Home / ಬಾಲ ಚಿಲುಮೆ / ಕಥೆ / ಬಾಳೆಯೂ ಸುಗಂಧರಾಜನೂ

ಬಾಳೆಯೂ ಸುಗಂಧರಾಜನೂ

ಮುತ್ತುಗದ ಮರವು ಮರಗಳಿಗೆಲ್ಲಾ ಗುರುವಂತೆ. ಮರಗಳೆಲ್ಲಾ ಅದರ ಬಳಿಗೆ ಓದು ಕಲಿಯಲು ಹೋಗುತ್ತಿದ್ದವಂತೆ. ಅದು ಹಣ್ಣಿನ ಗಿಡಗಳಿಗೇ ಒಂದು ತರಗತಿ, ಹೂವಿನ ಗಿಡಗಳಿಗೇ ಒಂದು ತರಗತಿ ಎಂದು ಬೇರೆ ಬೇರೆ ಮಾಡಿದ್ದಿತಂತೆ. ಅಂತೂ ಪಾಠಗಳೇನೋ ಕ್ರಮವಾಗಿ ನಡೆಯುತ್ತಿದ್ದವು. ಹುಡುಗರು ಗುರುಗಳು ಹೇಳಿದಂತೆ ಕೇಳಿಕೊಂಡು ವಿದ್ಯೆ ಕಲಿಯುತ್ತಿದ್ದರು.

ಹಣ್ಣಿನ ಗಿಡಗಳಲ್ಲಿ ಬಾಳೆಯೂ, ಹೂವಿನ ಗಿಡಗಳಲ್ಲಿ ಸುಗಂಧರಾಜನೂ ಇಬ್ಬರೂ ಗೆಳೆಯರಾದವು. ಅವರಿಬ್ಬರಿಗೂ ಕೊಂಚ ಜಂಭ. “ಮುತ್ತುಗದ ಎಲೆಗಿಂತ ನನ್ನ ಎಲೆ ದೊಡ್ಡದು; ಅಲ್ಲದೆ ಜನರು ಮುತ್ತುಗದ ಎಲೆಗಿಂತ ನನ್ನ ಎಲೆಗೆ ಬೆಲೆಯನ್ನು ಕೊಡುವರು” ಎಂದು ಬಾಳೆಗೆ ಜಂಭ. “ಮುತ್ತುಗದ ಹೂ ಎಷ್ಟು ಅಂದವಾಗಿದ್ದರೇನು? ವಾಸನೆಯೇ ಇಲ್ಲ, ನನ್ನ ಹೂವಿನ ಮುಂದೆ ಹೂವೇ?” ಎಂದು ಸುಗಂಧರಾಜನಿಗೆ ಜಂಭ. ಈ ಜಂಭವು ಬಲಿಯಿತು. ಬಾಳೆಯೂ ಸುಗಂಧರಾಜನೂ ಬರುಬರುತ್ತ ಅವಿಧೇಯರಾದರು. ಅವು ಗುರುಗಳು ಹೇಳಿದ ಮಾತನ್ನು ಕೇಳದೆ ಹೋದವು.

ಮುತ್ತುಗವೂ ಇದನ್ನು ಕಂಡು, ಅವರಿಬ್ಬರನ್ನೂ ಕರೆದು “ನೀವು ಹೀಗೆ ಮಾಡಬಾರದು. ಹೇಳಿದ ಮಾತು ಕೇಳದಿದ್ದರೆ ನಿಮಗೇ ಕಷ್ಟ” ಎಂದು ಹೇಳಿತು. ಅವು ಕೇಳಲಿಲ್ಲ. ಆಗ ತರಗತಿಯಲ್ಲಿ “ಕವಲು ಬಿಡುವುದು” ಎಂಬ ಪಾಠವು ಆಗುತ್ತಿತ್ತು. ಅವಿಧೇಯರಾದ ಬಾಳೆ, ಸುಗಂಧರಾಜಗಳು ಪಾಠವನ್ನು ಗಮನಿಸಲಿಲ್ಲ.

ಕೆಲವು ದಿನವಾಯಿತು. ಮಲ್ಲಿಗೆ, ಜಾಜಿ, ಸಂಪಿಗೆ, ಪಾದರಿ, ಸುರಗಿ, ಪಗಡೆ, ಮೊದಲಾದ ಹೂವಿನ ಗಿಡಗಳೂ, ಮಾವು, ಬೇಲ, ಸೇಬು, ದ್ರಾಕ್ಷಿ, ಕಿತ್ತಳೆ, ಮೊದಲಾದ ಹಣ್ಣಿನ ಗಿಡಗಳೂ ಕವಲೊಡೆದವು. ಏನೇನು ಮಾಡಿದರೂ ಬಾಳೆಯೂ ಸುಗಂಧರಾಜನೂ ಕವಲು ಬಿಡಲಾಗಲಿಲ್ಲ. ಅವುಗಳಿಗೆ ಬಹಳ ದುಃಖವಾಯಿತು. “ಗುರುವು ಹೇಳಿದ ಮಾತು ಕೇಳಲಿಲ್ಲವಲ್ಲ! ಕೆಟ್ಟೆವಲ್ಲಾ!” ಎಂದು ಬಹಳ ನೊಂದುಕೊಂಡವು. ಈಗಲೂ ನೀವು ಬಾಳೆಯನ್ನೂ ಸುಗಂಧರಾಜನನ್ನೂ ನೋಡಿ. ಹಣ್ಣು ಹೂವು ಆದಮೇಲೆ ಮಿಕ್ಕ ಗಿಡಗಳು, ಕವಲೊಡೆದು ಸಂತೋಷದಿಂದ ಬೆಳೆಯುತ್ತಿದ್ದರೆ, ಅವೆರಡೂ ದುಃಖದಿಂದ ಬಾಡಿ ಬಳಲಿ ಒಣಗಿ ಹೋಗುವುವು.
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...