟ್ಟಿ ತೋ-
ಬರಿಯೆ ಹಂದೆತನವ;
ಇಂದು ಉಂಡ ಊಟವಿದು ತುಂಬುತಿದೆ
ಮನದಿ ಮನುಜಗುಣವ.

ತುಂಡುಗೊಂಡ ಎದೆ ಬೆಸೆದಿಹುವೋ-ಜನ-
ಮಂಡಲದಸುಗಳ ಹೊಸೆದಿಹವೋ-ರಣ-
ಚಂಡಿಯ ಕಂಗಳ ಕೊಸೆದಿಹವೊ….!

ಯಾವ ಭಾವ ಕಂಡಿರುವ ಕನಸು ಮೈ-
ಗೊಳುತಲಿಂದು ಬಂತೋ…
ಯಾವ ಯೋಗ ಸಾಧನವು ನಮಗೆ ಸಂ-
ಸಿದ್ಧಿಯನ್ನು ತಂತೋ !

ಇಂದಿನುದಯರವಿ ತಂದಿಹನೈ ತ-
ನ್ನೊಂದಿಗೆ ನವಯುಗವ-
ಕುಂದದಿರುವ ಪ್ರಭೆಯಿಂದ ಬೆಳಗುವನು
ಭಾಗ್ಯೋದಯನಗವ.


ದೇವನು ಮೀನಿನ ಮಾನಕಿಳಿದು ಆ
ಪ್ರಳಯ ಕಳೆದನಂದು ;
ಮಾನವ ದೇವನ ಸ್ಥಾನಕೇರಿ ಈ
ಪ್ರಳಯವಳಿದನಿಂದು !

ದೇವನೊಬ್ಬನೇ ತಂದ ಯುಗಗಳವು
ವೈಷಮ್ಯದ ಒಡಲು,
ಮಾನವನೇ ಮೂಡಿಸಿದೀ ನವಯುಗ
ಸಮತೆಯ ಸವಿಗಡಲು !

ಭಾರತಶಕ್ತಿಯು ದುಡಿ-ದುಡಿದು,-ಕರೆ-
ತಂದಿದೆ ಕಾಲದ ಕೈಹಿಡಿದು-ಇದೆ
ಲೋಕದ ಕಂಗಳ ತೆರೆಸುವುದು….!

ದಾನವತೆಯ ಮೂಲವನೇ ಮುರಿಯುವೆ-
ನೆನ್ನುವುದೀಯುಗವು ;
ಮಾನವರೆದೆಯೊಳೆ ದೇವನಿರುವುದನು
ಕಾಂಬುದಿನ್ನು ಜಗವು !

ಇಂದಿನುದಯರವಿ ತಂದಿಹನೈ ತ-
ನ್ನೊಂದಿಗೆ ನವಯುಗವ-
ಇಂದಿನ ಗಾಳಿಯು ಗೀತಿಸುತಿರುವುದು
ಸ್ವಾತಂತ್ರ್ಯದ ಸೊಗವ !


ತಾರಾಲೋಕದ ಮೇಗಣಿಂದ ಋಷಿ-
ವೃಂದವು ಹರಸುತಿದೆ;
ಭಾರತಕುಲಪಿತೃಗಣವು ಸ್ವರ್ಗದಿಂ
ಹೂಮಳೆಯೆರಚುತಿದೆ.

ಬೆಳ್ಳಿಯ ಬೆಟ್ಟದ ಮೇಲೆ ತ್ರಿಶೂಲಿಯು
ತಾಂಡವ ತೊಡಗಿರುವ-
ಯಕ್ಷ-ರಕ್ಷ ಗಂಧರ್ವ ಕಿನ್ನರರ
ಮೇಳ ಕೂಡಿಸಿರುವ.

ಪೂರ್ವ-ಪಶ್ಚಿಮದ ಕಡಲುಗಳು-ಉ-
ಬ್ಬೇರಿ ಕುಣಿಯುತಿವೆ ಲಹರಿಗಳು-ದನಿ
ಬೀರುತಿಹವು ದಿಗ್‌ಭೇರಿಗಳು….!

ಕೃತ-ತ್ರೇತಾ-ದ್ವಾಪರದ ಯುಗಂಗಳು
ಕಾಣಿಕೆ ತಂದಿಹವೋ!
ನವಯುಗಪುರುಷನ ಭವ್ಯಭವಿಷ್ಯವ-
ನುದ್ಘೋಷಿಸುತಿಹವೋ !

ಇಂದಿನುದಯರವಿ ತಂದಿಹನೈ ತ-
ನ್ನೊಂದಿಗೆ ನವಯುಗವ-
ಇಂದಿನ ಪಾವನ ಪವನ ಹರಡುತಿಹ
ಸ್ವಾತಂತ್ರ್ಯದ ಸೊಗವ!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...