Home / ಕವನ / ಕವಿತೆ / ತಾಯಿ-ಭೂಮಿ

ತಾಯಿ-ಭೂಮಿ

ತಾಯಿಯಂತೆ ಭರಿಸುವೆ ನಾ ಈ ಇವರುಗಳ
ನನ್ನನ್ನು ಹಂಚಿಕೊಂಡವರ ದೇಶದ ನೆಲವ
ಇಂಚಿಂಚು ತಿಂದವರ ನನ್ನ ಮನಸ್ಸೆಂಬ
ಸರೋವರದಲೀಸಾಡ ಬಂದವರ, ನನ್ನ
ಒಂದೊಂದು
ಮೂಲೆಯನೂ ತಮ್ಮದೆಂದು ಕೊಂಡವರ
ಗಲ್ಲಿಯ ಗುರುವೊಬ್ಬ ಜಗದ್ಗುರುವಾದಂತೆ
ನನ್ನ ಸಹಿಷ್ಣುತೆಯ ಅನಿವಾರ್ಯತೆಯ
ನರಿಯವರ,
ಒಲ್ಲದವರ, ತಮ್ಮ ಪೌರುಷಕೆಂದೇ ನೆಲವೆಂದವರ
ಹುಸಿ ಭ್ರಮೆಯಲಿ ಮಿಂದವರ ಮುನ್ನ ಶತ
ಕೋಟಿ ರಾಯರುಗಳಾಳಿದ ನೆಲವ ತನ್ನದೆಂದೆನುತ
ಶಾಸನವ ಬರೆಸಿದವರ, ಗರ್‍ವರಸ ಸೋರಿದವರ.

ಒಂದು ಮಳೆಗೆಂದೂ ನೆನೆಯದ ಭೂಮಿ
ಕಾದಿರುವಂತೆ ಹತ್ತಾರು ಮಳೆಗೆ ಕಾದಿರುವೆ
ನಾನು, ತೆರೆದಂತೆ ಭಾನು ಈ ಜಗದ
ಮೂಲೆ ಮೂಲೆಯಲಿರುವ ಈ ಇವರ
ಒಂದೊಂದೇ ಫೋನಿಗಾಗಿ, ಒಂದೊಂದೇ ಪತ್ರ
ಕಾಗಿ, ಒಂದೊಂದೇ ಭೇಟಿಗಾಗಿ, ತನ್ನಿಂದಲೇ
ಇವಳು ಎಂಬ ಇವರ ಭ್ರಮೆಗಾಗಿ

ಏಕಿವರು ಅರ್ಥಮಾಡಿಕೊಳ್ಳುವುದಿಲ್ಲ
ಎಂದು ಕೊರಗಿದ್ದೇನೆ, ಏಕಿವರು
ಸಹಿಸುವುದಿಲ್ಲ ಎಂದು ಮರುಗಿದ್ದೇನೆ.
ಚಲನೆಯ ನಿಯಮದ ಆಳ ತಿಳಿಯದ
ಇವರ ಅಜ್ಞಾನಕೆ ಅತ್ತಿದ್ದೇನೆ. ತಾನು
ತುಂಬಲಾರದ ಶೂನ್ಯವ ತುಂಬಲಿರುವ
ಇನ್ನೊಂದು ಬರುವಿಕೆಯನಿವರೇಕೆ
ಅರಿಯಬಾರದು ಎಂದು ವಾದಿಸಿದ್ದೇನೆ.
ಮುಖ ಊದಿಸಿದ್ದೇನೆ ಬಾಯಿಮಾತ್ರ
ಬಿಡಲಾರೆ, ಬಿಟ್ಟರೆ ಮಾರಾಮಾರಿ.

ಇವರೇ ರಾವಣ ಕುಂಭಕರ್‍ಣರಾಗುತ್ತಾರೆ
ತಾವು ರಾಮ ಲಕ್ಷ್ಮಣರೆಂದೇ ಭಾವಿಸುತ್ತಾರೆ.
ದುರ್ಯೋಧನನ ಒಳಗೇ ಅಡಗಿ ಕುಳಿತು ಕೃಷ್ಣ
ನಂತೆ ನಟಿಸುತ್ತಾರೆ ಇವರು ಯಾವ ರಾಮಾ
ಯಣ ಭಾರತ ಬರೆಯುವುದು ಬೇಡ.
ಮಳೆ ಹನಿ ಹೇಗೆ ಹಸಿರೊಡೆಸಿ ಕರ್ತವ್ಯ ತೀರಿಸಿ
ನಡೆಯುವುದೋ ಹಾಗೆ ಬಾಳಿರೋ
ಎಂದು ಬುದ್ದಿ ಹೇಳಿದ್ದೇನೆ. ಏಕಾಂತದಲಿ
ಕಚ್ಚಾಡಿದ್ದೇನೆ.
ಅವನ ಸುದ್ದಿ ಇವನ ಬಳಿ ಇವನ ಸುದ್ದಿ ಅವನ
ಬಳಿ ಎತ್ತುವಂತಿಲ್ಲ ಕುರುಕ್ಷೇತ್ರ ಕಣ್ಣ
ಪಟ್ಟಿ, ಕಟ್ಟಿದ ಗಾಂಧಾರಿಯಂತ ಒಳಗೊಳಗೇ
ಕುದ್ದಿದ್ದೇನೆ. ಇವರು ಹರಿದು ಚಿಂದಿ
ಮಾಡಿದ ಈ ತೇಪೆ ದೇಹದ ಮೇಲೆಲ್ಲಾ
ನನ್ನ ಕರುಣೆಯ ವರ್ಷ ಸುರಿಸಿದ್ದೇನೆ.
ಒಂದೇ ತಟ್ಟೆಯಲಿವರಿಗೆ ಉಣಬಡಿಸಿದ್ದೇನೆ.
ಉಣ್ಣುತ್ತಲೇ ತನ್ನದು ತಟ್ಟೆ ಎಂದು ಭಾವಿಸುವ
ಅವರ ಮೂರ್‍ಖತನವ ಸೆರಗಿನಲಿ ಮುಚ್ಚಿ
ಇನ್ನೊಬ್ಬನಿಗೆ ತುತ್ತಿಕ್ಕಿದ್ದೇನೆ. ಸದಾ ಇವರಿ
ಗಾಗಿ ಬಿಕ್ಕಿದ್ದೇನೆ ಮತ್ತು ಇನ್ನೂ ಬದುಕಿದ್ದೇನೆ.
*****
-ಗಾಂಧಿ ಬಜಾರ್ ಪತ್ರಿಕೆ

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...