Home / ಕವನ / ಕವಿತೆ / ತಾಯಿ-ಭೂಮಿ

ತಾಯಿ-ಭೂಮಿ

ತಾಯಿಯಂತೆ ಭರಿಸುವೆ ನಾ ಈ ಇವರುಗಳ
ನನ್ನನ್ನು ಹಂಚಿಕೊಂಡವರ ದೇಶದ ನೆಲವ
ಇಂಚಿಂಚು ತಿಂದವರ ನನ್ನ ಮನಸ್ಸೆಂಬ
ಸರೋವರದಲೀಸಾಡ ಬಂದವರ, ನನ್ನ
ಒಂದೊಂದು
ಮೂಲೆಯನೂ ತಮ್ಮದೆಂದು ಕೊಂಡವರ
ಗಲ್ಲಿಯ ಗುರುವೊಬ್ಬ ಜಗದ್ಗುರುವಾದಂತೆ
ನನ್ನ ಸಹಿಷ್ಣುತೆಯ ಅನಿವಾರ್ಯತೆಯ
ನರಿಯವರ,
ಒಲ್ಲದವರ, ತಮ್ಮ ಪೌರುಷಕೆಂದೇ ನೆಲವೆಂದವರ
ಹುಸಿ ಭ್ರಮೆಯಲಿ ಮಿಂದವರ ಮುನ್ನ ಶತ
ಕೋಟಿ ರಾಯರುಗಳಾಳಿದ ನೆಲವ ತನ್ನದೆಂದೆನುತ
ಶಾಸನವ ಬರೆಸಿದವರ, ಗರ್‍ವರಸ ಸೋರಿದವರ.

ಒಂದು ಮಳೆಗೆಂದೂ ನೆನೆಯದ ಭೂಮಿ
ಕಾದಿರುವಂತೆ ಹತ್ತಾರು ಮಳೆಗೆ ಕಾದಿರುವೆ
ನಾನು, ತೆರೆದಂತೆ ಭಾನು ಈ ಜಗದ
ಮೂಲೆ ಮೂಲೆಯಲಿರುವ ಈ ಇವರ
ಒಂದೊಂದೇ ಫೋನಿಗಾಗಿ, ಒಂದೊಂದೇ ಪತ್ರ
ಕಾಗಿ, ಒಂದೊಂದೇ ಭೇಟಿಗಾಗಿ, ತನ್ನಿಂದಲೇ
ಇವಳು ಎಂಬ ಇವರ ಭ್ರಮೆಗಾಗಿ

ಏಕಿವರು ಅರ್ಥಮಾಡಿಕೊಳ್ಳುವುದಿಲ್ಲ
ಎಂದು ಕೊರಗಿದ್ದೇನೆ, ಏಕಿವರು
ಸಹಿಸುವುದಿಲ್ಲ ಎಂದು ಮರುಗಿದ್ದೇನೆ.
ಚಲನೆಯ ನಿಯಮದ ಆಳ ತಿಳಿಯದ
ಇವರ ಅಜ್ಞಾನಕೆ ಅತ್ತಿದ್ದೇನೆ. ತಾನು
ತುಂಬಲಾರದ ಶೂನ್ಯವ ತುಂಬಲಿರುವ
ಇನ್ನೊಂದು ಬರುವಿಕೆಯನಿವರೇಕೆ
ಅರಿಯಬಾರದು ಎಂದು ವಾದಿಸಿದ್ದೇನೆ.
ಮುಖ ಊದಿಸಿದ್ದೇನೆ ಬಾಯಿಮಾತ್ರ
ಬಿಡಲಾರೆ, ಬಿಟ್ಟರೆ ಮಾರಾಮಾರಿ.

ಇವರೇ ರಾವಣ ಕುಂಭಕರ್‍ಣರಾಗುತ್ತಾರೆ
ತಾವು ರಾಮ ಲಕ್ಷ್ಮಣರೆಂದೇ ಭಾವಿಸುತ್ತಾರೆ.
ದುರ್ಯೋಧನನ ಒಳಗೇ ಅಡಗಿ ಕುಳಿತು ಕೃಷ್ಣ
ನಂತೆ ನಟಿಸುತ್ತಾರೆ ಇವರು ಯಾವ ರಾಮಾ
ಯಣ ಭಾರತ ಬರೆಯುವುದು ಬೇಡ.
ಮಳೆ ಹನಿ ಹೇಗೆ ಹಸಿರೊಡೆಸಿ ಕರ್ತವ್ಯ ತೀರಿಸಿ
ನಡೆಯುವುದೋ ಹಾಗೆ ಬಾಳಿರೋ
ಎಂದು ಬುದ್ದಿ ಹೇಳಿದ್ದೇನೆ. ಏಕಾಂತದಲಿ
ಕಚ್ಚಾಡಿದ್ದೇನೆ.
ಅವನ ಸುದ್ದಿ ಇವನ ಬಳಿ ಇವನ ಸುದ್ದಿ ಅವನ
ಬಳಿ ಎತ್ತುವಂತಿಲ್ಲ ಕುರುಕ್ಷೇತ್ರ ಕಣ್ಣ
ಪಟ್ಟಿ, ಕಟ್ಟಿದ ಗಾಂಧಾರಿಯಂತ ಒಳಗೊಳಗೇ
ಕುದ್ದಿದ್ದೇನೆ. ಇವರು ಹರಿದು ಚಿಂದಿ
ಮಾಡಿದ ಈ ತೇಪೆ ದೇಹದ ಮೇಲೆಲ್ಲಾ
ನನ್ನ ಕರುಣೆಯ ವರ್ಷ ಸುರಿಸಿದ್ದೇನೆ.
ಒಂದೇ ತಟ್ಟೆಯಲಿವರಿಗೆ ಉಣಬಡಿಸಿದ್ದೇನೆ.
ಉಣ್ಣುತ್ತಲೇ ತನ್ನದು ತಟ್ಟೆ ಎಂದು ಭಾವಿಸುವ
ಅವರ ಮೂರ್‍ಖತನವ ಸೆರಗಿನಲಿ ಮುಚ್ಚಿ
ಇನ್ನೊಬ್ಬನಿಗೆ ತುತ್ತಿಕ್ಕಿದ್ದೇನೆ. ಸದಾ ಇವರಿ
ಗಾಗಿ ಬಿಕ್ಕಿದ್ದೇನೆ ಮತ್ತು ಇನ್ನೂ ಬದುಕಿದ್ದೇನೆ.
*****
-ಗಾಂಧಿ ಬಜಾರ್ ಪತ್ರಿಕೆ

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...