Home / ಕವನ / ಕವಿತೆ / ಭಲಭಲರೆ, ಶಕುನಿ!

ಭಲಭಲರೆ, ಶಕುನಿ!

ಕೌರವರ ಮಂತಣಗಾರನಾದ ಶಕುನಿ ಮಾಡಿದ ಕಾರ್ಯ ಅಕಾರ್ಯವೆಂದ ನಿಂದಿಸುವುದು, ಅಜ್ಞಾನದ ಪರಿಣಾಮವೆಂದು ಭಾವಿಸಬಹುದಲ್ಲವೆ?


ಧೀರುರೇ, ಭಲಭಲರೆ! ಶಕುನಿಯೇ ನಾ ನಿನಗೆ
ತಲೆವಾಗಿ ವಂದಿಸುವೆನೈ!
ಭಾರತೀಯರ ಮೇಲೆ ನೀ ಮಾಡಿದುಪಕಾರ
ಭಾರವಾಗಿಹುದು ಕಾಣೈ!


ನಿನ್ನ ಕೈ ಚಳಕದಾ ಹೊಲಬನರಿಯದೆ ನಿನಗೆ
ಹಳಿವನ್ನು ಹೊದ್ದಿಸುವರು-
ಬಣ್ಣವನೆ ನೋಡಿ ಕೋಗಿಲಿಗೆ ಕರಿಗಾಗೆಯೆಂ-
ದೆನುವ ಮತಿಮಂದಜನರು!


ಮುಳ್ಳ ಮಳೆಯಲ್ಲಿರುವ ಹೊಸಜೇನುಹುಟ್ಟಿನಲಿ
ಇನಿರಸವು ತುಂಬಿರುವೊಲು-
ಸುಳ್ಳಲ್ಲ, ನಿನ್ನ ಪ್ರತಿಯೊಂದು ಕೃತಿಯೊಳಗೊಳಗೆ
ಹುರುಳು ಹುದುಗಿಹುದು ಕೇಳು!


ನೀನಿಲ್ಲದಿರಲು ಭಾರತದ ಹಿರಿಹೊತ್ತಗೆಯು
ತಿರುಳಿಲ್ಲದಾಗಿರುವುದು-
ತನಿರಸವನೆಲ್ಲವನು ಹಿಂಡಿ ಹೊರದೆಗೆದ ಕ-
ಬ್ಬಿನ ಕೋಲಿನಂತಿರುವುದು.


ಸುಜನರನು ದುರ್ಜನರು ಯುಗ-ಯುಗಗಳಲ್ಲಿಯೂ
ಪೀಡಿಸುವರೆಂಬುದನ್ನು
ತ್ರಿಜಗಕ್ಕೆ ತಿಳುಹಲಿಕೆ ಭಾರತದ ನಾಟಕದಿ
ಸೂತ್ರಧರನಾದೆ ನೀನು !


ಧರ್ಮರಾಯನ ಧರ್ಮನಿಷ್ಠೆ, ಭೀಮನ ಬಲುಹು,
ಅರ್ಜುನನ ಅಸ್ತ್ರದರಿವು,
ನಮ್ಮೆಲ್ಲರಾ ಕಂಗಳೆದುರಿನಲ್ಲಿ ಕುಣಿಯುವುದು
ನಿನ್ನ ಗೈಮಯ ಫಲಿತವು !


ದುರ್ಯೋಧನನ ಧೈರ್ಯ-ಚಲದಂಕತನವ, ವಿದು-
ರನ ವಿಷ್ಣುಭಕ್ತಿಯನ್ನು,
ಸೂರ್‍ಯಾತ್ಮಜನ ದಾತೃಗುಣವ ಡಂಗುರ ಹೊಯ್ದು
ಜಗದಿ ಸಾರಿದೆಯೊ ನೀನು!


ಪಾಂಚಾಲಿನಿಯ ಪಾವನತೆಯು ಪಸರಿಸುವುದಕೆ
ನೆರವು ನೀ ನೀಡಿದೆಯಲ್ಲಾ?
ಚಂಚಲಾಕ್ಷಿಯ ಹೆಸರನಾರು ತಿಳಿಯುತ್ತಿರ್ದ-
ರೈ, ಪೇಳು ನೀ ಸೌಬಲಾ!


ಕುರುವಂಶಜಾತರನು ಹುರಿಗೊಳಿಸಿ ಸಂಗರಕೆ
ಪರಮಾತ್ಮ ಕೃಷ್ಣನಿಂದೆ-
ಪರಮಗೀತೆಯನು ಹಾಡಿಸಿದೆ ಜಗಕೆಲ್ಲ ಉಪ-
ಕೃತಿಯ ಹೊರೆಯನು ಹೊರಿಸಿದೆ!

೧೦
ಇನ್ನೆಂದು ಬಂದು ನೀ ಭರತಖಂಡದಲಿ ಹೂ-
ಡುವೆ ನಿನ್ನ ನಾಟಕವನು ?
ಮನ್ನೆಯನೆ ತಿಳುಹುವುದು ಜನಕೆ ‘ಸತ್ಯಕ್ಕೆ ಜಯ
ವುಂಟೆ’ಂಬ ತತ್ತ್ವವನ್ನು !

೧೧
ಧೀರುರೇ, ಭಲಭಲರೆ ! ಶಕುನಿಯೇ ನಿನಗೆ ನಾ
ತಲೆವಾಗಿ ವಂದಿಸುವೆನು.
ಭಾರತೀಯರಿಗೆಲ್ಲ ಜೀವನದ ಸಾರವನು
ಕಲಿಸಲಿಕೆ ಬೇಕು ನೀನು!
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್