Home / ಕವನ / ಕವಿತೆ / ನವಯುಗಾರಂಭ

ನವಯುಗಾರಂಭ

(ಭಾರತ ಸ್ವಾತಂತ್ರ ದಿನದಂದಿನ ಉಲ್ಲಸಿತಭಾವನೆಯ ಉತ್ಸಾಹ ಪ್ರಗಾಥ)


ಇಂದಿನುದಯ ರವಿ ತಂದಿಹನೈ, ತ-
ನ್ನೊಂದಿಗೆ ನವಯುಗವ,
ಇಂದಿನ ಮಧುರಸಮೀರ ಹರಡುತಿಹ
ಸ್ವಾತಂತ್ರ್ಯದ ಸೊಗವ!

ಇಂದಿನ ಉಸಿರಾಟಕೆ ತಡೆಯಿಲ್ಲವು
ಕಳಚಿ ಕೊರಳ ನೊಗವ-
ಹೊಂದಿಹವೈ ಮನ-ಮನವು ರೆಕ್ಕೆಗಳ,
ಮೀರಿಸಿಹವು ಖಗವ!

ಪ್ರಳಯದಿಳೆಯ ತಮ ಮರೆಯಾಯ್ತೋ-ಕಡ-
ಲೊಳಗಿನ ನೌಕೆಯು ಕರೆಗಾಯ್ತೋ-ಮನು-
ಕುಲದ ಬಾಳ ಗೋಳದು ಹೋಯ್ತೊ….!

ಉಳಿದಿವೆ ಶಕ್ತಿಯ ಬೀಜಗಳೆಲ್ಲವು ;
ಕಂಡೆವು ನವಯುಗವ….
ಬೆಳೆಯ ಕೊಂಡು ನಾವಿನ್ನು ಬಲಿಯ ಬೇ-
ಕಾಗಿದೆ ಹೊಸಜಗವ !

ಇಂದಿನುದಯರವಿ ತಂದಿಹನೈ, ತ-
ನ್ನೊಂದಿಗೆ ನವೆಯುಗವ-
ಮಂದಿ ಕಾಣುತಿದೆ ಭಾರತಮಾತೆಯ
ಚೆಂದದ ನಗೆಮೊಗವ !


ಇಂದು ಹುಟ್ಟಿದಣುಗನಿಗೆ ಇಲ್ಲವೈ,
ಪರದಾಸ್ಯದ ಹೊಲೆಯು !
ಬೆಂದುಹೋಯ್ತು ದೆಸೆದೆಸೆಗಳಲ್ಲಿಯೂ
ಹಗೆಯು ಹೆಣೆದ ಬಲೆಯು !

ಹಿಂದೆ ತಿಂದ ಕೂಳೇನ ಕೊಟ್ಟಿ ತೋ-
ಬರಿಯೆ ಹಂದೆತನವ;
ಇಂದು ಉಂಡ ಊಟವಿದು ತುಂಬುತಿದೆ
ಮನದಿ ಮನುಜಗುಣವ.

ತುಂಡುಗೊಂಡ ಎದೆ ಬೆಸೆದಿಹುವೋ-ಜನ-
ಮಂಡಲದಸುಗಳ ಹೊಸೆದಿಹವೋ-ರಣ-
ಚಂಡಿಯ ಕಂಗಳ ಕೊಸೆದಿಹವೊ….!

ಯಾವ ಭಾವ ಕಂಡಿರುವ ಕನಸು ಮೈ-
ಗೊಳುತಲಿಂದು ಬಂತೋ…
ಯಾವ ಯೋಗ ಸಾಧನವು ನಮಗೆ ಸಂ-
ಸಿದ್ಧಿಯನ್ನು ತಂತೋ !

ಇಂದಿನುದಯರವಿ ತಂದಿಹನೈ ತ-
ನ್ನೊಂದಿಗೆ ನವಯುಗವ-
ಕುಂದದಿರುವ ಪ್ರಭೆಯಿಂದ ಬೆಳಗುವನು
ಭಾಗ್ಯೋದಯನಗವ.


ದೇವನು ಮೀನಿನ ಮಾನಕಿಳಿದು ಆ
ಪ್ರಳಯ ಕಳೆದನಂದು ;
ಮಾನವ ದೇವನ ಸ್ಥಾನಕೇರಿ ಈ
ಪ್ರಳಯವಳಿದನಿಂದು !

ದೇವನೊಬ್ಬನೇ ತಂದ ಯುಗಗಳವು
ವೈಷಮ್ಯದ ಒಡಲು,
ಮಾನವನೇ ಮೂಡಿಸಿದೀ ನವಯುಗ
ಸಮತೆಯ ಸವಿಗಡಲು !

ಭಾರತಶಕ್ತಿಯು ದುಡಿ-ದುಡಿದು,-ಕರೆ-
ತಂದಿದೆ ಕಾಲದ ಕೈಹಿಡಿದು-ಇದೆ
ಲೋಕದ ಕಂಗಳ ತೆರೆಸುವುದು….!

ದಾನವತೆಯ ಮೂಲವನೇ ಮುರಿಯುವೆ-
ನೆನ್ನುವುದೀಯುಗವು ;
ಮಾನವರೆದೆಯೊಳೆ ದೇವನಿರುವುದನು
ಕಾಂಬುದಿನ್ನು ಜಗವು !

ಇಂದಿನುದಯರವಿ ತಂದಿಹನೈ ತ-
ನ್ನೊಂದಿಗೆ ನವಯುಗವ-
ಇಂದಿನ ಗಾಳಿಯು ಗೀತಿಸುತಿರುವುದು
ಸ್ವಾತಂತ್ರ್ಯದ ಸೊಗವ !


ತಾರಾಲೋಕದ ಮೇಗಣಿಂದ ಋಷಿ-
ವೃಂದವು ಹರಸುತಿದೆ;
ಭಾರತಕುಲಪಿತೃಗಣವು ಸ್ವರ್ಗದಿಂ
ಹೂಮಳೆಯೆರಚುತಿದೆ.

ಬೆಳ್ಳಿಯ ಬೆಟ್ಟದ ಮೇಲೆ ತ್ರಿಶೂಲಿಯು
ತಾಂಡವ ತೊಡಗಿರುವ-
ಯಕ್ಷ-ರಕ್ಷ ಗಂಧರ್ವ ಕಿನ್ನರರ
ಮೇಳ ಕೂಡಿಸಿರುವ.

ಪೂರ್ವ-ಪಶ್ಚಿಮದ ಕಡಲುಗಳು-ಉ-
ಬ್ಬೇರಿ ಕುಣಿಯುತಿವೆ ಲಹರಿಗಳು-ದನಿ
ಬೀರುತಿಹವು ದಿಗ್‌ಭೇರಿಗಳು….!

ಕೃತ-ತ್ರೇತಾ-ದ್ವಾಪರದ ಯುಗಂಗಳು
ಕಾಣಿಕೆ ತಂದಿಹವೋ!
ನವಯುಗಪುರುಷನ ಭವ್ಯಭವಿಷ್ಯವ-
ನುದ್ಘೋಷಿಸುತಿಹವೋ !

ಇಂದಿನುದಯರವಿ ತಂದಿಹನೈ ತ-
ನ್ನೊಂದಿಗೆ ನವಯುಗವ-
ಇಂದಿನ ಪಾವನ ಪವನ ಹರಡುತಿಹ
ಸ್ವಾತಂತ್ರ್ಯದ ಸೊಗವ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...