Home / ಕವನ / ಕವಿತೆ / ನಮಗೆಯು ಹೆಸರೊಂದನು ತರಲಿ!

ನಮಗೆಯು ಹೆಸರೊಂದನು ತರಲಿ!

ಹಾಳು ಪಟ್ಟಣದ ಬಂಡೆಯ ಬಳಗದ
ಕೊರಗಿನ ಮೌನದ ಕೂಗನು ಕೇಳಿ!


“ಹೇಳಲಿಕಾಗದ ಕಾಲದಿಂದಲೂ
ತಾಳಿ ಗಾಳಿ-ಮಳೆ ಚಳಿ-ಬಿರುಬಿಸಿಲು
ಸೊಗಸೇನನೊ ಬದುಕಿಗೆ ಬಯಸಿದೆವು,
ಹಗಲಿರುಳೂ ತಪದೊಳು ಬಳಲಿದೆವು….
ಆದರು ನಮಗಿಹ ಹೆಸರೇನು ?
ಬಂಡೆಯೆ ಅಲ್ಲವೆ ? ಬೇರೇನು ?”


“ನಿಂದೆಡೆಯೊಳೆ ಅಲುಗಾಡದೆ ನಿಂದು
ಒಂದೆ ಮನದಿ ಮಾಡಿದ ತಪವಿಂದು
ನಮಗೇತಕೆ ಕೊಡದಿರುವುದೊ ಫಲವ!
ಕೇಳುವೆವಾರಲಿ ನೆರವಿನ ಬಲವ ?
ನಮಗಿಹ ‘ಬಂಡೆ’ಯ ಹೆಸರನ್ನು
ತವಿಸುವರಾರೂ ಬರರೇನು?”


“ನಮ್ಮೊಡನೆಯೆ ನೆಲದೊಳು ಮೂಡಿದುವು,
ನಮ್ಮೊಂದಿಗೆ ತಪದೊಳು ಕೂಡಿದುವು,
ಎನಿತೆನಿತೋ ಘನತೆಯ ಪದವೊಂದಿ
ಜನದಲಿ ಹೊಸ ಹೊಸ ಹೆಸರನು ಹೊಂದಿ,
ಹೆಮ್ಮಯ ಕೀರ್‍ತಿಯ ಗಳಿಸಿದುವು
ನಮ್ಮಯ ಕುಲಬಂಧುಗಳೆ ಅವು!


“ಹಂಪೆಯಧೀಶನ ಶ್ರೀಶಿವಲಿಂಗ !
ವಿಜಯನಗರ ಕೋಟೆಯ ಅಂಗಾಂಗ !
ಅರಮನೆ ಸಿರಿಮನೆ ಗಜ-ತುರಗಾಲಯ !
ಅರಸಿಯರಂತಃಪುರ ಗುರುನಿಲಯ !
ಹೆಸರಿಂತೆನಿತನೊ ಪಡೆದಿಹವು-
ನಮ್ಮಯ ಕುಲಬಂಧುಗಳೆ ಅವು !


“ದೊರೆಗಳ ಶಾಸನವೊರೆಯುವುವೆನಿತೋ
ಗರತಿಯ ಬದುಕನು ಮೊರೆಯುವುವೆನಿತೋ !
ವೀರರ ಬಲುಹನು ಹಾಡುತಲೆನಿತೊ, ಉ-
ದಾರರ ಚಾಗವನಾಡುತಲೆನಿತೋ-
ಹೆಮ್ಮೆಯ ಹೆಸರನು ತಳೆದಿಹವು-
ನಮ್ಮಯ ಬಳಿಯಿದ್ದುವಲೆ ಅವು?


“ವಿಜಯ ವಿಟ್ಠಲನ ಚಿತ್ರದ ತೇರು!
ಗುಡಿ ಗೋಪುರ ಮಂಟಪಗಳ ಕುಸುರು !
ಎನಿತು ಕಲಾಕೃತಿ ಅನಿತಕು ಹೆಸರು,
ನಮಗೇನಿರುವುದು ಬರಿ ಬಿಸಿಯುಸಿರು !
ಕೆಲವೆ ಕಾಲ ಬಾಳಿದರು ಅವು-
ಹೆಮ್ಮೆಯ ಹೆಸರನು ಬೆಳಗಿದುವು!


“ಬಲ್ಲಿದರಾರೋ ಬಂದಿಲ್ಲಿಳಿಯುತ
ಇಲ್ಲಿಹ ನಮ್ಮವರನು ಎಚ್ಚರಿಸುತ
ಒಳ್ಳೆಯ ಒಳ್ಳೆಯ ರೂಪವ ಕೊಡಿಸಿ,
ಬಂಡೆಯೆಂಬ ಬರಿ ಹೆಸರನು ಬಿಡಿಸಿ,
ಮನ್ನಣೆಯೊಲವನು ಸಲ್ಲಿಸಿದರು-
ಧನ್ಯರಲ್ಲಿ ಅವರಡಗಿದರು ?


“ಬರುವರೆ.. ಬರಲಿರುವರೆ…. ಯಾರಾದರು
ಮರಳಿ ರಾಜ್ಯವನ್ನು ಕಟ್ಟುವರೆ ?
ಅರಮನೆ-ಗುಡಿಗಳಿಗಿರದಿರೆ ಹೋಗಲಿ
ಸೆರೆಮನೆಗಾದರು ನಮ್ಮನು ಬಳಸಲಿ !
ಬರಲಿರುವರು ಬೇಗನೆ ಬರಲಿ-
ನಮಗೂ ಹೆಸರೊಂದನು ತರಲಿ!
* * *
ಹಾಳುಪಟ್ಟಣದ ಬಂಡೆಯ ಬಳಗದ
ಗೋಳಿನ ಮೌನದ ಕೂಗನು ಕೇಳಿ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...