ಮೋಡ

ಜಗದ ಜೀವವನುಂಡು ಹಲವು ಬಗಗಳ ಕಂಡು
ನಗುತ ನೆಗೆದಾಡುತ್ತ ಹಗಲಿರುಳು ಹಾರಾಡಿ
ತೆಗೆದು ತೀರದ ವಾರಿ ಹೊಗೆಯಾಗಿ ಹೂವಾಗಿ
ಮುಗಿಸೆ ನಭಯಾತ್ರೆಗಳ ಹಗುರಾಗಿ ನಡೆದಿರುವೆ.

ಬಿಸಿಲಿಂಗೆ ಮೈಯೊಡ್ಡಿ ಬಿಳಿ ವಸನಮಂ ಹೊದೆದು
ಹಸಿತ ವದನದಿ ತೋರಿ ಕುಣಿಕುಣಿದು ನಲಿದಾಡಿ
ನಸುಮುನಿಸ ಬೀರುತ್ತ ಉದ್ದವೋ ಗಿಡ್ಡವೋ
ಉಸಿರೆಳೆದು ಭಯರೂಪು ತಾಳುತ್ತ ನಡೆಯುತಿಹೆ.

ನೆಲಕಿಂತ ಆಗಸವೆ ನಲಿಯಲ್ಕೆ ಚೆಲುವೆಂದು
ಅಲೆದಲೆದು ತಿರೆ ನೋಡಿ ನಗುತಿರುವೆ ಹಾಸ್ಯದಿಂ
ಮೇಲಿಂದ ಧರೆಯೊಲವ ನೋಡುವುದೆ ಸೂಗಮೆಂದು
ಹಾಲಿನಂತೆಸೆಯುತಿಹೆ ನಭಮಾಡದಲಿ ನಿಂದು.

ಬಿತ್ತರದ ಗಗನದಲಿ ತಡೆಯುವವರಾರಿಲ್ಲ
ಚಿತ್ತಾರಮಂ ಬರೆದು ಮುಖಗೊಂಡು ಸಿಂಗರದಿ
ಚಿತ್ರತರ ಜಲಧಿಗನ್ನಡಿಯಲ್ಲಿ ಮೊಗ ನೋಡಿ
ಮುತ್ತುದುರಿಸುತ್ತಿರುವೆ ಜಲದೇವಿಯಾಗೆಸೆವೆ.

ಬಾನ ಬೇಸಿಗಯುಂಡು ನಕ್ಷತ್ರದೊಡಲಲ್ಲಿ
ನೀನು ಮೆರೆಯುತ್ತಿರಲು ಮಚ್ಚರಿಸಿ ನೀರೆಲ್ಲ
ಕಾಣಿಸದೆ ಮೈಮರೆಸಿ ಗಗನವೇರುತ್ತಿರಲು
ಮೌನವೇ ತುಂಬಿತ್ತು ಬಲು ಬಿಸಿಲ ಘಾಸಿಯಲಿ.

ಇಲ್ಲ ನೆರೆ-ಇಲ್ಲ ಕರೆ ನಿನ್ನ ಸುಳಿವಿನ್ನಿಲ್ಲ
ಬಲ್ಲಿದರು ಬಡವರುಂ ಮೂಕಜಂತುಗಳೆಲ್ಲ
ಅಲ್ಲಲ್ಲಿ ತೊಳಲುತ್ತಲರಸಿದರು ಬೇಸತ್ತು
ಮಲ್ಲಿಗೆಯ ನಗುವೆಲ್ಲ ಮಂಕಾಯ್ತು ನೀನಿರದೆ.

ನಿನಗೆ ತಿಳುಹುವರಾರು ನಿನ್ನ ಕರೆವವರಾರು?
ನಿನಗೆ ಕಷ್ಟವನೊರದು ಬಾಯೆನುವರಾರೆಂದು
ಕಣುಗಳುಂ ಬತ್ತುತಿರೆ ರಾಯಭಾರಿಯು ವಾಯು
ಜನದುರಿಗೆ ದಯೆಗೊಂಡು ನಿನ್ನೆಡೆಗೆ ಹಾರಿದನು.

ಅಂದಾ ಭಗೀರಥನು ಭಾಗೀರಥಿಯ ತಂದ
ಇಂದೆಮಗೆ ಗಗನದಿಂ ವಾಯುತಹ ನಿನ್ನನ್ನು
ಚೆಂದದಿಂದಿಳಿದಿಳಿದು ಬಾ ತಾಯಿ ಮೈದಳೆದು
ಬಂದೆಮ್ಮ ಒಳಹೂರಗೆ ಜೀವದುಂಬಿಸು ದೇವಿ.

ಮಳೆಯ ರೂಪವ ತಳೆದು ಹನಿಯ ಕೈಗಳ ಪೊಂದಿ
ಇಳೆಗಿಳಿದು ಬಾ ನಮ್ಮ ಚೆಲುವ ಬನ ತೋಟಗಳ
ನಲಿಸಿ ನಗಿಸುತಲೊಮ್ಮೆ ತವರೂರ ಸಂಚರಿಸು
ಜಲದೊಡಲಿನಿಂ ಬಂದ ವಾಹಿನಿಯರಂ ನೋಡು.

ಬರುವ ರಭಸಕೆ ಕಪ್ಪು ಮುಪ್ಪಾಗಿ ಮುರಿಯುತಿದೆ.
ಹೊರಟಳೆಂದಾ ಗಗನ ಕತ್ತಲೆಯ ಕಾರುತಿದೆ
ಮರೆಯಾದ ನೇಸರಂ, ನೀನಲ್ಲಿ ನಡೆದಿರಲು
ಕರಗಿದೆದೆಯಿಂ ಬಂದೆ ಬಾ ತಾಯಿ ಬಾಗುವವು.
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...