Home / ಕವನ / ಕವಿತೆ / ಬೆಡಗಿ

ಬೆಡಗಿ

ಸುಡು ನಿನ್ನ ಸಿಂಗರವ,
ನಿನ್ನ ಸೊಗವ.
ಬಿಡು ನಿನ್ನ ಬೆಡಗ ಹಾ-
ಳಾಗಿಸಿತು ಜಗವ!
ಆಳಾಗಿಸಿತು ನೂರು
ದೇಹಗಳನು,
ತೊಳಲಾಡಿಸಿತ್ತೆನಿತೊ
ಗೇಹಗಳನು!
ನಿನ್ನ ಮಖಮಲು ಮುಖವ
ಬಣ್ಣಿಸಿದ ವೆಂಪು,-
ಕಳೆಯಲದು ನಿಲ್ಲುವವು
ನೂರು ಸಂಪು!
ಓ ಸುವಾಸಿನಿ! ನೀನು
ತೈಲಿಸಿದ ಕೇಶ,-
ಅದಕೆ ಬರಿದಾಯ್ತು ಜನ
ಶಂಕರಿಯ ಕೋಶ!
ಸುಡು ನಿನ್ನ ಸಿಂಗರವ,
ನಿನ್ನ ನೊಗವ.
ಬಿಡು ನಿನ್ನ ಬೆಡಗ, ಹಾ-
ಳಾಗಿಸಿತು ಜಗವ!

ನಿನ್ನ ಧಮನಿಯಲಿರುವ
ರಾಜರಕ್ತ
ಅನ್ಯಾಯಗಳ ತೀರ್‍ಥ-
ವೆಂದು ವ್ಯಕ್ತ
ಕೆಲಸವಿಲ್ಲದೆ ರಾಣಿ-
ವಾಸದಲ್ಲಿ
ಕುಳಿತರಳಿಸಿದ ಮಂದ-
ಹಾಸದಲ್ಲಿ
ನಿನ್ನ ಕುಲಕೋಟಿಯಾ
ಹೆಂಗಳೆಯರು
ಕಂಡಿಹರು ಸ್ವರ್‍ಗವನ್ನು,-
ನೆಲಕಿಳಿಯರು!
ನೂರು ಹೆಣ್ಣಿನ ಹೆಣ್ಣು-
ತನವೆ ಹೋಗಿ,-
ಕೂಲಿ ಹೆಣ್ಣಾಗಿ ಬರಿ
ಯಂತ್ರವಾಗಿ
ಸಾಯುತಿರೆ ಕೂಡಿಟ್ಟ
ಹಣದ ಗಂಟು,-
ಅದರಿಂದ ನಿನ್ನ ಚೆಲು
ವಿಕೆಗೆ ಉಂಟು,-
ನರಕದಾ ಮುಗಿಲಿಂದ
ಬಂದ ಮಿಂಚು,-
ನಿನ್ನ ಕೆಂದುಟಿಯ ನಗೆ,
ರಕ್ಕಸರ ಹೊಂಚು!
ಸುಡು ನಿನ್ನ ಸಿಂಗರವ,
ನಿನ್ನ ಸೊಗವ.
ಬಿಡು ನಿನ್ನ ಬೆಡಗ ಹಾ-
ಳಾಗಿಸಿತು ಜಗವ.

ದಿವ್ಯ ಸುಂದರಿಯಹುದು
ನೀನು ಬಾಲೆ.
ಸೆರೆಗೊಳುವ ಸೆರೆ ನೀನು;
ಹೆಂಡ. ಹಾಲೆ ?
ನಿತ್ಯ ಸಂಕಟ ಪಡಲು
ನೂರು ನರಪ್ರಾಣಿ,-
ಮೆರೆಯಲೆಳಸುವಿಯಲ್ಲ,
ಆಗಿ ಇಂದ್ರಾಣಿ?
ಬಾ ಇತ್ತ ಶಪಿಸುತ್ತ
ನಿನ್ನ ಕುಲಕೋಟಿ,-
ಬಾ ಇತ್ತ ಸಂವದದ
ಸೆರೆಮನೆಯ ದಾಟಿ!
ನೂರು ಗುಡಿಸಲಗಳಲಿ
ಮೀರಿ ನರಳಾಟ,-
ಕಾಸಿಲ್ಲ-ಈಸಿಲ್ಲ-
ವೆಂದು ಹೊರಳಾಟ!
ದೇವ ಕೊಟ್ಟಿಹ ಚೆಲುವ-
ದೊಂದೆ ಸಾಕು,
ಚಲು ಗುಲಾಬಿಗೆ ಬಣ್ಣ –
ನೆಯದೇಕೆ ಬೇಕು?
ಮೀಸಲಿಡು ಆ ಹಣವ
ಕಾಸಿಲ್ಲದರಿಗೆ.
ಇಳಿಯಾಣ್ಮಗೀವುದಿದೆ,-
ಇದೆ ಸುಂಕ, ತೆರಿಗೆ!
ಸುಡು ನಿನ್ನ ಸಿಂಗರವ,
ನಿನ್ನ ನೊಗವ.
ಬಿಡು ನಿನ್ನ ಬೆಡಗ, ಹಾ-
ಳಾಗಿಸಿತು ಜಗವ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...