ನವಯುಗಾರಂಭ

(ಭಾರತ ಸ್ವಾತಂತ್ರ ದಿನದಂದಿನ ಉಲ್ಲಸಿತಭಾವನೆಯ ಉತ್ಸಾಹ ಪ್ರಗಾಥ)


ಇಂದಿನುದಯ ರವಿ ತಂದಿಹನೈ, ತ-
ನ್ನೊಂದಿಗೆ ನವಯುಗವ,
ಇಂದಿನ ಮಧುರಸಮೀರ ಹರಡುತಿಹ
ಸ್ವಾತಂತ್ರ್ಯದ ಸೊಗವ!

ಇಂದಿನ ಉಸಿರಾಟಕೆ ತಡೆಯಿಲ್ಲವು
ಕಳಚಿ ಕೊರಳ ನೊಗವ-
ಹೊಂದಿಹವೈ ಮನ-ಮನವು ರೆಕ್ಕೆಗಳ,
ಮೀರಿಸಿಹವು ಖಗವ!

ಪ್ರಳಯದಿಳೆಯ ತಮ ಮರೆಯಾಯ್ತೋ-ಕಡ-
ಲೊಳಗಿನ ನೌಕೆಯು ಕರೆಗಾಯ್ತೋ-ಮನು-
ಕುಲದ ಬಾಳ ಗೋಳದು ಹೋಯ್ತೊ….!

ಉಳಿದಿವೆ ಶಕ್ತಿಯ ಬೀಜಗಳೆಲ್ಲವು ;
ಕಂಡೆವು ನವಯುಗವ….
ಬೆಳೆಯ ಕೊಂಡು ನಾವಿನ್ನು ಬಲಿಯ ಬೇ-
ಕಾಗಿದೆ ಹೊಸಜಗವ !

ಇಂದಿನುದಯರವಿ ತಂದಿಹನೈ, ತ-
ನ್ನೊಂದಿಗೆ ನವೆಯುಗವ-
ಮಂದಿ ಕಾಣುತಿದೆ ಭಾರತಮಾತೆಯ
ಚೆಂದದ ನಗೆಮೊಗವ !


ಇಂದು ಹುಟ್ಟಿದಣುಗನಿಗೆ ಇಲ್ಲವೈ,
ಪರದಾಸ್ಯದ ಹೊಲೆಯು !
ಬೆಂದುಹೋಯ್ತು ದೆಸೆದೆಸೆಗಳಲ್ಲಿಯೂ
ಹಗೆಯು ಹೆಣೆದ ಬಲೆಯು !

ಹಿಂದೆ ತಿಂದ ಕೂಳೇನ ಕೊಟ್ಟಿ ತೋ-
ಬರಿಯೆ ಹಂದೆತನವ;
ಇಂದು ಉಂಡ ಊಟವಿದು ತುಂಬುತಿದೆ
ಮನದಿ ಮನುಜಗುಣವ.

ತುಂಡುಗೊಂಡ ಎದೆ ಬೆಸೆದಿಹುವೋ-ಜನ-
ಮಂಡಲದಸುಗಳ ಹೊಸೆದಿಹವೋ-ರಣ-
ಚಂಡಿಯ ಕಂಗಳ ಕೊಸೆದಿಹವೊ….!

ಯಾವ ಭಾವ ಕಂಡಿರುವ ಕನಸು ಮೈ-
ಗೊಳುತಲಿಂದು ಬಂತೋ…
ಯಾವ ಯೋಗ ಸಾಧನವು ನಮಗೆ ಸಂ-
ಸಿದ್ಧಿಯನ್ನು ತಂತೋ !

ಇಂದಿನುದಯರವಿ ತಂದಿಹನೈ ತ-
ನ್ನೊಂದಿಗೆ ನವಯುಗವ-
ಕುಂದದಿರುವ ಪ್ರಭೆಯಿಂದ ಬೆಳಗುವನು
ಭಾಗ್ಯೋದಯನಗವ.


ದೇವನು ಮೀನಿನ ಮಾನಕಿಳಿದು ಆ
ಪ್ರಳಯ ಕಳೆದನಂದು ;
ಮಾನವ ದೇವನ ಸ್ಥಾನಕೇರಿ ಈ
ಪ್ರಳಯವಳಿದನಿಂದು !

ದೇವನೊಬ್ಬನೇ ತಂದ ಯುಗಗಳವು
ವೈಷಮ್ಯದ ಒಡಲು,
ಮಾನವನೇ ಮೂಡಿಸಿದೀ ನವಯುಗ
ಸಮತೆಯ ಸವಿಗಡಲು !

ಭಾರತಶಕ್ತಿಯು ದುಡಿ-ದುಡಿದು,-ಕರೆ-
ತಂದಿದೆ ಕಾಲದ ಕೈಹಿಡಿದು-ಇದೆ
ಲೋಕದ ಕಂಗಳ ತೆರೆಸುವುದು….!

ದಾನವತೆಯ ಮೂಲವನೇ ಮುರಿಯುವೆ-
ನೆನ್ನುವುದೀಯುಗವು ;
ಮಾನವರೆದೆಯೊಳೆ ದೇವನಿರುವುದನು
ಕಾಂಬುದಿನ್ನು ಜಗವು !

ಇಂದಿನುದಯರವಿ ತಂದಿಹನೈ ತ-
ನ್ನೊಂದಿಗೆ ನವಯುಗವ-
ಇಂದಿನ ಗಾಳಿಯು ಗೀತಿಸುತಿರುವುದು
ಸ್ವಾತಂತ್ರ್ಯದ ಸೊಗವ !


ತಾರಾಲೋಕದ ಮೇಗಣಿಂದ ಋಷಿ-
ವೃಂದವು ಹರಸುತಿದೆ;
ಭಾರತಕುಲಪಿತೃಗಣವು ಸ್ವರ್ಗದಿಂ
ಹೂಮಳೆಯೆರಚುತಿದೆ.

ಬೆಳ್ಳಿಯ ಬೆಟ್ಟದ ಮೇಲೆ ತ್ರಿಶೂಲಿಯು
ತಾಂಡವ ತೊಡಗಿರುವ-
ಯಕ್ಷ-ರಕ್ಷ ಗಂಧರ್ವ ಕಿನ್ನರರ
ಮೇಳ ಕೂಡಿಸಿರುವ.

ಪೂರ್ವ-ಪಶ್ಚಿಮದ ಕಡಲುಗಳು-ಉ-
ಬ್ಬೇರಿ ಕುಣಿಯುತಿವೆ ಲಹರಿಗಳು-ದನಿ
ಬೀರುತಿಹವು ದಿಗ್‌ಭೇರಿಗಳು….!

ಕೃತ-ತ್ರೇತಾ-ದ್ವಾಪರದ ಯುಗಂಗಳು
ಕಾಣಿಕೆ ತಂದಿಹವೋ!
ನವಯುಗಪುರುಷನ ಭವ್ಯಭವಿಷ್ಯವ-
ನುದ್ಘೋಷಿಸುತಿಹವೋ !

ಇಂದಿನುದಯರವಿ ತಂದಿಹನೈ ತ-
ನ್ನೊಂದಿಗೆ ನವಯುಗವ-
ಇಂದಿನ ಪಾವನ ಪವನ ಹರಡುತಿಹ
ಸ್ವಾತಂತ್ರ್ಯದ ಸೊಗವ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರಾಸೇ ಹಾಸ್ಯ
Next post ಬೆಡಗಿ

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys