Home / ಕವನ / ಕವಿತೆ / ಭಲಭಲರೆ, ಶಕುನಿ!

ಭಲಭಲರೆ, ಶಕುನಿ!

ಕೌರವರ ಮಂತಣಗಾರನಾದ ಶಕುನಿ ಮಾಡಿದ ಕಾರ್ಯ ಅಕಾರ್ಯವೆಂದ ನಿಂದಿಸುವುದು, ಅಜ್ಞಾನದ ಪರಿಣಾಮವೆಂದು ಭಾವಿಸಬಹುದಲ್ಲವೆ?


ಧೀರುರೇ, ಭಲಭಲರೆ! ಶಕುನಿಯೇ ನಾ ನಿನಗೆ
ತಲೆವಾಗಿ ವಂದಿಸುವೆನೈ!
ಭಾರತೀಯರ ಮೇಲೆ ನೀ ಮಾಡಿದುಪಕಾರ
ಭಾರವಾಗಿಹುದು ಕಾಣೈ!


ನಿನ್ನ ಕೈ ಚಳಕದಾ ಹೊಲಬನರಿಯದೆ ನಿನಗೆ
ಹಳಿವನ್ನು ಹೊದ್ದಿಸುವರು-
ಬಣ್ಣವನೆ ನೋಡಿ ಕೋಗಿಲಿಗೆ ಕರಿಗಾಗೆಯೆಂ-
ದೆನುವ ಮತಿಮಂದಜನರು!


ಮುಳ್ಳ ಮಳೆಯಲ್ಲಿರುವ ಹೊಸಜೇನುಹುಟ್ಟಿನಲಿ
ಇನಿರಸವು ತುಂಬಿರುವೊಲು-
ಸುಳ್ಳಲ್ಲ, ನಿನ್ನ ಪ್ರತಿಯೊಂದು ಕೃತಿಯೊಳಗೊಳಗೆ
ಹುರುಳು ಹುದುಗಿಹುದು ಕೇಳು!


ನೀನಿಲ್ಲದಿರಲು ಭಾರತದ ಹಿರಿಹೊತ್ತಗೆಯು
ತಿರುಳಿಲ್ಲದಾಗಿರುವುದು-
ತನಿರಸವನೆಲ್ಲವನು ಹಿಂಡಿ ಹೊರದೆಗೆದ ಕ-
ಬ್ಬಿನ ಕೋಲಿನಂತಿರುವುದು.


ಸುಜನರನು ದುರ್ಜನರು ಯುಗ-ಯುಗಗಳಲ್ಲಿಯೂ
ಪೀಡಿಸುವರೆಂಬುದನ್ನು
ತ್ರಿಜಗಕ್ಕೆ ತಿಳುಹಲಿಕೆ ಭಾರತದ ನಾಟಕದಿ
ಸೂತ್ರಧರನಾದೆ ನೀನು !


ಧರ್ಮರಾಯನ ಧರ್ಮನಿಷ್ಠೆ, ಭೀಮನ ಬಲುಹು,
ಅರ್ಜುನನ ಅಸ್ತ್ರದರಿವು,
ನಮ್ಮೆಲ್ಲರಾ ಕಂಗಳೆದುರಿನಲ್ಲಿ ಕುಣಿಯುವುದು
ನಿನ್ನ ಗೈಮಯ ಫಲಿತವು !


ದುರ್ಯೋಧನನ ಧೈರ್ಯ-ಚಲದಂಕತನವ, ವಿದು-
ರನ ವಿಷ್ಣುಭಕ್ತಿಯನ್ನು,
ಸೂರ್‍ಯಾತ್ಮಜನ ದಾತೃಗುಣವ ಡಂಗುರ ಹೊಯ್ದು
ಜಗದಿ ಸಾರಿದೆಯೊ ನೀನು!


ಪಾಂಚಾಲಿನಿಯ ಪಾವನತೆಯು ಪಸರಿಸುವುದಕೆ
ನೆರವು ನೀ ನೀಡಿದೆಯಲ್ಲಾ?
ಚಂಚಲಾಕ್ಷಿಯ ಹೆಸರನಾರು ತಿಳಿಯುತ್ತಿರ್ದ-
ರೈ, ಪೇಳು ನೀ ಸೌಬಲಾ!


ಕುರುವಂಶಜಾತರನು ಹುರಿಗೊಳಿಸಿ ಸಂಗರಕೆ
ಪರಮಾತ್ಮ ಕೃಷ್ಣನಿಂದೆ-
ಪರಮಗೀತೆಯನು ಹಾಡಿಸಿದೆ ಜಗಕೆಲ್ಲ ಉಪ-
ಕೃತಿಯ ಹೊರೆಯನು ಹೊರಿಸಿದೆ!

೧೦
ಇನ್ನೆಂದು ಬಂದು ನೀ ಭರತಖಂಡದಲಿ ಹೂ-
ಡುವೆ ನಿನ್ನ ನಾಟಕವನು ?
ಮನ್ನೆಯನೆ ತಿಳುಹುವುದು ಜನಕೆ ‘ಸತ್ಯಕ್ಕೆ ಜಯ
ವುಂಟೆ’ಂಬ ತತ್ತ್ವವನ್ನು !

೧೧
ಧೀರುರೇ, ಭಲಭಲರೆ ! ಶಕುನಿಯೇ ನಿನಗೆ ನಾ
ತಲೆವಾಗಿ ವಂದಿಸುವೆನು.
ಭಾರತೀಯರಿಗೆಲ್ಲ ಜೀವನದ ಸಾರವನು
ಕಲಿಸಲಿಕೆ ಬೇಕು ನೀನು!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...