Home / ಕವನ / ಕವಿತೆ / ಬೀಡಾಡಿ ಬುದ್ಧ

ಬೀಡಾಡಿ ಬುದ್ಧ

ಧ್ಯಾನವಿಲ್ಲ ತಪವಿಲ್ಲ
ಗಾಢನಿದ್ದೆಯಲಿ ಮೈಮರೆತವ
ಅಪ್ಪಿತಪ್ಪಿ ಪಕ್ಕಕ್ಕೆ ಹೊರಳಿ
ನೇರ ಈ ಮರ್ತ್ಯಲೋಕಕ್ಕೆ ಬಿದ್ದು
ನೆತ್ತಿಯೊಡೆದು ಬಾಯ್ಬಿಟ್ಟು
ಈ ನೆಲದಂತರಾಳಕ್ಕೂ
ಆ ಅನೂಹ್ಯ ಲೋಕಕ್ಕೂ
ನಡುವೆ ನಿಸ್ತಂತುವಿನೆಳೆ
*

ಆಯಾಸ ತುಂಬಿದ ನಿದ್ದೆಗಣ್ಣಿನಲ್ಲೇ
ಕರುಳಿನಾಳಕ್ಕಿಳಿದು ಆವರಿಸಿಬಿಡುವ
ಗಾರುಡಿಗ ನೋಟಕ್ಕೆ
ಸುತ್ತಲ ಚರಾಚರಗಳ ತಿಮಿರು
ಪಟಪಟನೆ ಉದುರಿ
ಅವನ ಪಾದಕಭ್ಯಂಜನ.
*

ಪಾದ ನೆಲಕ್ಕೂರಿ ಬೇರು ಬಿಟ್ಟು
ಮರವೇ ತಾನಾಗಿದ್ದು ಕಣ್ಕಟ್ಟು!
ಮೈತುಂಬಾ ಸುಮ್ಮನಾದರೂ
ಸಾವಿರಾರು ಹಕ್ಕಿಗೂಡು.
ಅಂಟಿಯೂ ಅಂಟಿಲ್ಲದ
ಹಗುರಾತಿ ಹಗುರ ನೂಲಿನೆಳೆಗಳ
ಮೇಲ್ಮೇಲಿನ ತೇಲಾಟದಲ್ಲೇ
ಥಟ್ಟನೆಲ್ಲರ ಕಣ್ಣು ತಪ್ಪಿಸಿ
ವೋಮದಾಚೆಯ ನಂಟು.

ಲೋಕದ ಚೂರಿಯಿರಿತಕ್ಕೆ
ಕರುಳ ತುಂಬಾ ಗುನ್ನ.
ಗಾಯಗಳನು ಹೂಗಳಂತೆ ಕಿತ್ತು
ಬೊಗಸೆ ತುಂಬಾ ತುಂಬಿ
‘ಉಫ್’ ಎಂದು ಊದಿದ್ದಕ್ಕೆ
ಆಕಾಶದ ತಾರೆಗಳಾಗಿ ಹೋಗುವುದೇ?
*

ಒಣಗಿ ಬಿದ್ದ ಎಲೆಗಳ ಮೇಲೆ
ಊರಲೋ ಬೇಡವೋ ಎನ್ನುತ್ತಲೇ
ಭಾರವಿಲ್ಲದ ಹೆಜ್ಜೆ ಸೋಕಿಸಿದರೂ
ಸಣ್ಣ ಕಂಪನಕ್ಕೇ ನೊಂದು
ಮೆಲ್ಲಗೆ ಬಾಗಿ ಒಣಗಿದೆಲೆ ಎತ್ತಿ
ಎಲ್ಲಿ ಯಾವ ಮೂಲೆಯಲಿ
ಒಂದಿಷ್ಟಾದರೂ ಜೀವ ಮುದುಡಿ ಹೋಯಿತೋ….
ಆತಂಕದ ಎದೆಬಡಿತ.

ಹೀಗೇ… ಹೀಗೇ…
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...