ಕಾಫಿಯ ಕೆರೆ

(ಕಾಳನ ಕೋರಿಕೆ)

ಕಾಳನು ಏಳೆಂಟು ವರುಷದ ಹುಡುಗ,
ಕಾಳಿಯ ಗುಡಿಗೊಂದು ದಿವಸ ಹೋದಾಗ-
ತೋಳೆತ್ತಿ ಕೈ ಮುಗಿದು ಕಣ್‌ಮುಚ್ಚಿ ನಿಂತು
ಕಾಳೀದೇವಿಗೆ ಬೇಡಿಕೊಂಡನು ಇಂತು ೧

ಅಮ್ಮಮ್ಮಾ ನಮ್ಮೂರು ಬಲು ದೊಡ್ಡದಮ್ಮಾ!
ನಮ್ಮೂರಲಿಹ ಜನ ಕಮ್ಮೀ ಇಲ್ಲಮ್ಮಾ!
ಎರಡು ಲಕ್ಷದ ಮೇಲೆ ಇನ್ನೆಷ್ಟೋ ಸಾವಿರ
ಇರುವರು-ಎಂದು ನಾನರಿತಿಹೆನಮ್ಮಾ! ೨

ದಿನ ದಿನ ಬೆಳಗು-ಸಂಜೆಯೊಳು ಅವರಿಗೆಲ್ಲಾ
ಕುಡಿಯಲು ಬಿಸಿ ಬಿಸಿ ಕಾಫೀ ಬೇಕಮ್ಮಾ!
ಅವರೆಲ್ಲಾ ಕುಡಿಯುವ ಕಾಫಿಯ ಲೆಕ್ಕವ
ವಿವರಿಸಿ ಹೇಳುವೆ, ಕೇಳು ನಮ್ಮಮ್ಮಾ! ೩

ಅಬ್ಬಬ್ಬಾ ! ತೀರ ಕಡಿಮೆಯಾಗಿ ಹಿಡಿದರೂ
ಒಬ್ಬೊಬ್ಬರಿಗೆ ಲೋಟಾ ಎರಡು ಬೇಡೇನೆ ?
ನಾಲ್ಕು ಲೋಟಕೆ ಕಿಟ್ಟಲಿ ತುಂಬುವುದು ಹದಿ-
ನಾಲ್ಕು ಕಿಟ್ಟಲಿಗೊಂದು ಕೊಡ ತುಂಬದೇನೆ ? ೪

ನೂರುಮಂದಿಗೆ ನಾಲ್ಕು ಕೊಡವಾಗುವುದು; ಹತ್ತು-
ನೂರುಮಂದಿಗೆ ನಲವತ್ತು ಆಗುವುದು ;
ಲಕ್ಷ ಮಂದಿಗೆ ನಾಲ್ಕು ಸಾವಿರ ಕೊಡ ಕಾಫೀ
ಲೆಕ್ಕವಾಯಿತೆ-ನಮಗೆಷ್ಟು ಬೇಕೆಂದು ? ೫

ನಮ್ಮೂರ ಜನಕೆಂಟು ಸಾವಿರಕ್ಕೂ ಹೆಚ್ಚು
ಕಮ್ಮನೆಯಾ ಕಾಫೀ ಕೊಡಗಳು ಬೇಕಮ್ಮಾ!
ಒಂದೊಂದೇ ದಿನಕಿಷ್ಟು ಕೊಡಗಳು ಬೇಕಿರೆ,
ಒಂದು ವರುಷಕೆಷ್ಟು ಲೆಕ್ಕ ನೋಡಮ್ಮಾ ! ೬

ಇಂದು ಈ ಲೆಕ್ಕವ ನಾ ಮಾಡಲರಿಯೆನೆ,
ಮುಂದಿನ ವರುಷಕೆ ಮಾಡಿ ಹೇಳುವೆನು !
ಇಂತಹ ಲೆಕ್ಕವ ಮಾಸ್ತರ್ರು ನಮಗಿನ್ನೂ
ಕಲಿಸಿಯೆ ಕೊಟ್ಟಿಲ್ಲ ನಾ ಮಾಡಲೇನು ? ೭

ಆದರು ನಾ ಸುಮಾರಾಗಿ ಹೇಳುವೆನು –
ನಮ್ಮೂರ ವರುಷದ ಕಾಫೀ ಲೆಕ್ಕವನು ;
ವರುಷದ ಕಾಫಿಯು ಸೇರಿ ಕೆಂಪಾಂಬುಧಿ,
ಕೆರೆಯಂಥಾ ಕೆರೆ ತುಂಬುವುದು ತಿಳಿ ನೀನು ! ೮

ಕೆರೆತುಂಬಾ ಕಾಫಿಯ ಕಾಸಬೇಕಾದರೆ,
ವರುಷವೆಲ್ಲವು ಎಷ್ಟು ಶ್ರಮ ನಮಗಮ್ಮಾ!
ಇರುವೆ ನೀ ಸುಮ್ಮನೆ ಕರುಣೆಯು ಬರದೇನೆ ?
ಹರಿಸು ನಮ್ಮಗಳ ಈ ಕೊರತೆಯನಮ್ಮಾ! ೯

ಇನ್ನೇನ ಬೇಡೆನು, ನಿನ್ನನು ಕಾಡೆನು,
ನನ್ನದಿದೊಂದೇ ಕೋರಿಕೆಯು ಕೇಳಮ್ಮಾ!
ಆಪತ್ತು ಬರದಂತೆ ನಮ್ಮೂರ ಜನಕೆಲ್ಲಾ
ಕಾಫಿಯ ಕೆರೆಯೊಂದ ಕೊಡು ನೀ ಕಾಳಮಾ ! ೧೦

ದೋಸೆಯ ಬೆಟ್ಟವೊಂದಿದ್ದರೂ ಬೇಕು,
ಇಲ್ಲದಿದ್ದರೆ ಕಾಫೀ ಕೆರೆಯೊಂದೇ ಸಾಕು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬದುಕ ಬೆಳವಣಿಗೆಯ
Next post ವಚನಗಳು

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys