ಮೋಡ

ಜಗದ ಜೀವವನುಂಡು ಹಲವು ಬಗಗಳ ಕಂಡು
ನಗುತ ನೆಗೆದಾಡುತ್ತ ಹಗಲಿರುಳು ಹಾರಾಡಿ
ತೆಗೆದು ತೀರದ ವಾರಿ ಹೊಗೆಯಾಗಿ ಹೂವಾಗಿ
ಮುಗಿಸೆ ನಭಯಾತ್ರೆಗಳ ಹಗುರಾಗಿ ನಡೆದಿರುವೆ.

ಬಿಸಿಲಿಂಗೆ ಮೈಯೊಡ್ಡಿ ಬಿಳಿ ವಸನಮಂ ಹೊದೆದು
ಹಸಿತ ವದನದಿ ತೋರಿ ಕುಣಿಕುಣಿದು ನಲಿದಾಡಿ
ನಸುಮುನಿಸ ಬೀರುತ್ತ ಉದ್ದವೋ ಗಿಡ್ಡವೋ
ಉಸಿರೆಳೆದು ಭಯರೂಪು ತಾಳುತ್ತ ನಡೆಯುತಿಹೆ.

ನೆಲಕಿಂತ ಆಗಸವೆ ನಲಿಯಲ್ಕೆ ಚೆಲುವೆಂದು
ಅಲೆದಲೆದು ತಿರೆ ನೋಡಿ ನಗುತಿರುವೆ ಹಾಸ್ಯದಿಂ
ಮೇಲಿಂದ ಧರೆಯೊಲವ ನೋಡುವುದೆ ಸೂಗಮೆಂದು
ಹಾಲಿನಂತೆಸೆಯುತಿಹೆ ನಭಮಾಡದಲಿ ನಿಂದು.

ಬಿತ್ತರದ ಗಗನದಲಿ ತಡೆಯುವವರಾರಿಲ್ಲ
ಚಿತ್ತಾರಮಂ ಬರೆದು ಮುಖಗೊಂಡು ಸಿಂಗರದಿ
ಚಿತ್ರತರ ಜಲಧಿಗನ್ನಡಿಯಲ್ಲಿ ಮೊಗ ನೋಡಿ
ಮುತ್ತುದುರಿಸುತ್ತಿರುವೆ ಜಲದೇವಿಯಾಗೆಸೆವೆ.

ಬಾನ ಬೇಸಿಗಯುಂಡು ನಕ್ಷತ್ರದೊಡಲಲ್ಲಿ
ನೀನು ಮೆರೆಯುತ್ತಿರಲು ಮಚ್ಚರಿಸಿ ನೀರೆಲ್ಲ
ಕಾಣಿಸದೆ ಮೈಮರೆಸಿ ಗಗನವೇರುತ್ತಿರಲು
ಮೌನವೇ ತುಂಬಿತ್ತು ಬಲು ಬಿಸಿಲ ಘಾಸಿಯಲಿ.

ಇಲ್ಲ ನೆರೆ-ಇಲ್ಲ ಕರೆ ನಿನ್ನ ಸುಳಿವಿನ್ನಿಲ್ಲ
ಬಲ್ಲಿದರು ಬಡವರುಂ ಮೂಕಜಂತುಗಳೆಲ್ಲ
ಅಲ್ಲಲ್ಲಿ ತೊಳಲುತ್ತಲರಸಿದರು ಬೇಸತ್ತು
ಮಲ್ಲಿಗೆಯ ನಗುವೆಲ್ಲ ಮಂಕಾಯ್ತು ನೀನಿರದೆ.

ನಿನಗೆ ತಿಳುಹುವರಾರು ನಿನ್ನ ಕರೆವವರಾರು?
ನಿನಗೆ ಕಷ್ಟವನೊರದು ಬಾಯೆನುವರಾರೆಂದು
ಕಣುಗಳುಂ ಬತ್ತುತಿರೆ ರಾಯಭಾರಿಯು ವಾಯು
ಜನದುರಿಗೆ ದಯೆಗೊಂಡು ನಿನ್ನೆಡೆಗೆ ಹಾರಿದನು.

ಅಂದಾ ಭಗೀರಥನು ಭಾಗೀರಥಿಯ ತಂದ
ಇಂದೆಮಗೆ ಗಗನದಿಂ ವಾಯುತಹ ನಿನ್ನನ್ನು
ಚೆಂದದಿಂದಿಳಿದಿಳಿದು ಬಾ ತಾಯಿ ಮೈದಳೆದು
ಬಂದೆಮ್ಮ ಒಳಹೂರಗೆ ಜೀವದುಂಬಿಸು ದೇವಿ.

ಮಳೆಯ ರೂಪವ ತಳೆದು ಹನಿಯ ಕೈಗಳ ಪೊಂದಿ
ಇಳೆಗಿಳಿದು ಬಾ ನಮ್ಮ ಚೆಲುವ ಬನ ತೋಟಗಳ
ನಲಿಸಿ ನಗಿಸುತಲೊಮ್ಮೆ ತವರೂರ ಸಂಚರಿಸು
ಜಲದೊಡಲಿನಿಂ ಬಂದ ವಾಹಿನಿಯರಂ ನೋಡು.

ಬರುವ ರಭಸಕೆ ಕಪ್ಪು ಮುಪ್ಪಾಗಿ ಮುರಿಯುತಿದೆ.
ಹೊರಟಳೆಂದಾ ಗಗನ ಕತ್ತಲೆಯ ಕಾರುತಿದೆ
ಮರೆಯಾದ ನೇಸರಂ, ನೀನಲ್ಲಿ ನಡೆದಿರಲು
ಕರಗಿದೆದೆಯಿಂ ಬಂದೆ ಬಾ ತಾಯಿ ಬಾಗುವವು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...