Home / ಕವನ / ಕವಿತೆ / ಆಗಸದ ಕಾಣಿಕೆ

ಆಗಸದ ಕಾಣಿಕೆ

ಆಗಸದ ಕಡಲೊಡೆದು ಉಕ್ಕಿ ಹರಿಯುತಲಿಹುದು
ಲೋಕದೀ ಬೊಕ್ಕಸವ ತುಂಬುತಿಹುದು.
ಬೆಟ್ಟ ಗಿರಿ ತೂರೆ ತೋಡು ಕೆರೆ ಕುಂಟೆ ನದಿ ನದವು
ಬರುವ ಗಂಗೆಯ ಕರೆದು ಮನ್ನಿಸುವುವು.
ಆಗಸಕು ಭೂಮಿಗೂ ಬಾಂಧವ್ಯವನ್ನು ಬೆಳೆಸಿ
ಮಣ್ಣೊಳಿಹ ಸತ್ವಗಳ ತೆಗೆದು ಸೂಸಿ;
ಧನ್ಯರಾವ್ ಅಹಯೆಂದು ಕೆರೆನದಿಗಳುಕ್ಕೇರಿ
ಪಚ್ಚೆ ಪೈರುಗಳನ್ನು ತಗೆದು ತೋರಿ.

ಎಂಥೆಂಥ ರಸಮಿಹುದು ಈ ಭೂಮಿಯೊಳಗೆಂದು
ಎಳೆನೀರು ಸವಿಜೇನು ಕೊಳ್ಳಿ ಬಂದು
ಮಾಗಾಯಿ ನಾರಂಗ ರಸವಾಳೆ ದಾಳಿಂಬ
ನಗುನಗುತ ಬಳೆದಿಹವು ಮರದ ತುಂಬ
ಸ್ವರ್ಗಲೋಕದ ಸುರರೆ ಸವಿಯಿರಿದ ನೀವೆನುತ
ನೀಡಿಹಳು ನೆಲವೆಣ್ಣು ಲೋಕವಿದಿತ.
ಅಮರಲೋಕದ ವರ್ಷ ಮಣ್ಣಿನೊಳು ತಾನಿಳಿದು
ಒಳಗಿನೊಳಗಿನ ಸವಿಯ ಸೆಳೆಯುತಿಹುದು.

ಹನಿಹನಿಯು ಹರಳಾಗಿ ಸುರಿವನಿಯು ರಸವಾಗಿ
ನೆಲದೊಳಗೆ ಹೊನ್ನಾಗಿ ಹೊಳೆಯುತಿಹುದು
ಭಾರತಿಯು ನೀಡಿರುವ ವಜ್ರವಿಂದ್ರಂಗಾಯ್ತು
ವೃತ್ರನಂ ಕೊಲ್ಲುವೊಡೆ ಚಾಪಮಾಯ್ತು
ಎಮ್ಮ ಸಾಗರದೆರವು ಶಕ್ರನಾ ಮುಗಿಲೊಡ್ಡು
ಮತ್ತಲ್ಲಿ ಬೇರಿಹುದೆ ಸೌಖ್ಯದೊಡ್ಡು

ಇಲ್ಲಿಗಿಳಿವರು ಸರುವ ದೇವತೆಗಳಾದರದಿ
ಇಲ್ಲಿನೀ ಸವಿಯುಣಲು ಬಯಸಿ ಭರದಿ.

ನೆಲದ ವೀರರು ಹೋಗಿ ಸುರರ ಕಾಪಿಡಲಾಯ್ತು
ಇಂದಿನಾ ಇಂದ್ರಂಗೆ ರಾಜ್ಯಮಾಯ್ತು.
ಅಮರಲೋಕದ ಸುರರು ನರಲೋಕಕೆರವಿಗರು
ಅವರ ಹಂಗೆಮಗಿಲ್ಲ ನೋಡಿ ಸುರರು.
ಈ ರಸವು ಈ ನೀರು ಈ ಸುಖದ ಸವಿಯೂಟ
ನಮ್ಮ ಬಾಳಿಗೆ ಭೂಮಿಯಿತ್ತ ಮಾಟ.
ತುಂಬಲೀ ಧರೆಯೆಂದು ಗಗನ ವಿಶ್ವಾಸದಲಿ
ಇತ್ತ ಕಾಣಿಕ ಮಳೆಯು ನಿತ್ಯದಲ್ಲಿ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...