Home / ಕವನ / ಕವಿತೆ / ನಾನು-ನೀನು

ನಾನು-ನೀನು

ನಾನು ಭೂಮಿ; ಭೂಮಿ ಕಾಯುವುದಿಲ್ಲ
ನೀನು ಮಳೆ. ನೀನು ಕಾಯುತ್ತೀಯೆ, ಕಾಯಬೇಕು
ನೀನು ಮುಗಿಲು ನಾನು ನೆಲ ಎಂದು ಒಂದು ಗಂಡು
ಹಾಡಿದಂತಲ್ಲ ನಮ್ಮಿಬ್ಬರ ಯುಗಯುಗಗಳ ಈ ಬಂಧ
ನಾನು ಭೂಮಿ, ಭೂಮಿಯೇ ಹಾಡಬೇಕು
ನಾನು ಭೂಮಿ, ನಾನು ಬರೀ ನೆಲವಲ್ಲ.

ನಾನು ತಿರುಗುತ್ತಿರುವೆ, ನೀನು ನಿಂತಿರುವೆ ನಿಶ್ಚಲ
ನಾನು ಕಾಯುವೆ, ನಿನ್ನನ್ನೇ ಕರಗಿಸುವೆ, ಕರಗಿಸಿ ಹರಿಸುವೆ
ನನ್ನೆಡೆಗೆ, ಈ ನನ್ನ ಎದೆಯ ಜಲದಿಂದಲೇ ನೀ ಉಗಿ ಮೋಡ
ವಾದೆ ಕಡೆಗೆ ನನ್ನೆಡೆಗೇ ಹರಿದೆ. ಮೋಡ ಕಟ್ಟಬೇಕು
ಕಟ್ಟುವವರೆಗೆ ಕಾಯೇ ಎಂದೆ ನೀನು. ನಾನು ಕಾಯಲಾರೆ
ನನಗೆ ನೀನಲ್ಲದಿದ್ದರಿನ್ನೊಬ್ಬ, ನಿನ್ನಂಥವನಿನ್ನೊಬ್ಬ
ಎಷ್ಟು ಮಂದಿ ಗೆಳೆಯರು ಗೊತ್ತೆ ನನಗೆ?
ನಾನು ಭೂಮಿ ನಾನು ಬರೀ ನೆಲವಲ್ಲ.

ನನ್ನೆದೆಯೊಳಗೇ ಲಾವಾ ಅಡಗಿಸಿ ಹೊರಗೆಲ್ಲಾ ಹಸಿರ ಚೆಲ್ಲುವೆ
ನನಗೆ ಮೇಲೆರೆವ ಜೀವ ಜಲವಾಗಿ ನೀನು ಬರುವೆ.
ನೀನು ನನ್ನದೇ ಅಂಗ, ನನ್ನಿಂದಲೇ ನೀನು. ಇದರ ಅರಿ
ವಿದೆ ನನಗೆ, ಅದರಿಂದಲೇ ಇಟ್ಟಿರುವ ನಿನ್ನ ಹೊರಗೆ
ಅಷ್ಟು, ದೂರ ಆಗಸದ ತುದಿಗೆ, ನಿನ್ನ ಒಲವೇ ನನ್ನ ಬಲ
ಎಂದು ಹಾಡಿದ ಕವಿಗಿಲ್ಲ ಇದರರಿವು
ನಾನು ಭೂಮಿ ನಾನು ಬರೀ ನೆಲವಲ್ಲ.

ಸಸ್ಯ ಶ್ಯಾಮಲೆ ನಾನು ನನ್ನ ಅಸ್ತಿತ್ವವೇ ಅದು
ಈ ನನ್ನ ಹಸಿರಿನ ಪರಿ ಬೀಜವೃಕ್ಷ ನ್ಯಾಯದ ಪರಿ
ನನ್ನೆದೆಯ ನೀರ ಆವಿಯಾಗಿಸಿ ಮೋಡವಾಗಿಸಿ
ಗಟ್ಟಿಗೊಳಿಸಲು ಆ ನನ್ನ ಹಳೇ ಗಂಡ ಸೂರ್‍ಯನ
ತಯಾರಿ, ನಡೆದಿದ ಹಗಲಿರುಳು ಅವನ ಸವಾರಿ
ಆ ತುಂಟ ಕುದುರೆಯ ಕುಂಟ ಸಾರಥಿಯ ದಾರಿ
ನಾನು ಭೂಮಿ ನಾನು ಬರೀ ನೆಲವಲ್ಲ.

ನಮ್ಮಿಬ್ಬರ ಮಿಲನದಿಂದ ಉಲ್ಲಾಸವೇ ಶ್ಯಾಮಲಾ
ಎಂದರಲ್ಲ ಅವರು ನೋಡಿದ್ದು ಕೇವಲ ಮಳೆಗಾಲ
ಮಲೆನಾಡು ಶಿವಮೊಗ್ಗ ಸಹ್ಯಾದ್ರಿ ಇದರ
ಹೊರತು ಬೇರೇನಿಲ್ಲವೇ ನನ್ನೊಡಲಿನ ರಾಜಸ್ಥಾನ
ಥಾರ್ ಮರುಭೂಮಿ, ಆಫ್ಗನ್ ಕಣಿವೆ ಕೆಂಪು ಸಮುದ್ರ-
ಎಲ್ಲೆಲ್ಲೂ ಹಸಿರುಕ್ಕಿಸಿಲ್ಲವೇ ನಾನು
ಬೇಸಗೆ ಚಳಿ ಮಳೆಗಳ ಧಾಳಿಯ ನಟ್ಟ ನಡುವೆ
ನಾನು ಭೂಮಿ ನಾನು ಬರೀ ನೆಲವಲ್ಲ.

ನಾನು ಕರೆವೆ ನೀನು ಬೆರೆವೆ ನೀನು ಹೊಳೆವೆ
ನಾನು ಬೆಳೆವ ಇದು ಸ್ವಲ್ಪ ಸರಿ ಏಕೆನ್ನುವಿಯೋ
ನಾನು ಕಾದು ಕಾದು ಕರೆದಾಗಲ್ಲವೇ
ನೀನು ಧಾರೆ ಧಾರ ಸುರಿವುದು.
ಗುಡುಗು ಮಿಂಚು ಹೊಳೆದಾಗಲ್ಲವೇ.
ನಾನು ನೀರು ತುಂಬಿ ಗದ್ದೆಯಾಗಿ ಭತ್ತವಾಗಿ
ಕಬ್ಬಾಗಿ ಗೋಧಿಯಾಗಿ, ಜೋಳವಾಗಿ, ಇನ್ನೂ
ಹಣ್ಣು ಹಂಪಲು ಗಡ್ಡೆ ಗೆಣಸು ಗಿಡ ಮರ ಹೂ ಹುಲ್ಲು
ಏನೆಲ್ಲ ಆಗಿ ಮೆರೆವುದು. ಇದೀಗ ಸಸ್ಯ ಶ್ಯಾಮಲಾ
ಮಾತರಂ ಎಂದು ಆ ದೇಶ ಭಕ್ತರೂ ಹಾಡುವುದು.
ಆದರೆ ಈ ವೈವಿಧ್ಯ ನನ್ನದು ನಿನ್ನದಲ್ಲ ನೆನಪಿರಲಿ
ನನ್ನೊಳಗಿರುವ ನಿನ್ನ ಬೀಜದ ಗುಣ ಮಾತ್ರ ಆರದಿರಲಿ
ನೀನು ಕೇವಲ ಪೋಷಕ ಮಾತ್ರ ಅರಿವಿರಲಿ
ನಮ್ಮಿಬ್ಬರ ಸಂಬಂಧ ಮಾತ್ರ ಹೀಗೇ ಮುರಿಯದಿರಲಿ
*****
-ಸಂಕಲನ

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...