Home / ಕವನ / ಕವಿತೆ / ನಮಗೆಯು ಹೆಸರೊಂದನು ತರಲಿ!

ನಮಗೆಯು ಹೆಸರೊಂದನು ತರಲಿ!

ಹಾಳು ಪಟ್ಟಣದ ಬಂಡೆಯ ಬಳಗದ
ಕೊರಗಿನ ಮೌನದ ಕೂಗನು ಕೇಳಿ!


“ಹೇಳಲಿಕಾಗದ ಕಾಲದಿಂದಲೂ
ತಾಳಿ ಗಾಳಿ-ಮಳೆ ಚಳಿ-ಬಿರುಬಿಸಿಲು
ಸೊಗಸೇನನೊ ಬದುಕಿಗೆ ಬಯಸಿದೆವು,
ಹಗಲಿರುಳೂ ತಪದೊಳು ಬಳಲಿದೆವು….
ಆದರು ನಮಗಿಹ ಹೆಸರೇನು ?
ಬಂಡೆಯೆ ಅಲ್ಲವೆ ? ಬೇರೇನು ?”


“ನಿಂದೆಡೆಯೊಳೆ ಅಲುಗಾಡದೆ ನಿಂದು
ಒಂದೆ ಮನದಿ ಮಾಡಿದ ತಪವಿಂದು
ನಮಗೇತಕೆ ಕೊಡದಿರುವುದೊ ಫಲವ!
ಕೇಳುವೆವಾರಲಿ ನೆರವಿನ ಬಲವ ?
ನಮಗಿಹ ‘ಬಂಡೆ’ಯ ಹೆಸರನ್ನು
ತವಿಸುವರಾರೂ ಬರರೇನು?”


“ನಮ್ಮೊಡನೆಯೆ ನೆಲದೊಳು ಮೂಡಿದುವು,
ನಮ್ಮೊಂದಿಗೆ ತಪದೊಳು ಕೂಡಿದುವು,
ಎನಿತೆನಿತೋ ಘನತೆಯ ಪದವೊಂದಿ
ಜನದಲಿ ಹೊಸ ಹೊಸ ಹೆಸರನು ಹೊಂದಿ,
ಹೆಮ್ಮಯ ಕೀರ್‍ತಿಯ ಗಳಿಸಿದುವು
ನಮ್ಮಯ ಕುಲಬಂಧುಗಳೆ ಅವು!


“ಹಂಪೆಯಧೀಶನ ಶ್ರೀಶಿವಲಿಂಗ !
ವಿಜಯನಗರ ಕೋಟೆಯ ಅಂಗಾಂಗ !
ಅರಮನೆ ಸಿರಿಮನೆ ಗಜ-ತುರಗಾಲಯ !
ಅರಸಿಯರಂತಃಪುರ ಗುರುನಿಲಯ !
ಹೆಸರಿಂತೆನಿತನೊ ಪಡೆದಿಹವು-
ನಮ್ಮಯ ಕುಲಬಂಧುಗಳೆ ಅವು !


“ದೊರೆಗಳ ಶಾಸನವೊರೆಯುವುವೆನಿತೋ
ಗರತಿಯ ಬದುಕನು ಮೊರೆಯುವುವೆನಿತೋ !
ವೀರರ ಬಲುಹನು ಹಾಡುತಲೆನಿತೊ, ಉ-
ದಾರರ ಚಾಗವನಾಡುತಲೆನಿತೋ-
ಹೆಮ್ಮೆಯ ಹೆಸರನು ತಳೆದಿಹವು-
ನಮ್ಮಯ ಬಳಿಯಿದ್ದುವಲೆ ಅವು?


“ವಿಜಯ ವಿಟ್ಠಲನ ಚಿತ್ರದ ತೇರು!
ಗುಡಿ ಗೋಪುರ ಮಂಟಪಗಳ ಕುಸುರು !
ಎನಿತು ಕಲಾಕೃತಿ ಅನಿತಕು ಹೆಸರು,
ನಮಗೇನಿರುವುದು ಬರಿ ಬಿಸಿಯುಸಿರು !
ಕೆಲವೆ ಕಾಲ ಬಾಳಿದರು ಅವು-
ಹೆಮ್ಮೆಯ ಹೆಸರನು ಬೆಳಗಿದುವು!


“ಬಲ್ಲಿದರಾರೋ ಬಂದಿಲ್ಲಿಳಿಯುತ
ಇಲ್ಲಿಹ ನಮ್ಮವರನು ಎಚ್ಚರಿಸುತ
ಒಳ್ಳೆಯ ಒಳ್ಳೆಯ ರೂಪವ ಕೊಡಿಸಿ,
ಬಂಡೆಯೆಂಬ ಬರಿ ಹೆಸರನು ಬಿಡಿಸಿ,
ಮನ್ನಣೆಯೊಲವನು ಸಲ್ಲಿಸಿದರು-
ಧನ್ಯರಲ್ಲಿ ಅವರಡಗಿದರು ?


“ಬರುವರೆ.. ಬರಲಿರುವರೆ…. ಯಾರಾದರು
ಮರಳಿ ರಾಜ್ಯವನ್ನು ಕಟ್ಟುವರೆ ?
ಅರಮನೆ-ಗುಡಿಗಳಿಗಿರದಿರೆ ಹೋಗಲಿ
ಸೆರೆಮನೆಗಾದರು ನಮ್ಮನು ಬಳಸಲಿ !
ಬರಲಿರುವರು ಬೇಗನೆ ಬರಲಿ-
ನಮಗೂ ಹೆಸರೊಂದನು ತರಲಿ!
* * *
ಹಾಳುಪಟ್ಟಣದ ಬಂಡೆಯ ಬಳಗದ
ಗೋಳಿನ ಮೌನದ ಕೂಗನು ಕೇಳಿ!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...