Home / ಕವನ / ಕವಿತೆ / ತಾಯಿ-ಭೂಮಿ

ತಾಯಿ-ಭೂಮಿ

ತಾಯಿಯಂತೆ ಭರಿಸುವೆ ನಾ ಈ ಇವರುಗಳ
ನನ್ನನ್ನು ಹಂಚಿಕೊಂಡವರ ದೇಶದ ನೆಲವ
ಇಂಚಿಂಚು ತಿಂದವರ ನನ್ನ ಮನಸ್ಸೆಂಬ
ಸರೋವರದಲೀಸಾಡ ಬಂದವರ, ನನ್ನ
ಒಂದೊಂದು
ಮೂಲೆಯನೂ ತಮ್ಮದೆಂದು ಕೊಂಡವರ
ಗಲ್ಲಿಯ ಗುರುವೊಬ್ಬ ಜಗದ್ಗುರುವಾದಂತೆ
ನನ್ನ ಸಹಿಷ್ಣುತೆಯ ಅನಿವಾರ್ಯತೆಯ
ನರಿಯವರ,
ಒಲ್ಲದವರ, ತಮ್ಮ ಪೌರುಷಕೆಂದೇ ನೆಲವೆಂದವರ
ಹುಸಿ ಭ್ರಮೆಯಲಿ ಮಿಂದವರ ಮುನ್ನ ಶತ
ಕೋಟಿ ರಾಯರುಗಳಾಳಿದ ನೆಲವ ತನ್ನದೆಂದೆನುತ
ಶಾಸನವ ಬರೆಸಿದವರ, ಗರ್‍ವರಸ ಸೋರಿದವರ.

ಒಂದು ಮಳೆಗೆಂದೂ ನೆನೆಯದ ಭೂಮಿ
ಕಾದಿರುವಂತೆ ಹತ್ತಾರು ಮಳೆಗೆ ಕಾದಿರುವೆ
ನಾನು, ತೆರೆದಂತೆ ಭಾನು ಈ ಜಗದ
ಮೂಲೆ ಮೂಲೆಯಲಿರುವ ಈ ಇವರ
ಒಂದೊಂದೇ ಫೋನಿಗಾಗಿ, ಒಂದೊಂದೇ ಪತ್ರ
ಕಾಗಿ, ಒಂದೊಂದೇ ಭೇಟಿಗಾಗಿ, ತನ್ನಿಂದಲೇ
ಇವಳು ಎಂಬ ಇವರ ಭ್ರಮೆಗಾಗಿ

ಏಕಿವರು ಅರ್ಥಮಾಡಿಕೊಳ್ಳುವುದಿಲ್ಲ
ಎಂದು ಕೊರಗಿದ್ದೇನೆ, ಏಕಿವರು
ಸಹಿಸುವುದಿಲ್ಲ ಎಂದು ಮರುಗಿದ್ದೇನೆ.
ಚಲನೆಯ ನಿಯಮದ ಆಳ ತಿಳಿಯದ
ಇವರ ಅಜ್ಞಾನಕೆ ಅತ್ತಿದ್ದೇನೆ. ತಾನು
ತುಂಬಲಾರದ ಶೂನ್ಯವ ತುಂಬಲಿರುವ
ಇನ್ನೊಂದು ಬರುವಿಕೆಯನಿವರೇಕೆ
ಅರಿಯಬಾರದು ಎಂದು ವಾದಿಸಿದ್ದೇನೆ.
ಮುಖ ಊದಿಸಿದ್ದೇನೆ ಬಾಯಿಮಾತ್ರ
ಬಿಡಲಾರೆ, ಬಿಟ್ಟರೆ ಮಾರಾಮಾರಿ.

ಇವರೇ ರಾವಣ ಕುಂಭಕರ್‍ಣರಾಗುತ್ತಾರೆ
ತಾವು ರಾಮ ಲಕ್ಷ್ಮಣರೆಂದೇ ಭಾವಿಸುತ್ತಾರೆ.
ದುರ್ಯೋಧನನ ಒಳಗೇ ಅಡಗಿ ಕುಳಿತು ಕೃಷ್ಣ
ನಂತೆ ನಟಿಸುತ್ತಾರೆ ಇವರು ಯಾವ ರಾಮಾ
ಯಣ ಭಾರತ ಬರೆಯುವುದು ಬೇಡ.
ಮಳೆ ಹನಿ ಹೇಗೆ ಹಸಿರೊಡೆಸಿ ಕರ್ತವ್ಯ ತೀರಿಸಿ
ನಡೆಯುವುದೋ ಹಾಗೆ ಬಾಳಿರೋ
ಎಂದು ಬುದ್ದಿ ಹೇಳಿದ್ದೇನೆ. ಏಕಾಂತದಲಿ
ಕಚ್ಚಾಡಿದ್ದೇನೆ.
ಅವನ ಸುದ್ದಿ ಇವನ ಬಳಿ ಇವನ ಸುದ್ದಿ ಅವನ
ಬಳಿ ಎತ್ತುವಂತಿಲ್ಲ ಕುರುಕ್ಷೇತ್ರ ಕಣ್ಣ
ಪಟ್ಟಿ, ಕಟ್ಟಿದ ಗಾಂಧಾರಿಯಂತ ಒಳಗೊಳಗೇ
ಕುದ್ದಿದ್ದೇನೆ. ಇವರು ಹರಿದು ಚಿಂದಿ
ಮಾಡಿದ ಈ ತೇಪೆ ದೇಹದ ಮೇಲೆಲ್ಲಾ
ನನ್ನ ಕರುಣೆಯ ವರ್ಷ ಸುರಿಸಿದ್ದೇನೆ.
ಒಂದೇ ತಟ್ಟೆಯಲಿವರಿಗೆ ಉಣಬಡಿಸಿದ್ದೇನೆ.
ಉಣ್ಣುತ್ತಲೇ ತನ್ನದು ತಟ್ಟೆ ಎಂದು ಭಾವಿಸುವ
ಅವರ ಮೂರ್‍ಖತನವ ಸೆರಗಿನಲಿ ಮುಚ್ಚಿ
ಇನ್ನೊಬ್ಬನಿಗೆ ತುತ್ತಿಕ್ಕಿದ್ದೇನೆ. ಸದಾ ಇವರಿ
ಗಾಗಿ ಬಿಕ್ಕಿದ್ದೇನೆ ಮತ್ತು ಇನ್ನೂ ಬದುಕಿದ್ದೇನೆ.
*****
-ಗಾಂಧಿ ಬಜಾರ್ ಪತ್ರಿಕೆ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...