Home / ಕವನ / ಕವಿತೆ / ಕುರಿಯಮಾತು

ಕುರಿಯಮಾತು

ಹೈಮವತಿಯೇ ತಾಯಿ- ಬಗೆ ಬಗೆಯ ರೂಪದಲಿ
ಭೂಮಿಯೊಳು ತಾ ಬಂದು- ನಲಿಯುವಳು ದೇಹದಲಿ
ಅವಳ ಕಿಡಿ ನಮ್ಮೊಳಗೆ
ನಲಿಯುತಿದೆ ಒಳಗೊಳಗೆ.

ಅವಳೆಮಗ ಹೆತ್ತಬ್ಬೆ- ಆದರೊಂದೇ ಚಿಂತೆ
ನರರೆಂಬ ಸೋದರರು- ಪ್ರೇಮ ತೊರೆದವರಂತೆ
ಬಲಿಯೀವರೆಮ್ಮನ್ನು
ಕೇಳುವವರಾರಿನ್ನು.

ಪರದೇಶಿ ಕುರಿಗಳಾವ್, ಎಮ್ಮ ನೆತ್ತರು ಮಾಂಸ
ಸವಿಯಂತೆ, ಬಯಸುವಳು-ಕೂಲಿಸುತ್ತ ಅವಳಂಶ
ಮಾತು ಬಾರದ ಜಂತು
ಪ್ರಾಣ ಕೊಡುತಿಹುದೆಂತು.

ಕರುಣದಿಂ ಕಣ್ಣೀರ- ಸುರಿಸುವಳ ದೂರುವರು
ಸಹೃದಯೆಯ ಕಲುಹೃದಯಳಂ ಮಾಡಿ ತೋರುವರು
ಎಮ್ಮ ಹೆಣ ತಿನ್ನುವರು
ರಕ್ತಮಂ ಕುಡಿಯುವರು.

ಚೋರ ಕರ್ಮಿಗಳಲ್ಲಿ- ಪ್ರಾಣಹಿಂಸಕರಲ್ಲ
ಹಸಿ ಹುಲ್ಲು ಎಲೆ ತರಗು- ಇದು ನರರ ಸ್ವತ್ತಲ್ಲ
ಸೊಪ್ಪುಸದೆ ದೇವಿಯದು
ಹರಿವ ಜಲ ತಾಯಿಯದು.

ಮತಿಯುಂಟು ಹಿತರುಂಟು- ಬಂಧು ಬಾಂಧವರುಂಟು
ಪರಮಾತ್ಮನರಿವುಂಟು-ಕಷ್ಟಸುಖದರಿವುಂಟು
ನಮಗಾರು ದಿಕ್ಕಿಲ್ಲ
ತಂದೆತಾಯಿಗಳಿಲ್ಲ.

ನಿಮ್ಮ ಕುಲ ಬಾಯ್ತುತ್ತು – ಮೂಕಜಂತುಗಳರರೆ
ತಾಯ್ಬೆಳಸಿ ಸಲಹಿರುವ- ಈ ದೇಹ ನಿಮಗೆ ಸೆರೆ
ನಾವಿರಲು ನಿಮಗಾಗಿ
ಕೂಲಲೇಕೆ ಮರೆಯಾಗಿ.

ಎಮ್ಮ ಮೈ ರೋಮಗಳು- ತೊಗಲು ಮಾಂಸವು ರಕ್ತ
ನಿಮಗೆರವು ಮಾಡಿದಳು- ಜನಕ ಇದುವೇ ಭುಕ್ತ
ಎಮ್ಮ ಕೊರಳನು ಕೊಯ್ವ
ಕಟುಕರಾದಿರಿ ಹೊಯ್ವ.

ಕುತ್ತಿಗೆಯ ಕೊಯ್ವಾಗ- ನಿಮಗಾಗಿ ಮರುಗುವೆವು
ಅತ್ತಲಾ ಹೈಮವತಿ- ಕರವಾಳ ಮಸೆಯುವಳು
ನಿಮ್ಮಸುವ ಸೆಳೆಯುವಳು
ಆಮೇಲೆ ಕುಣಿಯುವಳು.

ನರಕುರಿಯು ನೀವಂತ- ಕುರಿಜನ್ಮ ನಿಮಗಂತೆ
ನರರಾವು ಮುಂದಂತೆ- ನಿಮ್ಮನುಳಿಸುವೆವಂತೆ
ಇಂತಬ್ಬೆ ಹೇಳುವಳು
ಕಣ್ಣೀರ ಹರಿಸುವಳು.

ಹಿಡಿಕಾಳು ಬಯಸಿಲ್ಲ- ನಿಮ್ಮಿಂದ ಬದುಕಿಲ್ಲ
ಕೆಡಕುಗಳ ಮಾಡಿಲ್ಲ- ಬಲ್ಲಳಿದನವಳೆಲ್ಲ
ನಿಮಗಾಗಿ ಆ ರೂಪ
ತಾಳಿದಳು ಬಹು ಕೋಪ.

ನಮ್ಮಿಂದ ನಿಮ್ಮಿರವು-ನಿಮ್ಮಿಂದ ನಾವಲ್ಲ
ನಮ್ಮ ಮುಕ್ತಿಗೆ ಮಾತೆ-ಹೊಣೆಯಂತೆ ನೀವಲ್ಲ
ಕೋಪದಲಿ ಸಾಯದಿರಿ
ಪಾಪದೊಳು ಬೀಳದಿರಿ.

ನಮ್ಮ ಕೊಂದರೆ ವ್ಯಾಧಿ-ಮಾರಿ ರೂಪದಿ ಬಂದು
ನಿಮ್ಮ ತನು ಕುರಿಹೆಣವು-ಬಿದ್ದಂತೆ ನೆಲೆ ನಿಂದು
ಬಲಿಗೊಳ್ವುದರಿಯುವಿರಿ
ಸೆಳೆವುದನು ಕಾಣುವಿರಿ.

ತಾಯಿಯಂ ಪೂಜಿಸಿರಿ-ಫಲಪುಷ್ಪಚಯಗಳಿಂ
ಆ ವಿಮಲೆ ಕಾಯುವಳು-ನಲಿದೆಲ್ಲ ಕರಗಳಿಂ
ಕಾಯಬೇಹುದಹಿಂಸೆ
ಪಾಪವದುವೇ ಹಿಂಸ.

ಸಾವೆವೆಂಬಾ ದುಃಖ-ನಮಗಿಲ್ಲ ಲೋಕದಲಿ
ಕೊಲ್ಲದಿರಿ ಕುರಿಗಳಂ-ಸೋದರರೆ ಮೋಸದಲಿ
ನಿಮಗೆಮಗೆ ಹೈಮವತಿ
ತಾಯಹುದು ಗುಣವಂತಿ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...