Home / ಕವನ / ಕವಿತೆ / ಯಾವ ದಾರಿಯೊ!

ಯಾವ ದಾರಿಯೊ!

ನಾದನಾಮಕ್ರಿಯಾ


ಯಾವ ದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು!

ಭಾವಿಸುತ ಬಾಯ್ದೆರೆದು ಕುಳಿತರೆ
ಸಾವೆ ಸರಿ! ಎಂಬಾ ವಿಚಾರದಿ
ಜೀವದರಸನದಲ್ಲಿರುವನಾ
ಠಾವನರಸುತ ತೆರಳಲಿರುವೆ;

ಯಾವ ದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು.


ದೇಶವಲೆದವನೆಂದು ನಾ ಸಂ-
ನ್ಯಾಸಿಯೊಬ್ಬನನಿಂದು

ಹಾರಯಿಸಿ ಕೇಳಿದರೆ ಆತನು
ತೋರಿಸುತ ತೆಂಕಣವ ಬೆರಳಲಿ:
`ಸಾರು ಈ ದಾರಿಯೊಳು ನಿನ್ನವ-
ನೂರ ಸೇರುವೆ ನೇರ’ ಎಂದನು.

ಯಾವ ದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು!


ಕೇಳಿದರೆ ಯಾಜಿಗಳನಾಗಲೆ
ಹೇಳಿದರು ಬಲಿ ಕೊಡುತಲೆ:

“ಬೋಳುಮರಗಳ ಸಾಲುದಾರಿಯ
ಕೇಳಿ ಬಲ್ಲೆಯೆ? ಹಾಗೆ ಹೋದರೆ
ನಾಳೆಯೇ ನೋಡುವೆಯೆ ನಿನ್ನ –
ನ್ನಾಳುವವನಾಳಿಯನು” ಎಂದರು.

ಯಾವ ದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು!


ಯೋಗಿರಾಜಯ್ಯನಿಗೆ ನಾ ತಲೆ-
ಬಾಗಿ ವಿನಯದಿ ಕೇಳಿದೆ.

ಮುಗಿದ ಕಂಗಳನಗಲಿಸದೆ, ತುಟಿ-
ಬಿಗಿದ ಬಾಯನು ಬಿಚ್ಚದೆಯೆ, ಕೈ-
ಮುಗಿಲ ಕಡೆ ನೀಡಿದನು; ತಿಳಿಯದೆ
ವಿಗಡತನವದು ನಗುತ ಮರಳಿದೆ.

ಯಾವದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು !


ಭಾಗವತದಾ ದಾಸರಲ್ಲಿಗೆ
ಹೋಗಿ ಕೇಳಿದೆ ಮೆಲ್ಲಗೆ.

‘ವಿಟ್ಠಲನ ಗುಡಿಯೆದುರ ಬೀದಿಯೊ-
‘ಳಿಟ್ಟು ಅಡಿಯನು ಮುಂದೆ ಸಾಗಲು
‘ನೆಟ್ಟನೆಯದಾ ಬಟ್ಟೆ, ಸೇರುವೆ
‘ತಟ್ಟನೆಯೆ ನಿನ್ನವನ’ ನೆಂದರು.

ಯಾವದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು!


ಬುದ್ದಿಶಾಲಿಗಳೆನಿಸಿ ಕೊಂಬರ
ಹೊದ್ದಿ ಹಾದಿಯ ಕೇಳಿದೆ;

ಇದ್ದ ಊರನ್ನುಳಿದು ಬೇರೆಯ
ಸುದ್ದಿಯನೆ ನಾವರಿಯೆವೆಂದರು;
ಮೊದ್ದುತನವೇನೆಯ್ದ ಬೇಕವ-
ನಿದ್ದೆಡೆಯ ನಾನೆಂಬುದಿದುವೇ!

ಯಾವದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು!


ಜೋಯಿಸರ ಕೇಳಿದೆನು ಬಗೆಬಗೆ-
ಕಾಯಕಿಗಳನ್ನು ಕೇಳಿದೆ.

ಬೇರೆ ಬೇರೊಂದೊಂದು ದಾರಿಯ
ತೋರಿಸಿದರೊಬ್ಬೊಬ್ಬರೂ ಎನೆ
ಗಾರುಗೊಂಡಿತು ಮನವು; ಯಾವುದು
ತೋರದೆಯೆ ತೊಳಲುತ್ತಲಿಹೆನು.

ಯಾವದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು!


ಎಲ್ಲರೂ ಅರಿತಿರಲು ಬಹುದೇ
ನಲ್ಲನೆಡೆಯನು….! ಅಲ್ಲದೆ-

ಎಲ್ಲರೂ ಬಳಸಿರಲು ಬಹುದೇ-
ಸುಳ್ಳನೇ ಬರಿ..! ತಿಳಿಯದೊಂದೂ,
ನಲ್ಲನೊಡನಿದ್ದೆನ್ನ ನೆನಹದೆ
ಟೊಳ್ಳು ಕನಸಾಗಿರಲು ಬಹುದೇ…!

ಯಾವ ದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು !
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...