ನಮಗೆಯು ಹೆಸರೊಂದನು ತರಲಿ!

ಹಾಳು ಪಟ್ಟಣದ ಬಂಡೆಯ ಬಳಗದ
ಕೊರಗಿನ ಮೌನದ ಕೂಗನು ಕೇಳಿ!


“ಹೇಳಲಿಕಾಗದ ಕಾಲದಿಂದಲೂ
ತಾಳಿ ಗಾಳಿ-ಮಳೆ ಚಳಿ-ಬಿರುಬಿಸಿಲು
ಸೊಗಸೇನನೊ ಬದುಕಿಗೆ ಬಯಸಿದೆವು,
ಹಗಲಿರುಳೂ ತಪದೊಳು ಬಳಲಿದೆವು….
ಆದರು ನಮಗಿಹ ಹೆಸರೇನು ?
ಬಂಡೆಯೆ ಅಲ್ಲವೆ ? ಬೇರೇನು ?”


“ನಿಂದೆಡೆಯೊಳೆ ಅಲುಗಾಡದೆ ನಿಂದು
ಒಂದೆ ಮನದಿ ಮಾಡಿದ ತಪವಿಂದು
ನಮಗೇತಕೆ ಕೊಡದಿರುವುದೊ ಫಲವ!
ಕೇಳುವೆವಾರಲಿ ನೆರವಿನ ಬಲವ ?
ನಮಗಿಹ ‘ಬಂಡೆ’ಯ ಹೆಸರನ್ನು
ತವಿಸುವರಾರೂ ಬರರೇನು?”


“ನಮ್ಮೊಡನೆಯೆ ನೆಲದೊಳು ಮೂಡಿದುವು,
ನಮ್ಮೊಂದಿಗೆ ತಪದೊಳು ಕೂಡಿದುವು,
ಎನಿತೆನಿತೋ ಘನತೆಯ ಪದವೊಂದಿ
ಜನದಲಿ ಹೊಸ ಹೊಸ ಹೆಸರನು ಹೊಂದಿ,
ಹೆಮ್ಮಯ ಕೀರ್‍ತಿಯ ಗಳಿಸಿದುವು
ನಮ್ಮಯ ಕುಲಬಂಧುಗಳೆ ಅವು!


“ಹಂಪೆಯಧೀಶನ ಶ್ರೀಶಿವಲಿಂಗ !
ವಿಜಯನಗರ ಕೋಟೆಯ ಅಂಗಾಂಗ !
ಅರಮನೆ ಸಿರಿಮನೆ ಗಜ-ತುರಗಾಲಯ !
ಅರಸಿಯರಂತಃಪುರ ಗುರುನಿಲಯ !
ಹೆಸರಿಂತೆನಿತನೊ ಪಡೆದಿಹವು-
ನಮ್ಮಯ ಕುಲಬಂಧುಗಳೆ ಅವು !


“ದೊರೆಗಳ ಶಾಸನವೊರೆಯುವುವೆನಿತೋ
ಗರತಿಯ ಬದುಕನು ಮೊರೆಯುವುವೆನಿತೋ !
ವೀರರ ಬಲುಹನು ಹಾಡುತಲೆನಿತೊ, ಉ-
ದಾರರ ಚಾಗವನಾಡುತಲೆನಿತೋ-
ಹೆಮ್ಮೆಯ ಹೆಸರನು ತಳೆದಿಹವು-
ನಮ್ಮಯ ಬಳಿಯಿದ್ದುವಲೆ ಅವು?


“ವಿಜಯ ವಿಟ್ಠಲನ ಚಿತ್ರದ ತೇರು!
ಗುಡಿ ಗೋಪುರ ಮಂಟಪಗಳ ಕುಸುರು !
ಎನಿತು ಕಲಾಕೃತಿ ಅನಿತಕು ಹೆಸರು,
ನಮಗೇನಿರುವುದು ಬರಿ ಬಿಸಿಯುಸಿರು !
ಕೆಲವೆ ಕಾಲ ಬಾಳಿದರು ಅವು-
ಹೆಮ್ಮೆಯ ಹೆಸರನು ಬೆಳಗಿದುವು!


“ಬಲ್ಲಿದರಾರೋ ಬಂದಿಲ್ಲಿಳಿಯುತ
ಇಲ್ಲಿಹ ನಮ್ಮವರನು ಎಚ್ಚರಿಸುತ
ಒಳ್ಳೆಯ ಒಳ್ಳೆಯ ರೂಪವ ಕೊಡಿಸಿ,
ಬಂಡೆಯೆಂಬ ಬರಿ ಹೆಸರನು ಬಿಡಿಸಿ,
ಮನ್ನಣೆಯೊಲವನು ಸಲ್ಲಿಸಿದರು-
ಧನ್ಯರಲ್ಲಿ ಅವರಡಗಿದರು ?


“ಬರುವರೆ.. ಬರಲಿರುವರೆ…. ಯಾರಾದರು
ಮರಳಿ ರಾಜ್ಯವನ್ನು ಕಟ್ಟುವರೆ ?
ಅರಮನೆ-ಗುಡಿಗಳಿಗಿರದಿರೆ ಹೋಗಲಿ
ಸೆರೆಮನೆಗಾದರು ನಮ್ಮನು ಬಳಸಲಿ !
ಬರಲಿರುವರು ಬೇಗನೆ ಬರಲಿ-
ನಮಗೂ ಹೆಸರೊಂದನು ತರಲಿ!
* * *
ಹಾಳುಪಟ್ಟಣದ ಬಂಡೆಯ ಬಳಗದ
ಗೋಳಿನ ಮೌನದ ಕೂಗನು ಕೇಳಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾಯೇ ಈ ಜನ್ಮ ನೀನಿತ್ತ ಭಿಕ್ಷೆ
Next post ಪ್ರಾಣದೇವತೆಗಳ ಪರಮಸ್ವರ್ಗ

ಸಣ್ಣ ಕತೆ

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…