ಯಾವ ದಾರಿಯೊ!

ನಾದನಾಮಕ್ರಿಯಾ


ಯಾವ ದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು!

ಭಾವಿಸುತ ಬಾಯ್ದೆರೆದು ಕುಳಿತರೆ
ಸಾವೆ ಸರಿ! ಎಂಬಾ ವಿಚಾರದಿ
ಜೀವದರಸನದಲ್ಲಿರುವನಾ
ಠಾವನರಸುತ ತೆರಳಲಿರುವೆ;

ಯಾವ ದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು.


ದೇಶವಲೆದವನೆಂದು ನಾ ಸಂ-
ನ್ಯಾಸಿಯೊಬ್ಬನನಿಂದು

ಹಾರಯಿಸಿ ಕೇಳಿದರೆ ಆತನು
ತೋರಿಸುತ ತೆಂಕಣವ ಬೆರಳಲಿ:
`ಸಾರು ಈ ದಾರಿಯೊಳು ನಿನ್ನವ-
ನೂರ ಸೇರುವೆ ನೇರ’ ಎಂದನು.

ಯಾವ ದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು!


ಕೇಳಿದರೆ ಯಾಜಿಗಳನಾಗಲೆ
ಹೇಳಿದರು ಬಲಿ ಕೊಡುತಲೆ:

“ಬೋಳುಮರಗಳ ಸಾಲುದಾರಿಯ
ಕೇಳಿ ಬಲ್ಲೆಯೆ? ಹಾಗೆ ಹೋದರೆ
ನಾಳೆಯೇ ನೋಡುವೆಯೆ ನಿನ್ನ –
ನ್ನಾಳುವವನಾಳಿಯನು” ಎಂದರು.

ಯಾವ ದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು!


ಯೋಗಿರಾಜಯ್ಯನಿಗೆ ನಾ ತಲೆ-
ಬಾಗಿ ವಿನಯದಿ ಕೇಳಿದೆ.

ಮುಗಿದ ಕಂಗಳನಗಲಿಸದೆ, ತುಟಿ-
ಬಿಗಿದ ಬಾಯನು ಬಿಚ್ಚದೆಯೆ, ಕೈ-
ಮುಗಿಲ ಕಡೆ ನೀಡಿದನು; ತಿಳಿಯದೆ
ವಿಗಡತನವದು ನಗುತ ಮರಳಿದೆ.

ಯಾವದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು !


ಭಾಗವತದಾ ದಾಸರಲ್ಲಿಗೆ
ಹೋಗಿ ಕೇಳಿದೆ ಮೆಲ್ಲಗೆ.

‘ವಿಟ್ಠಲನ ಗುಡಿಯೆದುರ ಬೀದಿಯೊ-
‘ಳಿಟ್ಟು ಅಡಿಯನು ಮುಂದೆ ಸಾಗಲು
‘ನೆಟ್ಟನೆಯದಾ ಬಟ್ಟೆ, ಸೇರುವೆ
‘ತಟ್ಟನೆಯೆ ನಿನ್ನವನ’ ನೆಂದರು.

ಯಾವದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು!


ಬುದ್ದಿಶಾಲಿಗಳೆನಿಸಿ ಕೊಂಬರ
ಹೊದ್ದಿ ಹಾದಿಯ ಕೇಳಿದೆ;

ಇದ್ದ ಊರನ್ನುಳಿದು ಬೇರೆಯ
ಸುದ್ದಿಯನೆ ನಾವರಿಯೆವೆಂದರು;
ಮೊದ್ದುತನವೇನೆಯ್ದ ಬೇಕವ-
ನಿದ್ದೆಡೆಯ ನಾನೆಂಬುದಿದುವೇ!

ಯಾವದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು!


ಜೋಯಿಸರ ಕೇಳಿದೆನು ಬಗೆಬಗೆ-
ಕಾಯಕಿಗಳನ್ನು ಕೇಳಿದೆ.

ಬೇರೆ ಬೇರೊಂದೊಂದು ದಾರಿಯ
ತೋರಿಸಿದರೊಬ್ಬೊಬ್ಬರೂ ಎನೆ
ಗಾರುಗೊಂಡಿತು ಮನವು; ಯಾವುದು
ತೋರದೆಯೆ ತೊಳಲುತ್ತಲಿಹೆನು.

ಯಾವದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು!


ಎಲ್ಲರೂ ಅರಿತಿರಲು ಬಹುದೇ
ನಲ್ಲನೆಡೆಯನು….! ಅಲ್ಲದೆ-

ಎಲ್ಲರೂ ಬಳಸಿರಲು ಬಹುದೇ-
ಸುಳ್ಳನೇ ಬರಿ..! ತಿಳಿಯದೊಂದೂ,
ನಲ್ಲನೊಡನಿದ್ದೆನ್ನ ನೆನಹದೆ
ಟೊಳ್ಳು ಕನಸಾಗಿರಲು ಬಹುದೇ…!

ಯಾವ ದಾರಿಯೊ ಕಾಣೆ ನನ್ನಯ
ದೇವನಿರುವೆಡೆ ಸಾರಲು !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಿಲೆಗಳಾಗಬೇಡಿ
Next post ಮಿಹಿರದ್ವೀಪ

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

cheap jordans|wholesale air max|wholesale jordans|wholesale jewelry|wholesale jerseys