Home / ಕವನ / ಕವಿತೆ / ನವಯುಗಾರಂಭ

ನವಯುಗಾರಂಭ

(ಭಾರತ ಸ್ವಾತಂತ್ರ ದಿನದಂದಿನ ಉಲ್ಲಸಿತಭಾವನೆಯ ಉತ್ಸಾಹ ಪ್ರಗಾಥ)


ಇಂದಿನುದಯ ರವಿ ತಂದಿಹನೈ, ತ-
ನ್ನೊಂದಿಗೆ ನವಯುಗವ,
ಇಂದಿನ ಮಧುರಸಮೀರ ಹರಡುತಿಹ
ಸ್ವಾತಂತ್ರ್ಯದ ಸೊಗವ!

ಇಂದಿನ ಉಸಿರಾಟಕೆ ತಡೆಯಿಲ್ಲವು
ಕಳಚಿ ಕೊರಳ ನೊಗವ-
ಹೊಂದಿಹವೈ ಮನ-ಮನವು ರೆಕ್ಕೆಗಳ,
ಮೀರಿಸಿಹವು ಖಗವ!

ಪ್ರಳಯದಿಳೆಯ ತಮ ಮರೆಯಾಯ್ತೋ-ಕಡ-
ಲೊಳಗಿನ ನೌಕೆಯು ಕರೆಗಾಯ್ತೋ-ಮನು-
ಕುಲದ ಬಾಳ ಗೋಳದು ಹೋಯ್ತೊ….!

ಉಳಿದಿವೆ ಶಕ್ತಿಯ ಬೀಜಗಳೆಲ್ಲವು ;
ಕಂಡೆವು ನವಯುಗವ….
ಬೆಳೆಯ ಕೊಂಡು ನಾವಿನ್ನು ಬಲಿಯ ಬೇ-
ಕಾಗಿದೆ ಹೊಸಜಗವ !

ಇಂದಿನುದಯರವಿ ತಂದಿಹನೈ, ತ-
ನ್ನೊಂದಿಗೆ ನವೆಯುಗವ-
ಮಂದಿ ಕಾಣುತಿದೆ ಭಾರತಮಾತೆಯ
ಚೆಂದದ ನಗೆಮೊಗವ !


ಇಂದು ಹುಟ್ಟಿದಣುಗನಿಗೆ ಇಲ್ಲವೈ,
ಪರದಾಸ್ಯದ ಹೊಲೆಯು !
ಬೆಂದುಹೋಯ್ತು ದೆಸೆದೆಸೆಗಳಲ್ಲಿಯೂ
ಹಗೆಯು ಹೆಣೆದ ಬಲೆಯು !

ಹಿಂದೆ ತಿಂದ ಕೂಳೇನ ಕೊಟ್ಟಿ ತೋ-
ಬರಿಯೆ ಹಂದೆತನವ;
ಇಂದು ಉಂಡ ಊಟವಿದು ತುಂಬುತಿದೆ
ಮನದಿ ಮನುಜಗುಣವ.

ತುಂಡುಗೊಂಡ ಎದೆ ಬೆಸೆದಿಹುವೋ-ಜನ-
ಮಂಡಲದಸುಗಳ ಹೊಸೆದಿಹವೋ-ರಣ-
ಚಂಡಿಯ ಕಂಗಳ ಕೊಸೆದಿಹವೊ….!

ಯಾವ ಭಾವ ಕಂಡಿರುವ ಕನಸು ಮೈ-
ಗೊಳುತಲಿಂದು ಬಂತೋ…
ಯಾವ ಯೋಗ ಸಾಧನವು ನಮಗೆ ಸಂ-
ಸಿದ್ಧಿಯನ್ನು ತಂತೋ !

ಇಂದಿನುದಯರವಿ ತಂದಿಹನೈ ತ-
ನ್ನೊಂದಿಗೆ ನವಯುಗವ-
ಕುಂದದಿರುವ ಪ್ರಭೆಯಿಂದ ಬೆಳಗುವನು
ಭಾಗ್ಯೋದಯನಗವ.


ದೇವನು ಮೀನಿನ ಮಾನಕಿಳಿದು ಆ
ಪ್ರಳಯ ಕಳೆದನಂದು ;
ಮಾನವ ದೇವನ ಸ್ಥಾನಕೇರಿ ಈ
ಪ್ರಳಯವಳಿದನಿಂದು !

ದೇವನೊಬ್ಬನೇ ತಂದ ಯುಗಗಳವು
ವೈಷಮ್ಯದ ಒಡಲು,
ಮಾನವನೇ ಮೂಡಿಸಿದೀ ನವಯುಗ
ಸಮತೆಯ ಸವಿಗಡಲು !

ಭಾರತಶಕ್ತಿಯು ದುಡಿ-ದುಡಿದು,-ಕರೆ-
ತಂದಿದೆ ಕಾಲದ ಕೈಹಿಡಿದು-ಇದೆ
ಲೋಕದ ಕಂಗಳ ತೆರೆಸುವುದು….!

ದಾನವತೆಯ ಮೂಲವನೇ ಮುರಿಯುವೆ-
ನೆನ್ನುವುದೀಯುಗವು ;
ಮಾನವರೆದೆಯೊಳೆ ದೇವನಿರುವುದನು
ಕಾಂಬುದಿನ್ನು ಜಗವು !

ಇಂದಿನುದಯರವಿ ತಂದಿಹನೈ ತ-
ನ್ನೊಂದಿಗೆ ನವಯುಗವ-
ಇಂದಿನ ಗಾಳಿಯು ಗೀತಿಸುತಿರುವುದು
ಸ್ವಾತಂತ್ರ್ಯದ ಸೊಗವ !


ತಾರಾಲೋಕದ ಮೇಗಣಿಂದ ಋಷಿ-
ವೃಂದವು ಹರಸುತಿದೆ;
ಭಾರತಕುಲಪಿತೃಗಣವು ಸ್ವರ್ಗದಿಂ
ಹೂಮಳೆಯೆರಚುತಿದೆ.

ಬೆಳ್ಳಿಯ ಬೆಟ್ಟದ ಮೇಲೆ ತ್ರಿಶೂಲಿಯು
ತಾಂಡವ ತೊಡಗಿರುವ-
ಯಕ್ಷ-ರಕ್ಷ ಗಂಧರ್ವ ಕಿನ್ನರರ
ಮೇಳ ಕೂಡಿಸಿರುವ.

ಪೂರ್ವ-ಪಶ್ಚಿಮದ ಕಡಲುಗಳು-ಉ-
ಬ್ಬೇರಿ ಕುಣಿಯುತಿವೆ ಲಹರಿಗಳು-ದನಿ
ಬೀರುತಿಹವು ದಿಗ್‌ಭೇರಿಗಳು….!

ಕೃತ-ತ್ರೇತಾ-ದ್ವಾಪರದ ಯುಗಂಗಳು
ಕಾಣಿಕೆ ತಂದಿಹವೋ!
ನವಯುಗಪುರುಷನ ಭವ್ಯಭವಿಷ್ಯವ-
ನುದ್ಘೋಷಿಸುತಿಹವೋ !

ಇಂದಿನುದಯರವಿ ತಂದಿಹನೈ ತ-
ನ್ನೊಂದಿಗೆ ನವಯುಗವ-
ಇಂದಿನ ಪಾವನ ಪವನ ಹರಡುತಿಹ
ಸ್ವಾತಂತ್ರ್ಯದ ಸೊಗವ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...