Home / ಕವನ / ಕವಿತೆ / ನಮಗೆಯು ಹೆಸರೊಂದನು ತರಲಿ!

ನಮಗೆಯು ಹೆಸರೊಂದನು ತರಲಿ!

ಹಾಳು ಪಟ್ಟಣದ ಬಂಡೆಯ ಬಳಗದ
ಕೊರಗಿನ ಮೌನದ ಕೂಗನು ಕೇಳಿ!


“ಹೇಳಲಿಕಾಗದ ಕಾಲದಿಂದಲೂ
ತಾಳಿ ಗಾಳಿ-ಮಳೆ ಚಳಿ-ಬಿರುಬಿಸಿಲು
ಸೊಗಸೇನನೊ ಬದುಕಿಗೆ ಬಯಸಿದೆವು,
ಹಗಲಿರುಳೂ ತಪದೊಳು ಬಳಲಿದೆವು….
ಆದರು ನಮಗಿಹ ಹೆಸರೇನು ?
ಬಂಡೆಯೆ ಅಲ್ಲವೆ ? ಬೇರೇನು ?”


“ನಿಂದೆಡೆಯೊಳೆ ಅಲುಗಾಡದೆ ನಿಂದು
ಒಂದೆ ಮನದಿ ಮಾಡಿದ ತಪವಿಂದು
ನಮಗೇತಕೆ ಕೊಡದಿರುವುದೊ ಫಲವ!
ಕೇಳುವೆವಾರಲಿ ನೆರವಿನ ಬಲವ ?
ನಮಗಿಹ ‘ಬಂಡೆ’ಯ ಹೆಸರನ್ನು
ತವಿಸುವರಾರೂ ಬರರೇನು?”


“ನಮ್ಮೊಡನೆಯೆ ನೆಲದೊಳು ಮೂಡಿದುವು,
ನಮ್ಮೊಂದಿಗೆ ತಪದೊಳು ಕೂಡಿದುವು,
ಎನಿತೆನಿತೋ ಘನತೆಯ ಪದವೊಂದಿ
ಜನದಲಿ ಹೊಸ ಹೊಸ ಹೆಸರನು ಹೊಂದಿ,
ಹೆಮ್ಮಯ ಕೀರ್‍ತಿಯ ಗಳಿಸಿದುವು
ನಮ್ಮಯ ಕುಲಬಂಧುಗಳೆ ಅವು!


“ಹಂಪೆಯಧೀಶನ ಶ್ರೀಶಿವಲಿಂಗ !
ವಿಜಯನಗರ ಕೋಟೆಯ ಅಂಗಾಂಗ !
ಅರಮನೆ ಸಿರಿಮನೆ ಗಜ-ತುರಗಾಲಯ !
ಅರಸಿಯರಂತಃಪುರ ಗುರುನಿಲಯ !
ಹೆಸರಿಂತೆನಿತನೊ ಪಡೆದಿಹವು-
ನಮ್ಮಯ ಕುಲಬಂಧುಗಳೆ ಅವು !


“ದೊರೆಗಳ ಶಾಸನವೊರೆಯುವುವೆನಿತೋ
ಗರತಿಯ ಬದುಕನು ಮೊರೆಯುವುವೆನಿತೋ !
ವೀರರ ಬಲುಹನು ಹಾಡುತಲೆನಿತೊ, ಉ-
ದಾರರ ಚಾಗವನಾಡುತಲೆನಿತೋ-
ಹೆಮ್ಮೆಯ ಹೆಸರನು ತಳೆದಿಹವು-
ನಮ್ಮಯ ಬಳಿಯಿದ್ದುವಲೆ ಅವು?


“ವಿಜಯ ವಿಟ್ಠಲನ ಚಿತ್ರದ ತೇರು!
ಗುಡಿ ಗೋಪುರ ಮಂಟಪಗಳ ಕುಸುರು !
ಎನಿತು ಕಲಾಕೃತಿ ಅನಿತಕು ಹೆಸರು,
ನಮಗೇನಿರುವುದು ಬರಿ ಬಿಸಿಯುಸಿರು !
ಕೆಲವೆ ಕಾಲ ಬಾಳಿದರು ಅವು-
ಹೆಮ್ಮೆಯ ಹೆಸರನು ಬೆಳಗಿದುವು!


“ಬಲ್ಲಿದರಾರೋ ಬಂದಿಲ್ಲಿಳಿಯುತ
ಇಲ್ಲಿಹ ನಮ್ಮವರನು ಎಚ್ಚರಿಸುತ
ಒಳ್ಳೆಯ ಒಳ್ಳೆಯ ರೂಪವ ಕೊಡಿಸಿ,
ಬಂಡೆಯೆಂಬ ಬರಿ ಹೆಸರನು ಬಿಡಿಸಿ,
ಮನ್ನಣೆಯೊಲವನು ಸಲ್ಲಿಸಿದರು-
ಧನ್ಯರಲ್ಲಿ ಅವರಡಗಿದರು ?


“ಬರುವರೆ.. ಬರಲಿರುವರೆ…. ಯಾರಾದರು
ಮರಳಿ ರಾಜ್ಯವನ್ನು ಕಟ್ಟುವರೆ ?
ಅರಮನೆ-ಗುಡಿಗಳಿಗಿರದಿರೆ ಹೋಗಲಿ
ಸೆರೆಮನೆಗಾದರು ನಮ್ಮನು ಬಳಸಲಿ !
ಬರಲಿರುವರು ಬೇಗನೆ ಬರಲಿ-
ನಮಗೂ ಹೆಸರೊಂದನು ತರಲಿ!
* * *
ಹಾಳುಪಟ್ಟಣದ ಬಂಡೆಯ ಬಳಗದ
ಗೋಳಿನ ಮೌನದ ಕೂಗನು ಕೇಳಿ!
*****

Tagged:

Leave a Reply

Your email address will not be published. Required fields are marked *

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...