ಬೆಡಗಿ

ಸುಡು ನಿನ್ನ ಸಿಂಗರವ,
ನಿನ್ನ ಸೊಗವ.
ಬಿಡು ನಿನ್ನ ಬೆಡಗ ಹಾ-
ಳಾಗಿಸಿತು ಜಗವ!
ಆಳಾಗಿಸಿತು ನೂರು
ದೇಹಗಳನು,
ತೊಳಲಾಡಿಸಿತ್ತೆನಿತೊ
ಗೇಹಗಳನು!
ನಿನ್ನ ಮಖಮಲು ಮುಖವ
ಬಣ್ಣಿಸಿದ ವೆಂಪು,-
ಕಳೆಯಲದು ನಿಲ್ಲುವವು
ನೂರು ಸಂಪು!
ಓ ಸುವಾಸಿನಿ! ನೀನು
ತೈಲಿಸಿದ ಕೇಶ,-
ಅದಕೆ ಬರಿದಾಯ್ತು ಜನ
ಶಂಕರಿಯ ಕೋಶ!
ಸುಡು ನಿನ್ನ ಸಿಂಗರವ,
ನಿನ್ನ ನೊಗವ.
ಬಿಡು ನಿನ್ನ ಬೆಡಗ, ಹಾ-
ಳಾಗಿಸಿತು ಜಗವ!

ನಿನ್ನ ಧಮನಿಯಲಿರುವ
ರಾಜರಕ್ತ
ಅನ್ಯಾಯಗಳ ತೀರ್‍ಥ-
ವೆಂದು ವ್ಯಕ್ತ
ಕೆಲಸವಿಲ್ಲದೆ ರಾಣಿ-
ವಾಸದಲ್ಲಿ
ಕುಳಿತರಳಿಸಿದ ಮಂದ-
ಹಾಸದಲ್ಲಿ
ನಿನ್ನ ಕುಲಕೋಟಿಯಾ
ಹೆಂಗಳೆಯರು
ಕಂಡಿಹರು ಸ್ವರ್‍ಗವನ್ನು,-
ನೆಲಕಿಳಿಯರು!
ನೂರು ಹೆಣ್ಣಿನ ಹೆಣ್ಣು-
ತನವೆ ಹೋಗಿ,-
ಕೂಲಿ ಹೆಣ್ಣಾಗಿ ಬರಿ
ಯಂತ್ರವಾಗಿ
ಸಾಯುತಿರೆ ಕೂಡಿಟ್ಟ
ಹಣದ ಗಂಟು,-
ಅದರಿಂದ ನಿನ್ನ ಚೆಲು
ವಿಕೆಗೆ ಉಂಟು,-
ನರಕದಾ ಮುಗಿಲಿಂದ
ಬಂದ ಮಿಂಚು,-
ನಿನ್ನ ಕೆಂದುಟಿಯ ನಗೆ,
ರಕ್ಕಸರ ಹೊಂಚು!
ಸುಡು ನಿನ್ನ ಸಿಂಗರವ,
ನಿನ್ನ ಸೊಗವ.
ಬಿಡು ನಿನ್ನ ಬೆಡಗ ಹಾ-
ಳಾಗಿಸಿತು ಜಗವ.

ದಿವ್ಯ ಸುಂದರಿಯಹುದು
ನೀನು ಬಾಲೆ.
ಸೆರೆಗೊಳುವ ಸೆರೆ ನೀನು;
ಹೆಂಡ. ಹಾಲೆ ?
ನಿತ್ಯ ಸಂಕಟ ಪಡಲು
ನೂರು ನರಪ್ರಾಣಿ,-
ಮೆರೆಯಲೆಳಸುವಿಯಲ್ಲ,
ಆಗಿ ಇಂದ್ರಾಣಿ?
ಬಾ ಇತ್ತ ಶಪಿಸುತ್ತ
ನಿನ್ನ ಕುಲಕೋಟಿ,-
ಬಾ ಇತ್ತ ಸಂವದದ
ಸೆರೆಮನೆಯ ದಾಟಿ!
ನೂರು ಗುಡಿಸಲಗಳಲಿ
ಮೀರಿ ನರಳಾಟ,-
ಕಾಸಿಲ್ಲ-ಈಸಿಲ್ಲ-
ವೆಂದು ಹೊರಳಾಟ!
ದೇವ ಕೊಟ್ಟಿಹ ಚೆಲುವ-
ದೊಂದೆ ಸಾಕು,
ಚಲು ಗುಲಾಬಿಗೆ ಬಣ್ಣ –
ನೆಯದೇಕೆ ಬೇಕು?
ಮೀಸಲಿಡು ಆ ಹಣವ
ಕಾಸಿಲ್ಲದರಿಗೆ.
ಇಳಿಯಾಣ್ಮಗೀವುದಿದೆ,-
ಇದೆ ಸುಂಕ, ತೆರಿಗೆ!
ಸುಡು ನಿನ್ನ ಸಿಂಗರವ,
ನಿನ್ನ ನೊಗವ.
ಬಿಡು ನಿನ್ನ ಬೆಡಗ, ಹಾ-
ಳಾಗಿಸಿತು ಜಗವ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನವಯುಗಾರಂಭ
Next post ಬಡಗಿಗಳೂ ಆನೆಯೂ

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…