Home / ಬಾಲ ಚಿಲುಮೆ / ಕಥೆ / ಬಡಗಿಗಳೂ ಆನೆಯೂ

ಬಡಗಿಗಳೂ ಆನೆಯೂ

ಕಪಿಲಾನದಿಯ ತೀರದಲ್ಲಿ ಒಂದು ಕಾಡು. ಬಡಗಿಗಳು ಅಲ್ಲಿ ಮರವನ್ನು ಕುಯ್ಯುತ್ತಿದ್ದರು. ಎಲ್ಲರೂ ತಮ್ಮ ತಮ್ಮ ಪಾಡಿಗೆ ತಾವು ತಾವು ಕೆಲಸ ಮಾಡುತ್ತಿದ್ದರು. ಆಗ ಆನೆಯು ಘೀಳಿಟ್ಟಿಂತೆ ಆಗಲು ಎಲ್ಲರಿಗೂ ಹೆದರಿಕೆ ಆಯಿತು. ಮತ್ತೂ ಒಂದು ಸಲ ಹಾಗೆಯೇ ಅದೇ ಶಬ್ದ ಕೇಳಿಸಿತು. ಎಲ್ಲಿಯವರು ಅಲ್ಲಲ್ಲೇ ಅಡಗಿಕೊಂಡು ಬಿಟ್ಟರು.

ಒಂದು ದೊಡ್ಡ ಕೊಂಬಿನಾನೆ ಕುಂಟುತ್ತಾ ಬಂತು. ಅದಕ್ಕೆ ಬಲಗಡೆಯ ಮುಂಗಾಲು ಮುಂದಕ್ಕೆ ಇಡುವುದಕ್ಕೂ ಆಗದಷ್ಟು ಗಾತ್ರ ಬಾತುಕೊಂಡಿತ್ತು. ಬಲು ಕಸ್ಟದಿಂದ ಆನೆಯು ಆ ಬಡಗಿಗಳು ಇರುವ ತಾವಿಗೆ ಬಂತು. ಇನ್ನು ಮುಂದೆ ಹೋಗಲಾರದೆ ಮಲಗಿಕೊಂಡು ಬಿಟ್ಟಿತು. ಅದು ನೋವಿನಿಂದ ನರಳುತ್ತಿತ್ತು.

ಆನೆಯು ಬಾಧೆ ಪಡುತ್ತಿರುವುದು ಬಡಗಿಗಳಿಗೆ ತಿಳಿಯಿತು. ಮನಸ್ಸು ನಿಲ್ಲದೆ ಆದುದು ಆಗಲಿ ಎಂದು ಅವಿತಿದ್ದವನು ಆನೆಯ ಬಳಿಗೆ ಹೋದನು. ಅವನು ಹತ್ತಿರ ಬಂದರೂ ಆನೆಯು ಏನೂ ಮಾಡಲಿಲ್ಲ. ಅವನಿಗೆ ಧೈರ್‍ಯವಾಗಿ, ಇನ್ನೂ ಹತ್ತಿರಕ್ಕೆ ಹೋದನು. ಆನೆಯು ಅವನ ಮುಖವನ್ನು ನೋಡಿ, ಕಣ್ಣೀರು ಬಿಟ್ಟಿತು. ಅದನ್ನು ನೋಡಿದರೆ “ನೀನು ಬಂದು ಏನಾಗಿದೆ ನೋಡು” ಎಂದು ಹೇಳುವ ಹಾಗೆ ತೋರಿತು. ಅದೂ ಒಂದು ಸಲ ನರಳಿತು. ಇನ್ನು ಸೈರಿಸುವುದು ಅಸಾಧ್ಯವಾಗಿ, ಊದಿದ ಕಾಲಿನ ಬಳಿಗೆ ಹೋದನು. ಎಡಗೈಯಲ್ಲಿ ಜೀವವನ್ನು ಹಿಡಿದುಕೊಂಡು, ಆ ಕಾಲನ್ನು ಹಿಡಿದು ನೋಡಿದರೆ. ಸುಮಾರು ಒಂದು ಗೇಣುದ್ದ, ಒಂದು ಹೆಬ್ಬೆರಳು ದಪ್ಪ ಇರುವ ಸಿಬಿರು ಚುಚ್ಚಿಕೊಂಡಿರುವುದು ಕಂಡು ಬಂತು. ಆದರಿಂದ ಆನೆಗೆ ಎಷ್ಟು ನೋವಾಗಿರಬಹುದೋ ಎಂದು ಅವನಿಗೆ ಕಣ್ಣಿನಲ್ಲಿ ನೀರು ಬಂತು. ಕೂಡಲೇ ತನ್ನವರನ್ನು ಕರೆದು ಬಿಸಿ ನೀರು ಕಾಯಿಸಿ ತರಿಸಿ ಅದನ್ನು ಹಾಕಿ ತೊಳೆದನು. ಆನೆಗೂ ಕೊಂಚ ಹಿತವಾಗಿ, ಒಂದು ನಿಟ್ಟುಸಿರು ಬಿಟ್ಟಿತು. ಹಾಗೇ ಇನ್ನೂ ಸ್ವಲ್ಪ ಬಿಸಿನೀರು ಹಾಕುತ್ತಿದ್ದು, ಕೊನೆಗೆ ಆ ಸಿಬಿರನ್ನು ಕಿತ್ತುಬಿಟ್ಟಿನು. ಸಿಬಿರು ಈಚೆಗೆ ಬಂದು ಬಿಟ್ಟಿತು. ಆ ವೇಳೆಗೆ ಧೈರ್‍ಯಗೊಂಡು ಎಲ್ಲರೂ ಅಲ್ಲಿಗೆ ಬಂದರು. ಆ ಗಾಯದಲ್ಲಿದ್ದ ಕೀವು ರಕ್ತಗಳನ ಚೆನ್ನಾಗಿ ತೊಳೆದು ಅದಕ್ಕೆ ತಮ್ಮಲ್ಲಿದ್ದ ಔಷಧಿಯನ್ನು ಹಾಕಿದರು.

ಆ ಹುಣ್ಣು ಆರುವುದಕ್ಕೆ ಒಂದು ತಿಂಗಳು ಹಿಡಿಯಿತು, ಅದುವರೆಗೂ ಆನೆಯು ಅಲ್ಲಿಯೇ ಇತ್ತು. ಬಡಗಿಗಳೂ ಅದಕ್ಕೆ ಅಲ್ಲಿಗೇ ಸೊಪ್ಪು ತಂದು ಹಾಕುತ್ತಿದ್ದರು. ಜತೆಗೆ ‘ಪಾಪ!’ ಎಂದು ತಾವು ತಂದಿದ್ದ ಬುತ್ತಿಯಲ್ಲೂ ಕೊಂಚಕೊಂಚ ಕೊಡುತ್ತಿದ್ದರು. ಆನೆಗೆ ಬಡಗಿಗಳಲ್ಲಿ ಪ್ರೀತಿ ಹುಟ್ಟಿತು. ಆನೆಯು ಅವರನ್ನು ಬಿಟ್ಟು ಹೋಗಲಾರದೆ ಆಲಿಯೇ ನಿಂತು ಬಿಟ್ಟಿತು. ಅವರಿಗಾಗಿ ಏನಾದರೂ ಕೆಲಸ ಮಾಡಿಕೊಡಬೇಕೆಂದು ದಿಮ್ಮಿಗಳನ್ನು ಸಾಗಿಸುವುದು, ಮರ ಎಳೆಯುವುದು ಮೊದಲಾದ ಕೆಲಸಗಳನ್ನು ಮಾಡಿಕೊಡುತ್ತಿತ್ತು. ಬಡಗಿಗಳ ಮಕ್ಕಳು ಯಾವತ್ತಾದರೂ ಬಂದರೆ ಅವರನ್ನು ಬೆನ್ನಿನ ಮೇಲೆ ಕೂಡಿಸಿಕೊಂಡು ಓಡಾಡಿಸುತ್ತಿತ್ತು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...