Home / ಕವನ / ಕವಿತೆ / ನಾನು-ನೀನು

ನಾನು-ನೀನು

ನಾನು ಭೂಮಿ; ಭೂಮಿ ಕಾಯುವುದಿಲ್ಲ
ನೀನು ಮಳೆ. ನೀನು ಕಾಯುತ್ತೀಯೆ, ಕಾಯಬೇಕು
ನೀನು ಮುಗಿಲು ನಾನು ನೆಲ ಎಂದು ಒಂದು ಗಂಡು
ಹಾಡಿದಂತಲ್ಲ ನಮ್ಮಿಬ್ಬರ ಯುಗಯುಗಗಳ ಈ ಬಂಧ
ನಾನು ಭೂಮಿ, ಭೂಮಿಯೇ ಹಾಡಬೇಕು
ನಾನು ಭೂಮಿ, ನಾನು ಬರೀ ನೆಲವಲ್ಲ.

ನಾನು ತಿರುಗುತ್ತಿರುವೆ, ನೀನು ನಿಂತಿರುವೆ ನಿಶ್ಚಲ
ನಾನು ಕಾಯುವೆ, ನಿನ್ನನ್ನೇ ಕರಗಿಸುವೆ, ಕರಗಿಸಿ ಹರಿಸುವೆ
ನನ್ನೆಡೆಗೆ, ಈ ನನ್ನ ಎದೆಯ ಜಲದಿಂದಲೇ ನೀ ಉಗಿ ಮೋಡ
ವಾದೆ ಕಡೆಗೆ ನನ್ನೆಡೆಗೇ ಹರಿದೆ. ಮೋಡ ಕಟ್ಟಬೇಕು
ಕಟ್ಟುವವರೆಗೆ ಕಾಯೇ ಎಂದೆ ನೀನು. ನಾನು ಕಾಯಲಾರೆ
ನನಗೆ ನೀನಲ್ಲದಿದ್ದರಿನ್ನೊಬ್ಬ, ನಿನ್ನಂಥವನಿನ್ನೊಬ್ಬ
ಎಷ್ಟು ಮಂದಿ ಗೆಳೆಯರು ಗೊತ್ತೆ ನನಗೆ?
ನಾನು ಭೂಮಿ ನಾನು ಬರೀ ನೆಲವಲ್ಲ.

ನನ್ನೆದೆಯೊಳಗೇ ಲಾವಾ ಅಡಗಿಸಿ ಹೊರಗೆಲ್ಲಾ ಹಸಿರ ಚೆಲ್ಲುವೆ
ನನಗೆ ಮೇಲೆರೆವ ಜೀವ ಜಲವಾಗಿ ನೀನು ಬರುವೆ.
ನೀನು ನನ್ನದೇ ಅಂಗ, ನನ್ನಿಂದಲೇ ನೀನು. ಇದರ ಅರಿ
ವಿದೆ ನನಗೆ, ಅದರಿಂದಲೇ ಇಟ್ಟಿರುವ ನಿನ್ನ ಹೊರಗೆ
ಅಷ್ಟು, ದೂರ ಆಗಸದ ತುದಿಗೆ, ನಿನ್ನ ಒಲವೇ ನನ್ನ ಬಲ
ಎಂದು ಹಾಡಿದ ಕವಿಗಿಲ್ಲ ಇದರರಿವು
ನಾನು ಭೂಮಿ ನಾನು ಬರೀ ನೆಲವಲ್ಲ.

ಸಸ್ಯ ಶ್ಯಾಮಲೆ ನಾನು ನನ್ನ ಅಸ್ತಿತ್ವವೇ ಅದು
ಈ ನನ್ನ ಹಸಿರಿನ ಪರಿ ಬೀಜವೃಕ್ಷ ನ್ಯಾಯದ ಪರಿ
ನನ್ನೆದೆಯ ನೀರ ಆವಿಯಾಗಿಸಿ ಮೋಡವಾಗಿಸಿ
ಗಟ್ಟಿಗೊಳಿಸಲು ಆ ನನ್ನ ಹಳೇ ಗಂಡ ಸೂರ್‍ಯನ
ತಯಾರಿ, ನಡೆದಿದ ಹಗಲಿರುಳು ಅವನ ಸವಾರಿ
ಆ ತುಂಟ ಕುದುರೆಯ ಕುಂಟ ಸಾರಥಿಯ ದಾರಿ
ನಾನು ಭೂಮಿ ನಾನು ಬರೀ ನೆಲವಲ್ಲ.

ನಮ್ಮಿಬ್ಬರ ಮಿಲನದಿಂದ ಉಲ್ಲಾಸವೇ ಶ್ಯಾಮಲಾ
ಎಂದರಲ್ಲ ಅವರು ನೋಡಿದ್ದು ಕೇವಲ ಮಳೆಗಾಲ
ಮಲೆನಾಡು ಶಿವಮೊಗ್ಗ ಸಹ್ಯಾದ್ರಿ ಇದರ
ಹೊರತು ಬೇರೇನಿಲ್ಲವೇ ನನ್ನೊಡಲಿನ ರಾಜಸ್ಥಾನ
ಥಾರ್ ಮರುಭೂಮಿ, ಆಫ್ಗನ್ ಕಣಿವೆ ಕೆಂಪು ಸಮುದ್ರ-
ಎಲ್ಲೆಲ್ಲೂ ಹಸಿರುಕ್ಕಿಸಿಲ್ಲವೇ ನಾನು
ಬೇಸಗೆ ಚಳಿ ಮಳೆಗಳ ಧಾಳಿಯ ನಟ್ಟ ನಡುವೆ
ನಾನು ಭೂಮಿ ನಾನು ಬರೀ ನೆಲವಲ್ಲ.

ನಾನು ಕರೆವೆ ನೀನು ಬೆರೆವೆ ನೀನು ಹೊಳೆವೆ
ನಾನು ಬೆಳೆವ ಇದು ಸ್ವಲ್ಪ ಸರಿ ಏಕೆನ್ನುವಿಯೋ
ನಾನು ಕಾದು ಕಾದು ಕರೆದಾಗಲ್ಲವೇ
ನೀನು ಧಾರೆ ಧಾರ ಸುರಿವುದು.
ಗುಡುಗು ಮಿಂಚು ಹೊಳೆದಾಗಲ್ಲವೇ.
ನಾನು ನೀರು ತುಂಬಿ ಗದ್ದೆಯಾಗಿ ಭತ್ತವಾಗಿ
ಕಬ್ಬಾಗಿ ಗೋಧಿಯಾಗಿ, ಜೋಳವಾಗಿ, ಇನ್ನೂ
ಹಣ್ಣು ಹಂಪಲು ಗಡ್ಡೆ ಗೆಣಸು ಗಿಡ ಮರ ಹೂ ಹುಲ್ಲು
ಏನೆಲ್ಲ ಆಗಿ ಮೆರೆವುದು. ಇದೀಗ ಸಸ್ಯ ಶ್ಯಾಮಲಾ
ಮಾತರಂ ಎಂದು ಆ ದೇಶ ಭಕ್ತರೂ ಹಾಡುವುದು.
ಆದರೆ ಈ ವೈವಿಧ್ಯ ನನ್ನದು ನಿನ್ನದಲ್ಲ ನೆನಪಿರಲಿ
ನನ್ನೊಳಗಿರುವ ನಿನ್ನ ಬೀಜದ ಗುಣ ಮಾತ್ರ ಆರದಿರಲಿ
ನೀನು ಕೇವಲ ಪೋಷಕ ಮಾತ್ರ ಅರಿವಿರಲಿ
ನಮ್ಮಿಬ್ಬರ ಸಂಬಂಧ ಮಾತ್ರ ಹೀಗೇ ಮುರಿಯದಿರಲಿ
*****
-ಸಂಕಲನ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...