ನಾದನಾಮಕ್ರಿಯಾ


ಯಾವ ದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು!

ಭಾವಿಸುತ ಬಾಯ್ದೆರೆದು ಕುಳಿತರೆ
ಸಾವೆ ಸರಿ! ಎಂಬಾ ವಿಚಾರದಿ
ಜೀವದರಸನದಲ್ಲಿರುವನಾ
ಠಾವನರಸುತ ತೆರಳಲಿರುವೆ;

ಯಾವ ದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು.


ದೇಶವಲೆದವನೆಂದು ನಾ ಸಂ-
ನ್ಯಾಸಿಯೊಬ್ಬನನಿಂದು

ಹಾರಯಿಸಿ ಕೇಳಿದರೆ ಆತನು
ತೋರಿಸುತ ತೆಂಕಣವ ಬೆರಳಲಿ:
`ಸಾರು ಈ ದಾರಿಯೊಳು ನಿನ್ನವ-
ನೂರ ಸೇರುವೆ ನೇರ’ ಎಂದನು.

ಯಾವ ದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು!


ಕೇಳಿದರೆ ಯಾಜಿಗಳನಾಗಲೆ
ಹೇಳಿದರು ಬಲಿ ಕೊಡುತಲೆ:

“ಬೋಳುಮರಗಳ ಸಾಲುದಾರಿಯ
ಕೇಳಿ ಬಲ್ಲೆಯೆ? ಹಾಗೆ ಹೋದರೆ
ನಾಳೆಯೇ ನೋಡುವೆಯೆ ನಿನ್ನ –
ನ್ನಾಳುವವನಾಳಿಯನು” ಎಂದರು.

ಯಾವ ದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು!


ಯೋಗಿರಾಜಯ್ಯನಿಗೆ ನಾ ತಲೆ-
ಬಾಗಿ ವಿನಯದಿ ಕೇಳಿದೆ.

ಮುಗಿದ ಕಂಗಳನಗಲಿಸದೆ, ತುಟಿ-
ಬಿಗಿದ ಬಾಯನು ಬಿಚ್ಚದೆಯೆ, ಕೈ-
ಮುಗಿಲ ಕಡೆ ನೀಡಿದನು; ತಿಳಿಯದೆ
ವಿಗಡತನವದು ನಗುತ ಮರಳಿದೆ.

ಯಾವದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು !


ಭಾಗವತದಾ ದಾಸರಲ್ಲಿಗೆ
ಹೋಗಿ ಕೇಳಿದೆ ಮೆಲ್ಲಗೆ.

‘ವಿಟ್ಠಲನ ಗುಡಿಯೆದುರ ಬೀದಿಯೊ-
‘ಳಿಟ್ಟು ಅಡಿಯನು ಮುಂದೆ ಸಾಗಲು
‘ನೆಟ್ಟನೆಯದಾ ಬಟ್ಟೆ, ಸೇರುವೆ
‘ತಟ್ಟನೆಯೆ ನಿನ್ನವನ’ ನೆಂದರು.

ಯಾವದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು!


ಬುದ್ದಿಶಾಲಿಗಳೆನಿಸಿ ಕೊಂಬರ
ಹೊದ್ದಿ ಹಾದಿಯ ಕೇಳಿದೆ;

ಇದ್ದ ಊರನ್ನುಳಿದು ಬೇರೆಯ
ಸುದ್ದಿಯನೆ ನಾವರಿಯೆವೆಂದರು;
ಮೊದ್ದುತನವೇನೆಯ್ದ ಬೇಕವ-
ನಿದ್ದೆಡೆಯ ನಾನೆಂಬುದಿದುವೇ!

ಯಾವದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು!


ಜೋಯಿಸರ ಕೇಳಿದೆನು ಬಗೆಬಗೆ-
ಕಾಯಕಿಗಳನ್ನು ಕೇಳಿದೆ.

ಬೇರೆ ಬೇರೊಂದೊಂದು ದಾರಿಯ
ತೋರಿಸಿದರೊಬ್ಬೊಬ್ಬರೂ ಎನೆ
ಗಾರುಗೊಂಡಿತು ಮನವು; ಯಾವುದು
ತೋರದೆಯೆ ತೊಳಲುತ್ತಲಿಹೆನು.

ಯಾವದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು!


ಎಲ್ಲರೂ ಅರಿತಿರಲು ಬಹುದೇ
ನಲ್ಲನೆಡೆಯನು….! ಅಲ್ಲದೆ-

ಎಲ್ಲರೂ ಬಳಸಿರಲು ಬಹುದೇ-
ಸುಳ್ಳನೇ ಬರಿ..! ತಿಳಿಯದೊಂದೂ,
ನಲ್ಲನೊಡನಿದ್ದೆನ್ನ ನೆನಹದೆ
ಟೊಳ್ಳು ಕನಸಾಗಿರಲು ಬಹುದೇ…!

ಯಾವ ದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು !
*****