Home / ಕವನ / ಕವಿತೆ / ಯಾವ ದಾರಿಯೊ!

ಯಾವ ದಾರಿಯೊ!

ನಾದನಾಮಕ್ರಿಯಾ


ಯಾವ ದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು!

ಭಾವಿಸುತ ಬಾಯ್ದೆರೆದು ಕುಳಿತರೆ
ಸಾವೆ ಸರಿ! ಎಂಬಾ ವಿಚಾರದಿ
ಜೀವದರಸನದಲ್ಲಿರುವನಾ
ಠಾವನರಸುತ ತೆರಳಲಿರುವೆ;

ಯಾವ ದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು.


ದೇಶವಲೆದವನೆಂದು ನಾ ಸಂ-
ನ್ಯಾಸಿಯೊಬ್ಬನನಿಂದು

ಹಾರಯಿಸಿ ಕೇಳಿದರೆ ಆತನು
ತೋರಿಸುತ ತೆಂಕಣವ ಬೆರಳಲಿ:
`ಸಾರು ಈ ದಾರಿಯೊಳು ನಿನ್ನವ-
ನೂರ ಸೇರುವೆ ನೇರ’ ಎಂದನು.

ಯಾವ ದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು!


ಕೇಳಿದರೆ ಯಾಜಿಗಳನಾಗಲೆ
ಹೇಳಿದರು ಬಲಿ ಕೊಡುತಲೆ:

“ಬೋಳುಮರಗಳ ಸಾಲುದಾರಿಯ
ಕೇಳಿ ಬಲ್ಲೆಯೆ? ಹಾಗೆ ಹೋದರೆ
ನಾಳೆಯೇ ನೋಡುವೆಯೆ ನಿನ್ನ –
ನ್ನಾಳುವವನಾಳಿಯನು” ಎಂದರು.

ಯಾವ ದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು!


ಯೋಗಿರಾಜಯ್ಯನಿಗೆ ನಾ ತಲೆ-
ಬಾಗಿ ವಿನಯದಿ ಕೇಳಿದೆ.

ಮುಗಿದ ಕಂಗಳನಗಲಿಸದೆ, ತುಟಿ-
ಬಿಗಿದ ಬಾಯನು ಬಿಚ್ಚದೆಯೆ, ಕೈ-
ಮುಗಿಲ ಕಡೆ ನೀಡಿದನು; ತಿಳಿಯದೆ
ವಿಗಡತನವದು ನಗುತ ಮರಳಿದೆ.

ಯಾವದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು !


ಭಾಗವತದಾ ದಾಸರಲ್ಲಿಗೆ
ಹೋಗಿ ಕೇಳಿದೆ ಮೆಲ್ಲಗೆ.

‘ವಿಟ್ಠಲನ ಗುಡಿಯೆದುರ ಬೀದಿಯೊ-
‘ಳಿಟ್ಟು ಅಡಿಯನು ಮುಂದೆ ಸಾಗಲು
‘ನೆಟ್ಟನೆಯದಾ ಬಟ್ಟೆ, ಸೇರುವೆ
‘ತಟ್ಟನೆಯೆ ನಿನ್ನವನ’ ನೆಂದರು.

ಯಾವದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು!


ಬುದ್ದಿಶಾಲಿಗಳೆನಿಸಿ ಕೊಂಬರ
ಹೊದ್ದಿ ಹಾದಿಯ ಕೇಳಿದೆ;

ಇದ್ದ ಊರನ್ನುಳಿದು ಬೇರೆಯ
ಸುದ್ದಿಯನೆ ನಾವರಿಯೆವೆಂದರು;
ಮೊದ್ದುತನವೇನೆಯ್ದ ಬೇಕವ-
ನಿದ್ದೆಡೆಯ ನಾನೆಂಬುದಿದುವೇ!

ಯಾವದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು!


ಜೋಯಿಸರ ಕೇಳಿದೆನು ಬಗೆಬಗೆ-
ಕಾಯಕಿಗಳನ್ನು ಕೇಳಿದೆ.

ಬೇರೆ ಬೇರೊಂದೊಂದು ದಾರಿಯ
ತೋರಿಸಿದರೊಬ್ಬೊಬ್ಬರೂ ಎನೆ
ಗಾರುಗೊಂಡಿತು ಮನವು; ಯಾವುದು
ತೋರದೆಯೆ ತೊಳಲುತ್ತಲಿಹೆನು.

ಯಾವದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು!


ಎಲ್ಲರೂ ಅರಿತಿರಲು ಬಹುದೇ
ನಲ್ಲನೆಡೆಯನು….! ಅಲ್ಲದೆ-

ಎಲ್ಲರೂ ಬಳಸಿರಲು ಬಹುದೇ-
ಸುಳ್ಳನೇ ಬರಿ..! ತಿಳಿಯದೊಂದೂ,
ನಲ್ಲನೊಡನಿದ್ದೆನ್ನ ನೆನಹದೆ
ಟೊಳ್ಳು ಕನಸಾಗಿರಲು ಬಹುದೇ…!

ಯಾವ ದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು !
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...