Home / ಬಾಲ ಚಿಲುಮೆ / ಕಥೆ / ಬಾಳೆಯೂ ಸುಗಂಧರಾಜನೂ

ಬಾಳೆಯೂ ಸುಗಂಧರಾಜನೂ

ಮುತ್ತುಗದ ಮರವು ಮರಗಳಿಗೆಲ್ಲಾ ಗುರುವಂತೆ. ಮರಗಳೆಲ್ಲಾ ಅದರ ಬಳಿಗೆ ಓದು ಕಲಿಯಲು ಹೋಗುತ್ತಿದ್ದವಂತೆ. ಅದು ಹಣ್ಣಿನ ಗಿಡಗಳಿಗೇ ಒಂದು ತರಗತಿ, ಹೂವಿನ ಗಿಡಗಳಿಗೇ ಒಂದು ತರಗತಿ ಎಂದು ಬೇರೆ ಬೇರೆ ಮಾಡಿದ್ದಿತಂತೆ. ಅಂತೂ ಪಾಠಗಳೇನೋ ಕ್ರಮವಾಗಿ ನಡೆಯುತ್ತಿದ್ದವು. ಹುಡುಗರು ಗುರುಗಳು ಹೇಳಿದಂತೆ ಕೇಳಿಕೊಂಡು ವಿದ್ಯೆ ಕಲಿಯುತ್ತಿದ್ದರು.

ಹಣ್ಣಿನ ಗಿಡಗಳಲ್ಲಿ ಬಾಳೆಯೂ, ಹೂವಿನ ಗಿಡಗಳಲ್ಲಿ ಸುಗಂಧರಾಜನೂ ಇಬ್ಬರೂ ಗೆಳೆಯರಾದವು. ಅವರಿಬ್ಬರಿಗೂ ಕೊಂಚ ಜಂಭ. “ಮುತ್ತುಗದ ಎಲೆಗಿಂತ ನನ್ನ ಎಲೆ ದೊಡ್ಡದು; ಅಲ್ಲದೆ ಜನರು ಮುತ್ತುಗದ ಎಲೆಗಿಂತ ನನ್ನ ಎಲೆಗೆ ಬೆಲೆಯನ್ನು ಕೊಡುವರು” ಎಂದು ಬಾಳೆಗೆ ಜಂಭ. “ಮುತ್ತುಗದ ಹೂ ಎಷ್ಟು ಅಂದವಾಗಿದ್ದರೇನು? ವಾಸನೆಯೇ ಇಲ್ಲ, ನನ್ನ ಹೂವಿನ ಮುಂದೆ ಹೂವೇ?” ಎಂದು ಸುಗಂಧರಾಜನಿಗೆ ಜಂಭ. ಈ ಜಂಭವು ಬಲಿಯಿತು. ಬಾಳೆಯೂ ಸುಗಂಧರಾಜನೂ ಬರುಬರುತ್ತ ಅವಿಧೇಯರಾದರು. ಅವು ಗುರುಗಳು ಹೇಳಿದ ಮಾತನ್ನು ಕೇಳದೆ ಹೋದವು.

ಮುತ್ತುಗವೂ ಇದನ್ನು ಕಂಡು, ಅವರಿಬ್ಬರನ್ನೂ ಕರೆದು “ನೀವು ಹೀಗೆ ಮಾಡಬಾರದು. ಹೇಳಿದ ಮಾತು ಕೇಳದಿದ್ದರೆ ನಿಮಗೇ ಕಷ್ಟ” ಎಂದು ಹೇಳಿತು. ಅವು ಕೇಳಲಿಲ್ಲ. ಆಗ ತರಗತಿಯಲ್ಲಿ “ಕವಲು ಬಿಡುವುದು” ಎಂಬ ಪಾಠವು ಆಗುತ್ತಿತ್ತು. ಅವಿಧೇಯರಾದ ಬಾಳೆ, ಸುಗಂಧರಾಜಗಳು ಪಾಠವನ್ನು ಗಮನಿಸಲಿಲ್ಲ.

ಕೆಲವು ದಿನವಾಯಿತು. ಮಲ್ಲಿಗೆ, ಜಾಜಿ, ಸಂಪಿಗೆ, ಪಾದರಿ, ಸುರಗಿ, ಪಗಡೆ, ಮೊದಲಾದ ಹೂವಿನ ಗಿಡಗಳೂ, ಮಾವು, ಬೇಲ, ಸೇಬು, ದ್ರಾಕ್ಷಿ, ಕಿತ್ತಳೆ, ಮೊದಲಾದ ಹಣ್ಣಿನ ಗಿಡಗಳೂ ಕವಲೊಡೆದವು. ಏನೇನು ಮಾಡಿದರೂ ಬಾಳೆಯೂ ಸುಗಂಧರಾಜನೂ ಕವಲು ಬಿಡಲಾಗಲಿಲ್ಲ. ಅವುಗಳಿಗೆ ಬಹಳ ದುಃಖವಾಯಿತು. “ಗುರುವು ಹೇಳಿದ ಮಾತು ಕೇಳಲಿಲ್ಲವಲ್ಲ! ಕೆಟ್ಟೆವಲ್ಲಾ!” ಎಂದು ಬಹಳ ನೊಂದುಕೊಂಡವು. ಈಗಲೂ ನೀವು ಬಾಳೆಯನ್ನೂ ಸುಗಂಧರಾಜನನ್ನೂ ನೋಡಿ. ಹಣ್ಣು ಹೂವು ಆದಮೇಲೆ ಮಿಕ್ಕ ಗಿಡಗಳು, ಕವಲೊಡೆದು ಸಂತೋಷದಿಂದ ಬೆಳೆಯುತ್ತಿದ್ದರೆ, ಅವೆರಡೂ ದುಃಖದಿಂದ ಬಾಡಿ ಬಳಲಿ ಒಣಗಿ ಹೋಗುವುವು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...