Home / ಕವನ / ಕವಿತೆ / ನಾವು ಮೋಹಿಸುತ್ತೇವೆ

ನಾವು ಮೋಹಿಸುತ್ತೇವೆ

ನಾವು ಮೋಹಿಸುತ್ತೇವೆ, ಏಕೆಂದರೆ ನಮಗೆ
ಮೋಹಿಸುವುದೇ ಒಂದು ತೆವಲು
ಬದುಕ ಮೋಹಿಸುತ್ತೇವೆ
ಬದುಕಲು ಮೋಹಿಸುತ್ತೇವೆ,
ಮೋಹದಿಂದಲೇ ಉಸಿರು ಅದರಿಂದಲೇ ಬಸಿರು
ಅದಿಲ್ಲದ ನೆಲಕ್ಕಿಲ್ಲವೇ ಇಲ್ಲ ಹಸಿರು

ಬರೆಯುವುದನ್ನು ಮೋಹಿಸದೇ ಹಡೆಯುವುದು
ಹೇಗೆ? ಅಕ್ಷರ ಮೂಡುವುದು ಹೇಗೆ?
ಪದಕ್ಕೆ ಪದ ಜೊತೆಯಾಗಿ ಪಾದವಾಗುವುದು ಹೇಗೆ?
ಅರ್‍ಥ ಹುಟ್ಟುವುದು ಹೇಗೆ? ಅರ್ಥವೆನ್ನುತ್ತಲೇ
ನೆನಪಾಯಿತು ಅರ್ಥಶಾಸ್ತ್ರ
ಬದುಕೆಲ್ಲಾ ಅರ್ಥಶಾಸ್ತ್ರವೇ
ಕೂಡಿ ಕಳೆದು ಲೆಕ್ಕ ಹಾಕಿ
ಗುಣಿಸಿ ಬಾಗಿಸಿ ಬಂದ ಶೇಷದಿಂದ
ಒಂದಿಷ್ಟು ಹೊಸ ಉಸಿರು

ಮೋಹಿಸದಿದ್ದರೆ ನಾವು ಈ ಭೂಮಿ
ಈ ಬಾನು ಈ ನೆಲ ಈ ಆಕಾಶ
ಈಜುವುದು ಹೇಗೆ ಈ ಭವಸಾಗರ
ಈಸಬೇಕು ಇದ್ದ ಜೈಸಬೇಕು ನಡೆದಿದೆ ಉಪದೇಶ,
ದಡ ಕಾಣುವುದು ಹೇಗೆ?
ಮನುಷ್ಯರು ಮನುಷ್ಯರ ಮುಖ ನೋಡುವುದು ಹೇಗೆ?
ಮೋಹಿಸು ಎಂದು ಅದೇ ಹೆತ್ತ ಮಗು
ಹೇಳುತ್ತಿದ ಅಳುತ್ತಿದೆ ಗಾರ್‌ಗಾರ್ ಕೇಳಿಸದೇ
ಕೇಳಿಸದಿದ್ದರೆ ಜಗತ್ತೇ ಅತ್ತಂತೆ.
ಮೃತ್ಯು ಹೊಂಚು ಹಾಕಿ ಕುಳಿತಿದೆ
ಹಾವಿನ ಹೆಡೆಯ ನೆರಳಿನ ಕಪ್ಪೆ.

ಬದುಕಿರುವಷ್ಟು ದಿನ ಮೋಹಿಸುತ್ತೇವೆ
ಮೋಹಿಸುವುದರಿಂದಲೇ ಬದುಕುತ್ತೇವೆ
“ಇಲ್ಲವಾದರೇನಿದೆ ಇಲ್ಲಿ ಕಣ್ಣು ಕೀಳುವ
ಸೂಜಿ ಕೊಲುವ ಬಡಿಗೆ” ಅದರಡಿಗೇ
ಮದ್ದು ಗುಂಡು ರಕ್ತಪಾತ ಆಸ್ಪತ್ರೆ
ಔಷಧ ಪರಿಹಾರ ಚೆಕ್ಕು ಹಣ
ಸಾಗಿದೆ ಸಾಲಾಗಿ ಹೆಣ!

ಕಿತ್ತ ಕೈ ಕಾಲುಗಳು, ಚೆಲ್ಲಾಡಿದ
ಸರ ಬಳೆ ಕೈ ಚೀಲಗಳು
ಇವನ್ನೆಲ್ಲಾ ನಿಲ್ಲಿಸಲು ನೀವೂ ಮೋಹಿಸಿ
ಕೈಗೆ ಬಂದ ಬಂದೂಕನ್ನು ಮೇಲೆತ್ತುವ ಮೊದಲು
ಯುದ್ಧ ಘೋಷಿಸುವ ಮೊದಲು,
ಗಡಿಗಳಿಗೆ ತಂತಿ ಬಿಗಿಯುವ ಮೊದಲು
ಶವಪೆಟ್ಟಿಗೆ ಖರೀದಿಸುವ ಮೊದಲು
ಒಂದಿಷ್ಟು ಮೋಹಿಸಿ.
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...