ಕುರಿಯಮಾತು

ಹೈಮವತಿಯೇ ತಾಯಿ- ಬಗೆ ಬಗೆಯ ರೂಪದಲಿ
ಭೂಮಿಯೊಳು ತಾ ಬಂದು- ನಲಿಯುವಳು ದೇಹದಲಿ
ಅವಳ ಕಿಡಿ ನಮ್ಮೊಳಗೆ
ನಲಿಯುತಿದೆ ಒಳಗೊಳಗೆ.

ಅವಳೆಮಗ ಹೆತ್ತಬ್ಬೆ- ಆದರೊಂದೇ ಚಿಂತೆ
ನರರೆಂಬ ಸೋದರರು- ಪ್ರೇಮ ತೊರೆದವರಂತೆ
ಬಲಿಯೀವರೆಮ್ಮನ್ನು
ಕೇಳುವವರಾರಿನ್ನು.

ಪರದೇಶಿ ಕುರಿಗಳಾವ್, ಎಮ್ಮ ನೆತ್ತರು ಮಾಂಸ
ಸವಿಯಂತೆ, ಬಯಸುವಳು-ಕೂಲಿಸುತ್ತ ಅವಳಂಶ
ಮಾತು ಬಾರದ ಜಂತು
ಪ್ರಾಣ ಕೊಡುತಿಹುದೆಂತು.

ಕರುಣದಿಂ ಕಣ್ಣೀರ- ಸುರಿಸುವಳ ದೂರುವರು
ಸಹೃದಯೆಯ ಕಲುಹೃದಯಳಂ ಮಾಡಿ ತೋರುವರು
ಎಮ್ಮ ಹೆಣ ತಿನ್ನುವರು
ರಕ್ತಮಂ ಕುಡಿಯುವರು.

ಚೋರ ಕರ್ಮಿಗಳಲ್ಲಿ- ಪ್ರಾಣಹಿಂಸಕರಲ್ಲ
ಹಸಿ ಹುಲ್ಲು ಎಲೆ ತರಗು- ಇದು ನರರ ಸ್ವತ್ತಲ್ಲ
ಸೊಪ್ಪುಸದೆ ದೇವಿಯದು
ಹರಿವ ಜಲ ತಾಯಿಯದು.

ಮತಿಯುಂಟು ಹಿತರುಂಟು- ಬಂಧು ಬಾಂಧವರುಂಟು
ಪರಮಾತ್ಮನರಿವುಂಟು-ಕಷ್ಟಸುಖದರಿವುಂಟು
ನಮಗಾರು ದಿಕ್ಕಿಲ್ಲ
ತಂದೆತಾಯಿಗಳಿಲ್ಲ.

ನಿಮ್ಮ ಕುಲ ಬಾಯ್ತುತ್ತು – ಮೂಕಜಂತುಗಳರರೆ
ತಾಯ್ಬೆಳಸಿ ಸಲಹಿರುವ- ಈ ದೇಹ ನಿಮಗೆ ಸೆರೆ
ನಾವಿರಲು ನಿಮಗಾಗಿ
ಕೂಲಲೇಕೆ ಮರೆಯಾಗಿ.

ಎಮ್ಮ ಮೈ ರೋಮಗಳು- ತೊಗಲು ಮಾಂಸವು ರಕ್ತ
ನಿಮಗೆರವು ಮಾಡಿದಳು- ಜನಕ ಇದುವೇ ಭುಕ್ತ
ಎಮ್ಮ ಕೊರಳನು ಕೊಯ್ವ
ಕಟುಕರಾದಿರಿ ಹೊಯ್ವ.

ಕುತ್ತಿಗೆಯ ಕೊಯ್ವಾಗ- ನಿಮಗಾಗಿ ಮರುಗುವೆವು
ಅತ್ತಲಾ ಹೈಮವತಿ- ಕರವಾಳ ಮಸೆಯುವಳು
ನಿಮ್ಮಸುವ ಸೆಳೆಯುವಳು
ಆಮೇಲೆ ಕುಣಿಯುವಳು.

ನರಕುರಿಯು ನೀವಂತ- ಕುರಿಜನ್ಮ ನಿಮಗಂತೆ
ನರರಾವು ಮುಂದಂತೆ- ನಿಮ್ಮನುಳಿಸುವೆವಂತೆ
ಇಂತಬ್ಬೆ ಹೇಳುವಳು
ಕಣ್ಣೀರ ಹರಿಸುವಳು.

ಹಿಡಿಕಾಳು ಬಯಸಿಲ್ಲ- ನಿಮ್ಮಿಂದ ಬದುಕಿಲ್ಲ
ಕೆಡಕುಗಳ ಮಾಡಿಲ್ಲ- ಬಲ್ಲಳಿದನವಳೆಲ್ಲ
ನಿಮಗಾಗಿ ಆ ರೂಪ
ತಾಳಿದಳು ಬಹು ಕೋಪ.

ನಮ್ಮಿಂದ ನಿಮ್ಮಿರವು-ನಿಮ್ಮಿಂದ ನಾವಲ್ಲ
ನಮ್ಮ ಮುಕ್ತಿಗೆ ಮಾತೆ-ಹೊಣೆಯಂತೆ ನೀವಲ್ಲ
ಕೋಪದಲಿ ಸಾಯದಿರಿ
ಪಾಪದೊಳು ಬೀಳದಿರಿ.

ನಮ್ಮ ಕೊಂದರೆ ವ್ಯಾಧಿ-ಮಾರಿ ರೂಪದಿ ಬಂದು
ನಿಮ್ಮ ತನು ಕುರಿಹೆಣವು-ಬಿದ್ದಂತೆ ನೆಲೆ ನಿಂದು
ಬಲಿಗೊಳ್ವುದರಿಯುವಿರಿ
ಸೆಳೆವುದನು ಕಾಣುವಿರಿ.

ತಾಯಿಯಂ ಪೂಜಿಸಿರಿ-ಫಲಪುಷ್ಪಚಯಗಳಿಂ
ಆ ವಿಮಲೆ ಕಾಯುವಳು-ನಲಿದೆಲ್ಲ ಕರಗಳಿಂ
ಕಾಯಬೇಹುದಹಿಂಸೆ
ಪಾಪವದುವೇ ಹಿಂಸ.

ಸಾವೆವೆಂಬಾ ದುಃಖ-ನಮಗಿಲ್ಲ ಲೋಕದಲಿ
ಕೊಲ್ಲದಿರಿ ಕುರಿಗಳಂ-ಸೋದರರೆ ಮೋಸದಲಿ
ನಿಮಗೆಮಗೆ ಹೈಮವತಿ
ತಾಯಹುದು ಗುಣವಂತಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮ್ಮನ ಪಡಿಯಚ್ಚು
Next post ಗುಂಡನ ದಿನಚರಿ

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…